ಮೈಸೂರು: ಇಂದಿರಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ಕುರಿತು ನಡೆಯುತ್ತಿರುವ ಚರ್ಚೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಂದಿನ ಕಾಲಕ್ಕೆ ತಕ್ಕಂತೆ ಇಂದಿರಾ ಗಾಂಧಿ ಕೆಲಸ ನಿರ್ವಹಿಸಿದ್ದಾರೆ. ಇಂದಿನ ಕಾಲಕ್ಕೆ ತಕ್ಕಂತೆ ನರೇಂದ್ರ ಮೋದಿ ಅವರ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಈ ವಿಚಾರದಲ್ಲಿ ಇಂದಿರಾಗಾಂಧಿ ಹಾಗೂ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡಿ ಮಾತನಾಡೋದು ಸರಿಯಲ್ಲ ಎಂದರು.
ಯುದ್ಧದ ಕ್ರೆಡಿಟ್ ಸೇನೆಗೆ ಸಲ್ಲಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿರುವ ವಿಚಾರವಾಗಿ ಮಾತನಾಡಿ, ಖಂಡಿತವಾಗಿಯೂ ಕ್ರೆಡಿಟ್ ಸೈನಿಕರಿಗೆ ಸಲ್ಲಬೇಕು. ಜೊತೆಗೆ ಯುದ್ಧದ ತಂತ್ರ ರೂಪಿಸಿದ ಕೇಂದ್ರ ಸರಕಾರಕ್ಕೂ ಸಲ್ಲಬೇಕು. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ನಾವು ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್ನವರಿಗೆ ಸಂದೇಶ ಕೊಡುವ ಸ್ಥಾನದಲ್ಲೂ ನಾನಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು, ಕೇಂದ್ರ ಸರಕಾರದ ನಿರ್ಧಾರಕ್ಕೆ ಕೈಜೋಡಿಸಿ ನಿಲ್ಲಬೇಕು ಎಂದು ಹೇಳಿದರು.
ಭಾರತ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆ ವಿಚಾರ ಮಾತನಾಡಿದ ಅವರು, ಪೆಹಲ್ಗಾಮ್ ನಲ್ಲಿ ನಡೆದ ಘಟನೆಗೆ ಈಗಾಗಲೇ ಪ್ರಧಾನಿ ನರೇಂದ್ರಮೋದಿ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ. 9 ಭಯೋತ್ಪಾದಕ ಶಿಬಿರಗಳನ್ನು ಗುರುತಿಸಿ, ದಾಳಿ ಮಾಡಿ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಾಕಿಸ್ತಾನ ಏನೇ ಪ್ರಯತ್ನ ಮಾಡಿದರೂ ಅವರ ಪ್ರಯತ್ನಗಳನ್ನು ಮೊಟುಕುಗೊಳಿಸುವ ಕೆಲಸವನ್ನು ಭಾರತ ಸರಕಾರ ಮಾಡಿಯೇ ತೀರುತ್ತದೆ. ಪಾಕಿಸ್ತಾನದ ಎಲ್ಲಾ ಪ್ರಯತ್ನಗಳು ವಿಲವಾಗಿವೆ. ಭಯೋತ್ಪಾದನೆಗೆ ಅವಕಾಶ ಕೊಡದೇ ವಿಶ್ವದಾದ್ಯಂತ ಉಗ್ರವಾದ ತೊಲಗಿಸಬೇಕು. ಪಾಕಿಸ್ತಾನೀಯರು ಅವರ ಕೃತ್ಯಗಳನ್ನು ನಿಲ್ಲಿಸಿದರೆ ಮಾತ್ರ ವಿಶ್ವದಲ್ಲಿ ಶಾಂತಿ ಕಾಣಬಹುದು ಎಂದರು.
ಕಳೆದ ಏಪ್ರಿಲ್ 26 ನೇ ತಾರೀಕಿನಂದು ನಡೆದ ಘಟನೆ ಎಲ್ಲರಿಗೂ ಗೊತ್ತೇ ಇದೆ. ಹಿಂದೂಗಳನ್ನೇ ಗುರುತಿಸಿ ಕೊಂದದ್ದನ್ನು ನಾವೆಲ್ಲರೂ ಗಮನಿಸಿದ್ದೇವೆ. ನಾವು ಅವರಿಗೆ ಸರಿಯಾದ ರೀತಿಯಲ್ಲೇ ಉತ್ತರ ನೀಡಿದ್ದೇವೆ. ನಾವೇನು ಸೇಡಿನ ಯುದ್ಧ ನಡೆಸಿಲ್ಲ, ಬದಲಾಗಿ ನಿಖರವಾಗಿ ಉಗ್ರರನ್ನೇ ಗುರುತಿಸಿ ಯುದ್ಧ ಮಾಡಿದ್ದೇವೆ.ಭಾರತೀಯ ಸಂಸ್ಕೃತಿಗೆ ತಕ್ಕಂತೆ ಸರಕಾರ ಉತ್ತರ ನೀಡಿದೆ. ಅಮಾಯಕರ ಸಾವಿಗೆ ನ್ಯಾಯ ಒದಗಿಸುವ ಕೆಲಸವನ್ನು ಭಾರತ ಸರಕಾರ ಮಾಡಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಇದನ್ನು ಓದಿ: ಮಾವು ಮೇಳದಲ್ಲಿ ಕಂಗೊಳಿಸಿದ ಮಿಯಾ ಜಾಕಿ : ಇದರ ಬೆಲೆ ಬಲು ದುಬಾರಿ.. ದರ ಕೇಳಿದರೆ ಹೌಹಾರುವಿರಿ!!