ಹಾವೇರಿ: ಚಿಕಿತ್ಸೆಗೆ ಬಂದ ಬಾಲಕಿ ಮೃತಪಟ್ಟಿರುವ ಘಟನೆ ಹಾವೇರಿಯ ಚಿರಾಯು ಆಸ್ಪತ್ರೆಯಲ್ಲಿ ನಡೆದಿದೆ. ವಂದನಾ ಶಿವಪ್ಪ ತುಪ್ಪದ (17) ಮೃತಪಟ್ಟ ಬಾಲಕಿ. ವೈದ್ಯರು ನೀಡಿದ ಚುಚ್ಚುಮದ್ದಿನ ಅಡ್ಡ ಪರಿಣಾಮವೇ ಸಾವಿಗೆ ಕಾರಣ ಎಂದು ಆರೋಪಿಸಿ, ಇಂದು ಆಸ್ಪತ್ರೆಯ ಒಳಗೇ ಬಾಲಕಿಯ ಮೃತದೇಹವಿಟ್ಟು ಪೋಷಕರು ಮತ್ತು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಬ್ಯಾಡಗಿ ತಾಲೂಕು ಹೆಡ್ಡಿಗೊಂಡ ಗ್ರಾಮದ ನಿವಾಸಿಯಾದ ವಂದನಾ ಕೈಯಲ್ಲಿ ಚಿಕ್ಕ ಗುಳ್ಳೆಗಳಿದ್ದವು. ಅದನ್ನು ತೋರಿಸಲು ಬಂದಾಗ ವೈದ್ಯರು ಚುಚ್ಚುಮದ್ದು ನೀಡಿದ್ದಾರೆ. ಚುಚ್ಚುಮದ್ದು ನೀಡಿದ ಕೆಲವೇ ನಿಮೀಷಗಳಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಟಿಹೆಚ್ಒ ಡಾ.ಪ್ರಭಾಕರ್ ಕುಂದೂರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾವೇರಿ ಎಸ್ಪಿ ಅಂಶುಕುಮಾರ್, ಎಎಸ್ಪಿ ಲಕ್ಷ್ಮಣ ಶಿರಕೋಳ್, ಹಾವೇರಿ ಡಿವೈಎಸ್ಪಿ, ಸಿಪಿಐ ಪಿಎಸ್ಐ ಭೇಟಿ ಪೋಷಕರಿಂದ ಮಾಹಿತಿ ಪಡೆದರು. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಪೋಷಕರು ತಿಳಿಸಿದ್ದಾರೆ.
ಹಾವೇರಿ ಟಿಹೆಚ್ಒ ಡಾ.ಪ್ರಭಾಕರ್ ಕುಂದೂರು ಮಾತನಾಡಿ, "ವೈದ್ಯರು ಬಾಲಕಿಗೆ ಆ್ಯಂಟಿ ಬಯೋಟಿಕ್ ಚುಚ್ಚುಮದ್ದು ಕೊಟ್ಟಿದ್ದಾರೆ. ಅದಾದ ಸ್ಪಲ್ಪ ಸಮಯದ ನಂತರ ಮೃತಪಟ್ಟಿರುವುದಾಗಿ ಪೋಷಕರು ಹೇಳುತ್ತಿದ್ದಾರೆ. ಸಾವಿನ ಕುರಿತು ಸಮಗ್ರ ಮಾಹಿತಿ ಪಡೆದಿದ್ದು, ಆಸ್ಪತ್ರೆಯನ್ನು ಸದ್ಯಕ್ಕೆ ಸೀಜ್ ಮಾಡಲಾಗುತ್ತದೆ. ಸಮಗ್ರ ವರದಿಯ ನಂತರ ಹಿರಿಯ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ" ಎಂದು ಹೇಳಿದರು.
ಇದನ್ನೂ ಓದಿ: ದಕ್ಷಿಣ ಕನ್ನಡ: ರಬ್ಬರ್ ಟ್ಯಾಪಿಂಗ್ಗೆ ಹೋದಾಗ ಕಾಡಾನೆ ದಾಳಿ, ಮಹಿಳೆ ಸಾವು
ಇದನ್ನೂ ಓದಿ: ಬೆಂಗಳೂರು: ಟಿಪ್ಪರ್ ಡಿಕ್ಕಿಯಾಗಿ ಪೌರಕಾರ್ಮಿಕ ಮಹಿಳೆ ಸಾವು