ಹುಬ್ಬಳ್ಳಿ: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದು, ಜನರ ನಂಬಿಕೆ ಮೇಲಿನ ಪ್ರಹಾರ. ಈ ಪ್ರಕರಣದಲ್ಲಿ ಹೋಮ್ ಗಾರ್ಡ್ ಅಮಾನತು ಮಾಡಿದ್ರೆ ಸಾಲದು, ಸರ್ಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಿವಾರ ಕೇವಲ ಬ್ರಾಹ್ಮಣರು ಮಾತ್ರ ಹಾಕ್ತಾರೆ ಅಂತ ಸರ್ಕಾರದಲ್ಲಿದ್ದವರು ತಿಳಿದಿದ್ದರೆ ತಪ್ಪು, ಅನೇಕ ಸಮುದಾಯದವರು ಜನಿವಾರ ಹಾಕ್ತಾರೆ. ಸರ್ಕಾರ ಸೂಕ್ಷ್ಮತೆಯಿಂದ ವರ್ತಿಸಬೇಕು. ಅನ್ಯಾಯವಾದ ವಿದ್ಯಾರ್ಥಿಗೆ ಬೇರೆ ದಾರಿ ಹುಡುಕಿ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.
ಸರ್ಕಾರ ಎಲ್ಲದರ ಬೆಲೆ ಏರಿಕೆ ಮಾಡಿದೆ. ಸರ್ಕಾರ ಕೊಟ್ಟ ಗ್ಯಾರಂಟಿ ಪ್ರತಿ ತಿಂಗಳು ಬರಲ್ಲ. ಆದರೆ ಬೆಲೆ ಏರಿಕೆ ಮಾತ್ರ ನಿರಂತರವಾಗಿ ಮಾಡ್ತಿದ್ದಾರೆ. ಸರ್ಕಾರ ದಿವಾಳಿಯಾಗಿದೆ. ರಾಹುಲ್ ಗಾಂಧಿ ಹೇಳಿದಂತೆ ನಡೆದ್ರೆ ನೀವು ರಾಜಕೀಯವಾಗಿ ನೆಗದು ಬಿದ್ದು ಹೋಗ್ತೀರಿ. ಸಿದ್ದರಾಮಯ್ಯ ಅವರಿಗೆ ರಾಜಕೀಯ ಅನುಭವ ಇದೆ. ನೀವು ಕರ್ನಾಟಕದ ಪ್ರಮುಖ ನಾಯಕರು. ಜನ ನಿಮ್ಮನ್ನು ನೋಡಿ ನಗುವಂತಾಗಿದೆ. ಅವರು ಹೇಳಿದಂತೆ ನಡೆದುಕೊಂಡ್ರೆ ರಾಜ್ಯಕ್ಕೆ ಒಳ್ಳೆಯದಾಗಲ್ಲ ಎಂದರು.
ಜನಿವಾರ ತೆಗೆಸಿದ್ದು ಅತ್ಯಂತ ಹೀನ ಕೃತ್ಯ: ಮತ್ತೊಂದೆಡೆ, ಬೀದರ್ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿ ಜನಿವಾರ ಹಾಕಿರುವ ಕಾರಣಕ್ಕೆ ಪರೀಕ್ಷೆಗೆ ಅವಕಾಶ ನಿರಾಕರಣೆ ಮಾಡಿದ್ದು, ಶಿವಮೊಗ್ಗದಲ್ಲಿ ವಿದ್ಯಾರ್ಥಿ ಹಾಕಿಕೊಂಡಿದ್ದ ಜನಿವಾರ ತೆಗೆಸಿದ್ದು ಅತ್ಯಂತ ಹೀನ ಕೃತ್ಯ, ಇದು ಖಂಡನೀಯ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ದೇಶದ ಸಂಸ್ಕೃತಿ ಆಚಾರ, ವಿಚಾರ, ನಂಬಿಕೆಗಳ ಬಗ್ಗೆ ಅರಿವಿಲ್ಲದಿರುವ ಕಾಂಗ್ರೆಸ್ ಸರ್ಕಾರ ನಿಯಮಗಳ ಪಾಲನೆಯ ಹೆಸರಿನಲ್ಲಿ ಧರ್ಮ ದ್ರೋಹ ಮಾಡುವುದರ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಜನಿವಾರ ಹಾಕಿಕೊಳ್ಳುವುದರಿಂದ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಏನು ಅಡ್ಡಿಯಾಗುತ್ತಿತ್ತು. ಸಂಸ್ಕಾರವೇ ಗೊತ್ತಿಲ್ಲದ ಸರ್ಕಾರದಲ್ಲಿ ಅಧಿಕಾರಿಗಳು ಹೃದಯ ಶೂನ್ಯರಾಗಿ ನಡೆದುಕೊಂಡಿರುವುದು ಅತ್ಯಂತ ಖಂಡನೀಯ. ಅನಾಗರಿಕ ಅಧಿಕಾರಿಗಳಿಂದ ಈಗ ಸಿಇಟಿ ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಿ ಅವರ ಮುಂದಿನ ಶೈಕ್ಷಣಿಕ ಬದುಕಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಈ ರೀತಿಯ ಘಟನೆಗಳು ಮರುಕಳಿಸದಂತೆ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಬ್ರಾಹ್ಮಣ ಸಮಾಜ ಪ್ರತಿಭಟನೆ: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿ ಜನಿವಾರ ತೆಗೆಸಿರುವ ಕ್ರಮ ಖಂಡಿಸಿ ದಾವಣಗೆರೆ ಜಿಲ್ಲಾ ಬ್ರಾಹ್ಮಣ ಸಮಾಜ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನೂ ಓದಿ: ಜನಿವಾರ ತೆಗೆಸಿದ ಆರೋಪ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಘಂಟೆ ಭಾರಿಸಿ ವಿನೂತನ ಪ್ರತಿಭಟನೆ
ಇದನ್ನೂ ಓದಿ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪದಡಿ ಇಬ್ಬರು ಅಮಾನತು : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ