ವರದಿ: ವಿನೋದ್ ಪುದು
ಮಂಗಳೂರು: ಮನುಷ್ಯರಿಗೆ ಕನಸುಗಳು ಬೀಳುವುದು ಸಾಮಾನ್ಯ. ಆದರೆ ಆ ಕನಸುಗಳು ನನಸಾಗುವುದು ಕಡಿಮೆ. ಆದರೆ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ದಕ್ಷಿಣ ಕನ್ನಡದ ಕುಗ್ರಾಮವೊಂದರಲ್ಲಿ ಶ್ರೀಕೃಷ್ಣನ ಮೂರ್ತಿ ಇದೆ ಎಂದು ಬಿದ್ದ ಕನಸನ್ನು ಪರೀಕ್ಷಿಸಲೊರಟಾಗ ಅಚ್ಚರಿಯೆಂಬಂತೆ ಅದೇ ಸ್ಥಳದಲ್ಲಿ ಗೋಪಾಲನ ಭಗ್ನ ಮೂರ್ತಿ ಸಿಕ್ಕಿದ್ದು, ಇದೀಗ ಇದೇ ಸ್ಥಳದಲ್ಲಿ ಭವ್ಯ ದೇಗುಲ ನಿರ್ಮಾಣವಾಗಿದೆ.
ಹೌದು, ಬೆಳ್ತಂಗಡಿ ತಾಲೂಕಿನ ತೆಕ್ಕಾರುವಿನಲ್ಲಿ ಅಪರೂಪದ ಘಟನೆ ನಡೆದಿದೆ. ದೇವರಗುಡ್ಡೆ ಎಂದು ಕರೆಯಲ್ಪಡುವ ಈ ಊರಿನಲ್ಲಿ ಶತಮಾನದಿಂದ ಯಾವುದೇ ದೇವಸ್ಥಾನ ಇಲ್ಲ. ಆದರೆ ಈ ಊರಿನಲ್ಲಿ ಗೋಪಾಲಕೃಷ್ಣನ ಸಾನಿಧ್ಯವಿದೆ ಎಂಬುದು ಊರಿನವರು ಪ್ರಶ್ನಾ ಚಿಂತನೆಗಳನ್ನು ಇಡುವಾಗ ತಿಳಿದುಬರುತ್ತಿತ್ತು. ಆದರೆ ದೇವಸ್ಥಾನದ ಮಾಹಿತಿ ಇರಲಿಲ್ಲ. ಕೆಲವೊಂದು ಹಿರಿಯರಿಗೆ ಈ ಜಾಗದಲ್ಲಿ ದೇವಸ್ಥಾನ ಹಿಂದೆ ಇತ್ತು ಎಂಬ ಮಾಹಿತಿ ಇದ್ದರೂ ಅವರು ದೇವಸ್ಥಾನವನ್ನು ಕಂಡಿರಲಿಲ್ಲ.
ಬೆಂಗಳೂರಿನ ಲಕ್ಷ್ಮಣ್ ಅವರಿಗೆ ಕಂಡ ಕನಸು: ಬೆಂಗಳೂರಿನ ಉದ್ಯಮಿ ಲಕ್ಷ್ಮಣ್ ಅವರು 2010 ರಲ್ಲಿ ತೆಕ್ಕಾರು ದೇವರಗುಡ್ಡೆ ಬಳಿ 15 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದರು. ಲಕ್ಷ್ಮಣ್ ಅವರು ಹೇಳುವ ಪ್ರಕಾರ ಜಾಗವನ್ನು ನೋಂದಾವಣೆ ಮಾಡಿದ ದಿನದಂದು ರಾತ್ರಿ ಒಂದು ವಯಸ್ಸಾದ ವ್ಯಕ್ತಿಯೊಬ್ಬರು ಅಲ್ಲಿದ್ದ ಮನೆಗೆ ಮೂರು ಸುತ್ತು ಹೊಡೆದು ಹೋಗಿದ್ದರು. ಅದನ್ನು ಊರಿನವರಿಗೆ ತಿಳಿಸಿದಾಗ ಈ ಜಾಗದ ಸಮೀಪದಲ್ಲಿ ದೇವರ ಸಾನಿಧ್ಯ ಇತ್ತು ಎಂಬುದು ತಿಳಿದುಬಂದಿದ್ದು, ಆ ಸಂದರ್ಭದಲ್ಲಿ ಅವರು ದೇವಾಲಯ ಕಟ್ಟುವ ಬಯಕೆಯನ್ನು ಹೊಂದಿದ್ದರು.
ಇದನ್ನು ಪ್ರಶ್ನಾ ಚಿಂತನೆ ಮಾಡಿದಾಗ ಅನ್ಯಮತೀಯ ಸಮುದಾಯದ ಒಡೆತನದಲ್ಲಿರುವ ಜಾಗದಲ್ಲಿ ಶ್ರೀಕೃಷ್ಣನ ದೇವಸ್ಥಾನ ಮೊದಲು ಇದ್ದು, ಇದೀಗ ಅದು ಭಗ್ನಾವಶೇಷವಾಗಿದೆ ಎಂದು ತಿಳಿದುಬಂದಿತ್ತು. ಸದ್ಯಕ್ಕೆ ಅದರ ಬಗ್ಗೆ ಕೆದಕಲು ಹೋಗದೆ ಸಮಯ ಬಂದಾಗ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ತಿಳಿದು ಬಂದಿತ್ತು. ಅದಾಗಿ ಹಲವು ವರ್ಷಗಳು ಸಂದಿದ್ದು, ಕಳೆದ ಎರಡು ವರ್ಷಗಳ ಹಿಂದೆ ಲಕ್ಷ್ಮಣ್ ಅವರಿಗೆ ತಮ್ಮ ಜಾಗದ ಪಕ್ಕದಲ್ಲಿ ತಮ್ಮ ಗೆಳೆಯನಿಗೆ ಕೆರೆಯಲ್ಲಿ ಶ್ರೀಮನ್ನಾರಾಯಣನ ಮೂರ್ತಿ ಸಿಗುವಂತೆ ಕನಸು ಬಿದ್ದಿದೆ.
ಇದೇ ಸಂದರ್ಭದಲ್ಲಿ ಈ ಜಾಗದಲ್ಲಿ ಇದ್ದ ಬಾವಿಯನ್ನು ಮುಚ್ಚಲಾಗುತ್ತಿತ್ತು. ಈ ಸಂದರ್ಭದಲ್ಲಿ ಲಕ್ಷ್ಮಣ್ ಅವರು ಊರಿನವರೊಂದಿಗೆ ಸೇರಿ ಆ ಮುಸ್ಲಿಂ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ದೇವಾಲಯಕ್ಕಾಗಿ ಭೂಮಿಯನ್ನು ಪಡೆದುಕೊಂಡರು. ಮುಸ್ಲಿಂ ಕುಟುಂಬ ಈ ಜಾಗವನ್ನು ದೇವಸ್ಥಾನ ನಿರ್ಮಾಣಕ್ಕೆಂದು ಸೌಹಾರ್ದಯುತವಾಗಿ ಬಿಟ್ಟುಕೊಟ್ಟಿದ್ದಾರೆ. ಅದೇ ರೀತಿ ದೇವಸ್ಥಾನದ ಬಳಿಯಿದ್ದ ಜಾಗವನ್ನು ದೇವಸ್ಥಾನಕ್ಕಾಗಿ ಮಾರಾಟ ಮಾಡಿದ್ದಾರೆ. ಬಾವಿಯಲ್ಲಿ ಹುಡುಕುವಾಗ ಶ್ರೀಕೃಷ್ಣನ ಭಗ್ನ ಮೂರ್ತಿ ಸಿಕ್ಕಿದ್ದು, ಇದಕ್ಕೆ ಇದೇ ಸ್ಥಳದಲ್ಲಿ ಬಾಲಾಲಯ ಮಾಡಿ ಪೂಜೆ ಮಾಡಲಾಗುತ್ತಿದೆ. ಇದರ ಬಳಿಕ ದೇವಸ್ಥಾನ ನಿರ್ಮಿಸಲು ಊರವರು ನಿರ್ಧರಿಸಿದ್ದು, ಲಕ್ಷ್ಮಣ್ ಅವರ ನೇತೃತ್ವದಲ್ಲಿಯೆ ಈ ಊರಿನಲ್ಲಿ ಶ್ರೀಕೃಷ್ಣ ದೇವಾಲಯ ನಿರ್ಮಾಣವಾಗಿದೆ.

ಉತ್ಖನನ ವೇಳೆ ಸಿಕ್ಕ 700 ವರ್ಷಗಳ ಹಳೆಯ ಮೂರ್ತಿ: ಲಕ್ಷ್ಮಣ್ ಅವರಿಗೆ ಕನಸಿನಲ್ಲಿ ಬಂದಂತೆ ಇಲ್ಲಿದ್ದ ಬಾವಿಯಲ್ಲಿ ಉತ್ಖನನ ಮಾಡಿದಾಗ ಶ್ರೀಕೃಷ್ಣನ ಮೂರ್ತಿ ಸಿಕ್ಕಿದೆ. ಈ ಮೂರ್ತಿ 700 ವರ್ಷಗಳಿಗೂ ಹಳೆಯದೆಂದು ಹೇಳಲಾಗಿದೆ. ದೇವಸ್ಥಾನದಲ್ಲಿದ್ದ ಶ್ರೀಕೃಷ್ಣ ವಿಗ್ರಹಕ್ಕೆ 300 ವರ್ಷಗಳ ಹಿಂದಿನವರೆಗೆ ಪೂಜೆಗಳು ನಡೆಯುತ್ತಿತ್ತು ಎಂಬುದು ಪ್ರಶ್ನೆಯಿಂದ ತಿಳಿದುಬಂದಿತ್ತು. ಉತ್ಖನನ ವೇಳೆ ಸಿಕ್ಕಿದ ಮೂರ್ತಿಯ ಕಳೆಭಾಗದ ಅರ್ಧ ತುಂಡಾಗಿ ಹೋಗಿದೆ. ಶ್ರೀಕೃಷ್ಣನ ಸಣ್ಣ ಮೂರ್ತಿ ಇದಾಗಿದ್ದು, ಇದರಲ್ಲಿ ಶ್ರೀಕೃಷ್ಣ ಮರದಡಿ ಕೊಳಲು ಊದುವ ಭಂಗಿ ಇದ್ದು, ಬಲ ಬದಿ, ಎಡ ಬದಿಯಲ್ಲಿ ಗೋಪಿಕಾ ಸ್ತ್ರೀಯರು ಇದ್ದಾರೆ. ದೇವರ ಮತ್ತು ಪಾಣಿಪೀಠದ ಭಾಗ, ಸೋಮಸೂತ್ರದ ಕಲ್ಲುಗಳು ಮತ್ತು ಗರ್ಭಗುಡಿ ದಾರಂದದ ಅಡಿಪಡಿ ಇನ್ನಿತರ ವಸ್ತುಗಳು ದೊರಕಿದ್ದವು. ಈ ಭಗ್ನ ಮೂರ್ತಿ ಶತಮಾನಗಳ ಹಿಂದೆ ಇಲ್ಲಿ ದೇವರ ಪೂಜೆ ನಡೆಯುತ್ತಿದ್ದುದಕ್ಕೆ ಸಾಕ್ಷಿಯಾಗಿದೆ.

ಒಂದು ವರ್ಷದಲ್ಲಿ ದೇಗುಲ ಪೂರ್ಣ: 2011ರಲ್ಲಿ ಲಕ್ಷ್ಮಣ್ ಅವರಿಗೆ ಇಲ್ಲಿ ಜಾಗ ಖರೀದಿಸಿದ ಬಳಿಕ ದೇಗುಲ ಇರುವಿಕೆಯ ಕುರುಹುಗಳು ಗೊತ್ತಾದರೂ 2024 ಏಪ್ರಿಲ್ 22 ರಲ್ಲಿ ದೇಗುಲ ನಿರ್ಮಾಣದ ಕಾರ್ಯ ಆರಂಭವಾಯಿತು. ಇದೀಗ ದೇಗುಲ ಕಾರ್ಯ ಪೂರ್ಣವಾಗಿದ್ದು, ಬ್ರಹ್ಮಕಲಶದ ಧಾರ್ಮಿಕ ವಿಧಿವಿದಾನಗಳು ಆರಂಭವಾಗಿವೆ. ಒಂದು ವರ್ಷದಲ್ಲಿ ಊರಿನವರ ಸಹಕಾರದೊಂದಿಗೆ ಈ ದೇವಾಲಯ ನಿರ್ಮಾಣ ಮಾಡಲಾಗಿದೆ.

ಊರ ಮಹಿಳೆಯರ ದೇಣಿಗೆಯಲ್ಲಿ ಕೃಷ್ಣನ ಮೂರ್ತಿ: ತೆಕ್ಕಾರು ಶ್ರೀಗೋಪಾಲಕೃಷ್ಣನ ದೇವಸ್ಥಾನಕ್ಕಾಗಿ 5.5 ಅಡಿ ಎತ್ತರದ ಶ್ರೀಕೃಷ್ಣ ಹೊಸ ಮೂರ್ತಿ ನಿರ್ಮಾಣ ಮಾಡಲಾಗಿದೆ. ಈ ಶ್ರೀಕೃಷ್ಣನ ವಿಗ್ರಹಕ್ಕೆ 3.5 ಲಕ್ಷ ರೂ ವೆಚ್ಚ ತಗುಲಿದೆ. ಈ ಊರಿನ ಮಹಿಳೆಯರು ಕಳೆದ ಒಂದು ವರ್ಷದಲ್ಲಿ ತಿಂಗಳಿಗೆ 100 ರೂಗಳಿಂದ 1000 ರೂ ವರೆಗೆ ದೇಣಿಗೆ ನೀಡಿ 4 ಲಕ್ಷ ರೂ ಸಂಗ್ರಹಿಸಿದ್ದು, ಈ ಹಣದಲ್ಲಿ ಶ್ರೀಕೃಷ್ಣನ ವಿಗ್ರಹ ನಿರ್ಮಿಸಲಾಗಿದೆ. ಇಷ್ಟು ಎತ್ತರದ ದೇವರ ವಿಗ್ರಹ ಗರ್ಭಗುಡಿಯಲ್ಲಿರುವುದು ಅಪರೂಪ. ಹೊಯ್ಸಳ ಶೈಲಿಯಲ್ಲಿ ಗೋಪಾಲಕೃಷ್ಣನ ವಿಗ್ರಹವನ್ನು ಕಾರ್ಕಳದಲ್ಲಿ ಕೆತ್ತನೆ ಮಾಡಿ ತರಲಾಗಿದೆ.

ಈ ಬಗ್ಗೆ ಮಾತನಾಡಿದ ಲಕ್ಷ್ಮಣ್ ಅವರು, ನಾನು ಜಾಗ ತೆಗೆದುಕೊಂಡು ಹನ್ನೆರಡು ವರ್ಷ ಆದ ಮೇಲೆ ಬಾವಿಯಲ್ಲಿ ದೇವರು ಇರುವ , ಮಹಾವಿಷ್ಣು ಮಲಗಿರುವ ಕನಸು ಕಂಡಿತ್ತು. ಬೆಳಿಗ್ಗೆ ಇದನ್ನು ಊರಿನವರಲ್ಲಿ ತಿಳಿಸಿದಾಗ ದೇವಸ್ಥಾನ ನಿರ್ಮಾಣ ಮಾಡುವ ಸಂಕಲ್ಪ ತೆಗೆದುಕೊಂಡೆವು. ಜಾಗದಲ್ಲಿದ್ದ ಸಮಸ್ಯೆ ಪರಿಹರಿಸಿ ಖರೀದಿಸಿ ಮಾಡಿದ್ದೆವು. ಪ್ರಶ್ನಾಚಿಂತನೆ ಮಾಡಿದಾಗ ಬಾವಿಯಲ್ಲಿ ಭಗ್ನ ಮೂರ್ತಿ ಇದೆ ಎಂದು ತಿಳಿದುಬಂತು. ಆ ಬಳಿಕ ಉತ್ಖನನ ಮಾಡಿದಾಗ ಭಗ್ನ ಮೂರ್ತಿ ಸಿಕ್ಕಿತು. ಅದು ಗೋಪಾಲಕೃಷ್ಣ ಎಂದು ಸ್ಪಷ್ಟವಾದ ಮೇಲೆ ದೇವಸ್ಥಾನ ಕಟ್ಟಲು ತೊಡಗಿದೆವು. 2024 ಫೆಬ್ರವರಿ 22ಕ್ಕೆ ಶಿಲಾನ್ಯಾಸ ಮಾಡಿದೆವು. ಒಂದು ವರ್ಷದಲ್ಲಿ ಈ ದೇವಸ್ಥಾನ ಪೂರ್ಣ ಮಾಡಿದ್ದೇವೆ. ಕನಸಿನಲ್ಲಿ ದೇವರು ಬಂದದ್ದು, ನನಸಾಗಿದೆ ಎಂಬುದು ಖುಷಿಯಾಗಿದೆ ಎಂದರು.
ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸಮಿತಿಯ ಕೋಶಾಧಿಕಾರಿ ಅಣ್ಣು ಪೂಜಾರಿ ಬಾಗ್ಲೋಡಿ ಅವರು ಮುಸ್ಲಿಮರ ಹೆಸರಿನಲ್ಲಿದ್ದ ಜಾಗದಲ್ಲಿ ಈ ದೇವಸ್ಥಾನದ ಭೂಮಿ ಇದ್ದು, ಇದನ್ನು ಅವರಿಂದ ಖರೀದಿಸಲಾಗಿದೆ. ಭಗ್ನ ಮೂರ್ತಿ ಸಿಕ್ಕಿದ ಮೇಲೆ ಇಲ್ಲಿನ ಜನರು ನಮ್ಮ ಊರಿಗೂ ದೇವರು ಇದ್ದಾರೆ ಎಂದು ಭಾವುಕರಾದರು. ವಿಗ್ರಹದಲ್ಲಿ ಬೇಲೂರು ಹಳೆಬೀಡು ಶಿಲ್ಪಕಲೆ ಇದೆ. ಮಹಿಳೆಯರು 100 ರೂ. ನಿಂದ 1000 ರೂ. ವರೆಗೆ ಪ್ರತಿ ತಿಂಗಳು ದೇಣಿಗೆ ನೀಡಿ ಇದೀಗ ನಾಲ್ಕು ಲಕ್ಷ ರೂ. ಸಂಗ್ರಹಿಸಿದ್ದಾರೆ. ಇದರಲ್ಲಿ ಶ್ರೀಕೃಷ್ಣನ ವಿಗ್ರಹ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಗೋಪಾಲಕೃಷ್ಣ ದೇವಸ್ಥಾನ, ಭಟ್ರಬೈಲು ದೇವರಗುಡ್ಡೆ ಸೇವಾ ಟ್ರಸ್ಟ್ನ ಉಪಾಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಮಾತನಾಡಿ, ಸುಮಾರು 900 ವರ್ಷಗಳ ಹಿಂದಿನ ಇತಿಹಾಸವಿರುವ ಗೋಪಾಲಕೃಷ್ಣ ದೇವಸ್ಥಾನ ಕಾಲಗರ್ಭದಲ್ಲಿ ಹುದುಗಿ ಹೋಗಿತ್ತು. ನಾನು ಶಾಲೆಗೆ ಹೋಗುತ್ತಿದ್ದಾಗ ದೇವಸ್ಥಾನ ಪಾಳು ಬಿದ್ದಿದ್ದು ನೋಡಿದ್ದೆವು. 2011 ರಲ್ಲಿ ಲಕ್ಷ್ಮಣ್ ಅವರು ಇಲ್ಲಿ ಜಾಗ ಖರೀದಿಸಿದ್ದರು. ಅವರಿಗೆ ಕನಸು ಬಿದ್ದ ಬಳಿಕ ಈ ದೇವಸ್ಥಾನದ ಕಾರ್ಯ ಆರಂಭಿಸಿದೆವು. ಲಕ್ಷ್ಮಣ್ ಅವರಿಗೆ ದೇವರ ಗೋಚರ ಬೇರೆ ಬೇರೆ ರೀತಿಯಲ್ಲಿ ಆಯಿತು. ಇಲ್ಲಿದ್ದ ಬಾವಿಯಲ್ಲಿ ಹುಡುಕಾಡಿದಾಗ ಈ ಭಗ್ನಮೂರ್ತಿ ಸಿಕ್ಕಿದೆ. ಈ ಮೂರ್ತಿ ಸಿಕ್ಕಿದ್ದು ಅವಿಸ್ಮರಣೀಯ ಘಟನೆ. ಏಪ್ರಿಲ್ 22 ಕ್ಕೆ ಇಲ್ಲಿ ಶಂಕುಸ್ಥಾಪನೆ ಮಾಡಿದ್ದೆವು. ಒಂದು ವರ್ಷದಲ್ಲಿ ದೇವಾಲಯ ನಿರ್ಮಾಣವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಶ್ರೀ ಕ್ಷೇತ್ರ ಕಟೀಲಿನಲ್ಲಿ 'ತೂಟೆದಾರ' ಸೇವೆ: ಎರಡು ಗ್ರಾಮಗಳ ನಡುವೆ ರೋಮಾಂಚಕ ಅಗ್ನಿಯಾಟ!
ಇದನ್ನೂ ಓದಿ: ಆಳ ಸಮುದ್ರದಲ್ಲೂ ಸಿಗದ ಮೀನು!; ಎರಡು ದಶಕಗಳ ಬಳಿಕ ಮೊದಲ ಬಾರಿಗೆ ಮತ್ಸ್ಯಕ್ಷಾಮದ ಕಹಿ ಅನುಭವದಲ್ಲಿ ಕಡಲಮಕ್ಕಳು