ETV Bharat / bharat

TMC ಐಟಿ ಸೆಲ್​ ಮುಖ್ಯಸ್ಥನ ಐ-ಪ್ಯಾಕ್​ ಕಚೇರಿಗೆ ದಾಳಿ ಮಾಡಿದ ಇ.ಡಿ: ಇದು ರಾಜಕೀಯ ಪ್ರೇರಿತ ಎಂದ ದೀದಿ

ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಟಿಎಂಸಿ ಪಕ್ಷದ ಐಟಿ ಸೆಲ್​ ಮುಖ್ಯಸ್ಥನಿಗೆ ಸೇರಿದ ಐ-ಪ್ಯಾಕ್​ ಕಚೇರಿಯ ಮೇಲೆ ಇಡಿ ದಾಳಿ ನಡೆಸಿದೆ. ಇದು ರಾಜಕೀಯ ಪ್ರೇರಿತ ಎಂದು ಸಿಎಂ ಮಮತಾ ಆರೋಪಿಸಿದ್ದಾರೆ.

ED RAIDS I PAC OFFICE
ಇ.ಡಿ. ದಾಳಿ ನಡೆಸಿದ ಐ ಪ್ಯಾಕ್​ ಕಚೇರಿಗೆ ಬಂದ ಸಿಎಂ ಮಮತಾ ಬ್ಯಾನರ್ಜಿ (ETV Bharat)
author img

By ETV Bharat Karnataka Team

Published : January 8, 2026 at 5:54 PM IST

2 Min Read
Choose ETV Bharat

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸರ್ಕಾರಿ ಸಲಹಾ ಸಂಸ್ಥೆಯಾದ ಐ-ಪ್ಯಾಕ್​ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಲೌಡನ್ ಸ್ಟ್ರೀಟ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಇದು ಟಿಎಂಸಿ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಇಡಿ ದಾಳಿ ನಡೆಸಿ ಕಚೇರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಗಮಿಸಿ, ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ನಾವು ಬಿಜೆಪಿ ಕಚೇರಿಯ ಮೇಲೆ ದಾಳಿ ಮಾಡಿದರೆ ಹೇಗೆ?. ಟಿಎಂಸಿ ಐಟಿ ಮುಖ್ಯಸ್ಥರ ಮನೆ ಮೇಲೆ ಇಡಿ ದಾಳಿ ನಡೆಸಿರುವುದು ಅತ್ಯಂತ ದುರದೃಷ್ಟಕರ. ವಿಪಕ್ಷಗಳ ಮನೆಗಳ ಮೇಲೆ ದಾಳಿ ಮಾಡಿಸುವುದು ಕೇಂದ್ರ ಗೃಹ ಸಚಿವರ ಕೆಲಸವೇ?" ಎಂದು ಜರಿದಿದ್ದಾರೆ.

ಇ.ಡಿ. ಅಧಿಕಾರಿಗಳು ಜೈನ್ ಅವರ ನಿವಾಸ ಜಾಲಾಡಿದ ಬಳಿಕ ಸಾಲ್ಟ್ ಲೇಕ್ ಸೆಕ್ಟರ್ 5ರಲ್ಲಿರುವ ಅವರ ಕಚೇರಿಯನ್ನು ತಪಾಸಣೆಗೆ ಒಳಪಡಿಸಿದರು. ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಈ ದಾಳಿ ದೆಹಲಿಯಲ್ಲಿ ದಾಖಲಾಗಿರುವ ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಈ ಕಾರ್ಯಾಚರಣೆಗಾಗಿ ದೆಹಲಿಯಿಂದ ವಿಶೇಷ ಇ.ಡಿ. ತಂಡವನ್ನು ಕರೆಸಲಾಗಿದೆ ಎಂದು ತಿಳಿದುಬಂದಿದೆ.

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ವಹಿವಾಟುಗಳು ನಡೆದಿದ್ದು, ಈ ಆರೋಪದಲ್ಲಿ ಐ-ಪ್ಯಾಕ್​ ಸಂಸ್ಥೆಯ ಹೆಸರು ಕೇಳಿಬಂದಿದೆ ಎಂದು ಇಡಿ ಮೂಲಗಳು ಹೇಳಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬುರ್ರಬಜಾರ್‌ನ ಪೋಸ್ಟಾ ಪ್ರದೇಶದಲ್ಲಿರುವ ಉದ್ಯಮಿಯೊಬ್ಬರ ಮನೆಯನ್ನು ಸಹ ಶೋಧಿಸಲಾಗಿದೆ.

ಸೆಕ್ಟರ್ 5ರಲ್ಲಿರುವ ಬಹುಮಹಡಿ ಕಟ್ಟಡದ 12ನೇ ಮಹಡಿಯಲ್ಲಿರುವ ಐ-ಪ್ಯಾಕ್​ ಕಚೇರಿಯ ಮೇಲೆ ಇಡಿ ತಂಡಗಳು ಬಿಗಿ ಭದ್ರತೆಯಲ್ಲಿ ತಪಾಸಣೆ ನಡೆಸುತ್ತಿವೆ. ಇಂದು ಮುಂಜಾನೆ ದಾಳಿ ನಡೆದಾಗ, ರಾತ್ರಿ ಕರ್ತವ್ಯದಲ್ಲಿದ್ದ ಕೆಲವೇ ಉದ್ಯೋಗಿಗಳು ಕಚೇರಿಯಲ್ಲಿ ಹಾಜರಿದ್ದರು. ಅವರ ಸಮ್ಮುಖದಲ್ಲಿ ಶೋಧ ಆರಂಭವಾಯಿತು. ನಂತರ, ಕೇಂದ್ರ ಪಡೆಗಳು ಇಡೀ ಕಟ್ಟಡವನ್ನು ಸೀಲ್ ಮಾಡಿದವು. ಪರಿಣಾಮವಾಗಿ, ಕಚೇರಿಗೆ ಪ್ರವೇಶ ಮತ್ತು ನಿರ್ಗಮನವನ್ನು ಪ್ರಸ್ತುತ ನಿರ್ಬಂಧಿಸಲಾಗಿದೆ.

ರಾಜಕೀಯ ಕೆಸರೆರಚಾಟ: ರಾಜ್ಯ ಸರ್ಕಾರದ ಸಲಹಾ ಸಂಸ್ಥೆಯ ಕಚೇರಿಯ ಮೇಲೆ ಇಡಿ ದಾಳಿ ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸಿಪಿಎಂ ಈ ದಾಳಿಯನ್ನು ಖಂಡಿಸಿದೆ. ಐ-ಪ್ಯಾಕ್​ ಮುಖ್ಯಸ್ಥ ಪ್ರತೀಕ್ ಜೈನ್ ರಾಜಕೀಯ ಮತ್ತು ಆಡಳಿತದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರ ಜೊತೆ ಹಲವು ಬಾರಿ ಸಭೆ ನಡೆಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಐ-ಪ್ಯಾಕ್​ ವಿವಿಧ ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ರಾಜಕೀಯ ತಂತ್ರಗಳನ್ನು ರೂಪಿಸುವಲ್ಲಿ ಆಡಳಿತ ಪಕ್ಷ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿತು. ಆಡಳಿತ ಪಕ್ಷದ ಉನ್ನತ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಕಚೇರಿಯೊಂದಿಗೆ ಸಂಸ್ಥೆಯು ನಿಕಟ ಸಂಪರ್ಕವನ್ನು ಹೊಂದಿದೆ ಎಂದು ಹೇಳಲಾಗಿದೆ.

ವಿಧಾನಸಭಾ ಚುನಾವಣೆಗಳಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಐ-ಪ್ಯಾಕ್​ ಮಹತ್ವದ ಪಾತ್ರ ವಹಿಸಿದೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ, ಇ.ಡಿ. ದಾಳಿ ಕೇವಲ ಹಣಕಾಸಿನ ತನಿಖೆಯಲ್ಲ, ರಾಜಕೀಯವಾಗಿಯೂ ಬಹಳ ಮಹತ್ವದ್ದಾಗಿದೆ ಎಂದು ವಿಶ್ಲೇಷಣೆ ವ್ಯಕ್ತವಾಗಿದೆ.

ಇವುಗಳನ್ನೂ ಓದಿ: