ಬೆಂಗಳೂರು : ವೇಗವಾಗಿ ವಾಹನ ಚಲಾಯಿಸಿ ನಿಯಂತ್ರಣ ತಪ್ಪಿ ರಿಚ್ಮಂಡ್ ಮೇಲುಸೇತುವೆ ತಡೆಗೋಡೆಗೆ ಗುದ್ದಿ ಮೇಲಿಂದ ಬಿದ್ದು ಬೈಕ್ ಸವಾರ ಮೃತಪಟ್ಟರೆ, ಹಿಂಬದಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೇಯಸ್ ಪಾಟೀಲ್ (19) ಸಾವನ್ನಪ್ಪಿದರೆ, ಚೇತನ್ ಕೆ (19) ಗಾಯಗೊಂಡು ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಕ್ರೈಸ್ಟ್ ಕಾಲೇಜಿನಲ್ಲಿ ಶ್ರೇಯಸ್ ಹಾಗೂ ಪಿಇಎಸ್ ಕಾಲೇಜಿನಲ್ಲಿ ಚೇತನ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರು ಬೇಗೂರಿನ ನಿವಾಸಿಗಳಾಗಿದ್ದಾರೆ. ಇಂದು ಬೆಳಗ್ಗೆ ನಸುಕಿನ ಜಾವ 3.45 ಸುಮಾರಿಗೆ ಬೇಗೂರಿನಿಂದ ಎಂ.ಜಿ.ರಸ್ತೆಗೆ ಬರಲು ರಿಚ್ ಮಂಡ್ ಮೇಲುಸೇತುವೆ ಮೇಲೆ ಬರುತ್ತಿದ್ದರು. ತಿರುವಿನಲ್ಲಿ ವೇಗವಾಗಿ ಬರುವಾಗ ನಿಯಂತ್ರಣ ಸಿಗದೇ ಸೇತುವೆಯ ತಡೆಗೋಡೆಗೆ ಬುಲೆಟ್ ಬೈಕ್ ಗುದ್ದಿದ್ದಾನೆ.
ಅಪಘಾತದ ರಭಸಕ್ಕೆ ಸವಾರ ಶ್ರೇಯಸ್ ಹಾಗೂ ಹಿಂಬದಿ ಸವಾರರಿಬ್ಬರು ಮೇಲಿನಿಂದ ಬಿದ್ದಿದ್ದಾರೆ. ಅಪಘಾತದಲ್ಲಿ ಶ್ರೇಯಸ್ ತಲೆಗೆ ಪೆಟ್ಟಾದರೆ, ಚೇತನ್ ಕಾಲಿಗೆ ಗಾಯವಾಗಿದೆ. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ವ್ಯಕ್ತಿ ಸಾವಿಗೆ ಕಾರಣನಾದ ಅಪ್ರಾಪ್ತ ಆಟೋ ಚಾಲಕ: ವಾಹನದ ಮಾಲೀಕನಿಗೆ ₹1.41 ಕೋಟಿ ದಂಡ - UNDERAGE DRIVER ACCIDENT CASE