ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್, ಸಿಸೋಡಿಯಾರನ್ನು ಖುಲಾಸೆಗೊಳಿಸಿದ ನ್ಯಾಯಾಲಯ: ಸತ್ಯಕ್ಕೆ ಜಯ ಎಂದ ಸುನಿತಾ ಕೇಜ್ರಿವಾಲ್
ಆರೋಪಗಳು ನ್ಯಾಯಾಂಗ ಪರಿಶೀಲನೆಯಲ್ಲಿ ವಿಫಲವಾಗಿವೆ ಮತ್ತು ಮನೀಶ್ ಸಿಸೋಡಿಯಾ ಅವರ ಕಡೆಯಿಂದ ಯಾವುದೇ ಕ್ರಿಮಿನಲ್ ಉದ್ದೇಶ ಈ ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.


By ANI
Published : February 27, 2026 at 11:37 AM IST
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಶುಕ್ರವಾರ ರೋಸ್ ಅವೆನ್ಯೂ ಕೋರ್ಟ್ ಖುಲಾಸೆಗೊಳಿಸಿ ಆದೇಶಿಸಿದೆ.
ಪಿತೂರಿ ಪಾತ್ರವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಆರೋಪಗಳು ನ್ಯಾಯಾಂಗ ಪರಿಶೀಲನೆಯಲ್ಲಿ ವಿಫಲವಾಗಿವೆ ಮತ್ತು ಮನೀಶ್ ಸಿಸೋಡಿಯಾ ಅವರ ಕಡೆಯಿಂದ ಯಾವುದೇ ಕ್ರಿಮಿನಲ್ ಉದ್ದೇಶ ಈ ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ತೀರ್ಪು ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿರುವ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಅವರು, ಈ ಜಗತ್ತಿನಲ್ಲಿ, ಒಬ್ಬರು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಶಿವಶಕ್ತಿಗಿಂತ ಮೇಲೇರಲು ಸಾಧ್ಯವಿಲ್ಲ. ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
ಸಿಬಿಐ 2022 ರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಚಾರ್ಜ್ಶೀಟ್ ಸಲ್ಲಿಸಿತ್ತು. ನಂತರ ಬಹು ಪೂರಕ ಚಾರ್ಜ್ಶೀಟ್ಗಳನ್ನು ಕೋರ್ಟ್ ಗೆ ಸಲ್ಲಿಸಲಾಯಿತು. ರದ್ದಾದ ಅಬಕಾರಿ ನೀತಿಯನ್ನು ತನ್ನ ಪರವಾಗಿ ಪ್ರಭಾವಿಸಲು ದಕ್ಷಿಣದ ಲಾಬಿಯೊಂದು 100 ಕೋಟಿ ರೂ.ಗಳನ್ನು ಪಾವತಿಸಿದೆ ಎಂದು ಏಜೆನ್ಸಿ ಇದರಲ್ಲಿ ಆರೋಪಿಸಿತ್ತು.
ಒಟ್ಟಾರೆಯಾಗಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಕೆ. ಕವಿತಾ, ಕುಲದೀಪ್ ಸಿಂಗ್, ನರೇಂದರ್ ಸಿಂಗ್, ವಿಜಯ್ ನಾಯರ್, ಅಭಿಷೇಕ್ ಬೋಯಿನ್ಪಲ್ಲಿ, ಅರುಣ್ ರಾಮಚಂದ್ರ ಪಿಳ್ಳೈ, ಮೂತ ಗೌತಮ್, ಸಮೀರ್ ಮಹೇಂದ್ರು, ಅಮನ್ದೀಪ್ ಸಿಂಗ್ ಧಾಲ್, ಅರ್ಜುನ್ ಪಾಂಡೆ, ಬುಚ್ಚಿಬಾಬು ಗೋರ್ನಾಟ್ಲಾ, ರಾಕೇಶ್ ಜೋಶಿ, ದಾಮೋದರ್ ಪ್ರಸಾದ್ ಶರ್ಮಾ, ಪ್ರಿನ್ಸ್ ಕುಮಾರ್, ಚಾನ್ಪ್ರೀತ್ ಸಿಂಗ್ ರಾಯತ್, ಅರವಿಂದ್ ಕುಮಾರ್ ಸಿಂಗ್, ದುರ್ಗೇಶ್ ಪಾಠಕ್, ಅಮಿತ್ ಅರೋರಾ, ವಿನೋದ್ ಚೌಹಾಣ್, ಆಶಿಶ್ ಮಾಥುರ್ ಮತ್ತು ಪಿ. ಶರತ್ ಚಂದ್ರ ರೆಡ್ಡಿ ಸೇರಿದಂತೆ 23 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ವಾದಗಳ ಸಮಯದಲ್ಲಿ ಕ್ರಿಮಿನಲ್ ಪಿತೂರಿಯ ಅಪರಾಧವನ್ನು ಸಂಪೂರ್ಣವಾಗಿ ನೋಡಬೇಕು ಮತ್ತು ವಿಚಾರಣೆಯ ಸಮಯದಲ್ಲಿ ಸಾಕ್ಷ್ಯಗಳ ಸಮರ್ಪಕತೆಯನ್ನು ಪರೀಕ್ಷಿಸಬೇಕು ಎಂದು ಸಿಬಿಐ ವಾದಿಸಿತ್ತು. ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಡಿ.ಪಿ. ಸಿಂಗ್ ಮತ್ತು ವಕೀಲ ಮನು ಮಿಶ್ರಾ ವಾದ ಮಂಡನೆ ಮಾಡಿದ್ದರು. ಎಲ್ಲ ಆರೋಪಿಗಳ ವಿರುದ್ಧ ಆರೋಪಗಳನ್ನು ರೂಪಿಸಲು ಸಾಕಷ್ಟು ಪುರಾವೆಗಳಿವೆ ಎಂದು ವಾದಿಸಿದ್ದರು.
ಮತ್ತೊಂದೆಡೆ, ಕೇಜ್ರಿವಾಲ್ ಪರ ಹಾಜರಾದ ಹಿರಿಯ ವಕೀಲ ಎನ್. ಹರಿಹರನ್, ತಮ್ಮ ಕಕ್ಷಿದಾರರನ್ನು ಆಪಾದಿತ ಪಿತೂರಿಯೊಂದಿಗೆ ಸಂಪರ್ಕಿಸುವ ಯಾವುದೇ ಆರೋಪಾತ್ಮಕ ಸಾಕ್ಷ್ಯಗಳಿಲ್ಲ ಎಂದು ವಾದಿಸಿದರು. ನಾಲ್ಕನೇ ಪೂರಕ ಆರೋಪಪಟ್ಟಿಯಲ್ಲಿ ಕೇಜ್ರಿವಾಲ್ ಅವರನ್ನು ಹೆಸರಿಸಿರುವುದು ಹಿಂದಿನ ಆರೋಪಗಳನ್ನು ಮರುರೂಪಿಸುವುದಾಗಿದೆ ಮತ್ತು ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಆರಂಭಿಕ ಆರೋಪಪಟ್ಟಿಯಲ್ಲಿ ಅಥವಾ ಹಿಂದಿನ ಮೂರು ಪೂರಕ ಆರೋಪಪಟ್ಟಿಗಳಲ್ಲಿ ಕೇಜ್ರಿವಾಲ್ ಅವರನ್ನು ಹೆಸರಿಸಲಾಗಿಲ್ಲ ಎಂದು ಹರಿಹರನ್ ವಾದಿಸಿದರು. ಅವರ ಹೆಸರು ನಾಲ್ಕನೆಯದರಲ್ಲಿ ಮಾತ್ರ ಕಾಣಿಸಿಕೊಂಡಿದೆ ಎಂದು ಹೇಳಿದ್ದರು.
ಇದನ್ನು ಓದಿ:
ಕರ್ನಾಟಕದ ಅಮೋಘಸಿದ್ದ ದೇವಸ್ಥಾನದ ಅರ್ಚಕರ ಹಕ್ಕುಗಳ ವಿವಾದ: ಶತಮಾನದಷ್ಟು ಹಳೆಯದಾದ ಪ್ರಕರಣ ಇತ್ಯರ್ಥ

