ETV Bharat / bharat

ಮಣ್ಣಿಲ್ಲದೇ ಬೆಳೆಯುವ ತರಕಾರಿ ಕೃಷಿ: ಏನಿದು ಏರೋಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್ ವ್ಯವಸಾಯ?; ವಿದೇಶಿ ತರಕಾರಿಗಳ ಕೃಷಿಗೆ ಉತ್ತೇಜನ!

ಹೈಡ್ರೋಪೋನಿಕ್ಸ್ ಬಳಸಿ ಲೆಟಿಸ್, ಪೊಕ್ಚೋಯ್ ಮತ್ತು ತುಳಸಿಗಳನ್ನು ಬೆಳೆಯಲಾಗುತ್ತಿದೆ.

Cultivation Of Exotic Vegetables Being Promoted
ಏನಿದು ಏರೋಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್ ವ್ಯವಸಾಯ (ETV Bharat)
author img

By ETV Bharat Karnataka Team

Published : January 8, 2026 at 4:20 PM IST

4 Min Read
Choose ETV Bharat

ನಳಂದ, ಬಿಹಾರ: ಬಿಹಾರದ ನಳಂದ ಜಿಲ್ಲೆಯಲ್ಲಿ ಏರೋಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್ ಮೂಲಕ ಕೃಷಿ ಆಧುನೀಕರಣಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಇಲ್ಲಿ ನೀರು ವಿರಳವಾಗಿರುವುದರಿಂದ ಕೃಷಿ ವಿಜ್ಞಾನಿಗಳು ಹನಿ ನೀರಾವರಿ, ಲಂಬ ಕೃಷಿ ಮತ್ತು ಸ್ಮಾರ್ಟ್ ಹಸಿರುಮನೆಗಳ ಸ್ಥಾಪನೆ ಮೂಲಕ ಲಾಭದಾಯಕ ಕೃಷಿಯತ್ತ ಚಿತ್ತ ಹರಿಸಿದ್ದಾರೆ.

ಚಂಡಿಯಲ್ಲಿರುವ ಬಿಹಾರದ ಏಕೈಕ ತರಕಾರಿಗಳ ಶ್ರೇಷ್ಠತಾ ಕೇಂದ್ರವು ಮೇಲೆ ತಿಳಿಸಿದ ಉಪಕ್ರಮಗಳನ್ನು ಬಳಸಿಕೊಂಡು ತರಕಾರಿ ಕೃಷಿಯನ್ನು ಮಾಡುತ್ತಿದೆ. ರೈತರಿಗೆ ಹೆಚ್ಚಿನ ಆದಾಯ ಹಾಗೂ ಫಸಲು ನೀಡುವ ನಿರೀಕ್ಷೆಯಿರುವ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ವಿದೇಶಿ ತರಕಾರಿ ಕೃಷಿಯನ್ನು ಉತ್ತೇಜಿಸಲು ಕೇಂದ್ರವು ಇಸ್ರೇಲಿ ತಂತ್ರಜ್ಞಾನದ ಸಹಾಯವನ್ನು ಪಡೆದುಕೊಳ್ಳುತ್ತಿದೆ.

Cultivation Of Exotic Vegetables Being Promoted In Bihar's Nalanda
ಏರೋಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್ ಮೂಲಕ ಕೃಷಿ ಆಧುನೀಕರಣಕ್ಕೆ ಪ್ರಯತ್ನ (ETV Bharat)

ಇದು ಸಾವಯವ ಕೃಷಿಗೆ ಸಹಾಯಕ: ಕೃಷಿ ವಿಜ್ಞಾನಿಗಳು ಇಲ್ಲಿ ಹಲವು ವರ್ಷಗಳಿಂದ ಮಣ್ಣು ಅಥವಾ ನೀರಿಲ್ಲದೇ ಗಾಳಿಯಲ್ಲಿ ತರಕಾರಿಗಳನ್ನು ಬೆಳೆಸುತ್ತಿದ್ದಾರೆ. ಇತರ ತರಕಾರಿಗಳೊಂದಿಗೆ ಆಲೂಗಡ್ಡೆ ಮತ್ತು ಟೊಮೆಟೊಗಳನ್ನು ಬೆಳೆಯುತ್ತಿದ್ದಾರೆ. ಈ ವಿಧಾನವನ್ನು ಏರೋಪೋನಿಕ್ಸ್ ಎಂದು ಕರೆಯಲಾಗುತ್ತದೆ. ಅಲ್ಲಿ ಸಸ್ಯಗಳನ್ನು ಮಣ್ಣು ಇಲ್ಲದೇ ಗಾಳಿಯಲ್ಲಿ ಬೆಳೆಸಲಾಗುತ್ತದೆ. ಇದು ಬೇರುಗಳಿಗೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ನೀರಿನ ಮಂಜನ್ನು ಬಳಸುತ್ತದೆ. ಇದು ಸಾವಯವ ಕೃಷಿಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಈ ವಿಧಾನವನ್ನು ಬಳಸಿಕೊಂಡು ವಿದೇಶಿ ತರಕಾರಿಗಳನ್ನು ಸಹ ಬೆಳೆಯಬಹುದು. ಇದು ಹೈಡ್ರೋಪೋನಿಕ್ಸ್‌ನ ಒಂದು ಮುಂದುವರಿದ ರೂಪವಾಗಿದ್ದು, ಅಲ್ಲಿ ಬೇರುಗಳನ್ನು ಗಾಳಿಯಲ್ಲಿ ತೇಲುವಂತೆ ಮಾಡಲಾಗುತ್ತದೆ. ಆ ಮೂಲಕ ಅವುಗಳಿಗೆ ಪೋಷಣೆಯನ್ನು ಒದಗಿಸಲಾಗುತ್ತದೆ.

ಕೇಂದ್ರವು ಹೈಡ್ರೋಪೋನಿಕ್ ಘಟಕದಲ್ಲಿ ನೀರಿನಲ್ಲಿ ವಿಶಿಷ್ಠ ಎಲೆ ತರಕಾರಿಗಳನ್ನು ಬೆಳೆಸುವ ಪ್ರಯತ್ನ ಮಾಡುತ್ತಿದೆ. ಈ ಘಟಕದಲ್ಲಿ ಬೆಳೆದ ಲೆಟಿಸ್, ಪೊಕ್ಚೋಯ್ ಮತ್ತು ತುಳಸಿಗಳ ಕೃಷಿಯು ರಾಜಗೀರ್, ಪಾಟ್ನಾ, ಗಯಾ ಮತ್ತು ದೇಶದ ಇತರ ಭಾಗಗಳಲ್ಲಿರುವ ಪ್ರಸಿದ್ಧ ಹೋಟೆಲ್‌ಗಳ ರುಚಿಯನ್ನು ಹೆಚ್ಚಿಸುತ್ತಿದೆ.

ಈ ತರಕಾರಿಗಳನ್ನು ಮಾರಾಟ ಮಾಡಲು ಟೋಕ್ರಿ ಫ್ರೆಶ್ ಫುಡ್ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಕೂಡಾ ಸಹಿ ಹಾಕಲಾಗಿದೆ. ಫೆಬ್ರವರಿ 2026 ರ ವೇಳೆಗೆ ಪಾಟ್ನಾಗೆ ಈ ತರಕಾರಿಗಳನ್ನು ರವಾನಿಸಲಾಗುತ್ತದೆ.

Cultivation Of Exotic Vegetables Being Promoted In Bihar's Nalanda
ಹೈಡ್ರೋಪೋನಿಕ್ಸ್ ಬಳಸಿ ಲೆಟಿಸ್, ಪೊಕ್ಚೋಯ್ ಬೆಳೆ (ETV Bharat)

ಈ ಕೃಷಿ ಬಗ್ಗೆ ಕೃಷಿ ವಿಜ್ಞಾನಿ ಹೇಳುವುದಿಷ್ಟು; ಕೃಷಿ ವಿಜ್ಞಾನಿ ಮನೋಜ್ ಕುಮಾರ್ ಮಿಶ್ರಾ ಅವರು ಈ ಮಾತನಾಡಿದ್ದು, ಈ ಆಧುನಿಕ ಕೃಷಿ ಕೇಂದ್ರದಲ್ಲಿ ಇಂಡೋ - ಇಸ್ರೇಲಿ ಯೋಜನೆ ಮೂಲಕ ತರಕಾರಿ ಬೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಹಿರಂಗ ಪಡಿಸಿದರು. ಅಲ್ಲಿ ಏರೋಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್ ಮೂಲಕ ವಿದೇಶಿ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಬೀಜಗಳನ್ನು ದೆಹಲಿಯಿಂದ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಸ್ಟ್​ 60 ದಿನಗಳಲ್ಲಿ ತರಕಾರಿ ಸಿದ್ಧ; ನಾವು 15 ರಿಂದ 20 ದಿನಗಳಲ್ಲಿ ಕಸಿ ಮಾಡಲು ಸಿದ್ಧವಾಗಿರುವ ಬೀಜಗಳಿಂದ ಸಸ್ಯಗಳನ್ನು ತಯಾರಿಸುತ್ತೇವೆ. ಸಸ್ಯಗಳು ಸುಮಾರು 35 ದಿನಗಳಲ್ಲಿ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಬೀಜಗಳನ್ನು ಬಿತ್ತುವುದರಿಂದ ಕೊಯ್ಲು ಮಾಡುವವರೆಗೆ ಪ್ರಕ್ರಿಯೆಯು 60 ದಿನಗಳನ್ನು ತೆಗೆದುಕೊಳ್ಳುತ್ತದೆ. ಪಾಟ್ನಾ, ಗಯಾ ಮತ್ತು ರಾಜಗೀರ್‌ನಲ್ಲಿ ಮಾರುಕಟ್ಟೆಗಳಿವೆ ಎಂದು ಅವರು ಹೇಳಿದರು.

ನಾವು ಎರಡು ವಿಧದ ಲೆಟಿಸ್ ನೆಟ್ಟಿದ್ದೇವೆ. ಒಟ್ಟು ಮೂರು ಸಸ್ಯಗಳನ್ನು ನೆಡುತ್ತಿದ್ದೇವೆ. ಅವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಈ ಕೃಷಿ ಕೇಂದ್ರದಲ್ಲಿ ಮೂರು ವರ್ಷಗಳಿಂದ ಈ ಪ್ರಯೋಗ ನಡೆಯುತ್ತಿದೆ ಎಂದು ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ.

ಉತ್ಪಾದಿಸಲಾಗುತ್ತಿರುವ ಸಸ್ಯಗಳು ಪ್ರಮುಖ ಮಾರುಕಟ್ಟೆಗಳನ್ನು ತಲುಪಲು ಮತ್ತು ಸರಿಯಾದ ಆದಾಯವನ್ನು ಖಚಿತಪಡಿಸಿಕೊಳ್ಳಲು ಬ್ರಾಂಡ್ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಸುಮಾರು 1,000 ಚದರ ಮೀಟರ್‌ನಲ್ಲಿ ಹೈಡ್ರೋಪೋನಿಕ್ ಘಟಕವನ್ನು ನಿರ್ಮಿಸಲಾಗಿದ್ದು, ಕಳೆದ ಮೂರು ವರ್ಷಗಳಿಂದ ಲೆಟಿಸ್, ಪೂಕ್ಚೋಯ್ ಮತ್ತು ತುಳಸಿಯನ್ನು ಇಲ್ಲಿ ಬೆಳೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಬಾರಿ ಸುಮಾರು 123 ಕೆಜಿ ವಿದೇಶಿ ತರಕಾರಿಗಳನ್ನು ಪಾಟ್ನಾಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಕೆಜಿಗೆ 50 ರೂ. ಬೆಲೆಯ ಸುಮಾರು 50 ಕೆಜಿ ಪೊಕ್ಚೋಯ್ ಮತ್ತು ಕೆಜಿಗೆ 62 ರೂ. ಬೆಲೆಯ 3 ಕೆಜಿ ತುಳಸಿಯನ್ನು ಸಹ ರಾಜ್ಯ ರಾಜಧಾನಿಗೆ ಕಳುಹಿಸಲಾಗಿದೆ. ಇದು ಕೇಂದ್ರಕ್ಕೆ ಸುಮಾರು 32,806 ರೂ.ಗಳ ಲಾಭವನ್ನು ತಂದುಕೊಟ್ಟಿದೆ. ಖರೀದಿ ಸಂಸ್ಥೆಯು ಎರಡನೇ ಸಲ ಆರ್ಡರ್​ ಕೂಡಾ ಕೊಟ್ಟಿದೆ. ಎಲೆ ತರಕಾರಿಗಳನ್ನು ಶೀಘ್ರದಲ್ಲೇ ರವಾನಿಸಲಾಗುತ್ತದೆ. ಕಳುಹಿಸಲಾದ ತರಕಾರಿಗಳನ್ನು ಹೈಡ್ರೋಪೋನಿಕ್ ಘಟಕದಲ್ಲಿ ಬೆಳೆಸಿರುವುದು ವಿಶೇಷ.

ಬೆಳೆ ಬೆಳೆಯಲು ಹೇಗಿರಬೇಕು ವಾತಾವರಣ: ಈ ಬೆಳೆಗಳಿಗೆ ಸೂಕ್ತ ತಾಪಮಾನ ಹಗಲಿನಲ್ಲಿ 24 ರಿಂದ 28 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 18 ರಿಂದ 22 ಡಿಗ್ರಿ ಸೆಲ್ಸಿಯಸ್ ಎಂದು ಮಿಶ್ರಾ ಈಟಿವಿ ಭಾರತ್‌ಗೆ ತಿಳಿಸಿದರು. ಆರ್ದ್ರತೆ ಶೇ 50 ರಿಂದ ಶೇ 60ರಷ್ಟು ಆಗಿರಬೇಕು. ಒಂದು ಸಸ್ಯದ ಸರಾಸರಿ ತೂಕ 250 ಗ್ರಾಂ ನಿಂದ 350 ಗ್ರಾಂ ಮತ್ತು ಪ್ರತಿ ಸಸ್ಯದ ಬೆಲೆ 8 ರೂ.ಆಗಿದೆ.

ಹೈಡ್ರೋಪೋನಿಕ್ಸ್ ಮೂಲಕ ಬೆಳೆದ ಬೆಳೆಗಳಿಗೆ ಪಾಟ್ನಾ ಮತ್ತು ದೆಹಲಿಯ ಪಂಚತಾರಾ ಹೋಟೆಲ್‌ಗಳಲ್ಲಿ ಬೇಡಿಕೆಯಿದೆ. ಅವುಗಳ ಮಾರುಕಟ್ಟೆ ಬೆಲೆ ಕೆಜಿಗೆ 70 ರಿಂದ 80 ರೂ.ಗಳವರೆಗೆ ಇರುತ್ತದೆ. ಒಂದು ಋತುವಿನಲ್ಲಿ ಸರಿಸುಮಾರು 2,000 ರಿಂದ 2,500 ಕೆಜಿ ತರಕಾರಿಗಳನ್ನು ಉತ್ಪಾದಿಸಲಾಗುತ್ತದೆ. ಇದು ಸುಮಾರು 1.25 ಲಕ್ಷ ರೂ.ಗಳ ಆದಾಯವನ್ನು ಗಳಿಸುತ್ತದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಕೇಂದ್ರದ ಉಸ್ತುವಾರಿ ರೋಹಿತಶ್ವರ್ ಕುಮಾರ್ ಮತ್ತು ಬ್ಲಾಕ್ ತೋಟಗಾರಿಕಾ ಅಧಿಕಾರಿ ಪವನ್ ಕುಮಾರ್ ಪಂಕಜ್ ಅವರು ಹೈಡ್ರೋಪೋನಿಕ್ ಘಟಕದಲ್ಲಿ ಮೂರು ವಿಧಧ ತಳಿಯ ತುಳಸಿ ಮತ್ತು ಪೊಕ್ಚೋಯ್ ಬಹು - ಕೊಯ್ಲು ಸಸ್ಯಗಳನ್ನು ನೆಡಲಾಗಿದೆ ಮತ್ತು ಸಸ್ಯಗಳು 20 ರಿಂದ 25 ದಿನಗಳಲ್ಲಿ ಪಕ್ವವಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಸಲಾಡ್​​ ತಯಾರಿಸಲು ಈ ತರಕಾರಿ ಬಳಕೆ: ಇವುಗಳನ್ನು ಪ್ರತಿ ಎರಡೂವರೆಯಿಂದ ಮೂರು ವಾರಗಳಿಗೊಮ್ಮೆ ಕೊಯ್ಲು ಮಾಡಲಾಗುತ್ತದೆ. ಆದರೆ, ಲೆಟಿಸ್ ಒಂದೇ ಕೊಯ್ಲು ಬೆಳೆಯಾಗಿದೆ. ಎಲೆ ತರಕಾರಿಗಳನ್ನು ಸಲಾಡ್ ತಯಾರಿಸಲು ಬಳಸಲಾಗುತ್ತದೆ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ ಎಂದು ಕುಮಾರ್ ವಿವರಿಸಿದರು.

ಬೆಳೆಯುವ ವಿಧಾನ ಹೇಗೆ?: ಹೈಡ್ರೋಪೋನಿಕ್ಸ್ ವಿಧಾನದ ಅಡಿ ಸಸ್ಯಗಳನ್ನು ನೀರಿಗೆ ಮರಳು ಅಥವಾ ಬೆಣಚುಕಲ್ಲುಗಳನ್ನು ಸೇರಿಸುವ ಮೂಲಕ ಬೆಳೆಸಲಾಗುತ್ತದೆ ಎಂದು ಅವರು ವಿವರಿಸಿದರು. ನಿರ್ದಿಷ್ಟ ಪ್ರಮಾಣದಲ್ಲಿ ಸಾರಜನಕ, ರಂಜಕ, ಪೊಟ್ಯಾಶ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಸಲ್ಫರ್, ಸತು ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಒದಗಿಸಲು ವಿಶೇಷ ದ್ರಾವಣವನ್ನು ಬಳಸಲಾಗುತ್ತದೆ.

ಪಂಪಿಂಗ್ ಯಂತ್ರದ ಮೂಲಕ ಸಸ್ಯದ ಬೇರುಗಳಿಗೆ ಆಮ್ಲಜನಕವನ್ನು ಪಂಪ್ ಮಾಡಲಾಗುತ್ತದೆ. ಬೆಳೆಗಳು ಮಣ್ಣಿನ ಸಂಪರ್ಕಕ್ಕೆ ಬಾರದ ಕಾರಣ ರೋಗಕ್ಕೆ ಕಡಿಮೆ ಒಳಗಾಗುತ್ತವೆ. ಈ ತಂತ್ರವನ್ನು ಬಳಸಿಕೊಂಡು ಬೆಳೆದ ತರಕಾರಿಗಳು ಮತ್ತು ಸಸ್ಯಗಳು ಹೆಚ್ಚು ಪೌಷ್ಟಿಕವಾಗಿರುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕೇಂದ್ರವು ಭಾರತ ಮತ್ತು ಇಸ್ರೇಲ್ ಸರ್ಕಾರಗಳ ಸಹಯೋಗವಾಗಿದೆ. ಇದು ಉತ್ತಮ ಗುಣಮಟ್ಟದ, ರೋಗ - ಮುಕ್ತ ತರಕಾರಿಗಳನ್ನು ಉತ್ಪಾದಿಸಲು ರೈತರಿಗೆ ಸುಧಾರಿತ, ವೈಜ್ಞಾನಿಕ ಮತ್ತು ಆಧುನಿಕ ತರಕಾರಿ ಕೃಷಿ ತಂತ್ರಗಳಲ್ಲಿ ತರಬೇತಿ ನೀಡುತ್ತದೆ. ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ದೇಶವನ್ನು ಕೃಷಿಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದು ಇದರ ಗುರಿಯಾಗಿದೆ.

ಇವುಗಳನ್ನು ಓದಿ: ಕಾಶ್ಮೀರದಲ್ಲಿ ಮೈ ಕೊರೆಯುವ ಚಳಿ: ರಾತ್ರಿ ತಾಪಮಾನ -5 ಡಿಗ್ರಿಗೆ ಕುಸಿತ

ಈ ಊರಲ್ಲಿ ಇರೋದು ಒಂದೇ ಮನೆ: ಅಲ್ಲಿದೆ 4ಜಿ ಮೊಬೈಲ್​ ಟವರ್​, ವಿದ್ಯುತ್​, ರಸ್ತೆ ಸಂಪರ್ಕ; ಎಲ್ಲಿದೆ ಈ ವಿಶೇಷ ಹಳ್ಳಿ?