ಬೆಳಗಾವಿ: "ನಾನು ಹಿಂದುಳಿದ ಜಾತಿಯಿಂದ ಬಂದವನು. ಜಾತಿ ಗಣತಿ ಅವಶ್ಯಕತೆ ಎಷ್ಟಿದೆ ಅಂತಾ ನನಗೆ ಗೊತ್ತು. 2011ರಲ್ಲಿ ಜನಗಣತಿ ಆಗಿತ್ತು. ಆದರೆ, ಅದು ಜಾತಿಗಣತಿ ಅಲ್ಲ. ಆಗಿನ ಗಣತಿ ಕೂಡ ನೂರಕ್ಕೆ ನೂರರಷ್ಟು ನಿಖರವಾಗಿಲ್ಲ. ನಾನು ಸಂಪುಟದಲ್ಲಿ ಜಾತಿ ಗಣತಿ ವರದಿ ಮಂಡಿಸುತ್ತೇನೆ. ಆ ನಂತರ ಸದನದಲ್ಲಿ ಚರ್ಚಿಸುತ್ತೇವೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಜಾತಿ ಗಣತಿ ವರದಿ ಬಿಡುಗಡೆ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲೆ ಹೇಳಿದ್ದೇವೆ. ಜಾತಿ ಗಣತಿ ಆಗದೇ ಹೋದರೆ ಒಂದು ಕುಟುಂಬದಲ್ಲಿ ಸಾಮಾಜಿಕ, ಆರ್ಥಿವಾಗಿ ಏನು ಬದಲಾವಣೆ ಆಗಿದೆ ಎಂಬುದು ಹೇಗೆ ಗೊತ್ತಾಗುತ್ತದೆ. 1931ರಲ್ಲಿ ಜಾತಿ ಗಣತಿ ಮಾಡಲಾಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಆಗಿಲ್ಲ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಲ್ಲಿ ರಾಜ್ಯದ ಬಗ್ಗೆ ಯಾವುದಾರೂ ಅಂಕಿ ಅಂಶ ಕೇಳಿದರೆ ನಮ್ಮಲ್ಲಿ ಏನು ದಾಖಲೆ ಇದೆ. ಮಂಡಲ್ ಆಯೋಗ ಕೂಡ ಈ ದಾಖಲೆ ಕೇಳಿತ್ತು. ಅದಕ್ಕಾಗಿ ಜಾತಿ ಗಣತಿ ಅನಿವಾರ್ಯ ಆಗಿತ್ತು. ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ನಿಮ್ಮ ಕುಟುಂಬ ಸ್ವಾತಂತ್ರ್ಯ ಪೂರ್ವದಲ್ಲಿ ಹೇಗಿತ್ತು, ಈಗ ಹೇಗಿದೆ ಎಂಬುದು ಹೇಗೆ ತಿಳಿಯುತ್ತದೆ?" ಎಂದು ಕೇಳಿದರು.
ಬಿಜೆಪಿಯವರ ಮಾತಲ್ಲಿ ಅರ್ಥವಿಲ್ಲ: "ಜಾತಿಗಣತಿ ವೈಜ್ಞಾನಿಕವಾಗಿ ಆಗಿಲ್ಲ ಎಂಬ ಬಿಜೆಪಿಯವರ ಮಾತಲ್ಲಿ ಅರ್ಥ ಇಲ್ಲ. ಶೇ.94ರಷ್ಟು ನಿಖರವಾಗಿ ನಡೆದಿದೆ. ಶೇ.98ರಷ್ಟು ಗ್ರಾಮೀಣ ಪ್ರದೇಶದಲ್ಲಿ, ಶೇ.96ರಷ್ಟು ನಗರ ಪ್ರದೇಶಗಳಲ್ಲಿ ಸಮೀಕ್ಷೆ ನಿಖರವಾಗಿ ಆಗಿದೆ. ಕೆಲವೊಮ್ಮೆ ಅಪಾರ್ಟ್ಮೆಂಟ್ಗಳಲ್ಲಿ ಬೇರೆ ರಾಜ್ಯದ ಜನರಿರುತ್ತಾರೆ. ಅವರನ್ನು ಗಣನೆಗೆ ತೆಗೆದುಕೊಳ್ಳಲು ಬರುವುದಿಲ್ಲ. 1 ಲಕ್ಷ 60 ಸಾವಿರ ಜನ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ 1 ಲಕ್ಷ 33 ಸಾವಿರ ಶಿಕ್ಷಕರೇ ಇದ್ದಾರೆ. ಅವರೆಲ್ಲಾ ಯಾವ ಜಾತಿಯವರು? ಹೆಚ್ಚಾಗಿ ಜನರಲ್ ಕೆಟಗಿಯವರೇ ಶಿಕ್ಷಕರಿದ್ದಾರೆ. ಹಾಗಿದ್ದ ಮೇಲೆ ಸರಿಯಾಗಿ ಸಮೀಕ್ಷೆ ಆಗಿಲ್ಲ ಎಂದು ಹೇಗೆ ಹೇಳುತ್ತಾರೆ? ವೈಜ್ಞಾನಿಕ ಸಮೀಕ್ಷೆ ಎಂದರೆ ಏನು" ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದರು.
ಗ್ಯಾಸ್ ಬೆಲೆ ಏರಿಸಿದವರು ಯಾರು..?: "ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಿಜೆಪಿಯವರಿಗೆ ಮಾನ ಮರ್ಯಾದೆ ಏನೂ ಇಲ್ಲ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಸಿದವರು ಯಾರು..? ಜನಾಕ್ರೋಶ ಯಾತ್ರೆ ಮಾಡುವವರು ಅದಕ್ಕೆ ಏನು ಹೇಳುತ್ತಾರೆ. ಜೀವನಾವಶ್ಯಕ ಎಲ್ಲ ವಸ್ತುಗಳ ಬೆಲೆ ಜಾಸ್ತಿ ಆಗುವುದಕ್ಕೆ ನರೇಂದ್ರ ಮೋದಿ ಅವರ ಸರ್ಕಾರವೇ ನೇರ ಕಾರಣ. ನಮ್ಮಲ್ಲಿ ಹೆಚ್ಚೆಂದರೆ 7-8 ಸಾವಿರ ಕೋಟಿ ತೆರಿಗೆ ಹೆಚ್ಚಾಗಿದೆ. ಹಾಲಿನ ದರ ಹೆಚ್ಚಿಸಿದ್ದೇವೆ. ಅದು ಸರ್ಕಾರಕ್ಕೆ ಬರುವುದಿಲ್ಲ. ಅದು ರೈತರಿಗೆ ಹೋಗುತ್ತದೆ. ರೈತರಿಗೆ ಹೆಚ್ಚಿನ ದರ ಕೊಡಬೇಡ ಎಂದು ಪ್ರತಿಭಟನೆ ಮಾಡಿದರೆ ಇವರು ರೈತ ವಿರೋಧಿಗಳಲ್ಲವೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಿದ್ದರಾಮಯ್ಯ ತಿರುಗೇಟು: "ಬಿಜೆಪಿಯವರು 50 ರೂ. ಅಡುಗೆ ಅನಿಲ ಬೆಲೆ ಜಾಸ್ತಿ ಮಾಡಿದ್ದಾರೆ. ಅದರ ಲಾಭ ಯಾರಿಗೆ ಹೋಗುತ್ತದೆ ಎಂಬುದು ಗೊತ್ತಿದೆಯೇ ಇವರಿಗೆ? ಕ್ರೂಡೈಲ್ ದರಕ್ಕೂ ಪೆಟ್ರೋಲ್-ಡಿಸೇಲ್ ದರ ಹೆಚ್ಚಿಸಲು ನೇರ ಸಂಬಂಧವಿದೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕ್ರೂಡೈಲ್ ಬೆಲೆ 1 ಬ್ಯಾರಲ್ಗೆ 120 ಡಾಲರ್ ಇತ್ತು. ಈಗ ಕೇವಲ 65 ಡಾಲರ್ ಆಗಿದೆ. ಹಾಗಿದ್ದ ಮೇಲೆ ಡಿಸೇಲ್, ಪೆಟ್ರೋಲ್, ಗ್ಯಾಸ್ ಬೆಲೆ ಏಕೆ ಹಚ್ಚಿಸಿದ್ದಿರಿ? ಅದರ ಬಗ್ಗೆ ರಾಜ್ಯ ಬಿಜೆಪಿಯವರು ಏನು ಉತ್ತರ ಕೊಡುತ್ತಾರೆ. ಬಿಜೆಪಿಯವರು ಅದರ ಬಗ್ಗೆ ಮಾತಾಡಬೇಕಿತ್ತು. ಇವರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಬಿಜೆಪಿ ಸರ್ಕಾರದ ಅವದಧಿಯಲ್ಲೇ ಹೆಚ್ಚು ಬೆಲೆ ಏರಿಸಿ ಜನರಿಗೆ ಸಂಕಷ್ಟ ತಂದೊದಗಿದ್ದಾರೆ" ಎಂದು ಸಿದ್ದರಾಮಯ್ಯ ತಿರುಗೇಟು ಕೊಟ್ಟರು.
"ಮನಮೋಹನ ಸಿಂಗ್ ಅವರಿದ್ದಾಗ ಅಡುಗೆ ಅನಿಲ ಬೆಲೆ 400 ರೂ. ಇತ್ತು. ಕಚ್ಚಾತೈಲ ಬೆಲೆ 120 ಡಾಲರ್ ಇತ್ತು. ಈಗ ಕಚ್ಚಾತೈಲ ಬೆಲೆ ಅರ್ಧದಷ್ಟು ಇಳಿದಿದೆ. ಆದರೆ, ಸಿಲಿಂಡರ್ ಬೆಲೆ ಡಬಲ್ ಏರಿಸಿದ್ದಾರೆ. ನಮ್ಮ ಸರ್ಕಾರ ಕೊಡುತ್ತಿದ್ದ ಸಬ್ಸಿಡಿಯನ್ನು ಬಿಜೆಪಿಯವರು ತೆಗೆದಿದ್ದಾರೆ. ಮಾಧ್ಯಮದವರು ಅದನ್ನು ಏಕೆ ಪ್ರಶ್ನಿಸುವುದಿಲ್ಲ?" ಎಂದರು.
'ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಆಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾರಿಗಾದ್ರೂ ಸಂಬಳ, ಪಿಂಚಣಿ ನಿಂತಿದೆಯಾ..? ಕಾಮಗಾರಿಗಳು ನಿಂತಿವೆಯೇ..? ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೇಕಾಬಿಟ್ಟಿಯಾಗಿ ಕಾಮಗಾರಿಗಳನ್ನು ರೂಪಿಸಿ ಟೆಂಡರ್ ಕೊಟ್ಟು ಕಾಲ್ಕಿತ್ತು ಓಡಿದರು. ಆರ್ಥಿಕವಾಗಿ ಕರ್ನಾಟಕ ದಿವಾಳಿ ಆಗಿದೆ ಎಂದು ಅವರು ಹೇಳುತ್ತಾರೆ ಎಂದರೆ ಅದಕ್ಕೆ ಬೊಮ್ಮಾಯಿ, ಯಡಿಯೂರಪ್ಪ ಮತ್ತು ಶೆಟ್ಟರ್ ಅವರ ಸರ್ಕಾರಗಳೇ ಕಾರಣ" ಎಂದು ಹರಿಹಾಯ್ದರು.
ಆರ್ಥಿಕ ದಿವಾಳಿ ಆಗಿದ್ದರೆ ಇದು ಹೇಗೆ ಸಾಧ್ಯ?: "ಕರ್ನಾಟಕದಲ್ಲಿ ನಾವು ಈಗ 4.09 ಲಕ್ಷ ಕೋಟಿಗೂ ಅಧಿಕ ಮೊತ್ತದ ಬಜೆಟ್ ಮಂಡಿಸಿದ್ದೇವೆ. ಹೋದ ವರ್ಷ 3.71ಲಕ್ಷ ಕೋಟಿ ಮಾಡಿದ್ದೇವು.ಕಳೆದವರ್ಷಕ್ಕಿಂತ ಈ ಬಾರಿ 38 ಸಾವಿರ ಕೋಟಿಗೂ ಹೆಚ್ಚು ಬಜೆಟ್ ಮಾಡಿದ್ದೇವೆ. ಆರ್ಥಿಕ ದಿವಾಳಿ ಆಗಿದ್ದರೆ ಇದು ಹೇಗೆ ಸಾಧ್ಯ?" ಎಂದು ಬಿಜೆಪಿಯವರಿಗೆ ತಿರುಗೇಟು ಕೊಟ್ಟರು.
"ನರೇಂದ್ರ ಮೋದಿ ಪ್ರಧಾನಿ ಆದಾಗ ದೇಶದ ಮೇಲೆ 53.11 ಲಕ್ಷ ಕೋಟಿ ಸಾಲವಿತ್ತು. ಈಗ 200 ಲಕ್ಷ ಕೋಟಿ ಸಾಲ ಇದೆ. ಸ್ವಾತಂತ್ರ್ಯ ಬಂದು 65 ವರ್ಷಗಳಲ್ಲಿ 53 ಲಕ್ಷ ಕೋಟಿ ಇತ್ತು. ಇವರು ಬಂದು ಹತ್ತು ವರ್ಷಗಳಲ್ಲಿ ಅದು 200 ಲಕ್ಷ ಕೋಟಿ ಆಗಿದೆ. ನಾಲ್ಕು ಪಟ್ಟು ಸಾಲ ಮಾಡಿದ್ದಕ್ಕೆ ಯಾರು ಹೊಣೆ..? ಮಾಧ್ಯಮದವರಿಗೆ ಇದನ್ನು ಮುಚ್ಚಿಟ್ಟಿದ್ದಾರೆ. ಅದು ನಿಮಗೂ ಗೊತ್ತೂ ಇಲ್ಲ" ಎಂದು ಕಿಡಿಕಾರಿದರು.
"ಜಗದೀಶ್ ಶೆಟ್ಟರ್ ವಿರೋಧ ಪಕ್ಷದ ನಾಯಕನಾಗಿಯೂ ಅಸಮರ್ಥರಾಗಿದ್ದರು. ಮುಖ್ಯಮಂತ್ರಿ ಆಗಿಯೂ ಅಸಮರ್ಥರಾಗಿದ್ದರು. ಕಾಂಗ್ರೆಸ್ಗೆ ಬಂದಾಗ ಅವರು ಬಿಜೆಪಿ ಬಗ್ಗೆಯೇ ಏನೇನು ಹೇಳಿದ್ದಾರೆ ಎಂದು ನಾನು ಈಗ ಬಾಯಿ ಬಿಡಲೇ. ಅದನ್ನು ಹೇಳಿದರೆ ಅವರ ಗೌರವ ಕಡಿಮೆಯಾಗುತ್ತದೆ ಎಂದು, ಏನೂ ಹೇಳಿಲ್ಲ. ಅವರು ಸಿದ್ದರಾಮಯ್ಯ ಅವರನ್ನು ಹೇಗೆ ಟೀಕಿಸುತ್ತಾರೆ?" ಎಂದು ಸಿದ್ದರಾಮಯ್ಯ ಮರು ಪ್ರಶ್ನಿಸಿದರು.
"ಮಹಾರಾಷ್ಟ್ರದಿಂದ ಸ್ಮೃತಿ ಭವನ ನಿರ್ಮಾಣ, ಆರೋಗ್ಯ ವಿಮೆ ನೀಡಿರುವ ವಿಚಾರಕ್ಕೆ ದೆಹಲಿಯಲ್ಲಿ ನಾವು ಕನ್ನಡ ಭವನ ಕಟ್ಟಿದ್ದೇವೆ. ಅಲ್ಲಿ ಭೇಟಿ ನೀಡಲು, ತಿರುಗಾಡಲು ಅದನ್ನು ಕಟ್ಟಿದ್ದೇವೆ. ಹಾಗೆಂದ ಮಾತ್ರಕ್ಕೆ ಮಹಾರಾಷ್ಟ್ರದವರು ನಮ್ಮ ಜಾಗವನ್ನು ಅತಿಕ್ರಮಣ ಮಾಡಲು ಬರುವುದಿಲ್ಲ. ಬೆಳಗಾವಿಯನ್ನು ಯಾವ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ" ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಜಾತಿ ಗಣತಿ ವರದಿ ಚರ್ಚೆಗೆ 1 ವಾರ ವಿಶೇಷ ಸದನ ಕರೆಯಿರಿ: ಬಿಜೆಪಿ ಎಂಎಲ್ಸಿ ರವಿಕುಮಾರ್ ಆಗ್ರಹ