ಶಿವಮೊಗ್ಗ: ಆದಿಚುಂಚನಗಿರಿ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಕುರಿತು ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ದೂರು ದಾಖಲಿಸಿದೆ. ಜನಿವಾರ ತೆಗೆಸಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಶಿವಮೊಗ್ಗದ ವಿವಿಧ ವಿಪ್ರ ಸಮಾಜದವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಕುರಿತು ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಮಾತನಾಡಿ, ಆದಿಚುಂಚನಗಿರಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬುಧವಾರ ಪರೀಕ್ಷೆ ವೇಳೆ ತಪಾಸಣೆ ನಡೆಸುವ ನೆಪದಲ್ಲಿ ಇಬ್ಬರು ವಿದ್ಯಾರ್ಥಿಗಳ ಯಜ್ಞೋಪವಿತ ಜನಿವಾರವನ್ನು ತೆಗೆಯಿಸಿ ಕಸದ ಬುಟ್ಟಿಗೆ ಹಾಕಿದ್ದಾರೆ. ಮೂರನೇ ವಿದ್ಯಾರ್ಥಿಗೆ ಇದೇ ರೀತಿ ಮಾಡಿದಾಗ ಆತ ವಿರೋಧ ಮಾಡಿದಾಗ ಆತನನ್ನು ಹಾಗೆಯೇ ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿದ್ದಾರೆ. ಜನಿವಾರ ತೆಗೆಸಿರುವುವುದು ಅಕ್ಷಮ್ಯ ಅಪರಾಧ ಎಂದು ದೂರಿದರು.
ಬ್ರಾಹ್ಮಣ ಸಮಾಜದಲ್ಲಿ ನಮ್ಮ ಸಂಸ್ಕೃತಿಯ ಭಾಗ ಯಜ್ಞೋಪವಿತ್. ಹುಟ್ಟಿದ ತಕ್ಷಣ ಯಾರು ಬ್ರಾಹ್ಮಣ ಆಗಲ್ಲ. ಬ್ರಹ್ಮೋಪದೇಶ ಮಾಡಿದಾಗ ಎರಡನೇ ಜನ್ಮ ಬರುತ್ತೆ. ಆಗ ಆತನಿಗೆ ದ್ವಿಜ ಎಂದು ಕರೆಯುತ್ತಾರೆ. ಒಮ್ಮೆ ಬ್ರಹ್ಮೋಪದೇಶವಾದ ನಂತರ ಆತ ಸಾಯುವ ತನಕ ಜನಿವಾರವನ್ನು ತೆಗೆಯುವುದಿಲ್ಲ. ಜನಿವಾರ ತೆಗೆಸಿರುವುದು ನಮ್ಮ ಧಾರ್ಮಿಕ ಭಾವನೆಗೆ ದೊಡ್ಡ ಧಕ್ಕೆಯಾಗಿದೆ. ಹಿಂದೆ ಬ್ರಿಟಿಷರು ನಮಗೆ ತೊಂದ್ರೆ ಕೊಡಲಿಲ್ಲ. ಆದರೆ ಈಗ ಸ್ವಾತಂತ್ರ ಭಾರತದ ಸರ್ಕಾರದ ಅವಧಿಯಲ್ಲಿ ತೆಗೆಯಿಸುವಂತಹ ಕೆಲಸ ಅಕ್ಷಮ್ಯವಾದ ಅಪರಾಧವಾಗಿದೆ. ಈ ಕುರಿತು ಡಿಸಿ ಅವರಿಗೆ ಮನವಿ ಮಾಡಿದ್ವಿ. ಅವರು ಒಂದು ವಾರದ ಕಾಲಾವಧಿ ಕೇಳಿದ್ರು. ಆದರೆ ನಮ್ಮ ದೂರು ಆಧರಿಸಿ ಇಂದು ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಾಯಿದೆಯಂತೆ 115/2, 298, 299, 352, 551/1 ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ನಟರಾಜ್ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಬುಧವಾರ ಶಿವಮೊಗ್ಗದಲ್ಲಿ ನಡೆದ ಪರೀಕ್ಷೆಯ ವೇಳೆ ವಿದ್ಯಾರ್ಥಿಯೊಬ್ಬರಿಗೆ ಜನಿವಾರ ತೆಗೆದು ಪರೀಕ್ಷೆಗೆ ಹೋಗುವಂತೆ ಒತ್ತಾಯಿಸಿದ ಆರೋಪ ಕೇಳಿಬಂದಿತ್ತು. ಇದೇ ವೇಳೆ, ಜನಿವಾರ ವಿಷಯವಾಗಿ ಬೀದರ್ನಲ್ಲೂ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಗೈರಾಗುವಂತಾಯಿತೆಂದು ಪೋಷಕರು ಆರೋಪಿಸಿದ್ದರು.
ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದು ನಿಜವೇ ಆಗಿದ್ದರೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಈಗಾಗಲೇ ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ: ಸಿಇಟಿ ಅಭ್ಯರ್ಥಿಯ ಜನಿವಾರ ತೆಗೆಸಿದ್ದು ನಿಜವೇ ಆಗಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಚಿವ ಎಂ.ಸಿ.ಸುಧಾಕರ್
ಇದನ್ನೂ ಓದಿ: ಸಿಇಟಿ ಪರೀಕ್ಷೆ: ಕೀ ಉತ್ತರ ಪ್ರಕಟ, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದ ಕೆಇಎ