ಬೆಂಗಳೂರು: 23 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಮೊದಲ ಆದ್ಯತೆಯಲ್ಲಿ ಭರ್ತಿ, ಸಾಮಾಜಿಕ, ಆರ್ಥಿಕ ಜಾತಿ ಗಣತಿ ಸಮಯದಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸಲು ನಿಗದಿಪಡಿಸಿದ ಮಾನದಂಡ ಸೇರಿದಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 8ನೇ ವರದಿಯಲ್ಲಿ 189 ಹೊಸ ಶಿಫಾರಸುಗಳನ್ನು ಮಾಡಲಾಗಿದೆ.
ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ವರದಿ ಸಲ್ಲಿಸಿದರು.
ನಂತರ ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ದೇಶಪಾಂಡೆ, ಆಡಳಿತ ಸುಧಾರಣಾ ಆಯೋಗದ 8ನೇ ವರದಿಯಲ್ಲಿ 189 ಹೊಸ ಶಿಫಾರಸುಗಳನ್ನು ಮಾಡಲಾಗಿದೆ. ಹಿಂದಿನ ಏಳು ವರದಿಗಳಲ್ಲಿ ಒಟ್ಟು 5,039 ಶಿಫಾರಸುಗಳನ್ನು ಮಾಡಲಾಗಿದ್ದು, ಒಟ್ಟಾರೆ ಶೇ.30ರಷ್ಟು ಅನುಷ್ಠಾನಗೊಂಡಿದ್ದು, ಶೇ.53ಕ್ಕೂ ಹೆಚ್ಚು ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವತ್ತ ಕ್ರಮ ಜರುಗಿಸಲಾಗುತ್ತಿದೆ. ಇದು ಆಡಳಿತ ಸುಧಾರಣೆಯಲ್ಲಿ ಮಹತ್ತರ ಹೆಜ್ಜೆ ಎಂದು ಹೇಳಿದರು.
ವರದಿಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ, ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ ಒಳಗೊಂಡಿದೆ. ಪಡಿತರ ಚೀಟಿ, ಡೇಟಾ ಬೇಸ್, ಜನನ-ಮರಣ ನೋಂದಣಿ ತಂತ್ರಾಂಶದೊಂದಿಗೆ ನೌಕರರ ಡೇಟಾವನ್ನು ಪ್ರತಿ ವರ್ಷ ಸಂಯೋಜಿಸಬೇಕು ಎಂದು ಅವರು ತಿಳಿಸಿದರು.
ಸಾಮಾಜಿಕ, ಆರ್ಥಿಕ ಜಾತಿ ಗಣತಿ ಸಮಯದಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸಲು ನಿಗದಿಪಡಿಸಿದ ಮಾನದಂಡಗಳನ್ನು ಸರ್ಕಾರ ಸೂಕ್ತ ಮಾರ್ಪಡುಗಳೊಂದಿಗೆ ಬಿಪಿಎಲ್ ಕುಟುಂಬಗಳನ್ನು ಗುರುತಿಸಲು ಪರಿಗಣಿಸಬಹುದು ಎಂಬ ಶಿಫಾರಸು ಮಾಡಲಾಗಿದೆ. ಪ್ರತಿಯೊಂದು ಇಲಾಖೆಯ ಮೇಲಿನ ಕೆಲಸದ ಹೊರೆಯ ಸಮಗ್ರ ವರದಿಯನ್ನು ಅಧ್ಯಯನ ಮಾಡಿ ಸಿಬ್ಬಂದಿಯ ವೃಂದ ಮತ್ತು ನೇಮಕಾತಿಗಳಿಗೆ ಅಗತ್ಯ ತಿದ್ದುಪಡಿಗೆ ಸೂಚಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಶಿಫಾರಸುಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಲು ಸರ್ಕಾರವು ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು. ಉನ್ನತ ಮಟ್ಟದ ಮೇಲಿಚಾರಣಾ ಸಮಿತಿ ರಚನೆ, ಡಿಜಿಟಿಲ್ ಟ್ರ್ಯಾಕಿಂಗ್ ಕಾರ್ಯವಿಧಾನ ಅಳವಡಿಕೆ, ಇಲಾಖೆಗಳೊಂದಿಗೆ ಸಮನ್ವಯ ಬಲಪಡಿಸುವುದು, ಅನುಷ್ಠಾನಗೊಂಡ ಶಿಫಾರಸುಗಳ ಪರಿಣಾಮವನ್ನು ಸಮೀಕ್ಷೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವುದು ವರದಿಯ ಪ್ರಮುಖ ಶಿಫಾರಸುಗಳು ಎಂದು ಅವರು ತಿಳಿಸಿದರು.
ವಿಧಾನಸೌಧ, ವಿಕಾಸೌಧ ಬಹುಮಹಡಿ ಕಟ್ಟಡದ ಬಳಿ ಸರ್ಕಾರಿ ಕೇಂದ್ರ ಲೇಖನ ಸಾಮಗ್ರಿ ಮಳಿಗೆಗಳನ್ನು ಸ್ಥಾಪಿಸಲು ಶಿಫಾರಸು ಮಾಡಲಾಗಿದೆ. ಬಹು ಆದಾಯ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಬೇಕು. ಕೆಪಿಎಸ್ಸಿ ಶಾಖಾ ಕಚೇರಿಯನ್ನು ಧಾರವಾಡದಲ್ಲಿ ತೆರೆಯಲು ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಹಿಂದಿನ 15 ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದೆ. 201 ಶಿಫಾರಸುಗಳನ್ನು ಭಾಗಶ: ಜಾರಿಗೆ ತರಲಾಗಿದೆ. ಸುಮಾರು 957 ಶಿಫಾರಸುಗಳು ಅನುಷ್ಠಾನದ ಹಂತದಲ್ಲಿವೆ ಎಂದು ದೇಶಪಾಂಡೆ ಮಾಹಿತಿ ನೀಡಿದರು.
ಇದನ್ನೂ ಓದಿ: ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ಕುರಿತ ಚರ್ಚೆ ಅಪೂರ್ಣವಾಗಿದೆ: ಹೆಚ್.ಕೆ.ಪಾಟೀಲ್ - MINISTER H K PATIL