ಚಿಕ್ಕಮಗಳೂರು: ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಮಲೆನಾಡು ಜನರಿಗೆ ಪ್ರತಿನಿತ್ಯ ಕಾಡು ಪ್ರಾಣಿಗಳ ಜೊತೆ ಹೋರಾಟ ಮಾಡಿ ಬದುಕುವುದೇ ಒಂದು ಸಾಹಸವಾಗಿದೆ. ಪ್ರತಿನಿತ್ಯ ಕಾಡಾನೆಗಳು ಕಾಫಿ ತೋಟ, ಅಡಿಕೆ ತೋಟ, ಬಾಳೆ ತೋಟಗಳಿಗೆ ನುಗ್ಗಿ ದಾಂಧಲೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿವೆ. ಪರಿಣಾಮ ರೈತರು ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇದಕ್ಕೆ ಇಂದಿನ ಘಟನೆ ಕೂಡ ಹೊರತಾಗಿಲ್ಲ.
ಕಾಡಾನೆಯೊಂದು ಮನೆಯೊಳಗೆ ನುಗ್ಗಲು ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ದಾರದಹಳ್ಳಿ ಗ್ರಾಮದ ಯಶವಂತ್ ಎಂಬುವರ ಮನೆ ಬಾಗಿಲಿಗೆ ಒಂಟಿಸಲಗ ಬಂದಿದ್ದು, ಮನೆ ಮಾಲೀಕ ತಮ್ಮ ಮೊಬೈಲ್ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಎಷ್ಟು ಕೇಕೆ, ಕೂಗಾಟ ಹಾಕಿ ಓಡಿಸಲು ಪ್ರಯತ್ನಪಟ್ಟರೂ ಆನೆಯು ಮನೆ ಬಾಗಿಲಿನ ಬಳಿ ಬಂದಿದ್ದು, ಮನೆಯವರು ಭಯದಲ್ಲಿ ಒಳಗೆ ಓಡಿಹೋಗಿದ್ದಾರೆ. ಆನೆಯು ಗ್ರಾಮಕ್ಕೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕದ ಮನೆ ಮಾಡಿದ್ದು, ಮನೆಯಿಂದ ಹೊರಬರಲು ಜನರ ಹಿಂದೇಟು ಹಾಕುವಂತಾಗಿದೆ. ಆನೆ ಬಂದಿರುವ ಸುದ್ದಿಯನ್ನು ಮನೆಯ ಸದಸ್ಯರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಗಮನಕ್ಕೆ ತಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಡಾನೆಯನ್ನು ದೂರ ಕಳಿಸುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: Watch video - ಬಂಡೀಪುರದಲ್ಲಿ ರೊಚ್ಚಿಗೆದ್ದ ಸಾಕಾನೆ ರೋಹಿತ್ : ಬೆಚ್ಚಿಬಿದ್ದ ವಾಹನ ಸವಾರರು - ELEPHANT ROHIT