ಬೆಳಗಾವಿ : 'ಅಣ್ಣಾಗ ಕಲಿಬೇಕು ಅಂತಾ ಛಲ, ನಮಗ ಕಲಿಸಬೇಕು ಅನ್ನೊ ಹಠ. ನಮ್ಮ ಅಣ್ಣಾ ಕಲಿಬೇಕಂತ ನಾ ಸಾಲಿ ಬಿಟ್ಟಿನ್ರೀ. ಅಪ್ಪ - ಅವ್ವ ಮತ್ತು ನಾನು ಪಟ್ಟ ಕಷ್ಟ ಸಾರ್ಥಕ ಆಯ್ತರಿ'. ಇದು ಯುಪಿಎಸ್ಸಿ ಪರೀಕ್ಷೆಯಲ್ಲಿ 910ನೇ ರ್ಯಾಂಕ್ ಪಡೆದ ಕುರಿಗಾಯಿ ಮಗ ಹನುಮಂತ ನಂದಿ ಸಹೋದರ ಆನಂದ ಅವರ ಮನದಾಳದ ಮಾತು.
ಹನುಮಂತನ ಸಾಧನೆ ಕುರಿತು ಅವರ ಸಹೋದರ ಆನಂದ ಅವರನ್ನು ಈಟಿವಿ ಭಾರತ ಪ್ರತಿನಿಧಿ ಸಂಪರ್ಕಿಸಿದಾಗ ಹಿರಿ ಹಿರಿ ಹಿಗ್ಗಿದರು. ನಮ್ಮ ಕನಸು ಅಣ್ಣಾ ನನಸು ಮಾಡಿದರಿ. ಎಲ್ಲಾ ಚಲೋ ಆಯ್ತರಿ ಅಂತಾ ಮಾತು ಶುರು ಮಾಡಿದರು.

ನಮ್ಮದು ಎರಡು ಎಕರೆ ಹೊಲ ಐತ್ರಿ: ನಮ್ಮೂರು ಕೊಡ್ಲಿವಾಡದಾಗ ನಮ್ಮದು ಎರಡು ಎಕರೆ ಹೊಲ ಅಯ್ತರಿ. 80 ಕುರಿ ಅದಾವರಿ. ನಮ್ಮ ಅಣ್ಣಾ ಸಣ್ಣಾವ ಇದ್ದಾಗಿಂದಲೂ ಬಾಳ ಶಾನ್ಯಾ ಇದ್ದರಿ. ಹಂಗಾಗಿ, ಇಬ್ಬರಿಗೂ ಅಪ್ಪಾ - ಅವ್ವಾಗ ಕಲಸಾಕ ಆಗೋದಿಲ್ಲ ಅಂತಾ ಅವನ ಒಬ್ಬನ ಓದಿಸಿದರು ರೀ. ಮತ್ತ ಅವನ ದೊಡ್ಡ ಆಫೀಸರ್ ಮಾಡಬೇಕು ಅಂತಾ ನಾನು ಸಾಲಿ ಬಿಟ್ಟೆರಿ. ಅಪ್ಪಾ ನಾನು ಹೊಲ ಮಾಡಕೊಂಡ, ಕುರಿ ಕಾಯಕೊಂಡು ಅಣ್ಣಾನ ಓದಿಸಿದೇವ್ರಿ. ಅವ್ವಾನು ನಮ್ಮ ಜೊತಿ ಕೆಲಸ ಮಾಡ್ತಾಳರಿ. ಅವನ ಯಾವ ಕೆಲಸಕ್ಕೂ ಹಚ್ಚುತಿರಲಿಲ್ಲರಿ. ನಿಂಗ ಎಷ್ಟ ಬೇಕು ಅಷ್ಟು ರೊಕ್ಕ ಕೊಡ್ತೇವು ನೀನು ಕಲಿ ಅಂತಿದ್ದುರಿ..ಅದ ರೀತಿ ಅವ ದಿಲ್ಲಿ, ಬೆಂಗಳೂರಾಗ ಕಷ್ಟ ಪಟ್ಟು ಓದಿ ಈಗ ಯುಪಿಎಸ್ಸಿ ಪಾಸ್ ಆಗಿದಾನರಿ ಎಂದು ಆನಂದ ನೆನಪು ಮಾಡಿಕೊಂಡರು.
ಹಂಡೆ ಹಾಲು ಕುಡಿದಷ್ಟು ಸಂತೋಷ ಆಯ್ತು: ನಾನು ಕುರಿ ಕಾಯಾಕ ಹೊಲಕ ಹೋಗಿದ್ನರಿ ಅವಾಗ ನಮ್ಮ ಅಣ್ಣಾ ಫೋನ್ ಹಚ್ಚಿ, ತಮ್ಮಾ ನಾ ಯುಪಿಎಸ್ಸಿ ಪಾಸ್ ಆಗಿದೇನೋ ಅಂತಾ ಹೇಳಿದ್ನರಿ. ನಮ್ಮ ನಂಬಿಕಿ ಉಳಿಸಿದೋ ಅಣ್ಣಾ ಅಂತ ನಾನೂ ಹೇಳಿದ್ನಿರಿ. ಅವಾಗ ನಂಗ ಆದ ಖುಷಿ ಜೀವನದಾಗ ಯಾವತ್ತೂ ಆಗಿಲ್ಲರಿ. ಹಂಡೆ ಹಾಲು ಕುಡಿದಷ್ಟು ಸಂತೋಷ ಆಯ್ತು ನೋಡ್ರಿ. ಅಷ್ಟರೊಳಗ ಇಡೀ ಊರಿಗೆ ಸುದ್ದಿ ಗೊತ್ತಾಗಿತ್ತರಿ. ನಾನು ಮನಿಗೆ ಬಂದಾಗ ನಮ್ಮ ಅಪ್ಪ-ಅವ್ವಾ ಮತ್ತ ಮನಿಯವರೆಲ್ಲಾ ಸೇರಿ ಹಬ್ಬ ಮಾಡಿದೆವ್ರಿ . ಊರಾನ ಮಂದಿನೂ ಅಣ್ಣಾನ ಸಾಧನೆಗೆ ಖುಷಿ ವ್ಯಕ್ತಪಡಿಸಿದಾರ. ನಿಮ್ಮ ಅಣ್ಣಾ ಬರೇ ನಿಮ್ಮ ಮನಿಗೆ ಅಲ್ಲ, ಇಡೀ ಊರಿಗೆ ಹೆಸರ ತಂದ ಅಂತಾ ಅಭಿಮಾನ ಪಟ್ಟರು ಅಂತಾ ಆನಂದ ವಿವರಿಸಿದರು.
ಅಣ್ಣ ಪಾಸಾಗ್ಯಾನ ಅಂತಾ ನಾವೇನು ಕುರಿ ಕಾಯೋದ ಬಿಡಲ್ಲರಿ: ನಮ್ಮ ಅಣ್ಣಾ ಯುಪಿಎಸ್ಸಿ ಪಾಸ್ ಆಗಿದಾನ ಅಂತೇಳಿ ನಾವೇನು ಕುರಿ ಕಾಯೋದು ಬಿಡೋದಿಲ್ಲ. ನಮ್ಮ ಕಾಯಕ ಮುಂದುವರಿಸ್ತೇವ್ರಿ. ದೊಡ್ಡ ಅಧಿಕಾರಿಯಾಗಿ ಬಡ ಜನರಿಗೆ ಒಳ್ಳೆಯ ಸೇವೆ ನೀಡಲಿ, ಅಪ್ಪಾ - ಅವ್ವಗ ಚಲೋ ನೋಡಿಕೊಳ್ಳಲಿ ಅಂತಾ ಅಷ್ಟ ಬಯಸ್ತೇವ್ರಿ ಎನ್ನುತ್ತಾರೆ ಹನುಮಂತ ಸಹೋದರ ಆನಂದ.

ನಮಗ ಬಾಳ ಅಂದರ ಬಾಳ ಖುಷಿ ಆಗತೈತ್ರಿ : ಹನುಮಂತ ಸಹೋದರಿ ಸರಸ್ವತಿ ಅವರನ್ನು ಮಾತನಾಡಿಸಿದಾಗ, 'ನಮ್ಮ ಅಣ್ಣಾ ಬಾಳ ವರ್ಷದಿಂದ ಕಷ್ಟ ಪಟ್ಟಿದ್ದರಿ. ನಮ್ಮದು ಮೊದಲೇ ಬಡತನ ಹಿನ್ನೆಲೆ ಹೊಂದಿರುವ ಕುಟುಂಬ. ಅದೆಲ್ಲಾ ಮೆಟ್ಟಿ ನಿಂತ ಇವತ್ತು ಇಡೀ ದೇಶವೇ ತನ್ನತ್ತ ತಿರುಗಿ ನೋಡುವ ಸಾಧನೆ ಮಾಡಿದಾನರಿ. ಯುಪಿಎಸ್ಸಿ ಪಾಸ್ ಆಗಿದ್ದಕ್ಕೆ ಮನ್ಯಾಗ ಪಾಯಸದ ಊಟ ಮಾಡಿ ಸಂಭ್ರಮಿಸಿದೆವು. ನಮ್ಮ ಅಪ್ಪ-ಅವ್ವಾ ಏನೂ ಕಲಿತವರಲ್ಲ. ಯುಪಿಎಸ್ಸಿ ಅಂದರ ಏನು ಅಂತಾನೂ ಅವರಿಗೆ ಗೊತ್ತಿಲ್ಲ. ನಂಗೂ ಡಿಗ್ರಿ ಓದಿಸಿದಾರ್ರಿ. ಇನ್ನೊಬ್ಬ ಅಣ್ಣಾ ಕುರಿ ಮೇಯಸ್ತಾನರಿ. ನಮಗ ಬಾಳ ಅಂದರ ಬಾಳ ಖುಷಿ ಆಗೈತಿ' ಎಂದರು.
ಅದ್ಧೂರಿ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ : ಕೊಡ್ಲಿವಾಡದ ಗ್ರಾಮಸ್ಥ ವಿಠಲ ವಾಳದ ಮಾತನಾಡಿ, 'ಇಡೀ ಕುಟುಂಬ ದುಡಿದು ಹನುಮಂತನನ್ನು ಓದಿಸಿತ್ತು. ಅದಕ್ಕೆ ತಕ್ಕಂತೆ ಅವನೂ ಕಷ್ಟಪಟ್ಟು ಓದಿದ. ಈಗ ಅದಕ್ಕೆ ಫಲ ಸಿಕ್ಕಿದೆ. ನಮ್ಮೂರಲ್ಲಿ ಯಾರೂ ಯುಪಿಎಸ್ಸಿ ಪರೀಕ್ಷೆ ಪಾಸ್ ಆಗಿರಲಿಲ್ಲ. ದೇಶದಲ್ಲೆ ಅತ್ಯಂತ ಕಠಿಣ ಪರೀಕ್ಷೆ ಪಾಸ್ ಆಗಿ ನಮ್ಮೂರಿಗೆ ಕೀರ್ತಿ ತಂದಿದ್ದಾನೆ. ಆತನಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಊರಿಗೆ ಬಂದ ಮೇಲೆ ಹನುಮಂತನಿಗೆ ಅದ್ಧೂರಿ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ' ಎಂದು ಹೇಳಿದರು.
ಇದನ್ನೂ ಓದಿ : ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ: ಬೆಳಗಾವಿ ಕುವರನ ಅಮೋಘ ಸಾಧನೆ - UPSC RESULTS