ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದಲ್ಲಿ ನಡೆಯುವ ನೇಮಕಾತಿಗಳಲ್ಲಿನ ಅಕ್ರಮಗಳ ಕುರಿತಂತೆ ತನಿಖೆ ನಡೆಸಲು ಕಳೆದ ಐದು ವರ್ಷಗಳಲ್ಲಿ ಸಿಐಡಿ ವಹಿಸಿರುವ ಪ್ರಕರಣಗಳೆಷ್ಟು, ಅವುಗಳಲ್ಲಿ ಸತ್ಯಾಂಶ ಹೊರ ಬಂದಿರುವ ಪ್ರಕರಣಗಳ ಸಂಪೂರ್ಣ ವಿವರವನ್ನು ಸಲ್ಲಿಸಬೇಕು ಎಂದು ಹೈಕೊರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ (ಆರ್ಡಿಪಿಆರ್) ಕುಡಿಯುವ ನೀರು ಪೂರೈಕೆ ವಿಭಾಗದಲ್ಲಿ ಖಾಲಿಯಿದ್ದ ಸಹಾಯಕ ಕಾರ್ಯಕಾರಿ ಇಂಜಿನಿಯರ್ಗಳ (ಎಇಇ) ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ವಹಿಸಲು ರಾಜ್ಯ ಸರ್ಕಾರ ಆಕ್ಷೇಪಿಸಿರುವ ಹಿನ್ನೆಲೆ, ನ್ಯಾಯಪೀಠ ಈ ಸೂಚನೆ ನೀಡಿದೆ.
ಆರ್ಡಿಪಿಆರ್ ಎಇಇ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್ಸಿ ಮಾಡಿರುವ ಶಿಫಾರಸ್ಸಿಗೆ ತಡೆ ನೀಡಬೇಕು ಎಂಬ ಮನವಿಯನ್ನು ನಿರಾಕರಿಸಿರುವ ರಾಜ್ಯ ಆಡಳಿತಾತ್ಮಕ ನ್ಯಾಯಾಧಿಕರಣ ನೀಡಿರುವ ಆದೇಶ ಪ್ರಶ್ನಿಸಿ, ಇಂಜಿನಿಯರ್ಗಳಾದ ವಿಶ್ವಾಸ್ ಮತ್ತಿತರರು ಸಲ್ಲಿಸಿರುವ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್ ಅವರಿದ್ದ ಪೀಠ ಈ ಸೂಚನೆ ನೀಡಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಮಾಡಿರುವ ನಿರ್ಧಾರ ಸರಿಯೋ? ತಪ್ಪೋ? ಎಂಬುದರ ಕುರಿತು ಸಾಂಪ್ರದಾಯಿಕ ನ್ಯಾಯಾಂಗ ಪರಿಶೀಲನೆ ನಡೆಸಬಹುದಾಗಿದೆ. ಓಎಂಆರ್ ಶೀಟುಗಳನ್ನು ತಿರುಚಲಾಗಿದೆ. ಇದನ್ನು ಎಲ್ಲಿ ನಡೆಸಲಾಗಿದೆ? ಇದು ಕೆಪಿಎಸ್ಸಿ ಒಳಗೆ ನಡೆದಿದೆಯೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಆಯೋಗವು 2024ರ ಫೆಬ್ರವರಿ 1 ಎಂದು ನಿರ್ಣಯ ಕಳುಹಿಸಿದ್ದರೂ ನೇಮಕಾತಿ ಆದೇಶ ನೀಡಬೇಕಿತ್ತೇ ಅಥವಾ ನೀಡಬಾರದಿತ್ತೇ? ಅಲ್ಲದೇ, ನೇಮಕಾತಿ ಆದೇಶವು ಬಾಕಿ ಇರುವ ತನಿಖೆಗೆ ಒಳಪಟ್ಟಿರುತ್ತದೆ ಎಂಬ ವಿಚಾರವನ್ನು ನ್ಯಾಯಾಲಯ ನಿರ್ಧರಿಸಬೇಕು. ಆಯೋಗದ ನಿರ್ಣಯದ ಪ್ರಕಾರ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದೆ.
10 ಮಂದಿ ಅರ್ಜಿದಾರರನ್ನು ನೇಮಕಾತಿ ಪರಿಗಣಿಸಬಾರದು ಎಂದು ಆಯೋಗದ ನಿರ್ಣಯದಲ್ಲಿ ಹೇಳಲಾಗಿತ್ತು. ಅದಾಗ್ಯೂ, ಅವರಿಗೆ ನೇಮಕಾತಿ ಪತ್ರ ಏಕೆ ನೀಡಲಾಗಿದೆ ಎಂಬುದಕ್ಕೆ ಸರ್ಕಾರದ ಪರವಾಗಿ ವಿವರಣೆ ನೀಡಲಾಗುವುದು ಎಂದು ಪೀಠಕ್ಕೆ ತಿಳಿಸಿದರು.
ನೇಮಕಾತಿಯು ವಿಳಂಬವಾಗಬಾರದು. ಒಂದೊಮ್ಮೆ, ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ಅವರನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ. 150ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದುದರಿಂದ ನೇಮಕ ಮಾಡಲಾಗಿದೆ. ಎಇಇಗಳಿಗೆ ತರಬೇತಿ ನೀಡಲಾಗಿದೆ. ಆದರೆ, ವೇತನ ಪಾವತಿಸಲಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಕೆಪಿಎಸ್ಸಿ ಪರ ವಕೀಲರು, ಪ್ರಕರಣವನ್ನು ಸಿಬಿಐಗೆ ನೀಡುವ ಕುರಿತಾದ ನ್ಯಾಯಾಲಯದ ಪ್ರಸ್ತಾಪದ ಕುರಿತು ಆಯೋಗವು ತನ್ನ ಆಕ್ಷೇಪಣೆಯಲ್ಲಿ ಎಲ್ಲಿಯೂ ಹೇಳಿಲ್ಲ. ರಾಜ್ಯ ಸರ್ಕಾರವು ಪ್ರಕರಣವನ್ನು ಸಿಐಡಿಗೆ ಕೊಡುವುದಕ್ಕೆ ನಿರ್ಧರಿಸಿರುವುದಕ್ಕೆ ಆಯೋಗವು ಸಹಮತ ವ್ಯಕ್ತಪಡಿಸಿದೆ. ಹೀಗಾಗಿ ಸಿಬಿಐಗೆ ನೀಡುವ ಅಗತ್ಯವಿಲ್ಲ ಎಂದರು.
ಅದಕ್ಕೆ ಪೀಠ, ನೇಮಕಾತಿಯಲ್ಲಿ ಅವ್ಯವಹಾರ ನಡೆಸಲಾಗಿದೆ. ಆಯೋಗದ ಕಾರ್ಯದರ್ಶಿಯು ನೇಮಕ ಮಾಡದಂತೆ ಆರ್ಡಿಪಿಆರ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರೂ, ನೇಮಕಾತಿ ಆದೇಶ ನೀಡಲಾಗಿದೆ. ಇಲ್ಲಿ ಮುಖ್ಯ ಕಾರ್ಯದರ್ಶಿ ಭಾಗಿಯಾಗಿದ್ದಾರೆ. ಹೀಗಿರುವಾಗ ಯಾವುದೇ ಪೊಲೀಸ್ ಅಧಿಕಾರಿ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ತನಿಖೆ ಒಳಪಡಿಸಲಾಗುತ್ತದೆಯೇ? ಎಂದು ಪ್ರಶ್ನಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ : ಬಿಎಸ್ಎಫ್ ದತ್ತಾಂಶ ಕದ್ದ ಪ್ರಕರಣ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹೈಕೋರ್ಟ್ - HIGH COURT