ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ಬಳಿ ಇರುವ ಕೃಷ್ಣಮೃಗ ಅಭಯಾರಣ್ಯ ಏಷ್ಯಾ ಖಂಡದಲ್ಲಿಯೇ ಪ್ರಸಿದ್ದಿ ಪಡೆದಿದೆ. ಜೂನ್ 17, 1974ರಂದು ರಾಣೆಬೆನ್ನೂರಿನ ಕೃಷ್ಣಮೃಗಗಳಿರುವ ಪ್ರದೇಶವನ್ನು ಅಭಯಾರಣ್ಯವೆಂದು ಘೋಷಣೆ ಮಾಡಲಾಯಿತು. 104 ಚ.ಕಿಲೋ ಮೀಟರ್ ವಿಸ್ತೀರ್ಣದ ಅಭಯಾರಣ್ಯದಲ್ಲಿ 15 ಚ.ಕಿಲೋ ಮೀಟರ್ ಅಭಯಾರಣ್ಯ ಕೃಷ್ಣಮೃಗಗಳಿಗೆ ಪ್ರಮುಖ ವಾಸಸ್ಥಳವಾಗಿದೆ.
ರಾಣೆಬೆನ್ನೂರು ನಗರದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿ ಕೃಷ್ಣಮೃಗ ಅಭಯಾರಣ್ಯ ಆರಂಭವಾಗುತ್ತೆ. ರಾಣೆಬೆನ್ನೂರು ಪ್ರವೇಶಿಸುತ್ತಿದ್ದಂತೆ ಅಭಯಾರಣ್ಯದ ಚಿತ್ರಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಅಭಯಾರಣ್ಯದ ಹೃದಯಭಾಗವಾಗಿರುವ 15 ಕಿಲೋಮಿಟರ್ ವಿಸ್ತೀರ್ಣದಲ್ಲಿ ಕೃಷ್ಣಮೃಗಗಳನ್ನು ನೋಡಲು ಅರಣ್ಯ ಇಲಾಖೆ ಸಫಾರಿ ಸೇವೆ ಆರಂಭಿಸಿದೆ.
ಮುಂಜಾನೆ ಆರು ಗಂಟೆಯಿಂದ 9 ಗಂಟೆಯವರೆಗೆ ಮತ್ತು ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆಯವರೆಗೆ ಸಫಾರಿ ಮಾಡಬಹುದಾಗಿದೆ. ಅಭಯಾರಣ್ಯದಲ್ಲಿ ಕೃಷ್ಣಮೃಗಗಳು ಹಿಂಡು ಹಿಂಡುಗಳಾಗಿ ವಾಸಿಸುತ್ತಿವೆ. ಒಮ್ಮೆಲೆ ಮೂರರಿಂದ ಮೂವತ್ತರವರೆಗೂ ಪ್ರವಾಸಿಗರಿಗೆ ಕಾಣಸಿಗುತ್ತವೆ.
ಪ್ರವಾಸಿಗರಿಗೆ ಸಫಾರಿ ವ್ಯವಸ್ಥೆ ಇದೆ: ಈ ಬಗ್ಗೆ ಪ್ರಾದೇಶಿಕ ಅರಣ್ಯಾಧಿಕಾರಿ ಲಿಂಗಾರೆಡ್ಡಿ ಮಾತನಾಡಿದ್ದು, ''ಈ ವನ್ಯಜೀವಿಧಾಮದ ವಿಶಿಷ್ಠತೆ ಎಂದರೆ ಕೃಷ್ಣಮೃಗ. ಇವುಗಳನ್ನು ನಾವು ಹುಲ್ಲುಗಾವಲಿನಲ್ಲಿ ಹೆಚ್ಚಾಗಿ ಕಾಣಬಹುದು. ಕೃಷ್ಣಮೃಗಗಳು ನಾವು ಸಾಕುವ ದನ-ಕರು, ಕುರಿಗಳ ಜಾತಿಗೆ ಸೇರಿವೆ. ಪ್ರವಾಸಿಗರಿಗೆ ಸಫಾರಿ ವ್ಯವಸ್ಥೆ ಇದೆ. ದೂರದಿಂದ ಬರುವ ಪ್ರವಾಸಿಗರಿಗೆ ಇಲ್ಲಿಯೇ ಇದ್ದು ಸಫಾರಿ ನೋಡಿಕೊಂಡು ಹೋಗಲು ವ್ಯವಸ್ಥೆ ಇದೆ'' ಎಂದು ಹೇಳಿದರು.

''ಕೃಷ್ಣಮೃಗಗಳಲ್ಲಿ ಗಂಡುಕೃಷ್ಣಮೃಗಗಳಿಗೆ ವರ್ಷವೂ ಕೋಡುಗಳು ಬಿದ್ದು ಹೊಸದಾಗಿ ಬರುತ್ತವೆ. ಹೆಣ್ಣು ಕೃಷ್ಣಮೃಗಗಳಿಗೆ ಕೋಡು ಇರುವುದಿಲ್ಲ. ಕೃಷ್ಣ ಮೃಗದ ಮೇಲ್ಭಾಗ ಗಾಢ ಕಂದು ಬಣ್ಣದಿಂದ ಕೂಡಿದ್ದು, ಒಳ ಮೈ ಭಾಗದಲ್ಲಿ ಬಿಳಿ ಬಣ್ಣವಾಗಿರುತ್ತದೆ. ಗಂಡುಕೃಷ್ಣಮೃಗಗಳಿಗೆ ಹೋಲಿಸಿದ್ರೆ ಹೆಣ್ಣು ಕೃಷ್ಣಮೃಗದ ಬಣ್ಣ ತಿಳಿಯಾಗಿರುತ್ತದೆ'' ಎಂದರು.
''ಇಲ್ಲಿನ ಇನ್ನೊಂದು ವಿಶೇಷತೆಯೆಂದರೆ, 2000ದ ಇಸವಿವರೆಗೂ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳು ಕಂಡುಬಂದಿದ್ದವು. ಈಗ ಇವುಗಳನ್ನು ರಾಜಸ್ಥಾನ ಬಿಟ್ಟರೆ, ಮಹಾರಾಷ್ಟ್ರದಲ್ಲಿ ಕಾಣಬಹುದು. ಈ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿಲ್ಲ. ಇವು ಮತ್ತೆ ಇಲ್ಲಿಗೆ ಮರಳಿ ಬರಲಿ ಎಂದು ಅಭಯಾರಣ್ಯವನ್ನು ಅಭಿವೃದ್ಧಿ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.

6000ಕ್ಕೂ ಹೆಚ್ಚು ಕೃಷ್ಣಮೃಗಗಳಿವೆ: ಹವ್ಯಾಸಿ ಛಾಯಾಚಿತ್ರಗ್ರಾಹಕ ಡಾ. ಗುಹೇಶ್ವರ ಪಾಟೀಲ್ ಅವರು ಮಾತನಾಡಿ, ''ಈ ಅಭಯಾರಣ್ಯದಲ್ಲಿ ಕೃಷ್ಣಮೃಗಗಳ ದಂಡೇ ಹರಿದುಬರುತ್ತಿರುವುದನ್ನ ಕಾಣಬಹುದಾಗಿದೆ. ಅವುಗಳನ್ನ ಸೆರೆ ಹಿಡಿಯುವ ಛಾಯಾಚಿತ್ರಗ್ರಾಹಕರಿಗೆ ಸುಗ್ಗಿ. ಒಂದು ಅಂದಾಜಿನ ಪ್ರಕಾರ, ಇಲ್ಲಿನ ಅಭಯಾರಣ್ಯದಲ್ಲಿ 6000ಕ್ಕೂ ಹೆಚ್ಚು ಕೃಷ್ಣಮೃಗಗಳಿವೆ. ಇಲ್ಲಿ ಅನೇಕ ವನ್ಯಜೀವಿ ಸಂಪತ್ತು ಕಂಡುಬರುತ್ತಿವೆ. ಕಾಡುಹಂದಿ, ತೋಳ, ನರಿಗಳ ಸಂತತಿ ಬೆಳೆಯುತ್ತಿರುವುದಿಂದಾಗಿ ಅವುಗಳನ್ನ ಎಷ್ಟೋ ಸಲ ಕ್ಯಾಮರಾದಲ್ಲಿ ಸೆರೆಹಿಡಿದಿದ್ದೇವೆ'' ಎಂದು ಹೇಳಿದ್ದಾರೆ.
14 ರಿಂದ 15 ಅಡಿ ಎತ್ತರಕ್ಕೆ ಜಿಗಿಯುತ್ತವೆ: ''ಕೃಷ್ಣಮೃಗಗಳು ನೋಡಲು ಸುಂದರವಾಗಿರುವುದರ ಜೊತೆಗೆ ಛಾಯಾಚಿತ್ರಗ್ರಾಹಕರಿಗೆ ಬಹಳ ಅಪರೂಪವಾದ ಸನ್ನಿವೇಶವನ್ನು ಸೃಷ್ಟಿಸುತ್ತಿವೆ. ಛಾಯಾಚಿತ್ರಗ್ರಾಹಣ ಒಂದು ಸವಾಲಿನ ಕೆಲಸ. ಇನ್ನು ಈ ಕೃಷ್ಣಮೃಗಗಳನ್ನು ಸೆರೆಹಿಡಿಯುವುದು ಇನ್ನೂ ಸವಾಲಿನ ಕೆಲಸ. ಏಕೆಂದರೆ, ಇವು ಒಂದು ಕ್ಷಣದಲ್ಲಿ 14 ರಿಂದ 15 ಅಡಿ ಎತ್ತರಕ್ಕೆ ಜಿಗಿಯುತ್ತವೆ'' ಎಂದು ಹವ್ಯಾಸಿ ಛಾಯಾಚಿತ್ರಗ್ರಾಹಕ ಮಾಲತೇಶ್ ಅಂಗೂರ್ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಇದನ್ನೂ ಓದಿ: ಚಾಮರಾಜನಗರ : ಬಂಡೀಪುರದಲ್ಲಿ ಸಫಾರಿ ಜೀಪಿನ ಸನಿಹವೇ ಬಂದ ಹುಲಿರಾಯ - TIGER