ವಿಶೇಷ ವರದಿ: ನೂರುಲ್ಲಾ. ಡಿ
ದಾವಣಗೆರೆ: ಕಾಂತರಾಜು ಮತ್ತು ಜಯಪ್ರಕಾಶ ಹೆಗಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ನೀಡಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯು ರಾಜ್ಯ ರಾಜಕೀಯದಲ್ಲಿ ಪರ ಮತ್ತು ವಿರೋಧ ಚರ್ಚೆಗೆ ಕಾರಣವಾಗಿದೆ.
ನಾಳೆ (ಏಪ್ರಿಲ್ 17) ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚೆ ನಡೆಯಲಿದೆ. ಇದಕ್ಕೂ ಮುನ್ನ ವರದಿ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ವೀರಶೈವ ಲಿಂಗಾಯತರ ಭದ್ರಕೋಟೆಯಾಗಿರುವ ದಾವಣಗೆರೆಯಲ್ಲಿ ತುಸು ಹೆಚ್ಚಾಗಿಯೇ ಇದೆ. ಇಲ್ಲಿಯ ಸಚಿವರು, ಶಾಸಕರು, ಸ್ವಮೀಜಿಗಳು ಸೇರಿದಂತೆ ಹಲವರು ವರದಿ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಈ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದು, ಇತರೆ ವರ್ಗದ ಜನರು, ಸ್ವಾಮೀಜಿಗಳು ಇದಕ್ಕೆ ಕಿಡಿಕಾರಿದ್ದಾರೆ.
''ನೀವು ಗೆದ್ದಿರುವುದು ಹಿಂದುಳಿದ ಅಲ್ಪಸಂಖ್ಯಾತ ಮತಗಳಿಂದ, ಅದು ನೆನಪಿರಲಿ'' ಅಂತ ಪತ್ರಿಕಾ ಪ್ರಕಟಣೆ ಮೂಲಕ ಹೊಸದುರ್ಗದ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಶಾಸಕ ಶಾಮನೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾ ಈ ವರದಿಯನ್ನು ತಿರಸ್ಕರಿಸಿದರೆ, ಬಹುತೇಕ ಲಿಂಗಾಯತರು ಈ ವರದಿಯನ್ನು ಅವೈಜ್ಞಾನಿಕ ವರದಿ, ಹೊಸದಾಗಿ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
''ವರದಿ ಬಗ್ಗೆ ಈ ಕೂಡಲೇ ಸಭೆ ಮಾಡುತ್ತೇವೆ, ವೀರಶೈವರು ಹಾಗೂ ಒಕ್ಕಲಿಗರು ಸೇರಿ ಈ ವರದಿ ವಿರುದ್ಧ ಹೋರಾಟ ಮಾಡಲಿದ್ದೇವೆ'' ಎಂದು ಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಠಾಧೀಶರಿಂದ ವರದಿ ಬಗ್ಗೆ ಪರ-ವಿರೋಧ: ವಿವಿಧ ಮಠಾಧೀಶರಿಂದಲೂ ಜಾತಿಗಣತಿ ಬಗ್ಗೆ ಪರ-ವಿರೋಧ ವ್ಯಕ್ತವಾಗಿದೆ. ಈಶ್ವರಾನಂದಪುರಿ ಶ್ರೀಗಳು ಶಾಸಕ ಶಾಮನೂರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು, ''ಈ ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಇದರಲ್ಲಿ ನಮಗೆ ಕಡಿಮೆ ಜನಸಂಖ್ಯೆಯನ್ನು ತೋರಿಸಲಾಗಿದೆ. ಹಾಗಾಗಿ ಈ ವರದಿಯನ್ನು ಮತ್ತೊಂದು ಸಾರಿ ಹೊಸದಾಗಿ ಮಾಡಬೇಕೆಂದು'' ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
''10 ವರ್ಷಗಳ ಹಿಂದೆ ಈ ಜಾತಿ ಗಣತಿ ನಡೆದಿದೆ, ಈ ಜಾತಿ ಗಣತಿ ವೈಜ್ಞಾನಿಕವಾಗಿಲ್ಲ, ಸರಿಯಾಗಿಯೂ ಇಲ್ಲ ಎಂಬುದು ರಾಜ್ಯದ ವಿವಿಧ ವರ್ಗದ ಜನರ ಅಭಿಪ್ರಾಯವಾಗಿದೆ. ಸರ್ಕಾರ ಏ.17ಕ್ಕೆ ಮಂತ್ರಿಮಂಡಲದಲ್ಲಿ ಗಂಭೀರವಾಗಿ ಚರ್ಚೆ ಮಾಡಲಿದೆ. ಇದಕ್ಕೆ ನಮ್ಮ ಸಮ್ಮತಿ ಇಲ್ಲ. ಹಾಗಾಗಿ ಹೊಸದಾಗಿ ಶಾಸ್ತ್ರೀಯವಾಗಿ ಜನ ಗಣತಿ ಮಾಡುವ ಅವಶ್ಯಕತೆ ಇದೆ. ಇದರಲ್ಲಿ ಲಿಂಗಾಯತ ಸಂಖ್ಯೆ ಕಡಿಮೆ ಇದೆ. ಬೇರೆ ವರ್ಗದ ಸಂಖ್ಯೆ ಹೆಚ್ಚಿದೆ. ಇದರಿಂದ ಹೊಸ ಜನ ಗಣತಿ ಮಾಡುಲು ಬಹುತೇಕರ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ನಮ್ಮ ಸಹಮತ ಕೂಡ ಇದೆ'' ಎಂದಿದ್ದಾರೆ.
''ಈ ವರದಿ ಬಿಡುಗಡೆ ಆಗಲ್ಲ ಎಂಬ ನಂಬಿಕೆ ಇದೆ. ಸರ್ಕಾರ ಕೂಡ ಬಿಡುಗಡೆಗೂ ಮುನ್ನ ಸಮಾಜಗಳ ಒಲವು ಹೇಗಿದೆ ಎಂದು ಚರ್ಚಿಸುತ್ತಿದೆ. ಬಹುತೇಕ ಶಾಸಕರು, ಮಂತ್ರಿಗಳು ಇದರ ಪರ ಇಲ್ಲ. ಇದನ್ನು ಹೊಸದಾಗಿ ಮಾಡಬೇಕೆಂಬ ಅಭಿಪ್ರಾಯ ಇದೆ. ಇದು ಕೇವಲ ಒಕ್ಕಲಿಗರು, ಲಿಂಗಾಯತರಿಗೆ ಅಂತಲ್ಲ, ಎಲ್ಲಾ ವರ್ಗದವರಿಗೆ ಅನ್ಯಾಯ ಆಗಿದೆ. ನಾವು ಸರ್ಕಾರಕ್ಕೆ ಎಚ್ಚರಿಕೆ ಕೊಡಲ್ಲ, ಬದಲಾಗಿ ತಿಳುವಳಿಕೆ ಕೊಡಲಿದ್ದೇವೆ'' ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಶ್ವರಾನಂದಪುರಿ ಸ್ವಾಮೀಜಿ ಕಿಡಿ: ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಹೊಸದುರ್ಗದ ಕನಕಗುರುಪೀಠ ಶಾಖಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ''ಜಾತಿ ಗಣತಿ ವಿಚಾರವಾಗಿ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಸರಿಯಾದುದಲ್ಲ. ರಾಜ್ಯದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ಅಷ್ಟೇ ಇರುವಂತೆ ಮಾತಾಡುತ್ತಿದ್ದಾರೆ. ಒಬ್ಬ ಜನಪ್ರತಿನಿಧಿ ಸಾರ್ವಜನಿಕ ಚುನಾವಣೆಗಳಲ್ಲಿ ಒಂದು ಜಾತಿಯಿಂದ ಆರಿಸಿ ಬರಲು ಸಾಧ್ಯವಿಲ್ಲ ಎಂಬುದನ್ನು ಮರೆತ್ತಿದ್ದೀರಿ. ಕಳೆದ ವರ್ಷದ ಚುನಾವಣೆಯಲ್ಲಿ ತಾವು ಮತ್ತು ನಿಮ್ಮ ಮಗ ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಕೇವಲ ನಿಮ್ಮ ಜಾತಿಯ ವೋಟುಗಳಿಂದಲೇ ಗೆದ್ದು ಬಂದಿದ್ದೀರಾ ಅಥವಾ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಬೆಂಬಲದಿಂದ ಗೆದ್ದು ಬಂದಿದ್ದೀರಾ ಎನ್ನುವುದನ್ನು ಬಹಿರಂಗವಾಗಿ ಸ್ಪಷ್ಟ ಪಡಿಸಬೇಕು. ಒಂದು ಸರ್ಕಾರ ನಡೆಯೋದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತ ಇರುವ ಪಕ್ಷದಿಂದ ಮಾತ್ರ. ಕೇವಲ ಎರಡು ಸಮುದಾಯಗಳಿಂದಲ್ಲ. ಹಾಗಾದರೆ ಹಿಂದುಳಿದ ದಲಿತ ಅಲ್ಪಸಂಖ್ಯಾತರ ವಿರೋಧ ಕಟ್ಟಿಕೊಂಡು ಸರ್ಕಾರ ನಡೆಸಲು ಆಗುತ್ತಾ ಎಂದು ಕೇಳಬೇಕಾಗುತ್ತದೆ. ರಾಜ್ಯದಲ್ಲಿ ಶೇ.80ರಷ್ಟು ದಲಿತ ಹಿಂದುಳಿದ ಅಲ್ಪಸಂಖ್ಯಾತರು ಇದ್ದಾರೆ ಅನ್ನುವುದನ್ನು ತಾವು ಮರೆಯಬಾರದು. ಎಲ್ಲಾ ಜಾತಿ ಜನಾಂಗದವರ ವೋಟು ಪಡೆದು ಆಯ್ಕೆಯಾದ ನೀವು ಎಲ್ಲಾ ವರ್ಗದವರ ಪರವಾಗಿ ಮಾತನಾಡಬೇಕು. ಆದರೆ, ನೀವು ಸ್ವಜಾತಿ ಪ್ರೇಮದಿಂದ ಮಾತನಾಡಿದ್ದು ನೋಡಿದರೆ ಮತ ಹಾಕಿದ ಬಹುಸಂಖ್ಯಾತರಿಗೆ ತಮ್ಮನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿದ್ದು ತಪ್ಪಾಯಿತೆಂದು ತಡವಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ'' ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರ ವಾದ: ಈ ವರದಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಶಾಮನೂರು ಶಿವಶಂಕರಪ್ಪ, ''ಈ ವರದಿ ಜಾರಿಯಾದರೆ, ಅವರಿಗೆಯೇ ಉಲ್ಟಾ ಹೊಡೆಯುತ್ತದೆ. ರಾಜ್ಯದಲ್ಲಿ ಎರಡು ಡೇಂಜರ್ ಕಮ್ಯೂನಿಟಿ ಇವೆ. ಮೊದಲಿಗೆ ವೀರಶೈವರು, ಎರಡನೇ ಸ್ಥಾನದಲ್ಲಿ ಒಕ್ಕಲಿಗರಿದ್ದಾರೆ. ವೀರಶೈವ ಲಿಂಗಾಯತರನ್ನು ಹಾಗೂ ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡಲು ಆಗುತ್ತಾ? ಲಿಂಗಾಯತರನ್ನು ಹಾಗೂ ಒಕ್ಕಲಿಗರು ಇಬ್ಬರು ಸೇರಿ ಹೋರಾಟ ಮಾಡ್ತೇವೆ. ವರದಿ ವಿರುದ್ಧ ಇಬ್ಬರು ಸೇರಲಿದ್ದೇವೆ. ನಮ್ಮನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡಲು ಸಾಧ್ಯವೇ ಇಲ್ಲ. ಇದರ ಬಗ್ಗೆ ಸಭೆ ನಡೆದಿದ್ದು, ಮುಂದೇನು ಅನ್ನೋದನ್ನು ಹೇಳುತ್ತೇವೆ'' ಎಂದಿದ್ದಾರೆ.
ಶಾಸಕ ಶಿವಗಂಗಾ ಬಸವರಾಜ ಹೇಳಿಕೆ: ವರದಿ ಬಗ್ಗೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ''ಏಳು ಜನ ಲಿಂಗಾಯತ ಸಚಿವರು ಮೊದಲು ರಾಜೀನಾಮೆ ಕೊಡಲಿ, ಜಾತಿ ಗಣತಿ ಬಗ್ಗೆ ಒಬ್ಬರು ಬಾಯ್ಬಿಡ್ತಿಲ್ಲ'' ಎಂದು ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
''ಬಹಳ ಗೊಂದಲ ಆಗಿದ್ದರಿಂದ ಜಾತಿ ಗಣತಿ ಜಾರಿಗೆ ತರಬಾರದು. ಎರಡ್ಮೂರು ದಿನದಲ್ಲಿ ನಾನು ನನ್ನ ಕ್ಷೇತ್ರದ ಜಾತಿವಾರು ಜನಸಂಖ್ಯೆ ಮಾಹಿತಿ ನೀಡುವೆ. ನಾಳೆ ಸಿಎಂ ಚರ್ಚೆ ಮಾಡಲಿ. ಆದರೆ, ಬಹಿರಂಗಪಡಿಸಬಾರದು. ಎಲ್ಲ ಸಮುದಾಯಕ್ಕೆ ನಾವು ಉತ್ತರ ಕೊಡಬೇಕಾಗುತ್ತೆ. ಲಿಂಗಾಯತ ಸಮಾಜದ ಪರ ಶಾಮನೂರು ಅವರು ನಿಂತಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಕೆಲವು ಕಾರಣಗಳಿಂದ ಮೆಚ್ಚುವೆ. ಅವರ ಪರವಾಗಿ ನಿಲ್ಲುವೆ. ಎಲ್ಲರೂ ಸರ್ಕಾರ ಉರುಳಿಸಲು ಆಗಲ್ಲ. 7 ಜನ ಲಿಂಗಾಯತ ಸಚಿವರು ಕರೆದು ಒಂದು ಸಭೆ ಮಾಡಿಲ್ಲ. ಕೂಡಲೇ ರಾಜೀನಾಮೆ ಕೊಡಿ. ಅವರ ಕೈಯಲ್ಲಿ ಏನು ಕೆಪ್ಯಾಸಿಟಿ ಇಲ್ಲ. ಸಚಿವ ಈಶ್ವರ್ ಖಂಡ್ರೆ ಅವರಿಗೆ ನಾನು ಕಾಲ್ ಮಾಡಿದರೆ ಸ್ವೀಕರಿಸುತ್ತಿಲ್ಲ. ಸಚಿವರು ಇಲ್ಲಿವರೆಗೆ ಒಬ್ಬರು ಮಾತನಾಡಿಲ್ಲ. ಸಭೆ ಕೂಡ ಕರೆದಿಲ್ಲ. ಕೂಡಲೇ ಲಿಂಗಾಯತ ಸಚಿವರು ಶಾಸಕರ ಸಭೆ ಕರೆಯಬೇಕು'' ಎಂದು ಶಾಸಕ ಶಿವಗಂಗಾ ಹೇಳಿದ್ದಾರೆ.
ಬಿಜೆಪಿಗರು ಜಾತಿ ಗಣತಿ ವಿರೋಧಿಗಳಲ್ಲ- ಎಂಪಿ ರೇಣುಕಾಚಾರ್ಯ: ''ವೀರಶೈವ ಲಿಂಗಾಯತರು ಹಾಗೂ ಬಿಜೆಪಿ ಜಾತಿ ಗಣತಿಯ ವಿರೋಧಿಗಳಲ್ಲ'' ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಅಚ್ಚರಿಯ ಹೇಳಿಕೆ ನೀಡಿದರು.
''ಎಲ್ಲಾ ವರ್ಗದವರಿಗೂ ಈ ಜಾತಿ ಗಣತಿಯಲ್ಲಿ ಅನ್ಯಾಯ ಆಗಿದೆ. ವೀರಶೈವ ಲಿಂಗಾಯತ ಒಳಪಂಗಡಗಳನ್ನು ಒಡೆದು ಹಾಕಿ, ಸರ್ಕಾರ ಎಲ್ಲೋ ಒಂದು ಕಡೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆಧಿಕಾರ ಹಂಚಿಕೆ ಆಗುತ್ತೆ ಅಂತ ಹಿಂಬಾಲಕರಿಗೆ ಹೇಳಿಸಿದಂತೆ. ವೀರಶೈವ ಲಿಂಗಾಯಿತರು, ಬಿಜೆಪಿ ಹಾಗೂ ಇತರೆ ಸಮುದಾಯದವರು ಜಾತಿ ಗಣತಿ ವಿರೋಧಿಗಳಲ್ಲ. ಕೋಟ್ಯಂತರ ಹಣ ಖರ್ಚು ಮಾಡಿ ಈ ಜಾತಿ ಗಣತಿ ಮಾಡಿಸಿದ್ದಾರೆ. 10 ವರ್ಷ ಆಯಿತು ಈ ಜಾತಿಗಣತಿ ಮಾಡಿ. ನಮ್ಮ ಮನೆಗಳಿಗೆ ಜಾತಿ ಗಣತಿ ಮಾಡಲು ಯಾರೂ ಬಂದಿಲ್ಲ. ಯಾವುದೇ ಸಮಾಜಗಳ ಜನಸಾಮಾನ್ಯರು ಯಾರ ಮನೆಗೂ ಬಂದಿಲ್ಲ. ವರದಿ ಜಾರಿಯಾದರೆ ಸಮಾಜಗಳ ನಡುವೆ ಒಡಕು ಉಂಟಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.