ಬೆಂಗಳೂರು: "ನ್ಯಾಯಕ್ಕಾಗಿ ಆಗ್ರಹಿಸಿದ ಶಾಸಕರನ್ನು ಅಮಾನತು ಮಾಡಿರುವುದು ಖಂಡನೀಯ. ಇದು ಕಾಂಗ್ರೆಸ್ನ ದುರುಳ ನೀತಿ" ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸದನದಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರು ಹನಿಟ್ರ್ಯಾಪ್ ಆಗಿದೆ ಎಂದಾಗ, ಕಾಂಗ್ರೆಸ್ನ ಇತರ ಸಚಿವರಿಗೆ, ಮುಖ್ಯಮಂತ್ರಿಗೆ ಅದು ಅಶ್ಲೀಲ ಎಂದು ಅನ್ನಿಸಲೇ ಇಲ್ಲ. ಹಿಂದೆ ಶಾಸಕರು ಮೊಬೈಲ್ ನೋಡಿದ್ದಕ್ಕೆ ಕಾಂಗ್ರೆಸ್ನವರು ಎದ್ದು ಕುಣಿದಿದ್ದರು. ಆದರೆ, ಹನಿಟ್ರ್ಯಾಪ್ ಅಶ್ಲೀಲ ಎಂದು ಅನಿಸಿಲ್ಲ. ಸದನಕ್ಕೆ ಗೌರವ ಇರಲಿ ಎಂದು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದೇವೆ. ಹನಿಟ್ರ್ಯಾಪ್ ಆಗಿರುವುದು ತಮ್ಮ ಪಕ್ಷದ ನಾಯಕರಿಂದಲೇ ಎಂದು ಹೇಳಿದರೂ ಸರ್ಕಾರ ಸುಮ್ಮನಿದೆ" ಎಂದು ದೂರಿದರು.
"ಬಿಜೆಪಿ ಶಾಸಕರು ನ್ಯಾಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ಮೇಲೆ ಸ್ಪೀಕರ್ ಯು.ಟಿ.ಖಾದರ್ ಗದಾ ಪ್ರಹಾರ ಮಾಡಿರುವುದು ಯಾವ ನ್ಯಾಯ? ಯಾವ ಮುಖ ಇಟ್ಟುಕೊಂಡು ಸಚಿವರು ಸದನಕ್ಕೆ ಬಂದಿದ್ದಾರೆ? 18 ಶಾಸಕರನ್ನು ಅಮಾನತು ಮಾಡಿರುವುದು ಅನ್ಯಾಯ. ಸ್ಪೀಕರ್ಗೆ ನಾವು ಯಾವುದೇ ಅನ್ಯಾಯ ಮಾಡಿಲ್ಲ. ನಾವು ನ್ಯಾಯ ಕೇಳಿದ್ದೇವೆ. ಸ್ಪೀಕರ್ ಅವರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇದು ಕಾಂಗ್ರೆಸ್ನ ದುರುಳ ನೀತಿ. ಅವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ" ಎಂದರು.
ಸದನ ಬಹಿಷ್ಕಾರ: "ಶಾಸಕರನ್ನು ಅಮಾನತು ಮಾಡಿರುವುದನ್ನು ಖಂಡಿಸುತ್ತೇವೆ. ಇದು ಸದನಕ್ಕೆ ಅಗೌವರ. ನ್ಯಾಯಾಂಗ ತನಿಖೆಗೆ ಆಗ್ರಹಿಸುವುದು ಗೂಂಡಾಗಿರಿ ಆಗುತ್ತದೆಯೇ? ಕಾಂಗ್ರೆಸ್ನ ಏಜೆಂಟರಂತೆ ಸ್ಪೀಕರ್ ಕೆಲಸ ಮಾಡುತ್ತಿದ್ದಾರೆ. ಅಮಾನತು ಗೊಂಡಿರುವ ಶಾಸಕರು ಸದನಕ್ಕೆ ಬರುವವರೆಗೂ, ನಮ್ಮ ಎಲ್ಲಾ ಶಾಸಕರು ಮುಂದಿನ ಅಧಿವೇಶನವನ್ನು ಬಹಿಷ್ಕಾರ ಮಾಡುತ್ತೇವೆ" ಎಂದು ಹೇಳಿದರು.
ಗುತ್ತಿಗೆ ಮೀಸಲಾತಿ ಮಸೂದೆ ಅಸಂವಿಧಾನಿಕ: "ಸರ್ಕಾರ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮಸೂದೆ ಸಂವಿಧಾನ ವಿರೋಧಿ. ಧರ್ಮದ ಆಧಾರದ ಮೇಲೆ ಯಾವುದೇ ರೀತಿಯ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಅಂಬೇಡ್ಕರ್ ಅವರ ಸಂವಿಧಾನ ಎಲ್ಲ ಧರ್ಮಗಳು ಒಟ್ಟಿಗೆ ಹೋಗಬೇಕು ಎನ್ನುವ ಆಶಯ ಹೊಂದಿದ್ದರೆ, ಈ ಮಸೂದೆ ಸಮಾಜವನ್ನ ಒಡೆಯುವ ಬಿಲ್ ಆಗಿದೆ" ಎಂದರು.
"ಕಾಂಗ್ರೆಸ್ ಪಕ್ಷ ಈಗಾಗಲೇ ಒಂದು ಬಾರಿ ದೇಶವನ್ನು ವಿಭಜನೆ ಮಾಡಿದೆ. ಈಗ ವೋಟಿನ ರಾಜಕಾರಣಕ್ಕೆ ಮತ್ತೂಮ್ಮೆ ಒಂದು ಸಮುದಾಯದ ಓಲೈಕೆ ಮಾಡಲು ಹೊರಟಿದೆ. ಈ ಮಸೂದೆ ಹಿಂದೂಗಳ ಭಾವನೆಗೆ ಧಕ್ಕೆ ತರುವುದರ ಜೊತೆಗೆ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದ ಗುತ್ತಿಗೆದಾರರ ಹಕ್ಕನ್ನು ಕಸಿದುಕೊಳ್ಳಲ್ಲಿದೆ" ಎಂದು ಹೇಳಿದರು.
ಇದನ್ನೂ ಓದಿ: ಪೀಠಕ್ಕೆ ಅಗೌರವ: 6 ತಿಂಗಳ ಕಾಲ 18 ಬಿಜೆಪಿ ಶಾಸಕರ ಅಮಾನತುಗೊಳಿಸಿ ಸಭಾಧ್ಯಕ್ಷರ ಆದೇಶ
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, " ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸುವ ಕುರಿತ ಗೌರವಾನ್ವಿತ ಸ್ಪೀಕರ್ ಅವರ ನಿರ್ಧಾರವು ಪ್ರಜಾಪ್ರಭುತ್ವ ವಿರೋಧಿ ನಡೆ" ಎಂದು ದೂರಿದರು.
"ಆಡಳಿತ ಪಕ್ಷದ ಹಿರಿಯ ಸಚಿವ ರಾಜಣ್ಣ ಅವರು ಸದನದ ಒಳಗೆ ಬಂದು ಅಂಗಲಾಚಿದ್ದಾರೆ. ಹನಿಟ್ರ್ಯಾಪ್ಗೆ ಒಳಗಾಗಿದ್ದೇನೆ; ರಾಜ್ಯ ಹಾಗೂ ದೇಶದ 48ಕ್ಕೂ ಹೆಚ್ಚು ರಾಜಕಾರಣಿಗಳು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎಂದು ಬಹಿರಂಗವಾಗಿ ಸದನದಲ್ಲಿ ತಿಳಿಸಿದ ಸಂದರ್ಭದಲ್ಲಿ ಆ ಸಚಿವರಿಗೆ ರಕ್ಷಣೆ ಕೊಡುವ ಕರ್ತವ್ಯ ಸಭಾನಾಯಕರಾದ ಮುಖ್ಯಮಂತ್ರಿಗಳದು; ಅದೇ ರೀತಿ ಮಾನ್ಯ ಸಭಾಪತಿಗಳದ್ದು" ಎಂದರು.
"ಸದನದ 224 ಶಾಸಕರ ಮೇಲೂ ಕಳಂಕ ಬಂದಿದೆ. ಈ 224 ಶಾಸಕರಿಗೆ ರಕ್ಷಣೆ ಕೊಡುವ ಸ್ಥಾನದಲ್ಲಿ ಸಭಾಧ್ಯಕ್ಷರು ಕುಳಿತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ವಿಪಕ್ಷವಾಗಿ ನಾವು ಸಚಿವರ ಪರವಾಗಿ ಹೋರಾಟ ಮಾಡಿದರೆ ನಮ್ಮನ್ನು ಕತ್ತು ಹಿಡಿದು ಹೊರದಬ್ಬುವ ಕೆಲಸ ಮಾಡಿದ್ದು ಇದು ಖಂಡಿತ ಸರಿಯಲ್ಲ" ಎಂದು ಖಂಡಿಸಿದರು.
"ಮುಖ್ಯಮಂತ್ರಿಗಳು ರಕ್ಷಣೆಯ ಹೊಣೆಗಾರಿಕೆ ವಹಿಸಬೇಕಿತ್ತು. ನೀವೇ ಸಚಿವರ ರಕ್ಷಣೆಗೆ ಬರಬೇಕಿತ್ತು. ರಕ್ಷಣೆ ವಿಚಾರಕ್ಕೆ ಪ್ರತಿಭಟನೆ ಮಾಡಿದರೆ ನಮ್ಮ ಶಾಸಕರನ್ನು ಎತ್ತಿ ಹಾಕುವ ಕೆಲಸ ಮಾಡಿದ್ದಾರೆ. ಇದು ಖಂಡಿತ ಸರಿಯಲ್ಲ" ಎಂದು ಆಕ್ಷೇಪಿಸಿದರು.
ಸರ್ಕಾರದಿಂದ ಶಾಸಕರನ್ನು ಬೀದಿಗೆ ತರುವ ಕೆಲಸ: "ದೇಶದ ಮುಂದೆ ಶಾಸಕರ ಗೌರವ ಹರಾಜಾಗುವಂತಾಗಿದೆ. ಅಧಿಕಾರದ ಮದ ಎಲ್ಲಿಗೆ ಬಂದಿದೆ ಎಂದರೆ ಕಾಂಗ್ರೆಸ್ ಪಕ್ಷದ ಪಾಪದ ಕೊಡ ತುಂಬಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದ್ದು, ಇದರ ಪರಿಣಾಮವಾಗಿ ಸಚಿವರು, ಶಾಸಕರನ್ನು ಬೀದಿಗೆ ತರುವ ಕೆಲಸವನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆ" ಎಂದು ಟೀಕಿಸಿದರು.
"ದಲಿತ, ಪರಿಶಿಷ್ಟ ಪಂಗಡದ ಸೇರಿದ ಸಚಿವರ ಮಾನ ಹರಾಜಾಗುವ ಕೆಲಸ ನಡೆದಿದ್ದು, ಅವರ ರಕ್ಷಣೆಗೆ ಬರುವ ತಾಕತ್ತಿಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು. ಹಿಂದೆ ಇವರೇ ಮುಖ್ಯಮಂತ್ರಿ ಆಗಿದ್ದಾಗ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೆ ಮುಸ್ಲಿಂ ಪುಡಾರಿಗಳು ಬೆಂಕಿ ಹಚ್ಚಿದ್ದರು. ಆದರೆ, ಆ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ರಕ್ಷಣೆಗೆ ಅಂದಿನ ಮುಖ್ಯಮಂತ್ರಿಗಳು ಬಂದಿರಲಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದರು.
"ಅದೇ ರೀತಿ ಮತ್ತೊಮ್ಮೆ ಪುನರಾವರ್ತನೆಯಾಗಿದೆ. ದಲಿತರ ಬಗ್ಗೆಯೂ ಕಾಳಜಿ ಇಲ್ಲ; ಪರಿಶಿಷ್ಟ ಪಂಗಡದವರ ಬಗ್ಗೆ ಕಾಳಜಿ ಇಲ್ಲ. ಕೇವಲ ಮುಸಲ್ಮಾನರ ಹಿಂದೆ ಹೊರಟ ಮುಖ್ಯಮಂತ್ರಿಗಳು ಸದನದಲ್ಲಿ ಶಾಸಕರು, ಸಚಿವರ ರಕ್ಷಣೆಗೆ ಬರುತ್ತಿಲ್ಲ ಎಂದಾದರೆ ಇಂಥ ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಮುಂದುವರಿಯಬೇಕೇ ಎಂದು ಯೋಚಿಸಬೇಕು ಎಂದರು.
ನಿನ್ನೆ ದಿನ ಸದನ ನಡೆಯುವ ಸಂದರ್ಭದಲ್ಲಿ ಯಾರು ಚೀಟಿ ಕೊಟ್ಟರು? ಎಲ್ಲವೂ ತನಿಖೆ ಮಾಡಲಿ. ಬಿಜೆಪಿ- ಜೆಡಿಎಸ್ ಪಕ್ಷಗಳು ಈ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸುತ್ತೇವೆ. ಅಲ್ಲದೆ ಗೌರವಾನ್ವಿತ ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ" ಎಂದು ಪ್ರಕಟಿಸಿದರು.
ದೇಶವ್ಯಾಪಿ ಚರ್ಚೆಯಾಗುತ್ತಿದೆ ಹನಿಟ್ರ್ಯಾಪ್: "ಆಡಳಿತ ಪಕ್ಷದ ಸಚಿವರ ರಕ್ಷಣೆಗೆ ಬಾರದ ಮುಖ್ಯಮಂತ್ರಿಗಳ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು. ಮುಖ್ಯಮಂತ್ರಿಗಳ ನಡೆಯೂ ಪ್ರಶ್ನಾರ್ಹ ಎಂದು ಅವರು ತಿಳಿಸಿದರು. ಕರ್ನಾಟಕದ ಸಚಿವರ ಹನಿಟ್ರ್ಯಾಪ್ ಕುರಿತ ಹೇಳಿಕೆ ದೇಶವ್ಯಾಪಿ ಚರ್ಚೆಗೆ ಒಳಪಡುತ್ತಿದೆ" ಎಂದು ವಿವರಿಸಿದರು.
"ನಡೆದಿರುವುದು ಸತ್ಯ ಎಂದು ಸತೀಶ್ ಜಾರಕಿಹೊಳಿ ಅವರೂ ಹೇಳಿಕೆ ಕೊಟ್ಟಿದ್ದಾರೆ. ಹನಿಟ್ರ್ಯಾಪ್ ಮಾಡಿದ ಶಾಸಕರು, ಸಚಿವರ ಹೆಸರು ಬಹಿರಂಗಪಡಿಸಲು ಮುಖ್ಯಮಂತ್ರಿಗಳು ಸೂಚಿಸಬೇಕಿತ್ತು. ತನಿಖೆಗೆ ಆದೇಶಿಸುವುದಾಗಿ ಹೇಳುವ ಧೈರ್ಯ ತೋರಿಸಬೇಕಿತ್ತು ಎಂದು ಸವಾಲು ಹಾಕಿದರು. ಮುಖ್ಯಮಂತ್ರಿಗಳು ಆ ಧೈರ್ಯ ತೋರಿಲ್ಲ ಎಂದು ಟೀಕಿಸಿದರು.
ರಾಜ್ಯದ ಜನರ ಮುಂದೆ ಮುಖ್ಯಮಂತ್ರಿಗಳ ಬಂಡವಾಳ ಬಯಲಾಗಿದೆ. ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಮುಂದೆ ಬೆತ್ತಲಾಗಿದೆ ಎಂದು ತಿಳಿಸಿದರು. ರಾಜ್ಯದ ತೆರಿಗೆ ಹಣವನ್ನು ಒಂದು ಧರ್ಮಕ್ಕೆ ಸೀಮಿತವಾಗಿ ಹಂಚುವುದಾದರೆ ಇದನ್ನು ನೋಡಿಕೊಂಡು ಸುಮ್ಮನೆ ಕೂರಬೇಕೇ?" ಎಂದು ಕೇಳಿದರು.