ಈ ಊರಲ್ಲಿ ಕೂಲಿ ಕಾರ್ಮಿಕರಿಗೆ ಬೇಕು ಬಂದೂಕಿನ ರಕ್ಷಣೆ: ಫಿರಂಗಿ ನೆರಳಲ್ಲಿ ನಡೆಯುತ್ತೆ ಕೃಷಿ ಕಾರ್ಯ, ಏಕೆ ಗೊತ್ತಾ?
ಈ ಊರಲ್ಲಿ ಕೂಲಿ ಕಾರ್ಮಿಕರು ಜಮೀನಿಗೆ ಬರಬೇಕಾದರೆ, ಬಂದೂಕಿನ ರಕ್ಷಣೆ ಬೇಕು. ಇಲ್ಲವಾದಲ್ಲಿ ಅವರು ಜಮೀನಿನ ಕಡೆಗೆ ಬರುವುದೇ ಇಲ್ಲ. ಯಾಕೆ ಹೀಗೆ?, ಅವರಿಗೆ ಇರುವ ಭಯವೇನು?. ಇಲ್ಲಿದೆ ಡೀಟೇಲ್ಸ್.

Published : January 5, 2026 at 7:48 PM IST
ಅಹಲ್ಯಾನಗರ (ಮಹಾರಾಷ್ಟ್ರ): 'ರೈತ' ಎಂದಾಗ ಕೃಷಿ ಉಪಕರಣಗಳು, ತಲೆಗೆ ವಸ್ತ್ರ ಸುತ್ತಿಕೊಂಡು ಜಮೀನಿನಲ್ಲಿ ಉಳುಮೆ ಮಾಡುವುದು ಕಣ್ಣ ಮುಂದೆ ಬರುತ್ತದೆ. ಆದರೆ, ಇಲ್ಲಿಯ ರೈತರು ಜಮೀನಿನಲ್ಲಿ ಕೆಲಸ ಮಾಡುವಾಗ ಬಂದೂಕುಗಳನ್ನು ಹಿಡಿದುಕೊಂಡಿರುತ್ತಾರೆ.
ಅರೆ! ಇದೇನ್ ಗುರು, ರೈತರ ಕೈಯಲ್ಲಿ ಬಂದೂಕೇ ಅಂತೀರಾ?. ನಂಬಲು ತುಸು ಕಷ್ಟವಾದರೂ ಇದು ಸತ್ಯ. ಇಲ್ಲಿನ ರೈತರು ನೇಗಿಲು, ಕೃಷಿ ಉಪಕರಣಗಳ ಜೊತೆಗೆ ಕಡ್ಡಾಯವಾಗಿ ಬಂದೂಕುಗಳನ್ನು ಹೊಂದಿರುತ್ತಾರೆ. ಅದು ಯಾಕೆ ಎಂಬುದರ ಬಗ್ಗೆ ತಿಳಿಯಲು ಮುಂದೆ ಓದಿ.

ಈ ಮೇಲಿನ ವಿವರಣೆ ಮಹಾರಾಷ್ಟ್ರದ ಅಹಲ್ಯಾನಗರ (ಅಹ್ಮದ್ನಗರ) ಜಿಲ್ಲೆಯ ರೈತರದ್ದು. ಇಲ್ಲಿ ಚಿರತೆಗಳು ಹಾವಳಿ ಅಧಿಕ. ಕೃಷಿಯಲ್ಲಿ ತೊಡಗಿಸಿಕೊಂಡವರ ಮೇಲೆ ಕಾಡುಪ್ರಾಣಿಗಳು ಆಗಾಗ್ಗೆ ದಾಳಿ ಮಾಡುತ್ತಿರುತ್ತವೆ. ಇದರಿಂದ ಹೊಲಗಳಲ್ಲಿ ಕೆಲಸ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರ ಸುರಕ್ಷತೆಗಾಗಿ ರೈತರು ಕೈಯಲ್ಲಿ ಬಂದೂಕುಗಳನ್ನು ಹಿಡಿದು ಹೊಲಗಳಲ್ಲಿ ನಿಲ್ಲಬೇಕಿದೆ.
ಕೂಲಿ ಕಾರ್ಮಿಕರ ರಕ್ಷಣೆಗೆ ಬಂದೂಕು ಬಳಕೆ: ರಾಹುರಿ ತಾಲೂಕಿನ ಖುದ್ಸರ್ ಗ್ರಾಮದ ರೈತ ಸತೀಶ್ ಪವಾರ್ ಅವರು ಕೈಯಲ್ಲಿ ಬಂದೂಕುಗಳನ್ನು ಹಿಡಿದು ಕೃಷಿ ಕಾರ್ಮಿಕರನ್ನು ರಕ್ಷಣೆ ಒದಗಿಸುತ್ತಿದ್ದಾಗ, ಈಟಿವಿ ಭಾರತ್ ಅವರನ್ನು ಸಂಪರ್ಕಿಸಿತು. ಅವರು, ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.
ರೈತ ಸತೀಶ್ ಪವಾರ್ ಅವರು ಏಳು ಎಕರೆ ಭೂಮಿ ಹೊಂದಿದ್ದಾರೆ. ಡಿಸೆಂಬರ್ನಲ್ಲಿ ಈರುಳ್ಳಿ ಬೆಳೆಯಲು ಮುಂದಾದರು. ಆದರೆ, ಕೃಷಿ ಕಾರ್ಮಿಕರು ಚಿರತೆಗಳ ದಾಳಿಗೆ ಬೆದರಿ ಕೆಲಸಕ್ಕೆ ಬರಲಿಲ್ಲ. ಅಂತಿಮವಾಗಿ, ರೈತ ಸತೀಶ್ ಅವರು ಕಾರ್ಮಿಕರನ್ನು ಚಿರತೆಯಿಂದ ರಕ್ಷಿಸಲು ಬಂದೂಕು ಹಿಡಿದು ಹೊಲದಲ್ಲಿ ನಿಂತರು. ಕೂಲಿಗಳು ಈರುಳ್ಳಿ ಸಸಿ ನೆಡುತ್ತಿದ್ದರೆ, ರೈತ ಕೈಯಲ್ಲಿ ಬಂದೂಕು ಹಿಡಿದುಕೊಂಡು ಅವರ ಸುತ್ತಲೂ ಓಡಾಡುತ್ತಿದ್ದರು.

ಖುದ್ಸರ್ ಸೇರಿದಂತೆ ಪಾಥ್ರೆ, ಮೈಗಾಂವ್ ಮತ್ತು ಮಂಜರಿ ಪ್ರದೇಶಗಳಲ್ಲಿ 20-25 ಚಿರತೆಗಳು ಓಡಾಡುತ್ತಿವೆ ಎಂದು ಹೇಳಲಾಗುತ್ತದೆ. ಇವುಗಳ ದಾಳಿಗೆ ಅನೇಕ ನಾಯಿಗಳು ಸಾವನ್ನಪ್ಪಿವೆ. ಇದರಿಂದ ಹೆದರಿದ ಜನರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಸಂಜೆ ಅಥವಾ ರಾತ್ರಿ ವೇಳೆ ಬೆಳೆಗಳಿಗೆ ನೀರುಣಿಸಲು ಹೊಲಗಳಿಗೆ ಹೋದಾಗ, ರೈತರು ತಮ್ಮ ರಕ್ಷಣೆಗಾಗಿ ಬಂದೂಕುಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ.
ಬೋನಿಗೆ ಬೀಳದ ಚಿರತೆಗಳು: ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಬೋನುಗಳನ್ನು ಇಟ್ಟಿದ್ದರೂ ಪ್ರಯೋಜನವಾಗಿಲ್ಲ. ಅದರಲ್ಲೂ ನಾಲ್ಕು ಹಳ್ಳಿಗಳ ವ್ಯಾಪ್ತಿಯಲ್ಲಿ ಒಂದು ಬೋನು ಇಡಲಾಗಿದೆ. ಈವರೆಗೂ ಒಂದೂ ಚಿರತೆ ಬೋನಿಗೆ ಬಿದ್ದಿಲ್ಲ. ಇದು ಜನರಲ್ಲಿ ಭಯ ಹುಟ್ಟಿಸಿದೆ. ರೈತ ಪವಾರ್ ಅವರು ತಮ್ಮ ರಕ್ಷಣೆಗಾಗಿ 2010 ರಲ್ಲಿ ಬಂದೂಕು ಪರವಾನಗಿ ಪಡೆದಿದ್ದಾರೆ. ಇಂದು ಕೃಷಿ ಮತ್ತು ಕಾರ್ಮಿಕರ ರಕ್ಷಣೆಗಾಗಿ ಈ ಬಂದೂಕನ್ನು ಬಳಸುವ ಸಮಯ ಬಂದಿದೆ ಎಂದು ಅವರು ಹೇಳಿದರು.
ನನ್ನ ಬಳಿ ಪರವಾನಗಿ ಪಡೆದ ಬಂದೂಕು ಇದೆ. ಆದರೆ, ಇತರ ರೈತರು ಏನು ಮಾಡಬೇಕು?' ಸರ್ಕಾರ ಚಿರತೆಗಳನ್ನು ಹಿಡಿಯಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ಬೋನುಗಳನ್ನು ಸ್ಥಾಪಿಸಬೇಕು. ರೈತರನ್ನು ರಕ್ಷಿಸಬೇಕು. ರಾತ್ರಿಯ ಬದಲು ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಬೇಕೆಂದು ಅವರು ಒತ್ತಾಯಿಸಿದರು.

ರಾಜ್ಯದಲ್ಲಿವೆ 2 ಸಾವಿರ ಚಿರತೆಗಳು: ಅರಣ್ಯ ಇಲಾಖೆಯ ಪ್ರಕಾರ, ಅಹಲ್ಯಾನಗರ ಜಿಲ್ಲೆಯಲ್ಲಿಯೇ ಸುಮಾರು 1100 ಚಿರತೆಗಳಿವೆ. ರಾಹುರಿ ತಾಲೂಕಿನಲ್ಲಿಯೇ ಸುಮಾರು 250 ಚಿರತೆಗಳಿವೆ ಎಂದು ಹೇಳಲಾಗುತ್ತದೆ. ಚಿರತೆ ದಾಳಿಗಳು ಒಂದಲ್ಲಾ ಒಂದು ಪ್ರತಿದಿನ ನಡೆಯುತ್ತಿವೆ. ಇದರಿಂದ ಕಾರ್ಮಿಕರು ಹೊಲಗಳಲ್ಲಿ ಕೆಲಸ ಮಾಡಲು ಹೆದರುತ್ತಾರೆ. ಪರಿಣಾಮವಾಗಿ ಕೃಷಿ ಕೆಲಸಗಳು ಸ್ಥಗಿತಗೊಂಡಿವೆ. ರೈತರು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.
ಇವುಗಳನ್ನೂ ಓದಿ:

