Pak YouTube Channels Ban: ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತೀಯರ ಕಂಗೆಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಸುಮಾರು 16ಕ್ಕೂ ಹೆಚ್ಚು ಪಾಕಿಸ್ತಾನ್ ಯೂಟೂಬ್ ಚಾನಲ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಹೌದು, ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನವು ಪ್ರಚಾರ ಯುದ್ಧ ಕೈಗೊಂಡಿದೆ. ಪಾಕಿಸ್ತಾನ ಜಗತ್ತಿಗೆ ತಾವು ಸಾಚಾ ಅಂತಾ ಸಾಬೀತುಪಡಿಸಲು ಮತ್ತು ಭಾರತದ ಹೆಸರನ್ನು ಹಾಳು ಮಾಡಲು ಪಾಕ್ ಯೂಟೂಬ್ ಚಾನೆಲ್ ಗಳು ಕೆಲಸ ಮಾಡುತ್ತಿವೆ. ಪಾಕಿಸ್ತಾನಿ ಸುದ್ದಿ ವಾಹಿನಿಗಳು ಮತ್ತು ಯೂಟ್ಯೂಬರ್ಗಳು ಇದರ ಭಾಗವಾಗಿದ್ದಾರೆ. ಪಾಕಿಸ್ತಾನದ ಈ ಪಿತೂರಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಭಾರತದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿರುವ ಅದರ ಹಲವು ಸುದ್ದಿ ಮತ್ತು ಯೂಟ್ಯೂಬ್ ಚಾನಲ್ಗಳನ್ನು ನಮ್ಮ ದೇಶದಲ್ಲಿ ನಿಷೇಧಿಸಲಾಗಿದೆ.
ನಮ್ಮ ದೇಶ, ನಮ್ಮ ಸೇನೆ ಮತ್ತು ನಮ್ಮ ಭದ್ರತಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳೊಂದಿಗೆ ಪ್ರಚೋದನಕಾರಿ ಹಾಗೂ ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ಭಾರತವು 16 ಪಾಕಿಸ್ತಾನಿ ಯೂಟ್ಯೂಬ್ ಚಾನಲ್ಗಳನ್ನು ನಿಷೇಧಿಸಿದೆ. ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಗೃಹ ಸಚಿವಾಲಯದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.
ಈ ಯೂಟೂಬ್ ಚಾನಲ್ಗಳಿಗೆ ನಿಷೇಧ: ನಿಷೇಧಿತ ಚಾನಲ್ಗಳಲ್ಲಿ Dawn News, Irshad Bhatti, SAMAA TV, ARY NEWS, BOL NEWS, Raftar, The Pakistan Reference, Geo News, Samaa Sports, GNN, Uzair Cricket, Umar Cheema Exclusive, Asma Shirazi, Muneeb Farooq, SUNO News HD ಮತ್ತು Razi Naama ಸೇರಿವೆ.
ಅಧಿಕೃತ ಹೇಳಿಕೆಯ ಪ್ರಕಾರ, ನಿಷೇಧಿತ ಚಾನಲ್ಗಳು ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ, ಆ ಚಾನಲ್ಗಳು ಭಾರತದಲ್ಲಿ ಭೀತಿ ಮೂಡಿಸುವ, ಕೋಮು ಸೌಹಾರ್ದತೆಯನ್ನು ಕೆರಳಿಸುವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕದಡುವ ಗುರಿಯನ್ನು ಹೊಂದಿರುವ ಸುಳ್ಳು ಮತ್ತು ಪರಿಶೀಲಿಸದ ಮಾಹಿತಿಯನ್ನು ಹರಡುತ್ತಿರುವುದು ತಿಳಿದು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಪಹಲ್ಗಾಮ್ ಉಗ್ರ ದಾಳಿಯ ನಂತರ ನಿಷೇಧಿತ ಚಾನಲ್ಗಳು ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ವಿದೇಶಿ ಸಂಬಂಧಗಳಂತಹ ವಿವಿಧ ವಿಷಯಗಳ ಕುರಿತು ಫೇಕ್ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿರುವುದು ಕಂಡು ಬಂದಿದೆ. ಈ ಭೀಕರ ಉಗ್ರರ ದಾಳಿಯ ಬಳಿಕ ಭಾರತವು ಪಾಕಿಸ್ತಾನ ಸರ್ಕಾರದ ಅಧಿಕೃತ ಎಕ್ಸ್ ಹ್ಯಾಂಡಲ್ ಅನ್ನು ಸಹ ತಡೆಹಿಡಿದಿದೆ.
ಪಹಲ್ಗಾಮ್ ದಾಳಿಯ ಸಂಪರ್ಕ ದೃಢಪಟ್ಟ ನಂತರ, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಮುಂದುವರೆದಿದೆ. ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ (CCS) ಸಭೆಯಲ್ಲಿ, ಸಿಂಧೂ ನದಿ ನೀರು ಒಪ್ಪಂದ ಅಮಾನತಿಗೆ ಮತ್ತು ಪಾಕಿಸ್ತಾನಿ ನಾಗರಿಕರ ವೀಸಾಗಳು ಸೇರಿದಂತೆ ಐದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಭಾನುವಾರ ಅಲ್ಪಾವಧಿಯ ವೀಸಾ ಗಡುವು ಮುಗಿಯುವ ಹೊತ್ತಿಗೆ, 537 ಪಾಕಿಸ್ತಾನಿಗಳನ್ನು ಅಟ್ಟಾರಿ ಗಡಿಯಿಂದ ವಾಪಸ್ ಕಳುಹಿಸಲಾಗಿತ್ತು.
ಮತ್ತೊಂದೆಡೆ, ಜಮ್ಮುವಿನಿಂದ ಕಾಶ್ಮೀರ ಕಣಿವೆಯ ಪಕ್ಕದ ಗಡಿಯವರೆಗೆ ಪಾಕಿಸ್ತಾನದ ಕಿಡಿಗೇಡಿತನ ಮುಂದುವರೆದಿದೆ. ಸತತ ನಾಲ್ಕನೇ ದಿನವೂ ಕದನ ವಿರಾಮ ಮುಂದುವರಿದಿದೆ. ಭಾನುವಾರ ರಾತ್ರಿ ಪೂಂಚ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಪಾಕಿಸ್ತಾನ ಕಡೆಯಿಂದ ಪ್ರಚೋದನಕಾರಿ ಗುಂಡಿನ ದಾಳಿ ನಡೆದಿದೆ. ಸೇನೆಯೂ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿದೆ.
ಓದಿ: ಪಾಕ್ನಿಂದ ಸತತ 4ನೇ ದಿನವೂ ಕದನ ವಿರಾಮ ಉಲ್ಲಂಘನೆ: ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ