ಹಾವೇರಿ: ಇತ್ತೀಚಿಗೆ ಬಿಡುಗಡೆಯಾದ ಕೇಂದ್ರೀಯ ಲೋಕ ಸೇವಾ ಆಯೋಗದ (ಯುಪಿಎಸ್ಸಿ) ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದಲ್ಲಿ 41ನೇ ರ್ಯಾಂಕ್ ಪಡೆದಿರುವ ಸಚಿನ್ ಬಸವರಾಜ ಗುತ್ತೂರ್ ಅವರ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ಭಾನುವಾರ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಯುಪಿಎಸ್ಸಿ ಪಾಸ್ ಮಾಡಿದ ಖುಷಿಗೆ ಸಚಿನ್, ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿದರು.
ಭೋಜನಕೂಟಕ್ಕೆ ಸ್ನೇಹಿತರು, ಗ್ರಾಮಸ್ಥರು ಆಗಮಿಸಿ ಏಲಕ್ಕಿ ಮಾಲೆ ಹಾಕಿ, ಶಾಲು ಹೊದಿಸಿ ಹೂಗುಚ್ಛ ನೀಡಿ ಸಚಿನ್ಗೆ ಶುಭ ಕೋರಿದರು. ನಂತರ ಸಚಿನ ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಸ್ನೇಹಿತರನ್ನು ಅಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು.
ಭೋಜನಕೂಟದ ವೇಳೆ ವಿಶೇಷಚೇತನ ಗಾಯಕ, ಗಾಯಕಿಯರಿಗೆ ಹಾಡಲು ಅವಕಾಶ ನೀಡುವ ಮೂಲಕ ಸಚಿನ್ ಎಲ್ಲರ ಗಮನ ಸೆಳೆದರು. ಭೋಜನಕೂಟದಲ್ಲಿ ಹೋಳಿಗೆ ಮಾವಿನಹಣ್ಣಿನ ಸೀಕರಣಿ, ರೊಟ್ಟಿ, ಕುರ್ಮಾ, ಪಲಾವ್, ಅನ್ನ, ಸಾಂಬಾರ್ ಮಜ್ಜಿಗೆ ಉಣಬಡಿಸಲಾಯಿತು.
ಈ ವೇಳೆ ಮಾತನಾಡಿದ ಸಚಿನ್ ಬಸವರಾಜ ಗುತ್ತೂರ್, ನಾಲ್ಕು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದು, ಮೂರು ಬಾರಿ ವಿಫಲನಾಗಿದ್ದೆ. ಆದರೆ ನಾಲ್ಕನೇ ಬಾರಿ 41ನೇ ಸ್ಥಾನ ಪಡೆದಿದಕ್ಕೆ ಸಂತಸವಾಗುತ್ತಿದೆ. ನಾನು ಎಂಬಿಬಿಎಸ್ ವ್ಯಾಸಂಗ ಮಾಡಿದ್ದು, ಐಚ್ಛಿಕ ವಿಷಯವಾಗಿ ಮಾನವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡು ಯುಪಿಎಸ್ಸಿ ಪರೀಕ್ಷೆ ಬರೆದಿದ್ದೆ ಎಂದರು.

ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ತೋರಿದ ಪ್ರೀತಿ ವಿಶ್ವಾಸ ಮರೆಯಲು ಸಾಧ್ಯವಿಲ್ಲ. ಗ್ರಾಮಸ್ಥರಿಗೆ ಭೋಜನಕೂಟ ಆಯೋಜಿಸಿದ್ದೆ. ಗ್ರಾಮಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತೇನೆ. ಮುಂದೆ ಅಧಿಕಾರಿಯಾಗಿ ಎಲ್ಲಿಗೇ ಹೋದರು ಗ್ರಾಮದ ಹೆಸರು ಹೇಳುವೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ್ ಭಾರತ್ 2047 ಸಾಕಾರಗೊಳಿಸಲು ಶ್ರಮಿಸುವುದಾಗಿ ತಿಳಿಸಿದರು.
ಸಚಿನ್ ಅವರ ಸಹೋದರ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ್ ಪೂಜಾರ್ ಸಂತಸ ವ್ಯಕ್ತಪಡಿಸಿದರು. ಮನೆಯ ಮಗ 41ನೇ ಸ್ಥಾನಗಳಿಸಿದ್ದಾನೆ. ಅವನ ಸಾಧನೆ ತಮಗೆ ಹೆಮ್ಮೆ ತಂದಿದೆ ಎಂದು ಖುಷಿ ಹಂಚಿಕೊಂಡರು.

ಇನ್ನು ಸಚಿನ್ ಶುಕ್ರವಾರ ದೆಹಲಿಯಿಂದ ರಾಣೆಬೆನ್ನೂರು ತಾಲೂಕು ಕೋಡಿಯಾಲ ಹೊಸಪೇಟಿ ಗ್ರಾಮಕ್ಕೆ ಆಗಮಿಸಿದ್ದರು. ಗ್ರಾಮಸ್ಥರು ಮತ್ತು ಕುಟುಂಬಸ್ಥರ ಸಚಿನ್ ಅವರಿಗೆ ಹೂಗುಚ್ಛ ನೀಡಿ ಸನ್ಮಾನಿಸಿ ಅದ್ಧೂರಿಯಾಗಿ ಗ್ರಾಮಕ್ಕೆ ಬರ ಮಾಡಿಕೊಂಡರು. ನಂತರ ಸಚಿನ್ ಮತ್ತವರ ತಂದೆ- ತಾಯಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದರು.
ಇದನ್ನೂ ಓದಿ: ಯುಪಿಎಸ್ಸಿ ಫಲಿತಾಂಶ: ಹಾವೇರಿಯ ವೈದ್ಯ ಸಚಿನ್ ಗುತ್ತೂರ್ಗೆ 41ನೇ ಸ್ಥಾನ
ಇದನ್ನೂ ಓದಿ: ತೃಪ್ತಿ ನೀಡದ ₹1 ಕೋಟಿ ಸಂಬಳದ ಅಮೆರಿಕ ಕೆಲಸ: UPSC ಪರೀಕ್ಷೆ ಬರೆದು 467ನೇ ರ್ಯಾಂಕ್ ಪಡೆದ ಯುವತಿ!