ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಮೃತಪಟ್ಟ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರ್ಸಿಬಿ, ಕೆಎಸ್ಸಿಎ ಹಾಗೂ ಭದ್ರತೆ ಹೊಣೆ ಹೊತ್ತಿದ್ದ ಡಿಎನ್ಎ ವಿರುದ್ಧ ಪ್ರಕರಣ ದಾಖಲಾಗಿದೆ.
ಕಬ್ಬನ್ ಪಾರ್ಕ್ ಠಾಣೆ ಇನ್ಸ್ಪೆಕ್ಟರ್ ಗಿರೀಶ್ ಪ್ರಕರಣದ ದೂರುದಾರರಾಗಿದ್ದಾರೆ. ಆರೋಪಿತ ಸಂಸ್ಥೆಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ (ಬಿಎನ್ಎಸ್ ) ಸೆಕ್ಷನ್ ಗಳಡಿ 105, 115 (2), 118 (1) ಹಾಗೂ 118 (2) 3 (5) 190, 132, 125 (2) 125 (ಬಿ) ಪ್ರಕರಣ ದಾಖಲಾಗಿದೆ.
ಎಫ್ಐಆರ್ನಲ್ಲಿದೆ ?; ಜೂನ್ 3ರಂದು ನಡೆದ ಫೈನಲ್ನಲ್ಲಿ ಆರ್ಸಿಬಿ ಕಪ್ ಗೆದ್ದ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ, ಯು.ಬಿ.ಸಿಟಿ ಹಾಗೂ ಚರ್ಚ್ ಸ್ಟ್ರೀಟ್ನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದು ರಾತ್ರಿ ಪೂರ್ತಿ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದರಿಂದ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಅದೇ ಸಂಜೆ ಕೆಎಸ್ಸಿಎ ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ಶುಭೇಂದ್ರು ಘೋಷ್ ಠಾಣೆಗೆ ಬಂದು ಆರ್ಸಿಬಿ ಕಪ್ ಗೆದ್ದರೆ ವಿಜಯೋತ್ಸವ ಆಚರಿಸಲು ಭದ್ರತೆ ನೀಡಬೇಕೆಂದು ಸಲ್ಲಿಸಿದ್ದ ಮನವಿಯನ್ನ ತಿರಸ್ಕರಿಸಲಾಗಿತ್ತು. ಹೀಗಿದ್ದರೂ ಕೆಎಸ್ಸಿಎ ಹಾಗೂ ಆರ್ಸಿಬಿ ಫ್ರಾಂಚೈಸಿ ವಿಜಯೋತ್ಸವ ಕಾರ್ಯಕ್ರಮ ಮಾಡಲೇಬೇಕಾಗಿದೆ ಎಂದು ಒತ್ತಾಯಿಸಿದ್ದರು ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಅನುಮತಿ ನೀಡದಿದ್ದರೂ ಜೂ.4ರಂದು ಬೆಳಗ್ಗಿನಿಂದಲೇ ಆರ್ಸಿಬಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಹಾಗೂ ವೆಬ್ ಸೈಟ್ಗಳಲ್ಲಿ ವಿಜಯೋತ್ಸವ ಹಾಗೂ ವಿಕ್ಟರಿ ಪರೇಡ್ ಬಗ್ಗೆ ಮಾಹಿತಿ ನೀಡಿ ಅಭಿಮಾನಿಗಳನ್ನ ಒಂದೆಡೆ ಸೇರುವಂತೆ ಆಹ್ವಾನಿಸಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಬಂದೋಬಸ್ತ್ ವ್ಯವಸ್ತೆ ಬಗ್ಗೆ ನಗರ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆದು ವಿಜಯೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಲಾಗಿತ್ತು ಎಂದು ದೂರಿನಲ್ಲಿ ಇನ್ಸ್ಪೆಕ್ಟರ್ ತಿಳಿಸಿದ್ಧಾರೆ.
ಹೆಚ್ಎಎಲ್ ವಿಮಾನ ನಿಲ್ದಾಣ, ಆರ್ಸಿಬಿ ತಂಡ ಸಂಚರಿಸುವ ಮಾರ್ಗ, ವಾಸ್ತವ್ಯ ಹೂಡಿರುವ ಹೊಟೇಲ್ ಹಾಗೂ ವಿಧಾನಸೌಧದಲ್ಲಿ ಸರ್ಕಾರದಿಂದ ನಡೆಯುವ ಅಭಿನಂದನಾ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿತ್ತು. ಸನ್ಮಾನ ಕಾರ್ಯಕ್ರಮದವರೆಗೂ ಎಲ್ಲವೂ ಸುಲಲಿತವಾಗಿತ್ತು.
ಸಂಜೆ 5 ಗಂಟೆ ವಿಜಯೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಆಸನ ಸಾಮರ್ಥ್ಯ30-35 ಸಾವಿರವಿದ್ದರೂ ಲಕ್ಷಾಂತರ ಅಭಿಮಾನಿಗಳು ನೆರೆದಿದ್ದರಿಂದ ಯಾವ ರೀತಿ ಪ್ರವೇಶ ನೀಡಬೇಕೆಂದು ಕ್ರೀಡಾಂಗಣದ ಭದ್ರತೆ ಜವಾಬ್ದಾರಿ ವಹಿಸಿಕೊಂಡಿದ್ದ ಡಿಎನ್ಎ, ಕೆಎಸ್ಸಿಎ ಹಾಗೂ ಆರ್ಸಿಬಿ ಫ್ರಾಂಚೈಸಿ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿವೆ. ಸಾವಿರಾರು ಮಂದಿ ಅಭಿಮಾನಿಗಳು ಹೊರಗಿದ್ದು ಮಧ್ಯಾಹ್ನ 3.10 ಸುಮಾರಿಗೆ ಪ್ರವೇಶದ್ವಾರದ ಗೇಟುಗಳನ್ನ ತೆರೆದು ಒಳ ಹೋಗುವಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಪೊಲೀಸ್ ಸಿಬ್ಬಂದಿ ಒಳಗೊಂಡಂತೆ 64 ಮಂದಿ ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ಇನ್ಸ್ಪೆಕ್ಟರ್ ತಿಳಿಸಿದ್ಧಾರೆ.
ಅನುಮತಿ ಪಡೆಯದೇ ಹಾಗೂ ಮುಂಜಾಗ್ರತ ಕ್ರಮಕೈಗೊಳ್ಳದೇ ಕೆಎಸ್ಸಿಎ ಆಡಳಿತ ಮಂಡಳಿಯು ವಿಜಯೋತ್ಸವಕ್ಕೆ ಮುಂದಾಗಿದೆ. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಉಚಿತ ಪಾಸ್ ಎಂದು ಆರ್ಸಿಬಿ ಅಧಿಕೃತವಾಗಿ ಮಾಹಿತಿ ನೀಡಿದ್ದರಿಂದ ಲಕ್ಷಾಂತರ ಅಭಿಮಾನಿಗಳು ಒಂದೆ ಕಡೆ ಸೇರಲು ಕಾರಣವಾಗಿದೆ. ಸರಿಯಾಗಿ ಮಾಹಿತಿ ನೀಡದೆ ಹಾಗೂ ಪೊಲೀಸರಿಗೆ ಈ ಬಗ್ಗೆ ತಿಳಿಸದೇ ನಿರ್ಲಕ್ಷ್ಯ ಧೋರಣೆಯಿಂದಾಗಿ ಅಭಿಮಾನಿಗಳಿಗೆ ಗೊಂದಲ ಸೃಷ್ಟಿ ಮಾಡಿದೆ. ನೂಕು ನುಗ್ಗಲು ವೇಳೆ ಗೇಟ್ ನಂಬರ್ಗಳಾದ 2, 2ಎ, 6, 7, 15, 17, 18, 20 ಮತ್ತು 21ರ ಪ್ರವೇಶದ್ವಾರಗಳಲ್ಲಿ ಕಾಲ್ತುಳಿತ ಉಂಟಾಗಿ ದುರಂತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕಾಲ್ತುಳಿತ ಸ್ಥಳದಲ್ಲಿ ತನಿಖಾಧಿಕಾರಿ ಡಿಸಿಯಿಂದ ತಪಾಸಣೆ: ಆರ್ಸಿಬಿ, ಕೆಎಸ್ಸಿಎಗೆ ನೋಟಿಸ್
ಇದನ್ನೂ ಓದಿ: ಶಾಲೆಗೆ ಹೊರಟಿದ್ದ ಬಾಲಕಿ ದಿವ್ಯಾಂಶಿ, ಕ್ರಿಕೆಟ್ ಗೊತ್ತಿಲ್ಲದ ಎಂಜಿನಿಯರ್ ಸಹನಾ ಕ್ರೀಡಾಂಗಣಕ್ಕೆ ಬಂದು ಇನ್ನಿಲ್ಲವಾದರು!