ಕೊಪ್ಪಳ: ರಾಜ್ಯ ಸರ್ಕಾರ ಏಪ್ರಿಲ್ 17ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಬೇಕೆಂದಿರುವುದು ಜಾತಿ ಗಣತಿಯ ಕುರಿತಲ್ಲ. ಇದು ಜಾತಿಗಣತಿ ಅಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಚಾರ ತಿಳಿಯಲು ಮಾಡಿದ ಸಮೀಕ್ಷೆ. ಅದರಲ್ಲಿ ಜಾತಿ ಕಾಲಂ ಸೇರಿಸಲಾಗಿದೆ ಅಷ್ಟೇ. ಇದು ಕೂಡ ಸ್ವಾಗತಾರ್ಹ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ಕೊಪ್ಪಳದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ವೈಜ್ಞಾನಿಕವಾಗಿದೆ. ಶಿಕ್ಷಕರು ಮನೆ ಮನೆಗೆ ಹೋಗಿ ಗಣತಿ ಮಾಡಿದ್ದಾರೆ. ಆದರೆ, ಅದು ಶೇ.100ರಷ್ಟು ಸರಿ ಇದೆಯೋ, ಇಲ್ವೋ? ಎನ್ನುವ ಕುರಿತು ಚರ್ಚೆಯಾಗಬೇಕಿದೆ. ನಮ್ಮ ಪ್ರಕಾರ ಶೇ.96ರಿಂದ 97ರಷ್ಟು ಸರಿಯಾಗಿದೆ ಎಂದರು.
ಗಣತಿಯ ಅವಶ್ಯಕತೆ ಇತ್ತು: ಪ್ರತಿ ಹತ್ತು ವರ್ಷಕ್ಕೊಮ್ಮೆ ಗಣತಿಯ ಅವಶ್ಯಕತೆ ಇದೆ. ಇದು ಒಂದು ವರ್ಷದ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಇದೀಗ ಕೇವಲ ಮಂತ್ರಿಗಳ ಬಳಿ ಒಂದೊಂದು ಪ್ರತಿ ಇದೆ. ಎಲ್ಲರೂ ಅದನ್ನು ಓದಬೇಕು. ಲಿಂಗಾಯತರು, ಒಕ್ಕಲಿಗರ ಅಂಕಿಸಂಖ್ಯೆ ಕೇವಲ ಊಹಾಪೋಹ. ಅದರ ಬಗ್ಗೆ ಕಾಮೆಂಟ್ ಮಾಡೋದು ಸರಿ ಅಲ್ಲ. ಕ್ಯಾಬಿನೆಟ್ನಲ್ಲಿ ಚರ್ಚೆಗೆ ತರಲಾಗುತ್ತಿದೆ. ಇದನ್ನು ಯಾವುದೇ ಜಾತಿ, ಧರ್ಮದವರು ವಿರೋಧ ಮಾಡಬಾರದು ಎಂದು ತಿಳಿಸಿದರು.
ಬಿಜೆಪಿಯವರು ಸುಮ್ಮನೆ ವಿರೋಧ ಮಾಡ್ತಾರೆ: ಬಿಜೆಪಿಯವರು ಬಾಯಿ ಚಪಲಕ್ಕೆ ಇದನ್ನು ವಿರೋಧಿಸುತ್ತಿದ್ದಾರೆ. ಇದ್ಯಾಕೆ ಮರಣ ಶಾಸನ ಆಗತ್ತದೆ? ಇದನ್ನು ಇಂಪ್ಲಿಮೆಂಟ್ ಮಾಡಿದರೆ ಸಿದ್ದರಾಮಯ್ಯ ಘನತೆ ಹೆಚ್ಚಾಗತ್ತದೆ. ಕೆಲವರು ಲಿಂಗಾಯತರ ಜನಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ. ಸಚಿವ ಎಂ.ಬಿ.ಪಾಟೀಲ್ ಅವರು ಲಿಂಗಾಯತರು. ಒಂದು ಕೋಟಿ ಜನಸಂಖ್ಯೆ ಇರುವುದಾಗಿ ಹೇಳುತ್ತಿದ್ದರೆ ಅವರ ಹೇಳಿಕೆ ಸರಿಯಗಿದೆ. ಶಂಕರ್ ಬಿದರಿ ಅವರ ಜೊತೆಗೆ ನಾನು ಮಾತಾಡಿದ್ದೇನೆ. ಇದನ್ನ ವಿರೋಧ ಮಾಡಬೇಡಿ, ಸ್ವಾಗತ ಮಾಡಿ ಎಂದು ಹೇಳಿದ್ದೇನೆ. ಈ ಕುರಿತ ಚರ್ಚೆಗೆ ಲಿಂಗಾಯತ ಶಾಸಕರು, ವಿದ್ಯಾವಂತರು, ಲಿಂಗಾಯತ ಮುಖಂಡರನ್ನು ಸೇರಿಸಿಕೊಂಡು ಚರ್ಚೆಮಾಡಿ ಎಂದರು.
ಬ್ರಾಹ್ಮಣ, ಜೈನರನ್ನು ಬಿಟ್ಟು ಎಲ್ಲ ಹಿಂದುಳಿದವರೇ: ಕರ್ನಾಟಕದಲ್ಲಿ ಬ್ರಾಹ್ಮಣ, ಜೈನರನ್ನು ಬಿಟ್ಟರೆ ಎಲ್ಲ ಹಿಂದುಳಿದವರೇ. ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ತರಲಾಗಿದೆ. ಇದು ಬಿಜೆಪಿಯವರಿಗೆ ಅರ್ಥ ಆಗುತ್ತಿಲ್ಲ. ಜಾತಿ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಎಂದ ರಾಯರೆಡ್ಡಿ ಹೇಳಿದರು.
ಮುಸ್ಲಿಮರ ಸ್ಥಿತಿ ಹೀನಾಯವಾಗಿದೆ: ದೇಶದಲ್ಲಿ ಮುಸ್ಲಿಮರ ಪರಿಸ್ಥಿತಿ ಹೀನಾಯವಾಗಿದೆ. ಅವರು ಬಹಳ ಬಡವರಿದ್ದಾರೆ. ಪ್ರಧಾನಿ ಮೋದಿ ತಿಳಿದು ಮಾತನಾಡುತ್ತಾರೋ, ತಿಳಿಯದೇ ಮಾತನಾಡುತ್ತಾರೋ ಗೊತ್ತಿಲ್ಲ. ದೇಶದಲ್ಲಿ 20 ಕೋಟಿಗೂ ಹೆಚ್ಚು ಜನರಿದ್ದಾರೆ. ಅವರಿಗೆ ಮೀಸಲಾತಿ ಕೊಟ್ಟರೆ ತಪ್ಪೇನು ಎಂದು ಬಸವರಾಜ ರಾಯರೆಡ್ಡಿ ಪ್ರಶ್ನಿಸಿದರು.
ಇದನ್ನೂ ಓದಿ: ತೆಲಂಗಾಣದಲ್ಲಿ SC ಒಳ ಮೀಸಲಾತಿ ಜಾರಿ: ಈ ನಿರ್ಣಯ ಕೈಗೊಂಡ ದೇಶದ ಮೊದಲ ರಾಜ್ಯ - TELANGANA SC SUB CATEGORISATION