ಕಾರವಾರ: ಇತ್ತೀಚೆಗೆ ನಡೆದ ಮಾಜಿ ನಗರಸಭಾ ಸದಸ್ಯ, ರೌಡಿಶೀಟರ್ ಸತೀಶ್ ಕೋಳಂಕರ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ತಿಳಿಸಿದ್ದಾರೆ.
ಪ್ರಕರಣವೇನು?: ನಿತೇಶ್ ತಾಂಡೇಲ, ನಿತ್ಯಾನಂದ ಹರಿಕಂತ್ರ, ಸುರೇಂದ್ರ ನಾಯ್ಕ ಮತ್ತು ದರ್ಶನ್ ಸ್ನೇಹಿತರಾಗಿದ್ದರು. ಹತ್ಯೆಯಾದ ವ್ಯಕ್ತಿ ಸತೀಶ್, ನಗರಸಭೆಯ ಒಂದು ಅಂಗಡಿಯನ್ನು ಪಡೆದಿದ್ದು 4 ಲಕ್ಷ ರೂಪಾಯಿ ಮುಂಗಡ ಹಣ ಹಾಗೂ 30 ಸಾವಿರ ರೂ. ಮಾಸಿಕ ಬಾಡಿಗೆಗೆ ನಿತೇಶ್ ತಾಂಡೇಲ್ ಎಂಬಾತನಿಗೆ ನೀಡಿದ್ದನು. ಆದರೆ, ಮೂರು ತಿಂಗಳು ನಿತೇಶ್ ಅಂಗಡಿ ನಡೆಸಿದ್ದು ವ್ಯಾಪಾರವಾಗದೇ ನಷ್ಟ ಅನುಭವಿಸಿದ್ದ. ಇದರಿಂದ ನಿತೇಶ್ ತಾಂಡೇಲ್ ಅಂಗಡಿ ನಡೆಸುವುದನ್ನು ಬಿಟ್ಟು ಹಣ ವಾಪಸ್ ಕೊಡುವಂತೆ ಸತೀಶ್ ಬಳಿ ಕೇಳಿದ್ದ. ಇದಕ್ಕೆ ಸತೀಶ್, ನನಗೂ ಲಾಸ್ ಆಗಿದ್ದು, ದುಡ್ಡು ಮುರಿದುಕೊಳ್ಳುತ್ತೇನೆ ಎಂದಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದ್ದು, ನಿತೇಶ್ ಬಾಡಿಗೆ ಪಡೆದಿದ್ದ ಅಂಗಡಿಯಲ್ಲಿನ ಸಾಮಗ್ರಿಗಳನ್ನು ಹೊರಹಾಕಿ ಸತೀಶ್ ಬೇರೆ ಬೀಗ ಹಾಕಿದ್ದ ಎಂದು ಪ್ರಕರಣದ ಬಗ್ಗೆ ಎಸ್ಪಿ ಮತ್ತಷ್ಟು ಮಾಹಿತಿ ಬಿಚ್ಚಿಟ್ಟರು.
ಇದೇ ವಿಚಾರದಲ್ಲಿ ಬೀಚ್ನಲ್ಲಿ ಇಬ್ಬರ ನಡುವೆ ಮತ್ತೊಂದು ಗಲಾಟೆಯಾಗಿದ್ದು ಕಾರವಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಸತೀಶ್ ಮುಂಗಡ ಪಡೆದ 4 ಲಕ್ಷ ರೂ. ಪೈಕಿ 3.40 ಲಕ್ಷ ಹಣ ನೀಡಿದ್ದು 60 ಸಾವಿರ ಹಣ ನೀಡಿರಲಿಲ್ಲ. ಈ 60 ಸಾವಿರ ಹಣ ನೀಡಿಲ್ಲ ಎಂದು ನಿತೇಶ್ ಎಲ್ಲರ ಬಳಿ ಹೇಳಿಕೊಂಡು ತಿರುಗಾಡುತ್ತಿದ್ದುದನ್ನು ಕಂಡು ಸತೀಶ್, ನಿತೇಶನನ್ನು ಕರೆಸಿ ಏಕೆ ಈ ರೀತಿ ಹೇಳುತ್ತಿದ್ದೀಯಾ ಎಂದು ಕೇಳಿದ್ದ. ಹೋಟೆಲ್ವೊಂದರಲ್ಲಿ ಇದೇ ವಿಚಾರದಲ್ಲಿ ನಿತೇಶ್ ಹಾಗೂ ಸತೀಶ್ ನಡುವೆ ಮತ್ತೇ ಗಲಾಟೆಯಾಗಿದ್ದು ಸತೀಶ್ ಮೇಲೆ ಹಲ್ಲೆ ಸಹ ಆಗಿತ್ತು. ಆದರೆ, ಈ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ. ಸತೀಶ್ ಈ ವಿಚಾರದಲ್ಲಿ ಸಿಟ್ಟಾಗಿ ನಿತೇಶನಿಗೆ ಧಮ್ಕಿ ಹಾಕಿದ್ದು, ಸುಪಾರಿ ಕೊಟ್ಟು ನಿನ್ನನ್ನು ಮುಗಿಸುವುದಾಗಿ ಅವಾಜ್ ಹಾಕಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುವುದಾಗಿ ಎಸ್ಪಿ ತಿಳಿಸಿದರು.
ಈ ವಿಚಾರವಾಗಿ ದರ್ಶನ್ ಮಾಜಾಳಿಕರ್ ಎಂಬಾತ ಹೊರಬಂದಿದ್ದು ಆರೋಪಿಗಳಾದ ನಿತೇಶ್, ನಿತ್ಯಾನಂದ, ಸುರೇಂದ್ರ ನಾಯ್ಕ ಮೂರು ಜನ ಕುಳಿತು ಏ.17ರಂದು ಸತೀಶನನ್ನು ಮುಗಿಸಲು ಪ್ಲ್ಯಾನ್ ಮಾಡಿದ್ದರು. ಅದರಂತೆ ಏ.20 ರಂದು ಸತೀಶ್ ಕೋಳಂಕರ್ ಮಾರ್ಕೆಟ್ಗೆ ಮಾಡಲು ಬಂದಾಗ ನಿತೇಶ್ ಸಹ ಅಲ್ಲಿಗೆ ಬಂದಿದ್ದು ಸತೀಶ್ ಹಾಗೂ ನಿತೇಶ್ ನಡುವೆ ಮತ್ತೆ ಜಗಳ ನಡೆದಿದೆ. ಸತೀಶ್ ಹೆಲ್ಮೆಟ್ನಲ್ಲಿ ಹಲ್ಲೆಗೆ ಮುಂದಾಗಿದ್ದು ಸಿಟ್ಟಿಗೆದ್ದ ನಿತೇಶ್ ತನ್ನ ಗಾಡಿಯಲ್ಲಿದ್ದ ಚಾಕುವನ್ನು ತೆಗೆದು ಸತೀಶನಿಗೆ ಮೂರು ಬಾರಿ ಹಾಕಿ ಪರಾರಿಯಾಗಿದ್ದ. ಇದಾದ ನಂತರ ಗೋವಾಕ್ಕೆ ತೆರಳಿ ಬಾರ್ ಹಾಗೂ ಬೀಚ್ನಲ್ಲಿ ಪಾರ್ಟಿ ಮಾಡಿದ್ದರು. ವಿಷಯ ತಿಳಿದ ಪೊಲೀಸ್ ತಂಡ ಗೋವಾಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದೆ. ಆದರೆ, ಸ್ಥಳ ಮಹಜರು ಮಾಡುವ ವೇಳೆ ಆರೋಪಿ ನಿತೇಶ್ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಎಸ್ಪಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ದರ್ಶನ್ ಮಾಜಾಳಿಕರ್ ಎಂಬಾತನ ಪಾತ್ರವಿಲ್ಲದ ಕಾರಣ ಆತನನ್ನು ಬಿಡುಗಡೆ ಮಾಡಿದ್ದು ಸದ್ಯ ಪ್ರಕರಣದಲ್ಲಿ ನಿತೇಶ್, ನಿತ್ಯಾನಂದ ಹರಿಕಂತ್ರ ಹಾಗೂ ಸುರೇಂದ್ರ ನಾಯ್ಕನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
ಇದನ್ನೂ ಓದಿ: ಕಾರವಾರ: ಮಾಜಿ ನಗರಸಭಾ ಸದಸ್ಯ, ರೌಡಿಶೀಟರ್ ಸತೀಶ್ ಕೊಳಂಕರ್ ಬರ್ಬರ ಹತ್ಯೆ - ROWDY SHEETER MURDER