ಆನೇಕಲ್: ಪೊಲೀಸರು ತನ್ನನ್ನು ಬಂಧನ ಮಾಡಲು ಬರುತ್ತಿದ್ದಾರೆಂದು ತಿಳಿದ ವಾಂಟೆಡ್ ರೌಡಿಶೀಟರ್ವೊಬ್ಬ, ಭಯಗೊಂಡು ನ್ಯಾಯಾಧೀಶರ ಕೊಠಡಿಗೆ ನುಗ್ಗಿದ ಆಘಾತಕಾರಿ ಘಟನೆ ಆನೇಕಲ್ನಲ್ಲಿ ಇಂದು ನಡೆದಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೀಲಲಿಗೆ ನಿವಾಸಿ ಹುಚ್ಚ ವಿನಯ್(25) ಆನೇಕಲ್ನ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಗೆ ನುಗ್ಗಿದ ಆರೋಪಿ.
ಪ್ರಕಣವೊಂದರ ಹಿನ್ನೆಲೆಯಲ್ಲಿ ಆರೋಪಿ ವಿನಯ್ ಇಂದು ಕೋರ್ಟ್ನತ್ತ ಬರುತ್ತಿದ್ದ. ಈತನ ಮೇಲೆ ಬೇರೊಂದು ಪ್ರಕರಣದ ಆರೋಪ ಇದ್ದುದರಿಂದ ಪೊಲೀಸರು ಈತನಿಗಾಗಿ ಕಳೆದ ಹಲವು ದಿನಗಳಿಂದ ಶೋಧ ನಡೆಸುತ್ತಿದ್ದರು. ಇಂದು ಕಾಣಿಸಿಕೊಂಡಿದ್ದು, ತನ್ನನ್ನು ಪೊಲೀಸರು ಹಿಡಿಯಲು ಬರುತ್ತಿದ್ದಾರೆ ಎಂದು ಹೆದರಿ ವಾಂಟೆಡ್ ರೌಡಿಶೀಟರ್ ವಿನಯ್ ನೇರವಾಗಿ ನ್ಯಾಯಾಧೀಶರ ಕೊಠಡಿಗೆ ನುಗ್ಗಿದ್ದಾನೆ.
ಕೋರ್ಟ್ ಕೊಠಡಿಯ ಬಾಗಿಲು ತೆರೆಯದಿರುವುದನ್ನು ಕಂಡು ಗಾಬರಿಯಾಗಿ ಬಾಗಿಲನ್ನು ಎಳೆದಾಡಿದ ಆರೋಪಿ ವಿನಯ್, ಬಳಿಕ ಅಲ್ಲಿದ್ದ ಗಾಜನ್ನು ಪುಡಿಗಟ್ಟಿ ನ್ಯಾಯಾಧೀಶರ ಕೊಠಡಿಗೆ ನುಗ್ಗಿದ್ದಾನೆ. ಘಟನೆ ಸಂಬಂಧ ಕೋರ್ಟ್ ಶಿರಸ್ತೇದಾರ್ ಕೆ ವೆಂಕಟೇಶ್ ಆನೇಕಲ್ ಠಾಣೆಗೆ ದೂರು ನೀಡಿದ್ದು, ಈ ದೂರು ಆಧರಿಸಿ ಆರೋಪಿ ಹುಚ್ಚ ವಿನಯ್ನನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.