Space Mission Tests: ಇಸ್ರೋ ಈಗ ಬಾಹ್ಯಾಕಾಶದಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವತ್ತ ವೇಗವಾಗಿ ಸಾಗುತ್ತಿದೆ. ಇದು ಭಾರತದ ಬಾಹ್ಯಾಕಾಶ ಯೋಜನೆಗಳನ್ನು ಜಾಗತಿಕ ವೇದಿಕೆಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಈ ಬಾಹ್ಯಾಕಾಶ ಕೇಂದ್ರವು 50 ಟನ್ಗಳಿಗಿಂತ ಹೆಚ್ಚು ತೂಕವಿರಲಿದ್ದು, ಮುಂಬರುವ ವರ್ಷಗಳಲ್ಲಿ ಭಾರತದ ವೈಜ್ಞಾನಿಕ ಸಾಮರ್ಥ್ಯಗಳನ್ನು ಬಲಪಡಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.
ಗುರುವಾರ ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ''ಇಲ್ಲಿವರೆಗೆ 7,200 ಬಾಹ್ಯಾಕಾಶ ಮಿಷನ್ ಪರೀಕ್ಷೆಗಳು ಪೂರ್ಣಗೊಂಡಿವೆ ಹಾಗೂ 3,000 ಪರೀಕ್ಷೆಗಳು ಇನ್ನೂ ಬಾಕಿ ಉಳಿದಿವೆ. ಈ ವರ್ಷವು 'ಗಗನಯಾನ' ವರ್ಷ'' ಎಂದು ಘೋಷಿಸಿದರು.
3,000 ಪರೀಕ್ಷೆಗಳು ಬಾಕಿ: ''ಇದು ನಮಗೆ ಬಹಳ ಮುಖ್ಯವಾದ ವರ್ಷ. ನಾವು ಗಗನಯಾನ ವರ್ಷ ಎಂದು ಘೋಷಿಸಿದ್ದೇವೆ. ಮನುಷ್ಯರನ್ನು ಕಳುಹಿಸುವ ಮೊದಲು ನಾವು ಮೂರು ಮಾನವರಹಿತ ಕಾರ್ಯಾಚರಣೆಗಳನ್ನು ಯೋಜಿಸಿದ್ದೇವೆ. ಈ ವರ್ಷ ಮೊದಲ ಮಾನವರಹಿತ ಕಾರ್ಯಾಚರಣೆಯೂ ಇದೆ. ಇಲ್ಲಿಯವರೆಗೆ 7,200ಕ್ಕೂ ಹೆಚ್ಚು ಪರೀಕ್ಷೆಗಳು ಪೂರ್ಣಗೊಂಡಿವೆ ಮತ್ತು ಸುಮಾರು 3,000 ಪರೀಕ್ಷೆಗಳು ಬಾಕಿ ಉಳಿದಿವೆ. ದಿನದ 24 ಗಂಟೆಗಳ ಕಾಲವೂ ನಮ್ಮ ಕಾರ್ಯ ಸಾಗುತ್ತಿದೆ'' ಎಂದು ಇಸ್ರೋ ಅಧ್ಯಕ್ಷರು ಹೇಳಿದರು.
''ನಿಮಗೆ ತಿಳಿದಿರುವಂತೆ ಈ ವರ್ಷ ನಾವು ಪ್ರಮುಖ ಸಾಧನೆಗಳು ಮತ್ತು ಕಾರ್ಯಗಳನ್ನು ಹೊಂದಿದ್ದೇವೆ. ಜನವರಿ 6ರಂದು ಆದಿತ್ಯ L1 ಬಾಹ್ಯಾಕಾಶ ನೌಕೆ ಸಂಗ್ರಹಿಸಿದ ಒಂದು ವರ್ಷದ ಸೈನ್ಟಿಫಿಕ್ ಡಾಟಾವನ್ನು ನಾವು ಹೊರತಂದಿದ್ದೇವೆ. ಸೂರ್ಯನ ಅಧ್ಯಯನ ಮಾಡಲು ಉಪಗ್ರಹವನ್ನು ಇರಿಸಿದ ನಾಲ್ಕು ದೇಶಗಳಲ್ಲಿ ಭಾರತವೂ ಒಂದು'' ಎಂದು ಇಸ್ರೋ ಅಧ್ಯಕ್ಷರು ಹೆಮ್ಮೆ ವ್ಯಕ್ತಪಡಿಸಿದರು.
ಸ್ಪಾಡೆಕ್ಸ್ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ವಿ.ನಾರಾಯಣನ್ ಅವರು, ''ಈ ಕಾರ್ಯಾಚರಣೆ ಮಾಡಲು ಇಸ್ರೋ 10 ಕಿಲೋ ಇಂಧನವನ್ನು ಹೊಂದಿದೆ. 2025ರ ಪ್ರಮುಖ ಯೋಜಿತ ಕಾರ್ಯಾಚರಣೆಗಳಲ್ಲಿ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹವೂ ಸೇರಿದೆ. ಇದನ್ನು ಭಾರತದ ಲಾಂಚಿಂಗ್ ವೆಹಿಕಲ್ನಿಂದ ಉಡಾಯಿಸಲಾಗುವುದು. ನಾವು ಕಮರ್ಶಿಯಲ್ ಮಿಷನ್ ಮತ್ತು ಕಮರ್ಶಿಯಲ್ ಅಂಶಗಳಿಗಾಗಿ ಕಮ್ಯುನಿಕೇಷನ್ ಸ್ಯಾಟಲೈಟ್ ಹೊಂದಲಿದ್ದೇವೆ. ಅದನ್ನು ನಾವೇ ಉಡಾವಣೆ ಮಾಡಲಿದ್ದೇವೆ’ ಎಂದು ತಿಳಿಸಿದರು.
''ಇಂದು ಸ್ಪಾಡೆಕ್ಸ್ ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಹೇಳಲು ನಮಗೆ ಸಂತೋಷವಾಗಿದೆ. ಈ ಮಿಷನ್ಗಾಗಿ ನಾವು ಹತ್ತು ಕಿಲೋ ಇಂಧನವನ್ನು ಲೆಕ್ಕ ಹಾಕಿದ್ದೆವು. ಆದರೆ ನಾವು ಅದನ್ನು ಕೇವಲ ಅರ್ಧದಷ್ಟು ಇಂಧನದಿಂದಲೇ ಪೂರ್ಣಗೊಳಿಸಿದ್ದೇವೆ. ಉಳಿದ ಇಂಧನ ಲಭ್ಯವಿದೆ'' ಎಂದು ಹೇಳಿದರು.
ರೋಬೋಟ್ನೊಂದಿಗೆ ಮೊದಲ ಮಾನವ ಬಾಹ್ಯಾಕಾಶ ಹಾರಾಟ: ''ಇಸ್ರೋದ ಅಧಿಕೃತ ವೆಬ್ಸೈಟ್ ಪ್ರಕಾರ, ಸ್ಪಾಡೆಕ್ಸ್ ಮಿಷನ್ ವೆಚ್ಚ-ಪರಿಣಾಮಕಾರಿ ತಂತ್ರಜ್ಞಾನ ಪ್ರದರ್ಶಕ ಮಿಷನ್ ಆಗಿದ್ದು, ಇದು ಪಿಎಸ್ಎಲ್ವಿಯಿಂದ ಉಡಾಯಿಸಲಾದ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಾಹ್ಯಾಕಾಶದಲ್ಲಿ ಡಾಕಿಂಗ್ ಪ್ರದರ್ಶಿಸಲು ಬಳಸುತ್ತದೆ. 'ವ್ಯೋಮಿತ್ರ' ಎಂಬ ರೋಬೋಟ್ನೊಂದಿಗೆ ಮೊದಲ ಮಾನವ ಬಾಹ್ಯಾಕಾಶ ಹಾರಾಟವನ್ನು ಈ ವರ್ಷದ ಅಂತ್ಯದ ವೇಳೆಗೆ ಪ್ರಾರಂಭಿಸಲಾಗುವುದು'' ಎಂದರು.
''ವ್ಯೋಮಿತ್ರ’ ಮಿಷನ್ ನಂತರ ಇಸ್ರೋ ಎರಡು ಮಾನವಸಹಿತ ವಿಮಾನಗಳು ಹಾರಾಟ ನಡೆಸಲಿದ್ದು, ಇವು ಭಾರತವನ್ನು ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸಿದ ದೇಶಗಳ ಆಯ್ದ ಗುಂಪಿಗೆ ಸೇರಿಸುತ್ತವೆ. ಗಗನಯಾನ ಭಾರತದ ಸ್ವಾವಲಂಬಿ ಬಾಹ್ಯಾಕಾಶ ಶಕ್ತಿಯನ್ನು ಪ್ರದರ್ಶಿಸುತ್ತದೆ. ಇಸ್ರೋ ಸಂಸ್ಥೆಯು 2027ರ ಮೊದಲ ತ್ರೈಮಾಸಿಕದ ವೇಳೆಗೆ ಮೊದಲ ಮಾನವ ಬಾಹ್ಯಾಕಾಶ ಹಾರಾಟವನ್ನು ಗುರಿಯಾಗಿಸಿಕೊಂಡಿದೆ'' ಎಂದು ಮಾಹಿತಿ ನೀಡಿದರು.
ಚಂದ್ರಯಾನ-4 ಮತ್ತು 5ರ ಸಿದ್ಧತೆ: ''ಇಸ್ರೋ ಚಂದ್ರಯಾನ-4 ಮತ್ತು ಚಂದ್ರಯಾನ-5 ಕಾರ್ಯಾಚರಣೆಗಳಲ್ಲೂ ಕಾರ್ಯ ನಿರ್ವಹಿಸುತ್ತಿದೆ. ಚಂದ್ರಯಾನ-4ನ್ನು ಎರಡು ವರ್ಷಗಳಲ್ಲಿ ಉಡಾವಣೆ ಮಾಡಲಾಗುವುದು. ಈ ಮಿಷನ್ ಉದ್ದೇಶ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಭೂಮಿಗೆ ತರುವುದಾಗಿದೆ'' ಎಂದರು.
''ಚಂದ್ರಯಾನ-5 ಕಾರ್ಯಾಚರಣೆಯನ್ನು ಜಪಾನ್ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು. ಇದು 6,400 ಕೆ.ಜಿ ಲ್ಯಾಂಡರ್ ಮತ್ತು 350 ಕೆ.ಜಿ ರೋವರ್ ಹೊಂದಿರುತ್ತದೆ. ಇದರ ಕಾರ್ಯಾಚರಣೆಯ ಅವಧಿ 100 ದಿನಗಳು. ಇದು ಭಾರತಕ್ಕೆ ಚಂದ್ರನ ಸಂಶೋಧನೆಯಲ್ಲಿ ಹೊಸ ಅಧ್ಯಾಯವಾಗಲಿದೆ'' ಎಂದು ಮಾಹಿತಿ ನೀಡಿದರು.
ದೇಶಕ್ಕೆ ಸೇವೆ ಸಲ್ಲಿಸುತ್ತಿವೆ 57 ಉಪಗ್ರಹಗಳು: ''ಭಾರತವು ಬಾಹ್ಯಾಕಾಶದಲ್ಲಿ 57 ಸಕ್ರಿಯ ಉಪಗ್ರಹಗಳನ್ನು ಹೊಂದಿದ್ದು, ಅವು ಹವಾಮಾನ ಮಾಹಿತಿಯಿಂದ ಹಿಡಿದು ದೂರದ ಪ್ರದೇಶಗಳಲ್ಲಿ ದೂರಶಿಕ್ಷಣದವರೆಗೆ ಸೇವೆಗಳನ್ನು ಒದಗಿಸುತ್ತಿವೆ. ಭಾರತವು 11,500 ಕಿ.ಮೀ. ಉದ್ದದ ಸಮುದ್ರ ಗಡಿಯನ್ನು ಮತ್ತು ಉತ್ತರದಲ್ಲಿ ಒಂದು ಉದ್ದದ ಗಡಿಯನ್ನು ಹೊಂದಿದ್ದು, ಅದರ ಮೇಲ್ವಿಚಾರಣೆಯಲ್ಲಿ ಈ ಉಪಗ್ರಹಗಳು ಪ್ರಮುಖ ಪಾತ್ರ ವಹಿಸುತ್ತಿವೆ'' ಎಂದು ನಾರಾಯಣನ್ ಹೇಳಿದರು.
ಓದಿ: ಸೂಪರ್ಫಾಸ್ಟ್ ಚಾರ್ಜಿಂಗ್ ಸೋಡಿಯಂ ಐಯಾನ್ ಬ್ಯಾಟರಿ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿಗಳು