ಬೆಂಗಳೂರು : ನಿವೃತ್ತ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಅವರ ಮೃತದೇಹದ ಅಂತಿಮ ದರ್ಶನಕ್ಕೆ ಹೆಚ್ಎಸ್ಆರ್ ಲೇಔಟ್ 6ನೇ ಹಂತದ ಎಂಸಿಹೆಚ್ಎಸ್ ಕ್ಲಬ್ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ, ವಿಲ್ಸನ್ ಗಾರ್ಡನ್ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಲಾಗುವುದು ಎಂದು ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್ ತಿಳಿಸಿದ್ದಾರೆ.
ಸದ್ಯ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಓಂ ಪ್ರಕಾಶ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಇದಾದ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿಗಳು, ಸಹೋದ್ಯೋಗಿಗಳು, ಕುಟುಂಬದ ಆಪ್ತರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ.
ಮತ್ತೊಂದೆಡೆ ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ಅವರನ್ನು ವಶಕ್ಕೆ ಪಡೆದಿರುವ ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಇಬ್ಬರ ಹೇಳಿಕೆ ದಾಖಲಿಸುತ್ತಿರುವ ಪೊಲೀಸರು ಮಧ್ಯಾಹ್ನದ ನಂತರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಪ್ರಕರಣ ಹಿನ್ನೆಲೆ: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕರಾಗಿದ್ದ ಓಂ ಪ್ರಕಾಶ್ ಅವರನ್ನು ಹತ್ಯೆ ಮಾಡಲಾಗಿದ್ದು, ನಗರದ ಹೆಚ್ಎಸ್ಆರ್ ಲೇಔಟ್ನ ಮನೆಯಲ್ಲಿ ಭಾನುವಾರ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿತ್ತು.
ಚಾಕುವಿನಿಂದ ಇರಿದು ಕೊಲೆ ಮಾಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಅವರ ಪತ್ನಿಯೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಕೈಗೊಂಡರು.
ಪುತ್ರನಿಂದ ದೂರು ಪಡೆದು ಎಫ್ಐಆರ್: ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್, ''ಸಂಜೆ 4:30ರ ಸುಮಾರಿಗೆ ಬಂದ ಮಾಹಿತಿ ಆಧರಿಸಿ ಹೊಯ್ಸಳ ಸಿಬ್ಬಂದಿ ಬಂದು ಗಮನಿಸಿದಾಗ ಹತ್ಯೆಯ ವಿಚಾರ ತಿಳಿದುಬಂದಿದೆ. ಆಯುಧ ಬಳಸಿ ದೈಹಿಕ ಹಲ್ಲೆಗೈದಿರುವುದು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮತ್ತಷ್ಟು ವಿಚಾರಗಳು ತಿಳಿಯಲಿವೆ'' ಎಂದು ಮಾಹಿತಿ ನೀಡಿದ್ದರು.
''ಮನೆಯಲ್ಲಿ ಓಂ ಪ್ರಕಾಶ್ ಅವರು ಸೇರಿದಂತೆ ಮೂವರು ಇದ್ದರು. ಅದರಲ್ಲಿಯೇ ಒಬ್ಬರು ಹತ್ಯೆಯ ಕುರಿತು ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಒಂದು ಆಯುಧವನ್ನು ಜಪ್ತಿ ಮಾಡಲಾಗಿದೆ. ಕಟ್ಟಡವನ್ನು ಪೊಲೀಸ್ ಸುಪರ್ದಿಗೆ ಪಡೆದಿದ್ದೇವೆ. ಸದ್ಯ ಓಂ ಪ್ರಕಾಶ್ ಮಗನಿಂದ ದೂರು ಪಡೆದು ಎಫ್ಐಆರ್ ದಾಖಲಿಸಿಕೊಳ್ಳಲಾಗುತ್ತಿದೆ. ಮುಂದಿನ ತನಿಖೆ ಕೈಗೊಂಡಿದ್ದೇವೆ'' ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ಭಾನುವಾರ ತಿಳಿಸಿದ್ದರು.
ವಿವಿಐಪಿ ಸೆಕ್ಯೂರಿಟಿ ವಿಭಾಗದ ಇನ್ಸ್ಪೆಕ್ಟರ್ ಹೇಳಿದ್ದು ಹೀಗೆ: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಹತ್ಯೆಯಾಗುವ ಒಂದು ಗಂಟೆ ಮುನ್ನ ಪೊಲೀಸ್ ಇಲಾಖೆಯ ಆಪ್ತ ಸಿಬ್ಬಂದಿ ವಿವಿಐಪಿ ಸೆಕ್ಯೂರಿಟಿ ವಿಭಾಗದ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರೊಂದಿಗೆ ಸಂತೋಷದಿಂದ ಮಾತನಾಡಿದ್ದರು. ಅವರು ಈ ರೀತಿ ಹತ್ಯೆಯಾಗಿರುವುದು ದುರಂತ ಎಂದು ಅವರು ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ಹೆಚ್ಎಸ್ಆರ್ ಲೇಔಟ್ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಈ ಹಿಂದೆ ಅವರು ಇಲಾಖೆಯಲ್ಲಿದ್ದಾಗಿನಿಂದ ನನಗೆ ಪರಿಚಯ, ಆತ್ಮೀಯರಾಗಿದ್ದವರು. ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ಭಾನುವಾರ ಮಧ್ಯಾಹ್ನ 3:05ರ ಸುಮಾರಿಗೆ ಓಂ ಪ್ರಕಾಶ್ ಸರ್ ಕರೆ ಮಾಡಿ ಸಂತೋಷದಿಂದ ಮಾತನಾಡಿದ್ದರು. ನಾನು ಮನೆಗೆ ಬರ್ತೀನಿ ಸರ್ ಭೇಟಿಯಾಗೋಣ ಎಂದಾಗ, ಬೇಡ ಮನೆಯಲ್ಲಿ ಮೇಡಂ ಇರ್ತಾರೆ ಎಂದಿದ್ದರು" ಎಂದು ಶ್ರೀನಿವಾಸ್ ಹೇಳಿದ್ದರು.
ಇದನ್ನೂ: ಸಾಯುವ ಗಂಟೆಗೂ ಮುನ್ನ ಓಂ ಪ್ರಕಾಶ್ ಜೊತೆ ಮಾತನಾಡಿದ್ದ ಇನ್ಸ್ಪೆಕ್ಟರ್ ಹೇಳಿದ್ದೇನು?