ಮೈಸೂರು: ಲೋಕ ಕಲ್ಯಾಣಾರ್ಥವಾಗಿ ವಿಶ್ವದಲ್ಲೇ ಮೊದಲ ಬಾರಿಗೆ ಮೈಸೂರಿನ ಅವಧೂತ ದತ್ತಪೀಠದಲ್ಲಿ ಜೂ 6 ರಿಂದ 15ರವರೆಗೆ ವನ ದುರ್ಗಾ ಚಂಡಿಯಾಗ ಹಮ್ಮಿಕೊಳ್ಳಲಾಗಿದೆ ಎಂದು ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾಹಿತಿ ನೀಡಿದರು.
ಮೈಸೂರಿನ ಅವಧೂತ ದತ್ತಪೀಠದ ಶುಕ ವನ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭೂಮಿ ಮೇಲಿನ ಸಕಲ ಜೀವರಾಶಿಗೂ ಒಳಿತಾಗಲೆಂದು ಬಯಸಿ ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಚಂಡಿಯಾಗ ಮತ್ತು ಶ್ರೇಷ್ಠವಾದ ವನ ದುರ್ಗಾ ವೃಕ್ಷಶಾಂತಿ ಮಹಾ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದರು.
ಜೂನ್ 6 ಬೆಳಗ್ಗೆ ದುರ್ಗಾ ದೇವಿಯ ಪ್ರಾರ್ಥನೆಯೊಂದಿಗೆ ಚಂಡಿಯಾಗ ಪ್ರಾರಂಭವಾಗಿದೆ. ಮಹಾಭಾರತದ ಕಾಲದಲ್ಲಿ ಇಂತಹ ಸಹಸ್ರ ಚಂಡಿಯಾಗ ನಡೆದಿತ್ತು. ಇದೀಗ ಪ್ರಪಂಚದಲ್ಲೇ ಪ್ರಥಮ ಬಾರಿಗೆ ದತ್ತಪೀಠದಲ್ಲಿ ಹಮ್ಮಿಕೊಳ್ಳಲಾಗಿದೆ. ದೇಶ, ರಾಜಕ್ಕೆ ಒಳಿತಾಗಲಿ, ಜನರ ಸಂಕಷ್ಟ ದೂರವಾಗಿ ಆರೋಗ್ಯ ಪ್ರಾಪ್ತಿಯಾಗಲಿ, ಸಮಾಜದಲ್ಲಿ ಶಾಂತಿ ನೆಮ್ಮದಿ ಸಿಗಬೇಕೆಂದು ಸಂಕಲ್ಪ ಮಾಡಿ ಚಂಡಿಯಾಗ ನಡೆಸಲಾಗುತ್ತದೆ ಎಂದರು.
ಈ ಯಾಗದಲ್ಲಿ ಯಾವುದೇ ಜಾತಿ ಧರ್ಮ ಲಿಂಗ ಭೇದವಿಲ್ಲದೆ ಯಾರೂ ಬೇಕಾದರೂ ಪಾಲ್ಗೊಳ್ಳಬಹುದಾಗಿದೆ. 11 ಹೋಮ ಕುಂಡಗಳಲ್ಲಿ 10 ದಿನಗಳ ಕಾಲ ಸಹಸ್ರ ಚಂಡಿಯಾಗ ನಡೆಯಲಿದೆ. ಜೊತೆಗೆ ವನದುರ್ಗ ವೃಕ್ಷಶಾಂತಿ ಮಹಾ ನಡೆಯಲಿದೆ. ವಿಶ್ವಶಾಂತಿ ಹಾಗೂ ಪರಿಸರ ಸಮತೋಲನಕ್ಕಾಗಿ 8000 ಬೋನ್ಸಾಯ್ ವೃಕ್ಷಗಳ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಂದಿನ ಮಕ್ಕಳಿಗೆ ಕೆಲವು ಗಿಡ ಮರಗಳ ಪರಿಚಯ ಬಿಟ್ಟರೆ ಅಮೂಲ್ಯ ವೃಕ್ಷಗಳ ಬಗ್ಗೆ ಮಾಹಿತಿ ಇಲ್ಲ. ನಕ್ಷತ್ರ ವೃಕ್ಷ ನವಗ್ರಹ ವೃಕ್ಷಗಳು ಏನೆಂದು ತಿಳಿದಿಲ್ಲ. ಗಿಡ ಮರಗಳ ಬಗ್ಗೆ ಒಂದು ವೃಕ್ಷ ಮ್ಯೂಸಿಯಂ ಮಾಡಬೇಕು ಎಂಬ ಮಹದಾಸೆ ಇದೆ. ಅದಕ್ಕಾಗಿ ತೈವಾನ್, ಇಂಗ್ಲೆಂಡ್, ಜಪಾನ್ ಸೇರಿದಂತೆ ವಿವಿಧ ದೇಶಗಳಿಂದ ಅತ್ಯಮೂಲ್ಯ ಗಿಡಗಳನ್ನು ತರಿಸಿದ್ದೇವೆ. ವೃಕ್ಷಶಾಂತಿ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದರು.
ಕರ್ನಾಟಕ, ತೆಲಂಗಾಣ, ಆಂಧ್ರ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜಮೀನು ಖರೀದಿಸಿ ವೃಕ್ಷಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ. ಅತ್ಯಮೂಲ್ಯ ಗಿಡಗಳುಳ್ಳ ಪಂಚ ಮೂಲಿಕ ವನವನ್ನು ಹೊಸದಾಗಿ ಮಾಡಲಾಗಿದೆ. ಅದಕ್ಕಾಗಿ ಸಹಸ್ರಾರು ಬೋನ್ಸಾಯ್ ವೃಕ್ಷಗಳನ್ನು ಸೇರಿಸಲಾಗಿದೆ. ಈ ಪಂಚ ಮೂಲಿಕ ವನದಲ್ಲಿ ನಾವ್ಯಾರೂ ನೋಡಿರದ ಹಲವು ಗಿಡಗಳನ್ನು ತಂದು ಪ್ರದರ್ಶನಕ್ಕೆ ಈಡಲಾಗಿದೆ. ಪೂಜೆಗೆ ಅತ್ಯಕೃಷ್ಟವಾದ ಗಿಡಮರಗಳು ಇವೆ. ಸಂಜೀವಿನಿಯಂತಹ ವೃಕ್ಷ, ಬೇವು, ಆಲ, ನೆಲ್ಲಿ ವೃಕ್ಷ ಸೇರಿದಂತೆ ಅನೇಕ ವೃಕ್ಷಗಳನ್ನು ಸಂರಕ್ಷಿಸಲಾಗಿದೆ ಎಂದು ತಿಳಿಸಿದರು.
10 ದಿನಗಳ ಕಾಲ ಯಾವ-ಯಾವ ಪೂಜೆ: ಯಾಗದ ಸಂದರ್ಭದಲ್ಲಿ ಪ್ರತಿ 1000 ವೃಕ್ಷಗಳ ಸಮೂಹವನ್ನು ಎಂಟು ವಿವಿಧ ದೇವತೆಗಳಿಗೆ ಸಮರ್ಪಿಸಲಾಗುತ್ತದೆ. ಜೂ.6 ರಂದು ಗಣಪತಿ ಪೂಜೆ, ಜೂ. 7ರಂದು ಲಲಿತಾ ಪೂಜೆ, ಜೂ. 8ರಂದು ಸೂರ್ಯ ಪೂಜೆ, ಜೂ.9ರಂದು ಶಿವ ಪೂಜೆ, ಜೂ .10 ರಂದು ಸುಬ್ರಹ್ಮಣ್ಯ ಪೂಜೆ, ಜೂ.11ರಂದು ವಿಷ್ಣು, ಜೂ.12ರಂದು ದತ್ತಾತ್ರೇಯ ಪೂಜೆ, ಜೂ.13ರಂದು ಹನುಮಾನ್ ಪೂಜೆ, ಜೂ.14ರಂದು ದುರ್ಗಾ ಪೂಜೆ ನೆರವೇರಲಿದೆ. ಜೂ.15ರಂದು ಮಹಾ ಪೂರ್ಣಾಹುತಿ ನೆರವೇರಲಿದೆ. ಈ 8 ದೇವತೆಗಳ ಸಹಸ್ರನಾಮದ ಪವಿತ್ರ ನಾಮಗಳನ್ನು ಪ್ರತಿಯೊಂದು ವೃಕ್ಷಕ್ಕೂ ಹೆಸರಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ಮೈಸೂರು: ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹುಟ್ಟುಹಬ್ಬ- ಸಂಗೀತ ವಿದ್ವಾಂಸರಿಗೆ ಬಿರುದು ಪ್ರದಾನ
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ: ಭಕ್ತರಿಗೆ ಬೆಳಗಿನ ಉಪಹಾರ ವ್ಯವಸ್ಥೆಗೆ ಚಾಲನೆ