ಅಧಿಕೃತವಾಗಿ ಡಿಎಂಕೆ ಸೇರಿದ ಜಯಲಲಿತಾ ಕಟ್ಟಾ ಬೆಂಬಲಿಗ, ಮಾಜಿ ಸಿಎಂ ಪನ್ನೀರ ಸೆಲ್ವಂ
ಇತ್ತೀಚಿಗಷ್ಟೇ ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕುರಿತು ಹೊಗಳಿಕೆ ಮಾತುಗಳನ್ನು ಆಡಿದ್ದು, ಮತ್ತೆ ಡಿಎಂಕೆ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದರು.

Published : February 27, 2026 at 10:23 AM IST
|Updated : February 27, 2026 at 10:29 AM IST
ಚೆನ್ನೈ (ತಮಿಳುನಾಡು): ತಮಿಳುನಾಡು ಮಾಜಿ ಮುಖ್ಯಮಂತ್ರಿ, ಉಚ್ಚಾಟಿತ ಎಐಎಡಿಎಂಕೆ ನಾಯಕ ಓ ಪನ್ನೀರ್ಸೆಲ್ವಂ ಇಂದು ಡಿಎಂಕೆ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದ ಮತ್ತು ಜಯಲಲಿತಾ ಅವರ ಕಟ್ಟಾ ಬೆಂಬಲಿಗರೆಂದು ಹೆಸರುವಾಸಿಯಾದ ಓ.ಪನ್ನೀರ್ಸೆಲ್ವಂ (ಒಪಿಎಸ್) ಇಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಡಿಎಂಕೆ ಸೇರ್ಪಡೆಗೊಂಡರು.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜಯಲಲಿತಾ ಮರಣದ ನಂತರ ಆಂತರಿಕ ಸಂಘರ್ಷಗಳಿಂದಾಗಿ ಪಕ್ಷವು ಹಲವಾರು ಬಣಗಳಾಗಿ ವಿಭಜನೆಯಾಗಿತ್ತು. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಹೀಗಾಗಿ ಎಐಎಡಿಎಂಕೆ ಸೇರಲು ಯಾವುದೇ ಅವಕಾಶವಿಲ್ಲ ಎಂದು ತಿಳಿದಿದ್ದ ಅವರು ಇಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಮ್ಮುಖದಲ್ಲಿ ಡಿಎಂಕೆ ಸೇರಿದರು. ತಮಿಳುನಾಡು ರಾಜಕೀಯದಲ್ಲಿ ಇದು ಮಹತ್ವದ ತಿರುವು ಎಂದು ಹೇಳಲಾಗುತ್ತಿದೆ.
ಇತ್ತೀಚಿಗಷ್ಟೇ ಅವರು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕುರಿತು ಹೊಗಳಿಕೆ ಮಾತುಗಳನ್ನು ಆಡಿದ್ದು, ಮತ್ತೆ ಡಿಎಂಕೆ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದರು. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ಡಿಎಂಕೆ ಸೇರ್ಪಡೆಯಾಗಿದ್ದಾರೆ.
ಶುಕ್ರವಾರ ಮಾತನಾಡಿದ್ದ ಮಾಜಿ ಸಿಎಂ ಓ ಪನ್ನೀರ್ಸೆಲ್ವಂ ಬಣದ ಶಾಸಕ ಪಿ. ಅಯ್ಯಪ್ಪನ್, ಮುಂದಿನ ವಿಧಾನಸಭಾ ಚುನಾವಣೆಯ ನಂತರ ಎಂ. ಸ್ಟಾಲಿನ್ ಮತ್ತೆ ರಾಜ್ಯವನ್ನು ಮುನ್ನಡೆಸುವುದನ್ನು ನೋಡಬಯಸುತ್ತೇವೆ. ಪುರಚ್ಚಿ ತಲೈವರ್ ಎಂ. ಜಿ ಅವರ ಆಶೀರ್ವಾದದೊಂದಿಗೆ ಎಂ ಕೆ ಸ್ಟಾಲಿನ್ ಮತ್ತೊಮ್ಮೆ ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕು ಎಂದು ಅಯ್ಯಪ್ಪನ್ ವಿಧಾನಸಭೆಯಲ್ಲಿ ಹೇಳಿದ್ದರು. ಜೊತೆಗೆ ರಾಮಚಂದ್ರನ್ ಮತ್ತು ಪುರಚ್ಚಿ ತಲೈವಿ ಅಮ್ಮ ಜೆ. ಜಯಲಲಿತಾ ಅವರಿಗೆ ಮತ್ತು ನಮ್ಮ ಹಿರಿಯ ಸಹೋದರ ಓ. ಪನ್ನೀರ್ಸೆಲ್ವಂ ಅವರ ಶುಭ ಹಾರೈಕೆಗಳಿದೆ ಎಂದಿದ್ದರು.
ಸ್ಟಾಲಿನ್ ಸರ್ಕಾರದ ಉಪಾಹಾರ ಯೋಜನೆ ಮೆಚ್ಚಿ ಮಾತನಾಡಿದ ಅವರು, ಉಪಾಹಾರ ಯೋಜನೆಯು ದೂರದೃಷ್ಟಿಯ ದೃಷ್ಟಿಕೋನ ಹೊಂದಿದೆ. ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಮುಖ್ಯಮಂತ್ರಿಗಳು ತಾಯಿಯಂತೆ ಬಿಸಿ ಊಟವನ್ನು ಒದಗಿಸುತ್ತಾರೆ ಎಂದು ತಿಳಿಸಿದ್ದರು.
234 ಸದಸ್ಯ ಬಲದ ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ ಅಥವಾ ಮೇಯಲ್ಲಿ ನಡೆಯುವ ಸಾಧ್ಯತೆ ಇದೆ. ಈ ಬಾರಿ ತಮಿಳುನಾಡಿನಲ್ಲಿ ಎಂಕೆ ಸ್ಟಾಲಿನ್ ನೇತೃತ್ವದ ಮೈತ್ರಿಕೂಟ ದ್ರಾವಿಡ ಮಾದರಿ 2.0 ಮೂಲಕ ಗೆಲುವಿನ ನಿರೀಕ್ಷೆ ಹೊಂದಿದೆ. ಇತ್ತ ಎಐಎಡಿಎಂಕೆ - ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಎರಡು ಪ್ರಮುಖ ಪಕ್ಷಗಳ ನಡುವೆ ನಟ ಮತ್ತು ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷ ಪ್ರಬಲ ಪೈಪೋಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ತಮಿಳುನಾಡಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.
ಇವುಗಳನ್ನೂ ಓದಿ: ಇಪಿಎಸ್-ಒಪಿಎಸ್ ಗುಂಪಿನ ಗಲಾಟೆ: ಎಐಎಡಿಎಂಕೆ ಕಚೇರಿ ಸೀಲ್
ಎ.ಪಳನಿಸ್ವಾಮಿ ಎಐಎಡಿಎಂಕೆ ಹಂಗಾಮಿ ಮುಖ್ಯಸ್ಥ, ಒ.ಪನ್ನೀರಸೆಲ್ವಂ ಉಚ್ಛಾಟನೆ

