ಬೆಂಗಳೂರು: ಆರ್ಸಿಬಿ ವಿಜಯೋತ್ಸವ ಮೆರವಣಿಗೆ, ಫ್ರೀ ಪಾಸ್, ಅಧಿಕ ಜನಜಂಗುಳಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಕಾಲ್ತುಳಿಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಕ್ರೀಡಾಂಗಣಕ್ಕೆ ಅಧಿಕೃತ ಟಿಕೆಟ್ ಹೊಂದಿದವರಿಗೆ ಮಾತ್ರ ಪ್ರವೇಶ ಎಂದು ತಿಳಿದಾಕ್ಷಣ, ಅನೇಕ ಮಂದಿ ಟಿಕೆಟ್ ಇಲ್ಲದೆ, ಟಿಕೆಟ್ ಇರುವವರೊಂದಿಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಜನ ದಟ್ಟಣೆ ಉಂಟಾಗಿ ಕೆಲವರು ಕೆಳಗೆ ಬಿದ್ದಿದ್ದಾರೆ. ಸ್ಟೇಡಿಯಂ ಗೇಟ್ ಅನ್ನು ಹತ್ತಿ ಒಳನುಗ್ಗಲು ಪ್ರಯತ್ನಿಸಿದಾಗ ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಬಹುತೇಕ ಯುವಕರಾಗಿದ್ದು, ಮಹಿಳೆಯರು ಮತ್ತು ಪುರುಷರು ಆಗಿದ್ದು, ಅನೇಕರು ವಿದ್ಯಾರ್ಥಿಗಳಾಗಿದ್ದಾರೆ.
ನಿರೀಕ್ಷೆಗೂ ಮೀರಿದ ಜನರು: ಸ್ಟೇಡಿಯಂ ಆಸನಗಳ ಸಾಮರ್ಥ್ಯ 35 ಸಾವಿರವಿದ್ದು, 2ರಿಂದ 3 ಲಕ್ಷ ಜನರು ಬಂದಿದ್ದಾರೆ. ಮಂಗಳವಾರ ಸಂಜೆ ಐಪಿಎಲ್ ಅಂತಿಮ ಪಂದ್ಯ ನಡೆದಿದ್ದು, ಮರುದಿನ ಹೆಚ್ಚಿನ ಜನರು ಸೇರುವುದಿಲ್ಲ ಎಂದು ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕ್ರಮ ಆಯೋಜಿಸಿದೆ. ಆದರೆ, ಯಾರು ನಿರೀಕ್ಷಿಸದ ಪ್ರಮಾಣದಲ್ಲಿ ಜನರು ಆಗಮಿಸಿದ್ದು, ಕ್ರೀಡಾಂಗಣದ ಆಸನ ಸಾಮರ್ಥ್ಯಕ್ಕಿಂತ ಸ್ವಲ್ಪ ಹೆಚ್ಚು ಜನರು ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಮಟ್ಟಿನ ಜನರನ್ನು ನಿರೀಕ್ಷಿಸಿರಲಿಲ್ಲ ಎಂದು ಸಿಎಂ ತಿಳಿಸಿದ್ದಾರೆ.
ಸ್ಟೇಡಿಯಂನಲ್ಲಿ ಸಣ್ಣ ಗೇಟ್ಗಳಿದ್ದು, ಅದರ ಮೂಲಕವೇ ಜನರು ಹೋಗಬೇಕಿದೆ. ಈ ಗೇಟ್ಗಳನ್ನು ಮುರಿದು ಒಳನುಗ್ಗಲಾರಂಭಿಸಿದಾಗ ಕಾಲ್ತುಳಿತ ಸಂಭವಿಸಿದೆ. ಈ ಮಟ್ಟದ ಜನರು ಬರುತ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಇದೇ ಈ ಘಟನೆಗೆ ಪ್ರಮುಖ ಕಾರಣವಾಗಿದೆ. ಏನು ಆಗಿಲ್ಲ ಎಂದು ನಾನು ಹೇಳುವುದಿಲ್ಲ. ಈ ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದರು.
ವಿಜಯೋತ್ಸವ ಮೆರವಣಿಗೆ ಗೊಂದಲ: ಭದ್ರತಾ ದೃಷ್ಟಿಯಿಂದ ಕ್ರೀಡಾಂಗಣದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸುವುದಿಲ್ಲ, ಬದಲಿಗೆ ಅಭಿನಂದನಾ ಕಾರ್ಯಕ್ರಮ ಮಾತ್ರ ನಡೆಯಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು 11.56ಕ್ಕೆ ಘೋಷಿಸಿದರು.
ಈ ನಡುವೆ ಆರ್ಸಿಬಿ ತಂಡ 3.14ಕ್ಕೆ ಬುಧವಾರ ಸಂಜೆ 5ಕ್ಕೆ ವಿಕ್ಟರಿ ಪೆರೇಡ್ ನಡೆಸುವುದಾಗಿ ತಿಳಿಸಿತು. ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ವಿಜಯೋತ್ಸವದ ಮೆರವಣಿಗೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಎಲ್ಲರೂ ರೋಡ್ ಶೋ ಅನ್ನು ಶಾಂತಿಯುತವಾಗಿ ಆನಂದಿಸಲು ಪೊಲೀಸರು ಮತ್ತು ಇತರ ಅಧಿಕಾರಿಗಳು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ಕೋರುತ್ತೇವೆ. ಸೀಮಿತ ಪ್ರವೇಶದ ಉಚಿತ ಪಾಸ್ಗಳು shop.royalchallengers.com ಲಭ್ಯವಿದೆ ಎಂದು ಪೋಸ್ಟ್ ಮಾಡಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಹಾಸನದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಪೊಲೀಸರ ಹೇಳಿಕೆ ಮತ್ತು ಆರ್ಸಿಬಿಯ ಪೋಸ್ಟ್, ವಿಜಯೋತ್ಸವ ಮೆರವಣಿಗೆ ನಡೆಯುತ್ತದೆಯಾ ಇಲ್ಲವಾ ಎಂಬ ಬಗ್ಗೆ ಗೊಂದಲ ಮೂಡಿಸಿತು.
ಪೊಲೀಸ್ ಮೂಲಗಳು ಹೇಳುವಂತೆ, ನಾವು ಯಾವುದೇ ವಿಜಯೋತ್ಸವದ ಮೆರವಣಿಗೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಟಿಕೆಟ್ ಇದ್ದವರಿಗೆ ಮಾತ್ರ ಸ್ಟೇಡಿಯಂಗೆ ಪ್ರವೇಶ ಮಾಡಲಾಗಿತ್ತು. ಸ್ಟೇಡಿಯಂ ಹೊರಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ ಜನರು ಒಳಗೆ ಹೋಗುವ ಉದ್ದೇಶದಿಂದ ಗೇಟ್ ಜಂಪ್ ಮಾಡಿದ್ದಾರೆ. ಟಿಕೆಟ್ ಹೊಂದಿಲ್ಲದ ಅನೇಕರು ಕ್ರೀಡಾಂಗಣ ಪ್ರವೇಶಿಸುವ ಯತ್ನ ಮಾಡಿದಾಗ ಕೆಲವರು ಪರಸ್ಪರ ತಳ್ಳಾಟ ಶುರು ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚುತ್ತಲೇ ಇದ್ದ ಜನಸಾಗರ: ಪೊಲೀಸರ ಪ್ರಕಾರ, 1 ಕಿ.ಮೀ ಆಸುಪಾಸಿನಲ್ಲಿ 50 ಸಾವಿರ ಜನರು ಇದ್ದು, ಈ ಸಂಖ್ಯೆ ಹೆಚ್ಚುತ್ತಲೇ ಹೋಯಿತು.
ಅಭಿಮಾನಿಗಳು ಮತ್ತು ಜನರು ನಿರೀಕ್ಷೆಗೂ ಮೀರಿ ಸೇರಿದ್ದರು. ವಿಧಾನಸೌಧ ಮುಂಭಾಗದಲ್ಲೇ 1 ಲಕ್ಷ ಜನರು ಸೇರಿದ್ದರು. ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದುರಂತ ಸಂಭವಿಸಿತು. ಯಾರು ಕೂಡ, ಸರ್ಕಾರವಾಗಲಿ, ಕ್ರಿಕೆಟ್ ಅಸೋಸಿಯೇಷನ್ ಆಗಲಿ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ದೊಡ್ಡ ಪ್ರಮಾಣದ ಜನ ಜಂಗುಳಿ ನಿಯಂತ್ರಣಕ್ಕೆ ಪೊಲೀಸರು ಸ್ವಲ್ವ ಪ್ರಮಾಣದ ಬಲವನ್ನು ಬಳಕೆ ಮಾಡಿದರು. ಕೆಲವು ದೃಶ್ಯಗಳಲ್ಲಿ, ಅಭಿಮಾನಿಗಳನ್ನು ಚದುರಿಸಲು ಪೊಲೀಸ್ ಸಿಬ್ಬಂದಿ ಲಾಠಿಗಳನ್ನು ಬಳಸಿರುವುದು ಕಂಡಿದೆ. ಜನದಟ್ಟಣೆ ಹೆಚ್ಚಾದ ಹಿನ್ನೆಲೆ ತಕ್ಷಣಕ್ಕೆ ಬೆಂಗಳೂರು ಮೆಟ್ರೋ ಕೂಡ ಕಬ್ಬನ್ ಪಾರ್ಕ್ ಮತ್ತು ಬಿಆರ್ ಅಂಬೇಡ್ಕರ್ ಸ್ಟೇಷನ್ನಲ್ಲಿ ನಿಲುಗಡೆ ಮಾಡುವುದಿಲ್ಲ ಎಂದು ಘೋಷಿಸಿತು.
ಇದನ್ನೂ ಓದಿ: ಕಾಲ್ತುಳಿತ ಪ್ರಕರಣದ ಬಗ್ಗೆ ಹೈಕೋರ್ಟ್ಗೆ ಅರ್ಜಿ: ಮಧ್ಯಾಹ್ನ 2:30ಕ್ಕೆ ವಿಚಾರಣೆ