ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ನಡೆದ ಆಪರೇಷನ್ ಮಕ್ನಾ ಸಕ್ಸಸ್ ಆಗಿದ್ದು, ಮತ್ತೊಂದು ಕಾಡಾನೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ಅರಿವಳಿಕೆ ಚುಚ್ಚುಮದ್ದು ನೀಡಲು ವೈದ್ಯ ಡಾ ರಮೇಶ್ ಹರಸಾಹಸಪಟ್ಟಿದ್ದು, ಕೊನೆಗೂ ಅರಿವಳಿಕೆ ನೀಡಿದ್ದಾರೆ. ತದನಂತರ ಸ್ವಲ್ಪ ದೂರ ಓಡಿ ಹೋಗಿ ಮಕ್ನಾ ಕಾಡಾನೆ ಕುಸಿದು ಬಿದ್ದಿದೆ. ಅದನ್ನ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಈ ಆನೆಯನ್ನ ರೆಡಿಯೋ ಕಾಲರ್ ಅಳವಡಿಸಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಾಂತರ ಮಾಡಲಿದ್ದಾರೆ.
ಸಿಎಂ ಅಭಿನಂದನೆ : ಅರಣ್ಯ ಇಲಾಖೆಯ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ''ಹಾಸನ ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳ ಜನರಿಗೆ ಆತಂಕ ಸೃಷ್ಟಿಸಿದ್ದ ಎರಡು ಕಾಡಾನೆಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಇಂಥದ್ದೊಂದು ಸವಾಲಿನ ಕೆಲಸವನ್ನು ಕೈಗೆತ್ತಿಕೊಂಡು, ಹಗಲಿರುಳೆನ್ನದೆ ಶ್ರಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳು. ನಿಮ್ಮ ಸೇವೆ ಮತ್ತು ಶ್ರಮದಿಂದ ಇಂದು ಹಾಸನದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ'' ಸಿಎಂ ಆಫ್ ಕರ್ನಾಟಕ ಏಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಹಾಸನ ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳ ಜನರಿಗೆ ಆತಂಕ ಸೃಷ್ಟಿಸಿದ್ದ ಎರಡು ಕಾಡಾನೆಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಇಂಥದ್ದೊಂದು ಸವಾಲಿನ ಕೆಲಸವನ್ನು ಕೈಗೆತ್ತಿಕೊಂಡು, ಹಗಲಿರುಳೆನ್ನದೆ ಶ್ರಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳು. ನಿಮ್ಮ ಸೇವೆ… pic.twitter.com/wgBlG6ZwxH
— CM of Karnataka (@CMofKarnataka) March 24, 2025
''ವನ್ಯಜೀವಿ - ಮಾನವ ಸಂಘರ್ಷದ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ. ಆನೆಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ರೈಲ್ವೆ ಹಳಿಗಳ ಬೇಲಿ ಹಾಕುವುದು, ಕಾಡು ಪ್ರಾಣಿಗಳಿಗೆ ಅರಣ್ಯದಲ್ಲೇ ಮೇವು, ನೀರು ಒದಗಿಸುವತ್ತ ನಾವು ಆದ್ಯತೆ ನೀಡಿದ್ದೇವೆ. ಮುಂದಿನ ಕೆಲ ಸಮಯದಲ್ಲಿ ಈ ಸಮಸ್ಯೆಗೆ ಕರ್ನಾಟಕ ಶಾಶ್ವತ ಪರಿಹಾರ ಕಂಡುಕೊಳ್ಳಲಿದೆ ಎಂಬ ವಿಶ್ವಾಸ ನನಗಿದೆ'' ಎಂದು ಸಿಎಂ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ವಿಕ್ರಾಂತ್ ಆನೆ ಸೆರೆ : ಬೇಲೂರು ತಾಲೂಕಿನ ಅರೇಹಳ್ಳಿ ಸಮೀಪದ ವಾಟೆಹಳ್ಳಿ ಗ್ರಾಮದಲ್ಲಿ (ಮಾರ್ಚ್ -20-25) ವಿಕ್ರಾಂತ್ ಎಂಬ ಆನೆ ಸೆರೆಯಾಗಿತ್ತು. ಕೆಲ ದಿನಗಳಿಂದ ಅರಣ್ಯ ಇಲಾಖೆಯ ನಿದ್ದೆಗೆಡಿಸಿದ್ದ ವಿಕ್ರಾಂತ್ ಎಂಬ ಪುಂಡಾನೆ ಸೆರೆಯಾದ ಹಿನ್ನೆಲೆ ಸ್ಥಳೀಯರಲ್ಲಿ ಕೊಂಚ ನಿರಾಳತೆ ಮೂಡಿತ್ತು.
2ನೇ ಕಾಡಾನೆ ಸೆರೆ ಯಶಸ್ವಿ : ಜಿಲ್ಲೆಯಲ್ಲಿ ಮಾರ್ಚ್ 16 ರಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮಾಡಲಾಗಿದ್ದು, ಐದು ದಿನದಲ್ಲಿ ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲಾಗಿತ್ತು. ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿಯ ಪ್ರಮಾಣ ಹೆಚ್ಚಾದ ಹಿನ್ನೆಲೆ ಸರ್ಕಾರ 4 ಪುಂಡಾನೆಗಳ ಸೆರೆಗೆ ಅನುಮತಿ ನೀಡಿದ್ದು, ಅರಣ್ಯ ಸಿಬ್ಬಂದಿ ಕಾಡಾನೆಗೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಈ ಮೂಲಕ ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ನಡೆದ 2ನೇ ಕಾಡಾನೆ ಸೆರೆ ಯಶಸ್ವಿಯಾಗಿದೆ.
ಕೂಲಿಕಾರ್ಮಿಕರನ್ನು ಅಟ್ಟಾಡಿಸಿದ್ದ ಕಾಡಾನೆ : ಬೇಲೂರು ತಾಲೂಕಿನ ಬಿಟ್ಟೋಡು ಕ್ಯಾಂಪಿಗೆ ಮತ್ತಿಗೋಡು ಮತ್ತು ದುಬಾರೆ ಆನೆ ಶಿಬಿರಗಳಿಂದ ಏಳು ಸಾಕಾನೆಗಳು ಆಗಮಿಸಿದ್ದವು. ಮಾರ್ಚ್ 19 ರಂದು ಬೇಲೂರು ತಾಲೂಕಿನ ಬಕ್ರವಳ್ಳಿಯ ಮಲಸವಾರ ಬಳಿ ಕಾಡಾನೆಯೊಂದು ಕೂಲಿಕಾರ್ಮಿಕರನ್ನು ಅಟ್ಟಾಡಿಸಿದ್ದ ಘಟನೆ ನಡೆದಿತ್ತು.
ಇದನ್ನೂ ಓದಿ : ಬೇಲೂರಲ್ಲಿ ಅರಣ್ಯ ಇಲಾಖೆಯಿಂದ ಯಶಸ್ವಿ ಕಾರ್ಯಾಚರಣೆ: ವಿಕ್ರಾಂತ್ ಆನೆ ಸೆರೆ - ELEPHANT CAPTURED