ಸುಬ್ರಹ್ಮಣ್ಯ(ದ.ಕನ್ನಡ)/ಹಾಸನ: ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದ ನಡುವೆ ಬರುವ ಎಡಕುಮೇರಿ-ಶಿರಿಬಾಗಿಲು ನಡುವೆ ಗುಡ್ಡ ಕುಸಿದು ಮೆಟೀರಿಯಲ್ ರೈಲ್ವೆ ಹಳಿ ಮೇಲೆ ಬಿದ್ದ ಬಂಡೆಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಗಿದೆ. ಘಟನೆಯಿಂದ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
"ಬೆಳಗ್ಗೆ 9.10ಕ್ಕೆ ಸಂಪೂರ್ಣ ಬಂಡೆಗಳ ತೆರವು ಕಾರ್ಯಾಚರಣೆ ನಡೆದು ರೈಲುಗಳಿಗೆ ಗಂಟೆಗೆ 20 ಕಿ.ಮೀನಲ್ಲಿ ಸಂಚರಿಸಲು ನಿರ್ಬಂಧ ಹೇರಲಾಗಿದೆ. ಸಂಚಾರದಲ್ಲಿ ವ್ಯತ್ಯಯಗೊಂಡಿದ್ದ ಎಲ್ಲಾ ರೈಲುಗಳು ಮುಂದಿನ ಪ್ರಯಾಣವನ್ನು ಮುಂದುವರಿಸುತ್ತವೆ" ಎಂದು ಡಾ. ಮಂಜುನಾಥ್ ಕನಮಡಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನೈಋತ್ಯ ರೈಲ್ವೆ ಹುಬ್ಬಳ್ಳಿ ಅವರು ಮತ್ತೊಮ್ಮೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಲೋಕೋ ಪೈಲಟ್ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ: ಕಿಲೋ ಮೀಟರ್ 74 ಮತ್ತು 75ರ ಬಳಿ ಈ ಘಟನೆ ಸಂಭವಿಸಿದೆ. ಇದೇ ಮಾರ್ಗದಲ್ಲಿ ನೂರಾರು ಪ್ರಯಾಣಿಕರನ್ನು ಹೊತ್ತ ರೈಲೊಂದು ಸಂಚರಿಸುತ್ತಿತ್ತು. ಲೋಕೋ ಪೈಲಟ್ಗೆ ಹಳಿಗಳ ಮೇಲೆ ಬಿದ್ದಿದ್ದ ಬೃಹತ್ ಬಂಡೆಗಳು ಕಾಣಿಸಿದೆ. ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಇಲ್ಲವಾದಲ್ಲಿ ರೈಲಿನ ಇಂಜಿನ್ ಬಂಡೆಗೆ ಗುದ್ದಿ ಭಾರೀ ಅವಘಡ ಸಂಭವಿಸುವ ಅಪಾಯವಿತ್ತು.
ಹೀಗಾಗಿ ರೈಲಿನಲ್ಲಿಯೇ ಸಿಲುಕಿದ್ದ ಪ್ರಯಾಣಿಕರಿಗೆ ಕುಡಿಯುವ ನೀರು, ಬಿಸ್ಕೆಟ್, ಉಪಹಾರ ಮತ್ತು ಚಹಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಬಗ್ಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು.
ಸಂಚಾರದಲ್ಲಿ ವ್ಯತ್ಯಯಗೊಂಡಿದ್ದ ರೈಲುಗಳ ವಿವರ:
- ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ಕಡಗರವಳ್ಳಿಗೆ ಬೆಳಗ್ಗೆ 3:40ಕ್ಕೆ ಆಗಮಿಸಿತ್ತು.
- ರೈಲು ಸಂಖ್ಯೆ 16585 SMVT ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್ ಸಕಲೇಶಪುರಕ್ಕೆ ಬೆಳಗ್ಗೆ 3:10ಕ್ಕೆ ಆಗಮಿಸಿತ್ತು.
- ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲು ಸಕಲೇಶಪುರಕ್ಕೆ ಬೆಳಗ್ಗೆ 6:26ಕ್ಕೆ ಆಗಮಿಸಿತ್ತು.
ಈ ಮೂರು ರೈಲುಗಳು ಬಂಡೆ ಬಿದ್ದ ಪರಿಣಾಮ ತಡವಾಗಿ ಹೊರಟಿವೆ.
ಪ್ರಯಾಣಿಕರು NTES ಅಥವಾ Where is My Train ಅಪ್ಲಿಕೇಶನ್ ಮೂಲಕ ತಮ್ಮ ರೈಲನ್ನು ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ಮಾತ್ರವಲ್ಲದೆ ತುರ್ತು ಸಂದರ್ಭದಲ್ಲಿ @RailwaySevaಗೆ ಟ್ವೀಟ್ ಮಾಡುವುದು ಅಥವಾ 139 ನಂಬರಿಗೆ ಕರೆ ಮಾಡಬಹುದು ಎಂದು ಡಾ. ಮಂಜುನಾಥ್ ಕನಮಡಿ ತಿಳಿಸಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಕಡಿಮೆಯಾದ ಮಳೆ ಅಬ್ಬರ: ಈ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್