ಹಾವೇರಿ/ವಿಜಯಪುರ: ಸಿಡಿಲು ಬಡಿದು ಕುರಿಗಾಹಿಯೊಬ್ಬ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮೂಕಬಸರೀಕಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತನನ್ನು 48 ವರ್ಷದ ಮಾಳಪ್ಪ ಗಡ್ಡಿ ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಕುರಿ ಮೇಯಿಸುವಾಗ ಸಿಡಿಲು ಬಡಿದು ಮಾಳಪ್ಪ ಸಾವನ್ನಪ್ಪಿದ್ದಾರೆ. ಸಿಡಿಲಿನ ತೀವ್ರತೆಗೆ ಮಾಳಪ್ಪನ ಮಗ ಆಕಾಶ ಗಂಭೀರವಾಗಿ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಶಿಗ್ಗಾಂವಿ ತಹಶೀಲ್ದಾರ್ ರವಿ ಕೊರಗೇರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಾವೇರಿ ಜಿಲ್ಲೆಯ ಹಲವೆಡೆ ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಅಕಾಲಿಕ ಮಳೆಯಿಂದ ಹಿಂಗಾರಿನಲ್ಲಿ ಮೆಕ್ಕೆಜೋಳ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ 48ರ ಸರ್ವಿಸ್ ರಸ್ತೆಯಲ್ಲಿ ಸೇರಿದಂತೆ ಮೆಕ್ಕೆಜೋಳ ಒಣಹಾಕಿರುವ ರೈತರು ಮೆಕ್ಕೆಜೋಳ ರಾಶಿಯನ್ನು ಮಳೆರಾಯನಿಂದ ರಕ್ಷಿಸಲು ಹರಸಾಹಸಪಟ್ಟರು.
ಇದನ್ನೂ ಓದಿ: ನಿಯಂತ್ರಣ ತಪ್ಪಿ ರಿಚ್ ಮಂಡ್ ಸೇತುವೆ ತಡೆಗೋಡೆಗೆ ಡಿಕ್ಕಿ: ಮೇಲಿಂದ ಬಿದ್ದು ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ
ಸಿಡಿಲಿಗೆ ಮತ್ತೊಂದು ಬಲಿ: ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕಲಕೇರಿ ಬಳಿ ಆಲಗೂರ ಗ್ರಾಮದಲ್ಲಿ ಗುರುವಾರ ಸಿಡಿಲಿಗೆ ಕುರಿಗಾಹಿ ಯುವಕ ಮೃತಪಟ್ಟಿದ್ದಾನೆ. ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಕುರಿ ಕಾಯಲು ಹೋಗಿದ್ದ ಯುವಕ ಸಿಡಿಲಿಗೆ ಬಲಿಯಾಗಿದ್ದಾನೆ. ಆಕಾಶ ಹೈಯಾಳದಪ್ಪ ಯಂಕಂಚಿ (19) ಮೃತ ಯುವಕ. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.