ಶಿವಮೊಗ್ಗ: ಮಾನವೀಯತೆ ಮತ್ತು ಅಪಾರ ದೇಶಾಭಿಮಾನ, ಖಡಕ್ ಮಾತು, ಪಾಕಿಗಳು ಎದುರಿಗೆ ಬಂದರೆ ಮುಖಕ್ಕೆ ಪಟಾರನೆ ಹೊಡೆಯುವಷ್ಟು ಧೈರ್ಯ. ವಯಸ್ಸು 103 ಆಗಿದ್ದರೂ ನರನಾಡಿಯಲ್ಲಿ ಸಮ್ಮಿಳಿತವಾಗಿರುವ ಸಾಮಾಜಿಕ ಕಾಳಜಿ. ಇದು ಕಲ್ಪತರು ನಾಡಿನ ಹಿರಿಯ ಜೀವದ ಕುರಿತ ಸಂಕ್ಷಿಪ್ತ ಪರಿಚಯವಷ್ಟೇ.
ಹೌದು, ಇತ್ತೀಚಿಗೆ ಕಾಶ್ಮೀರ ಪ್ರವಾಸದಲ್ಲಿ ಉಗ್ರರ ದಾಳಿಯಿಂದ ಸಾವನ್ನಪ್ಪಿದ ಶಿವಮೊಗ್ಗದ ಮಂಜುನಾಥ ರಾವ್ ಅವರ ಮನೆಗೆ ಶಿವಮ್ಮ ಎಂಬ ವೃದ್ಧೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಶಿವಮ್ಮ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದವರು. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ನೋಡಿ ಮಂಜುನಾಥ ರಾವ್ ಅವರ ತಾಯಿ, ಪತ್ನಿ ಹಾಗೂ ಮಗನಿಗೆ ಸಾಂತ್ವನ ಹೇಳಿದರು. ತಮ್ಮ ಇಳಿ ವಯಸ್ಸಿನಲ್ಲಿ ಮಗನ ಸಹಾಯದಿಂದ ಬಸ್ನಲ್ಲಿ ಬಂದು ಮಂಜುನಾಥ ರಾವ್ ಅವರ ಮನೆ ತಲುಪಿದ್ದಾರೆ. ಮಂಜುನಾಥ ರಾವ್ ಅವರ ಸಾವು ಕಂಡು ದುಃಖಿತರಾದ ಅಜ್ಜಿ, ಪಾಕಿಸ್ತಾನದ ಉಗ್ರರ ವಿರುದ್ದ ಕಿಡಿಕಾರಿದ್ದು, ನಮ್ಮ ಸೈನಿಕರಿಗೆ ಪ್ರಧಾನಿ ಮೋದಿ ಹೆಚ್ಚಿನ ಬಲ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಮ್ಮ, "ತುಮಕೂರು ಜಿಲ್ಲೆ ತಿಪಟೂರು ತಾಲೂಕು ತಿಮ್ಲಾಪುರದಿಂದ ಮಂಜುನಾಥ್ ಅವರ ಮನೆಗೆ ಬಂದಿದ್ದೇನೆ. ಮಂಜುನಾಥ ಅವರ ಕುಟುಂಬಕ್ಕೆ ಸಮಾಧಾನದ ಮಾತುಗಳನ್ನು ಹೇಳಲು ಬಂದಿದ್ದೇನೆ. ಪಾಕಿಸ್ತಾನದ ಉಗ್ರರನ್ನು ಬಿಡಬಾರದು. ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಎಲ್ಲೇ ಇದ್ರೂ ನಮ್ಮ ಸೈನಿಕರು ಬಿಡಬಾರದು. ಅವರನ್ನು ಬುಡಸಮೇತ ಕಿತ್ತು ಹಾಕಬೇಕು. ನಮ್ಮ ಸೈನಿಕರಿಗೆ ಬಲ ಕೊಡಿ. ನಮ್ಮ ದೇಶ ಚೆನ್ನಾಗಿರಬೇಕು. ನಾನು ಮಂಜುನಾಥ ಅವರ ಕುಟುಂಬವನ್ನು ಭೇಟಿ ಮಾಡಿ, ಧೈರ್ಯ ಹೇಳಿದ್ದೇನೆ" ಎಂದರು.
ನಾವು ಒಬ್ಬಂಟಿಯಲ್ಲ- ಮಂಜುನಾಥ್ ಪತ್ನಿ ಪಲ್ಲವಿ: ಮಂಜುನಾಥ ರಾವ್ ಪತ್ನಿ ಪಲ್ಲವಿ ಮಾತನಾಡಿ, "ಶಿವಮ್ಮನವರಿಗೆ 103 ವರ್ಷ. ಇವರು ನಾನು ಮನೆ ಮುಂದೆ ಪೋನ್ನಲ್ಲಿ ಮಾತನಾಡುವಾಗ ಆಟೋದಲ್ಲಿ ಬಂದರು. ಅವರು ನಮಗೆ ಗುರುತು ಪರಿಚಯವಿಲ್ಲ. ನಾನು ಯಾರು ಅಂತ ಕೇಳಿದೆ, ಅವರು ನಿಮ್ಮನ್ನೇ ಮಾತನಾಡಿಸಲು ಬಂದಿದ್ದೇನೆ ಎಂದರು. 103 ವರ್ಷದ ಅಜ್ಜಿ ಅಷ್ಟು ದೂರದಿಂದ ಬಂದು ನನಗೆ ಧೈರ್ಯ ತುಂಬಿದ್ದು ನೋಡಿ ಏನ್ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನಾನು ಅವರಿಗೆ ಧನ್ಯವಾದ ಹೇಳುತ್ತಾ, ಅವರ ಆಶೀರ್ವಾದ ನಮ್ಮ ಕುಟುಂಬಕ್ಕೆ ಇರಲಿ ಎಂದು ಕೇಳಿಕೊಳ್ಳುತ್ತೇನೆ. ಅಜ್ಜಿ ಟಿವಿಯಲ್ಲಿ ಸುದ್ದಿ ನೋಡಿ ಬಸ್ನಲ್ಲಿ ಅಷ್ಟು ದೂರದಿಂದ ಬಂದಿದ್ದಾರೆ" ಎಂದು ಕೃತಜ್ಞತೆ ತಿಳಿಸಿದರು.
ಇದನ್ನೂ ಓದಿ: ಪಹಲ್ಗಾಮ್ ನರಮೇಧದ ವಿರುದ್ಧ ಪ್ರತೀಕಾರಕ್ಕೆ ಸಜ್ಜಾದ ಭಾರತ; ಸೇನಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಪ್ರಧಾನಿ ಮೋದಿ - PAHALGAM TERROR ATTACK
ಇದನ್ನೂ ಓದಿ: ಪಹಲ್ಗಾಮ್ ದುಷ್ಕೃತ್ಯ: ತನಗೆ ಗೊತ್ತಿಲ್ಲದೇ ಉಗ್ರರ ದಾಳಿಯನ್ನು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ ಪ್ರವಾಸಿಗ - PAHALGAM TERRORIST ATTACK