ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್, ಪ್ರವೃತ್ತಿಯಲ್ಲಿ ಮಾದರಿ ಕೃಷಿಕ: ವಾರಕ್ಕೆ 60 ಕ್ವಿಂಟಲ್ ಬದನೆ ಬೆಳೆದು ಸಾಧನೆ; ಇವರ ಯಶಸ್ಸಿನ ಸೂತ್ರ ಏನು?
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಾಹಿತ್ಯ ಉಣಬಡಿಸುತ್ತಿರುವ ಪ್ರೊ ತಟ್ಟೆ, ಉದ್ಯೋಗಾವಧಿ ಬಳಿಕ ರೈತರಾಗಿ ಸಾವಯವ ಕೃಷಿ ಮಾಡುವ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದಾರೆ.


Published : January 6, 2026 at 5:19 PM IST
ಅಮರಾವತಿ (ಮಹಾರಾಷ್ಟ್ರ): ವೃತ್ತಿ ಮತ್ತು ಆಸಕ್ತಿ ನಡುವಿನ ಸಮತೋಲನ ಹಾಗೂ ಬದ್ದತೆಯಲ್ಲಿ ಜೀವನದ ಯಶಸ್ಸು ಅಡಗಿದೆ ಎಂಬುದನ್ನು ಅಮರಾವತಿ ಜಿಲ್ಲೆಯ ಮೆಲ್ಘಾಟ್ ತಪ್ಪಲಿನಲ್ಲಿರುವ ಎಕ್ಲಾಸ್ಪುರ ಗ್ರಾಮದ ಪ್ರೊ. ಡಾ. ಏಕನಾಥ್ ತಟ್ಟೆ ತೋರಿಸಿಕೊಟ್ಟಿದ್ದಾರೆ.
ಬದುಕಿನ ಅನಿವಾರ್ಯತೆಗೆ ಅನೇಕರು ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ತಮ್ಮ ಆಸಕ್ತಿಕರ ಪ್ರವೃತ್ತಿಗೆ ಅಂತ್ಯ ಹಾಡುತ್ತಾರೆ. ಆದರೆ, ಪ್ರೊ. ಏಕನಾಥ್ ತಟ್ಟೆ ಆ ರೀತಿ ಮಾಡಲಿಲ್ಲ. ಪರತ್ವಾಡಾದ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿರುವ ಅವರು, ಪಾಠ ಮಾಡುವ ಜೊತೆಗೆ ತಮ್ಮ ಕೃಷಿ ಪ್ರೇಮಕ್ಕೂ ನೀರೆರೆಯುತ್ತಿದ್ದಾರೆ. ಇದರಿಂದಾಗಿ ಅವರಿಂದು ಮಾದರಿ ಕೃಷಿಕರಾಗಿದ್ದು, ಹಲವರಿಗೆ ಸ್ಪೂರ್ತಿಯಾಗಿದ್ದಾರೆ.

ಪರತ್ವಾಡಾದ ಭಗವಂತರಾವ್ ಶಿವಾಜಿ ಪಾಟೀಲ್ ಕಾಲೇಜಿನಲ್ಲಿ ಪ್ರೊ. ಡಾ. ಏಕನಾಥ್ ತಟ್ಟೆ, ಒಂದು ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಸಾವಯವ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ನಂಬಿಕೆ ಹೊಂದಿ, ಅದನ್ನೇ ಅಳವಡಿಸಿಕೊಂಡಿದ್ದಾರೆ. ಉದ್ಯೋಗದ ಜೊತೆಗೆ ಕೃಷಿ ಬದುಕಿನ ಆಯ್ಕೆ ಕುರಿತು ಮಾತನಾಡುವ ಅವರು, ನನ್ನ ಮಂತ್ರ ಸರಳ, ಕೃಷಿಯನ್ನೇ ಚಿಂತನಶೀಲ ಪ್ರಯೋಗ ಮಾಡಿದಲ್ಲಿ ಅದು ನಿಮಗೆ ಊಟ ನೀಡುತ್ತದೆ ಎನ್ನುತ್ತಾರೆ ಅವರು.
ಬೆಳಗ್ಗೆ ಪ್ರೊ ಆಗಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪಾಠ ಮಾಡುವ ಏಕನಾಥ್, ತಮ್ಮ ಕೆಲಸದ ಅವಧಿ ಮುಗಿಯುತ್ತಿದ್ದಂತೆ ಅಪ್ಪಟ ಕೃಷಿಕರಾಗಿ ಸಂಜೆ ಜಮೀನಿಗೆ ಇಳಿಯುತ್ತಾರೆ. ಮಹಿಳಾ ರೈತ ಬೆಂಬಲದೊಂದಿಗೆ ಹಸನಾದ ಬದನೆ ಫಸಲು ಬೆಳೆದಿರುವ ಅವರು, ಪ್ರತಿ ವಾರ ತಮ್ಮ ಹೊಲದಿಂದ 60 ಕ್ವಿಂಟಲ್ ಬದನೆಯನ್ನು ಅಮರಾವತಿ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.

ಕಳೆದ ಸೆಪ್ಟೆಂಬರ್ನಲ್ಲಿ ಖಾಸಗಿ ಕಂಪನಿಯಿಂದ ಪಡೆದ ಬೀಜಗಳನ್ನು ಬಳಸಿಕೊಂಡು ಮುಳ್ಳು ಬದನೆ ಹಾಗೂ ಸ್ಥಳೀಯ ವಿಧದ ಬದನೆ ಬೆಳೆದಿದ್ದಾರೆ. ಇದರ ಜೊತೆಗೆ ಪೌಷ್ಠಿಕಾಂಶಯುಕ್ತ, ಸಾಂಪ್ರದಾಯಿಕ ಧಾನ್ಯವಾದ ಖಪ್ಲಿ ಗೋಧಿಯನ್ನೂ ಕೂಡಾ ಬೆಳೆದಿದ್ದಾರೆ.
ಈ ಕೃಷಿ ಯಶಸ್ಸಿನ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ತಮ್ಮ ನಿರ್ಧಾರಗಳು ತಮಗೆ ಸಂತಸ ತಂದಿಲ್ಲ. ನಾನು ಹಸಿಗೊಬ್ಬರ ಹಾಕಿ, ಎತ್ತರದ ಮಡಿಗಳ ಮೇಲೆ ನೆಟ್ಟು, ಹನಿ ನೀರಾವರಿ ಅಳವಡಿಸಬೇಕಿತ್ತು. ಆದರೆ ನಾವು ನಮ್ಮ ತಪ್ಪುಗಳಿಂದ ಕಲಿಯುತ್ತಿದ್ದೇನೆ. ಮುಂದಿನ ಬಾರಿ ಸರಿಪಡಿಸಿಕೊಳ್ಳುತ್ತೇನೆ ಎಂದರು.

ಬದನೆ ಜೊತೆಯಲ್ಲಿ ಎಮ್ಮರ್ ಗೋಧಿ ಎಂದು ಕರೆಯುವ ಖಪ್ಲಿಯನ್ನು ಕೂಡ ಸಾವಯವ ಮಾದರಿಯಲ್ಲಿ ಬೆಳೆಯುತ್ತಿದ್ದಾರೆ. ಈ ಗೋಧಿ ಸ್ಥಳೀಯವಾಗಿ ಲಭ್ಯವಾಗುವುದಿಲ್ಲ. ಇದಕ್ಕಾಗಿ ಸಾಂಗ್ಲಿಯಿಂದ ಬೀಜಗಳನ್ನು ತರಿಸಿದ್ದೆ. ಇದು ಮಾರ್ಚ್ ಅಥವಾ ಏಪ್ರಿಲ್ಗೆ ಫಸಲು ನೀಡಲಿದ್ದು, ಹೆಚ್ಚಿನ ಪೌಷ್ಟಿಕಾಂಶ ಮತ್ತು ಕಡಿಮೆ ಗುಲ್ಟೆನ್ ಅಂಶ ಹೊಂದಿದೆ ಎಂದು ಅವರು ವಿವರಿಸಿದರು.
ಪ್ರಯೋಗವನ್ನು ವಿಶೇಷವಾಗಿ ಯುವ ರೈತರು ಬಳಕೆ ಮಾಡಬಹುದು ಎನ್ನುವ ತಟ್ಟೆ, ಆರಂಭಿಕ ಹೂಡಿಕೆ ಜೊತೆಗೆ ಇದು ಸಾಕಷ್ಟು ಕಠಿಣ ಕೆಲಸ ಬೇಡುತ್ತದೆ. ಕಾಲೇಜು ಮುಗಿದ ಬಳಿಕ ನಿತ್ಯ ಎರಡು ಗಂಟೆ ಹೊಲದಲ್ಲಿ ಕೆಲಸ ಮಾಡುತ್ತೇನೆ. ವ್ಯವಸ್ಥಿತ ಮತ್ತು ವೈಜ್ಞಾನಿಕ ಕೃಷಿಯು ಹಸಿವನ್ನು ಮಾತ್ರವಲ್ಲ ಲಾಭವನ್ನು ತರುತ್ತದೆ ಎನ್ನುತ್ತಾರೆ ಏಕನಾಥ್.
ಇವುಗಳನ್ನೂ ಓದಿ: ಕೊಪ್ಪಳ: ಕೃತಕ ಕಾಲಿನಲ್ಲೇ ಕೃಷಿ ಮಾಡುವ ರಾಮಣ್ಣ, 9 ಲಕ್ಷ ರೂ ಲಾಭ
ಈ ಊರಲ್ಲಿ ಕೂಲಿ ಕಾರ್ಮಿಕರಿಗೆ ಬೇಕು ಬಂದೂಕಿನ ರಕ್ಷಣೆ: ಫಿರಂಗಿ ನೆರಳಲ್ಲಿ ನಡೆಯುತ್ತೆ ಕೃಷಿ ಕಾರ್ಯ, ಏಕೆ ಗೊತ್ತಾ?

