ಚಿಕ್ಕೋಡಿ: 'ಪ್ರಬಲವಾದ ಯಾವುದೇ ಒಂದು ಜಾತಿ ಕ್ರಮೇಣ ಬೆಳೆಯುತ್ತಾ ಹೋಗುತ್ತದೆ. ಪ್ರಬಲ ಕಾರಣ ಇಲ್ಲದೇ ಕುಂಠಿತವಾಗುವುದಿಲ್ಲ. ಅಂತಹ ಪ್ರಬಲ ಯಾವುದೇ ಕಾರಣ ಇಲ್ಲದೇ ವೀರಶೈವರ ಸಂಖ್ಯೆ ವರದಿಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಕೋಟಿಗೂ ಹೆಚ್ಚು ಇರಬೇಕಾಗಿತ್ತು. ಆದರೆ 60 ಲಕ್ಷಕ್ಕೆ ಸೀಮಿತ ಮಾಡಿರುವ ವರದಿ ಸರಿಯಾದ ವರದಿಯಲ್ಲ. ಮರುಗಣತಿ ಮಾಡಿ ಜಾರಿ ಮಾಡಲಿ" ಎಂದು ಶ್ರೀಶೈಲ ಸೂರ್ಯಸಿಂಹಾಸನ ಮಹಾಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
ಶುಕ್ರವಾರ ಚಿಕ್ಕೋಡಿಯ ಯಡೂರ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, "ಸರ್ಕಾರ ಜಾತಿಗಣತಿ ವರದಿಯನ್ನು ಜಾರಿ ಮಾಡಲು ಹೊರಟಿದೆ. ಜಾತಿಗಣತಿ ಪ್ರಾಮಾಣಿಕತೆಯಿಂದ ಕೂಡಿಲ್ಲ ಹಾಗೂ ಅವೈಜ್ಞಾನಿಕವಾಗಿದೆ. ಯಾವುದೇ ಆಧಾರವಿಲ್ಲದ ಜಾತಿಗಣತಿ ಇದು. ಮನೆ ಮನೆಗೆ ತೆರಳಿ ಜಾತಿಗಣತಿ ಮಾಡಿಲ್ಲ. ಸರ್ಕಾರ ಜಾತಿಗಣತಿಯನ್ನು ಜಾರಿ ಮಾಡಿದರೆ ಕೈ ಸುಟ್ಟಕೊಳ್ಳುತ್ತದೆ. ವೀರಶೈವ ಸಮಾಜಕ್ಕೆ ಅನ್ಯಾಯವಾಗದಂತೆ ಸಮಾಜದ ಶಾಸಕರು ಸಚಿವರು ನೋಡಿಕೊಳ್ಳಬೇಕು" ಎಂದು ವೀರಶೈವ ಲಿಂಗಾಯತ ಸಮುದಾಯ ಶಾಸಕರಿಗೆ ಎಚ್ಚರಿಕೆ ನೀಡಿದರು.
"ವೀರಶೈವ ಲಿಂಗಾಯತ ಸಮುದಾಯ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿಗಣತಿ ಜಾರಿಯಾಗದಂತೆ ನೋಡಿಕೊಳ್ಳಿ. ಜನಸಂಖ್ಯೆ ಬೆಳವಣಿಗೆ ಆಗುತ್ತದೆಯೇ ಹೊರತು ಕಡಿಮೆ ಆಗಲ್ಲ. ಜಾತಿಗಣತಿಯಲ್ಲಿ ವೀರಶೈವರ ಸಂಖ್ಯೆ 1 ಕೋಟಿಗಿಂತ ಹೆಚ್ಚಿರಬೇಕಿತ್ತು. ಕೇವಲ 65 ಲಕ್ಷಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ. ಈ ಜಾತಿಗಣತಿಯನ್ನು ಕೈಬಿಟ್ಟು ಮರು ಜಾತಿಗಣತಿಗೆ ಸರ್ಕಾರ ಮುಂದಾಗಬೇಕು" ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಅಪಸ್ವರದ ಮಧ್ಯೆ ಜಾತಿ ಗಣತಿ ಮೇಲಿನ ಚರ್ಚೆ ಅಪೂರ್ಣ; ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತೀರ್ಮಾನ