ಬೆಂಗಳೂರು: ಜಮ್ಮು - ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಿ (ಎನ್ಐಎ) ಈಗಾಗಲೇ ಆರಂಭಿಸಿದೆ. ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಭರತ್ ಭೂಷಣ್ ಅವರ ಪತ್ನಿಯಿಂದ ಎನ್ಐಎ ಅಧಿಕಾರಿಗಳ ತಂಡ ಮಾಹಿತಿ ಪಡೆದುಕೊಂಡಿದೆ.
ಮತ್ತಿಕೆರೆಯ ಸುಂದರ್ ನಗರದಲ್ಲಿರುವ ಭರತ್ ಭೂಷಣ್ ನಿವಾಸಕ್ಕೆ ಶುಕ್ರವಾರವೇ ಭೇಟಿ ನೀಡಿದ್ದ ಎನ್ಐಎ ಅಧಿಕಾರಿಗಳ ತಂಡ, ಭರತ್ ಭೂಷಣ್ ಅವರ ಪತ್ನಿ ಸುಜಾತರಿಂದ ಘಟನಾ ದಿನದ ಮಾಹಿತಿ ಪಡೆದುಕೊಂಡಿದೆ. ದಾಳಿ ನಡೆದ ಸಂದರ್ಭದಲ್ಲಿನ ಘಟನಾವಳಿಗಳು, ಕೃತ್ಯಕ್ಕೆ ಮುನ್ನ ಉಗ್ರರು ಏನು ಮಾತನಾಡಿದರು, ಅವರ ಮುಖಚಹರೆ ಮತ್ತಿತರ ವಿವರಗಳನ್ನ ಎನ್ಐಎ ಅಧಿಕಾರಿಗಳು ಕಲೆಹಾಕಿದ್ದಾರೆ.
ಏಪ್ರಿಲ್ 22ರಂದು ಜಮ್ಮು - ಕಾಶ್ಮೀರದ ಬೈಸರನ್ ಕಣಿವೆಯ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರವಾಸಿಗರು ಸೇರಿದಂತೆ 26 ಜನ ಅಮಾಯಕರು ಸಾವನ್ನಪ್ಪಿದರೆ, 20 ಜನ ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನ ಎನ್ಐಎಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು. ತನಿಖೆ ಕೈಗೆತ್ತಿಕೊಂಡಿರುವ ಎನ್ಐಎ ಅಧಿಕಾರಿಗಳ ತಂಡ ಉಗ್ರ ಕೃತ್ಯ ನಡೆದ ಸ್ಥಳ, ಉಗ್ರರ ಪ್ರವೇಶ ಮತ್ತು ನಿರ್ಗಮನದ ಕುರುಹುಗಳ ಕುರಿತು ಈಗಾಗಲೇ ಪರಿಶೀಲನೆ ಆರಂಭಿಸಿದೆ.
ಇನ್ನು ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಮನೆಗೆ ಇಂದು ಎನ್ಐಎ ತಂಡ ಭೇಟಿ ನೀಡಿ, ಕುಟುಂಬಸ್ಥರಿಗೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದೆ. 'ಇಂದು ಮಧ್ಯಾಹ್ನ ಎನ್ಐಎ ಅಧಿಕಾರಿಗಳು ನಮ್ಮ ಮನಗೆ ಬರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ' ಎಂದು ಮಂಜುನಾಥ್ ಅವರ ಪತ್ನಿ ಪಲ್ಲವಿ ಅವರು ಮಾಹಿತಿ ನೀಡಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ಬಳಿಕ ತೀವ್ರ ಶೋಧ ಕಾರ್ಯಾಚರಣೆಗೆ ಇಳಿದಿರುವ ಭದ್ರತಾ ಪಡೆಯು, ಜಮ್ಮು ಕಾಶ್ಮೀರದಲ್ಲಿ 175 ಶಂಕಿತರನ್ನು ವಶಕ್ಕೆ ಪಡೆದಿದೆ. ಇನ್ನು ಉಗ್ರರ ಮನೆಗಳನ್ನು ಧ್ವಂಸ ಮಾಡಿದೆ. ಜೊತೆಗೆ ಸಿಂಧೂ ನದಿ ನೀರು ಒಪ್ಪಂದ ಸ್ಥಗಿತಗೊಳಿಸುವುದು ಮತ್ತು ಪಾಕ್ ಪ್ರಜೆಗಳನ್ನು ದೇಶದಿಂದ ವಾಪಸ್ ಕಳಿಸುವ ಕಠಿಣ ನಿರ್ಧಾರಗಳನ್ನು ಭಾರತ ಕೈಗೊಳ್ಳುವ ಮೂಲಕ ಪಾಕ್ಗೆ ಎಚ್ಚರಿಕೆಯನ್ನೂ ನೀಡಿದೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ಕೃತ್ಯಕ್ಕೆ ಕರ್ನಾಟಕದ ಮೂವರು ಬಲಿ: ವಾರದ ಹಿಂದಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಭರತ್ ಭೂಷಣ್ ಸಾವು
ಇದನ್ನೂ ಓದಿ: ಪಾಕ್ನಿಂದ ಸತತ 4ನೇ ದಿನವೂ ಕದನ ವಿರಾಮ ಉಲ್ಲಂಘನೆ: ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರವಾಸೋದ್ಯಮ ಛಿದ್ರ: ಶೇಕಡಾ 90 ರಷ್ಟು ಬುಕಿಂಗ್ಗಳು ರದ್ದು