ಹುಬ್ಬಳ್ಳಿ : ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಕ್ಷಿದಾರರ ವಿಚಾರಣೆ (ಟ್ರಯಲ್)ಗೆ ದಿನಾಂಕ ನಿಗದಿಪಡಿಸಲು (ಎಫ್ಡಿಟಿ) ಇಂದು ಮುದ್ದತ್ತು ಇದೆ. ಇಂದಿನಿಂದ ಯಾವ ದಿನಾಂಕದಂದು ವಿಚಾರಣೆ ನಡೆಸಬೇಕು ಎಂಬುದು ನಿರ್ಧಾರವಾಗಲಿದೆ.
ವಿದ್ಯಾರ್ಥಿನಿ ನೇಹಾ ಕೊಲೆಯಾಗಿ ಒಂದು ವರ್ಷಗಳ ಬಳಿಕ ಕೋರ್ಟ್ನಲ್ಲಿ ಟ್ರಯಲ್ಗೆ ದಿನ ನಿಗದಿಯಾಗಲಿದೆ. ಈ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಮಹೇಶ ವೈದ್ಯ ಅವರನ್ನು ನೇಮಿಸಿದ್ದು, ನೇಹಾ ಹಿರೇಮಠ ಪರವಾಗಿ ವಾದ ಮಂಡನೆ ಮಾಡಲಿದ್ದಾರೆ.
ಕೊಲೆ ಆಪಾದಿತ ಫಯಾಜ್ ಪರವಾಗಿ ಹುಬ್ಬಳ್ಳಿಯ ಯಾವುದೇ ವಕೀಲರು ಕೇಸ್ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಓರ್ವ ವಕೀಲರನ್ನು ನೇಮಕ ಮಾಡಲಾಗಿತ್ತು. ಈಗ ಆಪಾದಿತ ಫಯಾಜ್ ಖಾಸಗಿ ವಕೀಲರನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದರಿಂದ ಇಂದು ಆತನ ಪರ ಬೇರೆ ವಕೀಲರು ನೇಮಕವಾಗಲಿದ್ದಾರೆ.
ಮನವಿ ತಿರಸ್ಕಾರ : ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಆಪಾದಿತನಾದ ಫಯಾಜ್ನ ಪರ ವಕೀಲರು ಈ ಪ್ರಕರಣವನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಧಾರವಾಡ ಹೈಕೋರ್ಟ್ನಲ್ಲಿ ಮನವಿ ಮಾಡಿದ್ದರು. ಸೋಮವಾರ ನ್ಯಾಯಾಲಯ ಅದನ್ನು ತಿರಸ್ಕರಿಸಿ, ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೇ ಆರಂಭಿಸುವಂತೆ ನಿರ್ದೇಶಿಸಿದೆ.
ಬೆಳಗಾವಿ ಜಿಲ್ಲಾ ನ್ಯಾಯಾಲಯಕ್ಕೆ ಹತ್ಯೆ ಪ್ರಕರಣದ ವಿಚಾರಣೆಯನ್ನು ವರ್ಗಾವಣೆ ಮಾಡಬೇಕೆಂದು ಆಪಾದಿತನ ಪರ ವಕೀಲ ಝಡ್. ಆರ್. ಮುಲ್ಲಾ ವಾದ ಮಂಡಿಸಿದ್ದರು. ಆದರೆ, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 99ಕ್ಕೂ ಹೆಚ್ಚು ಸಾಕ್ಷಿದಾರರು ಸ್ಥಳೀಯರಾಗಿದ್ದಾರೆ. ಅವರಿಗೆಲ್ಲ ಹುಬ್ಬಳ್ಳಿಯಿಂದ ಬೆಳಗಾವಿಗೆ ಹೋಗಿ ಬರಲು ತೊಂದರೆ ಆಗುತ್ತದೆ. ಬೇಗ ನ್ಯಾಯ ನಿರ್ವಹಣೆಗೆ ತೊಂದರೆ ಆಗುತ್ತದೆ. ಸ್ಥಳೀಯವಾಗಿಯೇ ವಿಚಾರಣೆ ಆರಂಭಿಸಬೇಕೆಂದು ನೇಹಾ ಕುಟುಂಬಸ್ಥರ ಪರವಾಗಿ ಎಂ. ಬಿ. ಹಿರೇಮಠ ಪ್ರತಿವಾದ ಮಾಡಿದ್ದರು.
ವಾದ - ಪ್ರತಿವಾದ ಆಲಿಸಿದ ನ್ಯಾಯಾಧೀಶ ಪಂಡಿತ್ ವೇದವ್ಯಾಸ ಅವರು ಪ್ರಕರಣದ ವಿಚಾರಣೆಯನ್ನು ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿಯೇ ಆರಂಭಿಸುವಂತೆ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ : ಹುಬ್ಬಳ್ಳಿ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯ ಮೃತದೇಹ ಸಮಾಧಿ ಮಾಡಲು ಹೈಕೋರ್ಟ್ ಅನುಮತಿ - HUBBALLI ENCOUNTER CASE