ಇದು ವಿಶ್ವದ ಅತಿ ಎತ್ತರದ ಶಿವ ದೇವಾಲಯ, ಈ ಆಲಯದ ಸಂರಕ್ಷಣೆಗೆ ಮುಂದಾದ ಸಿಬಿಆರ್ಐ ರೂರ್ಕಿ: ಈ ಟೆಂಪಲ್ ವಿಶೇಷತೆ ಏನು ಗೊತ್ತಾ?
ತುಂಗನಾಥ ದೇವಾಲಯವು ಸುಮಾರು 5 ರಿಂದ 6 ಡಿಗ್ರಿಗಳಷ್ಟು ಬಾಗಿದೆ. ದೇವಾಲಯದ ಆವರಣದಲ್ಲಿರುವ ಚಿಕ್ಕ ರಚನೆಗಳಲ್ಲಿ 10 ಡಿಗ್ರಿಗಳವರೆಗಿನ ಬಾಗುವಿಕೆ ಕಂಡುಬಂದಿದೆ ಎಎಸ್ಐ ತಿಳಿಸಿದೆ.


Published : July 7, 2026 at 4:31 PM IST
ರೂರ್ಕಿ(ಉತ್ತರಾಖಂಡ): ಇಲ್ಲಿನ ಹಿಮಾಲಯದ ತಪ್ಪಲಲ್ಲಿ ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದ ಪ್ರದೇಶದಲ್ಲಿರುವ ಐತಿಹಾಸಿಕ ದೇಗುಲ ತುಂಗನಾಥ ದೇಗುಲವಾಗಿದೆ. ರುದ್ರಪ್ರಯಾಗ್ನಲ್ಲಿ ಶಿವನಿಗೆ ಸಮರ್ಪಿತವಾದ ಈ ಐತಿಹಾಸಿಕ ದೇಗುಲ ವಿಶ್ವದ ಅತ್ಯಂತ ಎತ್ತರದ ಶಿವ ದೇವಾಲಯ ಕೂಡ ಆಗಿದೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ದೇಗುಲವನ್ನು ಇದೀಗ ಸಂರಕ್ಷಣೆ ಮಾಡಲಾಗುತ್ತಿದೆ.
ದೇಶದ ಪ್ರಮುಖ ಸಂಶೋಧನಾ ಸಂಸ್ಥೆಯಾದ ರೂರ್ಕಿಯ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್ಐ) ಈ ದೇಗುಲ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಅದರ ರಚನಾತ್ಮಕ ಸಮಗ್ರತೆ ಕಾಪಾಡಿಕೊಳ್ಳಲು, ಆಧುನಿಕ ವೈಜ್ಞಾನಿಕ ತಂತ್ರಗಳನ್ನು ಬಳಸಿ ಸಂಸ್ಕರಿಸಲಾಗುತ್ತಿದೆ. ಈ ಮೂಲಕ ಭವಿಷ್ಯದ ಪೀಳಿಗೆಗೆ ಈ ಐತಿಹಾಸಿಕ ಪಾರಂಪರಿಕ ತಾಣಕ್ಕೆ ಭೇಟಿ ನೀಡಲು ಅವಕಾಶ ನೀಡುತ್ತದೆ.

ತುಂಗನಾಥ ದೇವಾಲಯದ ಸಂರಕ್ಷಣೆಗೆ ಮುಂದಾದ ಸಿಬಿಆರ್ಐ ರೂರ್ಕಿ: ವಿಶ್ವದ ಅತಿ ಎತ್ತರದ ಶಿವ ದೇವಾಲಯಗಳಲ್ಲಿ ಒಂದಾದ ಉತ್ತರಾಖಂಡದ ತುಂಗನಾಥ ದೇವಾಲಯ ಕಾಲ ಕಳೆದಂತೆ, ಹವಾಮಾನ ಪರಿಸ್ಥಿತಿಗಳು, ಭಾರಿ ಹಿಮಪಾತ, ಭೂಕಂಪನ ಚಟುವಟಿಕೆ ಮತ್ತು ನೈಸರ್ಗಿಕ ಅಂಶಗಳಿಂದಾಗಿ ರಚನಾತ್ಮಕತೆಯಲ್ಲಿ ಕೊಂಚ ಬದಲಾವಣೆ ಮತ್ತು ಓರೆಯಾಗುವ ಲಕ್ಷಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ದೇಗುಲದ ರಕ್ಷಣಾ ಕಾರ್ಯಕ್ಕೆ ಮುಂದಾಗಲಾಗಿದೆ. ಈ ನಿಟ್ಟಿನಲ್ಲಿ ಸಿಬಿಆರ್ಐ ರೂರ್ಕಿಯ ತಜ್ಞರು ದೇವಾಲಯದ ವಿವರವಾದ ತಾಂತ್ರಿಕ ಸಮೀಕ್ಷೆ, ರಚನಾತ್ಮಕ ವಿಶ್ಲೇಷಣೆ ಮತ್ತು ವೈಜ್ಞಾನಿಕ ಪರೀಕ್ಷೆಯನ್ನು ನಡೆಸಿದ್ದಾರೆ.
ಸಾವಿರ ವರ್ಷಗಳಷ್ಟು ಹಳೆಯ ಪರಂಪರೆಗೆ ವೈಜ್ಞಾನಿಕ ರಕ್ಷಾಕವಚ: ದೇಗುಲದ ರಕ್ಷಣೆಗೆ ಅಧ್ಯಯನದ ಆಧಾರದ ಮೇಲೆ ವಿಶೇಷ ಸಂರಕ್ಷಣಾ ಯೋಜನೆ ರೂಪಿಸಲಾಗಿದೆ. ಇದು ದೇವಾಲಯದ ಮೂಲ ವಾಸ್ತುಶೈಲಿಗೆ ಯಾವುದೇ ಧಕ್ಕೆ ಬರದಂತೆ ಅದರ ರಚನಾತ್ಮಕ ದೃಢತೆಯನ್ನು ಬಲಪಡಿಸುತ್ತದೆ. ಈ ವೈಜ್ಞಾನಿಕ ಸಂರಕ್ಷಣಾ ಉಪಕ್ರಮದ ಪ್ರಮುಖ ವೈಶಿಷ್ಟ್ಯ ಎಂದರೆ, ದೇವಾಲಯದ ಮೂಲ ಸ್ವರೂಪ, ಧಾರ್ಮಿಕ ಮಹತ್ವ ಮತ್ತು ಐತಿಹಾಸಿಕ ಅಸ್ಮಿತೆಗಳು ಸಂಪೂರ್ಣವಾಗಿ ಅಬಾಧಿತವಾಗಿ ಉಳಿಯುಲತ್ತವೆ. ದೇವಾಲಯದ ಅಡಿಪಾಯ, ಕಲ್ಲಿನ ಸ್ಥಾನೀಕರಣ, ಹೊರೆ ಸಮತೋಲನ ಮತ್ತು ಇಳಿಜಾರಿನ ಸಂಪೂರ್ಣ ವಿಶ್ಲೇಷಣೆಯ ನಂತರ, ಎಂಜಿನಿಯರ್ಗಳು ಅತ್ಯಾಧುನಿಕ ತಂತ್ರಗಳನ್ನು ಬಳಸಿಕೊಂಡು ರಚನೆಯನ್ನು ಸ್ಥಿರಗೊಳಿಸಲಾಗುತ್ತದೆ. ಸಂರಕ್ಷಣಾ ಕಾರ್ಯವು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ಮೇಲ್ವಿಚಾರಣೆ, ತಾಂತ್ರಿಕ ಪರೀಕ್ಷೆ ಮತ್ತು ನಿರಂತರ ತಜ್ಞರ ಮೇಲ್ವಿಚಾರಣೆಯನ್ನು ಒಳಗೊಂಡಿರುತ್ತದೆ.

ಸಿಬಿಆರ್ಐ ತಜ್ಞರು ಹೇಳುವಂತೆ, ಇದು ಕೇವಲ ಒಂದೇ ದೇವಾಲಯದ ಸಂರಕ್ಷಣೆಯಲ್ಲ, ಬದಲಾಗಿ ಭಾರತದ ಸಹಸ್ರಮಾನಗಳಷ್ಟು ಹಳೆಯದಾದ ಸಾಂಸ್ಕೃತಿಕ ಪರಂಪರೆ ಮತ್ತು ಸನಾತನ ನಂಬಿಕೆಯನ್ನು ರಕ್ಷಿಸುವ ಧ್ಯೇಯವಾಗಿದೆ. ತುಂಗನಾಥ ದೇವಾಲಯವು ತನ್ನ ಗಮನಾರ್ಹ ವಾಸ್ತುಶಿಲ್ಪ, ಧಾರ್ಮಿಕ ಮಹತ್ವ ಮತ್ತು ಐತಿಹಾಸಿಕ ಪರಂಪರೆಯಿಂದಾಗಿ ವಿಶ್ವಾದ್ಯಂತ ಭಕ್ತರು ಮತ್ತು ಸಂಶೋಧಕರಿಗೆ ಬಹಳ ಹಿಂದಿನಿಂದಲೂ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ದೇಗುಲದ ವೈಜ್ಞಾನಿಕ ಸಂರಕ್ಷಣೆ ದೇಶದ ಪರಂಪರೆ ಸಂರಕ್ಷಣಾ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಸಂರಕ್ಷಣಾ ಕಾರ್ಯದ ಪ್ರತಿಯೊಂದು ಹಂತವನ್ನು ವೈಜ್ಞಾನಿಕ ಅಧ್ಯಯನಗಳು ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಕೈಗೊಳ್ಳಲಾಗುವುದು ಎಂದು ತಜ್ಞರು ತಿಳಿಸಿದ್ದಾರೆ. ಈ ಯೋಜನೆ ಯಶಸ್ವಿಯಾದರೆ ಭವಿಷ್ಯದಲ್ಲಿ ದೇಶಾದ್ಯಂತ ಇತರ ಪ್ರಾಚೀನ ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಈ ಮಾದರಿಯು ಅತ್ಯಂತ ಉಪಯುಕ್ತವಾಗಬಹುದು.

ಕಾರ್ಯದಲ್ಲಿ ಸಿಬಿಆರ್ಐಯ ಐವರು ವಿಜ್ಞಾನಿಗಳ ತಂಡ: ನಂಬಿಕೆ ಮತ್ತು ಆಧುನಿಕ ವಿಜ್ಞಾನದ ಮೂಲಕ ತುಂಗನಾಥ ದೇವಾಲಯ ತನ್ನ ವೈಭವ, ಐತಿಹಾಸಿಕ ಅಸ್ಮಿತೆ ಮತ್ತು ಆಧ್ಯಾತ್ಮಿಕ ಘನತೆಯನ್ನು ಉಳಿಸಿಕೊಂಡು ಮುಂದಿನ ಶತಮಾನಗಳವರೆಗೆ ಸುರಕ್ಷಿತವಾಗಿ ನಿಲ್ಲುವ ಭರವಸೆ ಹೊಂದಿದೆ. ಈ ಉಪಕ್ರಮವು ಉತ್ತರಾಖಂಡಕ್ಕೆ ಮಾತ್ರವಲ್ಲದೇ ಇಡೀ ರಾಷ್ಟ್ರಕ್ಕೆ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಹೊಸ ಅಧ್ಯಯನ ಬರೆಯಲಿದೆ.
ಡಾ. ದೇವದತ್ತ ಘೋಷ್, ಡಾ. ಹಿನಾ ಗುಪ್ತಾ, ಶಶಾಂಕ್ ಮತ್ತು ಶ್ರೀನಿವಾಸ್ ಒಳಗೊಂಡ ಡಾ. ಮನೋಜಿತ್ ಸಾಮಂತ ನೇತೃತ್ವದ ಐವರು ವಿಜ್ಞಾನಿಗಳ ತಂಡ ಈ ಯೋಜನೆಗಾಗಿ ಕಾರ್ಯ ನಿರ್ವಹಿಸುತ್ತಿದೆ. 2025ರ ಆಗಸ್ಟ್ನಲ್ಲಿ ದೇವಾಲಯಕ್ಕೆ ಈ ಸಂಬಂಧ ನಮ್ಮನ್ನು ಸಂಪರ್ಕಿಸಲಾಯಿತು. ತುಂಗನಾಥ ದೇವಾಲಯವು ಎರಡೂವರೆ ಡಿಗ್ರಿಯಷ್ಟು ಬಾಗಿದ್ದು, ಅದನ್ನು ರಕ್ಷಿಸುವ ಕುರಿತು ಚರ್ಚೆ ನಡೆಸಲಾಗಿದೆ.

ಕಾರ್ಯದ ಆರಂಭದಲ್ಲಿ ದೇಗುಲದ ಕಲ್ಲಿನ ಮೇಲೆ ಬೆಳೆದ ಪಾಚಿಯನ್ನು ಕಿತ್ತು ಹಾಕಲಾಗಿದೆ. ಈ ವೇಳೆ ಪ್ರತಿಯೊಂದು ಕಲ್ಲನ್ನು ಎಲ್ಲಿಂದ ತೆಗೆಯಲಾಗಿದೆ ಎಂಬುದನ್ನು ನಿಖರವಾಗಿ ದಾಖಲಿಸಲು ಕೋಡಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳಲಾಯಿತು. ಈ ಕಲ್ಲುಗಳ ಸ್ಥಿರತೆಯನ್ನು ನಿರ್ಣಯಿಸಲು ನೆಲದ ಸ್ಥಿರತೆಯ ವಿಶ್ಲೇಷಣೆಯನ್ನು ನಡೆಸಲಾಗುತ್ತದೆ. ಅಂತಿಮವಾಗಿ, ಕಲ್ಲುಗಳನ್ನು ಅವುಗಳ ಮೂಲ ಸ್ಥಳಗಳಲ್ಲಿ ಮರುಸ್ಥಾಪಿಸಲಾಗುತ್ತದೆ, ಪ್ರತಿಯೊಂದು ವಿವರವನ್ನು ಎಚ್ಚರಿಕೆಯಿಂದ ಪರಿಗಣಿಸಲಾಗುತ್ತದೆ ಎಂದು ಸಿಬಿಐಆರ್ ರೂರ್ಕಿಯ ನಿರ್ದೇಶಕರಾದ ಪ್ರೊಫೆಸರ್ ಆರ್. ಪ್ರದೀಪ್ ಕುಮಾರ್ ತಿಳಿಸಿದರು
ಸಂರಕ್ಷಣೆ ಅಗತ್ಯತೆ: ತುಂಗನಾಥ ದೇವಾಲಯವು ಸುಮಾರು 5 ರಿಂದ 6 ಡಿಗ್ರಿಗಳಷ್ಟು ಬಾಗಿದೆ. ದೇವಾಲಯದ ಆವರಣದಲ್ಲಿರುವ ಚಿಕ್ಕ ರಚನೆಗಳಲ್ಲಿ 10 ಡಿಗ್ರಿಗಳವರೆಗಿನ ಬಾಗುವಿಕೆ ಕಂಡುಬಂದಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವರದಿಯೊಂದು ಬಹಿರಂಗಪಡಿಸಿದೆ. ಈ ಪ್ರಾಚೀನ ದೇವಾಲಯವು ಅತಿ ಎತ್ತರ, ಬಂಡೆಕುಸಿತಗಳು ಮತ್ತು ಭೂಕಂಪನ ಚಟುವಟಿಕೆಗಳಿಂದಾಗಿ ಹಾನಿಗೊಳಗಾಗಿದೆ ಎಂದು ವರದಿಯಾಗಿದೆ. ಈ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯನ್ನು ರಕ್ಷಿಸಲು, ಎಎಸ್ಐ ಮತ್ತು ಕೇಂದ್ರ ಸರ್ಕಾರವು ಇದನ್ನು 'ರಾಷ್ಟ್ರೀಯ ಮಹತ್ವದ ಸ್ಮಾರಕ' ಎಂದು ಗೊತ್ತುಪಡಿಸುವ ಮೂಲಕ ಸಂರಕ್ಷಣಾ ಪ್ರಯತ್ನಗಳನ್ನು ಪ್ರಾರಂಭಿಸಿದೆ.
ಎಲ್ಲಿದೆ ತುಂಗನಾಥ ದೇವಾಲಯ: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ತುಂಗನಾಥ ದೇವಾಲಯವು 12,000 ಅಡಿಗಿಂತಲೂ ಹೆಚ್ಚಿನ ಎತ್ತರದಲ್ಲಿದೆ. ನಾಗರ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವು 'ಪಂಚ ಕೇದಾರ' ಕ್ಷೇತ್ರಗಳಲ್ಲಿ ಒಂದಾಗಿದೆ. ಇದು 1,000 ವರ್ಷಗಳಷ್ಟು ಹಳೆಯ ದೇವಾಲಯವಾಗಿದ್ದು, ಪಾಂಡವರು ಇದನ್ನು ನಿರ್ಮಿಸಿ, ಶಿವನನ್ನು ಪೂಜಿಸಿದ್ದರು ಎಂಬ ಪ್ರತೀತಿಯಿದೆ. ಅಲ್ಲದೆ, ರಾವಣನು ಇದೇ ಸ್ಥಳದಲ್ಲಿ ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದ್ದನು. ರಾವಣನನ್ನು ಸಂಹರಿಸಿದ ನಂತರ, ಬ್ರಹ್ಮಹತ್ಯಾ ದೋಷದಿಂದ ಮುಕ್ತಿ ಪಡೆಯಲು ಶ್ರೀರಾಮನು ಕೂಡ ಇಲ್ಲಿ ತಪಸ್ಸು ಮಾಡಿದ್ದನು. ಈ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ಪ್ರಸ್ತುತ ಸಿಬಿಆರ್ಐ ರೂರ್ಕಿಯು ಇದರ ಸಂರಕ್ಷಣಾ ಕಾರ್ಯವನ್ನು ಕೈಗೊಂಡಿದೆ.

ತುಂಗನಾಥ ದೇವಾಲಯವನ್ನು ತಲುಪುವುದು ಹೇಗೆ: ರಿಷಿಕೇಶ ಮತ್ತು ಜಾಲಿ ಗ್ರಾಂಟ್ ವಿಮಾನದ ಮೂಲಕ ತಲುಪಿ ಅಲ್ಲಿಂದ ಬಸ್, ಟ್ಯಾಕ್ಸಿ ಅಥವಾ ಖಾಸಗಿ ವಾಹನದ ಮೂಲಕ ಉಖಿಮಠ ಮಾರ್ಗವಾಗಿ ಚೋಪ್ಟಾಗೆ ಪ್ರಯಾಣಿಸಬಹುದು. ಅಲ್ಲಿಂದ, ಸುಮಾರು 4 ಕಿಲೋಮೀಟರ್ಗಳಷ್ಟು ಮೇಲ್ಮುಖವಾಗಿ ಚಾರಣ ನಡೆಸಿದರೆ ತುಂಗನಾಥ ದೇವಾಲಯವನ್ನು ತಲುಪಬಹುದು. ಕುಮಾವೂನ್ ಪ್ರದೇಶದ ಮೂಲಕವೂ ದೇಗುಲಕ್ಕೆ ತಲುಪಬಹುದು. ಈ ಮಾರ್ಗಕ್ಕೆ ರಾಮನಗರ, ಹಲ್ದ್ವಾನಿ ಮತ್ತು ಕಥ್ಗೋಡಮ್ ಹತ್ತಿರದ ರೈಲು ನಿಲ್ದಾಣಗಳಾಗಿವೆ. ರಾಮನಗರದಿಂದ ಗೈರ್ಸೈನ್ ಮತ್ತು ಕರ್ಣಪ್ರಯಾಗ ಮಾರ್ಗವಾಗಿ ಚೋಪ್ಟಾ ತಲುಪಿ ಬಸ್, ಟ್ಯಾಕ್ಸಿ ಬಳಸಬಹುದು. ಹಲ್ದ್ವಾನಿ ಮತ್ತು ಕಥ್ಗೋಡಮ್ನಿಂದ ರಾಜ್ಯ ಸಾರಿಗೆ ಬಸ್ಗಳು ಲಭ್ಯವಿವೆ. ಭೇಟಿ ನೀಡಲು ಮೇ ಮತ್ತು ಅಕ್ಟೋಬರ್ ನಡುವಿನ ಅವಧಿಯು ಅತ್ಯುತ್ತಮವಾಗಿದೆ. ಉಳಿದ ಸಮಯದಲ್ಲಿ ಈ ಪ್ರದೇಶವು ಹಿಮದಿಂದ ಆವೃತವಾಗಿರುತ್ತದೆ.
ಇವುಗಳನ್ನೂ ಓದಿ:
ಮಂಜುಗಟ್ಟುವ ಚಳಿಯಲ್ಲಿಯೂ ನಾಗಾಸಾಧುಗಳು ಹೇಗಿರ್ತಾರೆ? ಆ ಶಕ್ತಿ ಸಿದ್ಧಿಸಿದ್ದು ಹೇಗೆ?

