ಮಂಗಳೂರು (ದಕ್ಷಿಣ ಕನ್ನಡ) : ಕರಾವಳಿಯಲ್ಲಿ ಈ ಬಾರಿ ವಿಪರೀತ ಸೆಕೆ ಇದೆ. ಸಾಮಾನ್ಯವಾಗಿ ತುಸು ಹೆಚ್ಚಿಗೆ ಇರಲಿರುವ ತಾಪಮಾನ ಈ ಬಾರಿ ಹಿಂದೆಂದಿಗಿಂತಲೂ ಜಾಸ್ತಿಯಾಗಿದೆ. ಈ ತಾಪಮಾನದ ಬಿಸಿಯ ನಡುವೆ ಈ ಬಾರಿ ಜಿಲ್ಲೆಯ ಜನತೆಗೆ ಕುಡಿಯುವ ನೀರಿಗೆ ಬರವಿಲ್ಲ ಎಂಬುದು ನೆಮ್ಮದಿಗೆ ಕಾರಣವಾಗಿದೆ.
ಕಡಲ ನಗರಿ ದಕ್ಷಿಣ ಕನ್ನಡದಲ್ಲಿ ಬೇಸಿಗೆ ಬಂತೆಂದರೆ ನೀರಿನ ಲಭ್ಯತೆ ಕಡಿಮೆಯಾಗುತ್ತದೆ. ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾಡಳಿತಕ್ಕೆ ತಲೆ ನೋವಾದರೆ, ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮಂಗಳೂರು ಮಹಾನಗರ ಪಾಲಿಕೆಗೆ ಆತಂಕವನ್ನು ಸೃಷ್ಟಿಸುತ್ತದೆ. ಆದರೆ ಈ ಬಾರಿ ಮಂಗಳೂರು ನಗರಕ್ಕಾಗಲಿ, ಜಿಲ್ಲೆಯ ಇತರೆಡೆಗಾಗಲಿ ಕುಡಿಯುವ ನೀರಿಗೆ ಬರವಿಲ್ಲ ಎಂಬುದು ನೆಮ್ಮದಿ ತಂದಿದೆ.
ಈ ಬಾರಿ ರೇಶನಿಂಗ್ ಇಲ್ಲ; ಸಾಧಾರಣವಾಗಿ ಮಂಗಳೂರು ನಗರಕ್ಕೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತದೆ. ಇವೆರಡು ತಿಂಗಳಲ್ಲಿ ಮಂಗಳೂರು ನಗರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ರೇಶನಿಂಗ್ ಮಾಡುವ ಪ್ರಮೇಯ ಬರುತ್ತಿತ್ತು. ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ನೀರು ಪೂರೈಕೆಯ ಪರಿಣಾಮ ನಗರದ ಹಲವೆಡೆ ನೀರಿನ ಸಮಸ್ಯೆ ಎದುರಾಗುತ್ತಿದ್ದರೆ, ಎತ್ತರದ ಪ್ರದೇಶಗಳಿಗೆ ನಾಲ್ಕೈದು ದಿನಗಳು ನೀರೇ ಇಲ್ಲದ ಪರಿಸ್ಥಿತಿ ಎದುರಾಗುತ್ತಿತ್ತು. ಆದರೆ ಈ ಬಾರಿ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರು ಲಭ್ಯತೆ ಇರುವುದರಿಂದ ರೇಶನಿಂಗ್ ಮಾಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನ ದಿನ ಇರುವ ನೀರಿನ ಲಭ್ಯತೆ : ಎಎಂಆರ್ ಡ್ಯಾಂ 18.90 ಮೀಟರ್ ನೀರು ಶೇಖರಿಸುವ ಡ್ಯಾಂನಲ್ಲಿ 18.90 ಮೀಟರ್ ನೀರು, ತುಂಬೆ ಡ್ಯಾಮ್ 6 ಮೀಟರ್ ನೀರು ಶೇಖರಿಸುವ ಡ್ಯಾಂನಲ್ಲಿ 6 ಮೀಟರ್ ನೀರು, ಹರೇಕಳ ಅಡ್ಯಾರ್ ಡ್ಯಾಮ್ 2 ಮೀಟರ್ ನೀರು ಶೇಖರಿಸುವ ಡ್ಯಾಂನಲ್ಲಿ 1 ಮೀಟರ್ ನೀರು, ಬಿಳಿಯೂರು ಡ್ಯಾಮ್ 4 ಮೀಟರ್ ನೀರು ಶೇಖರಿಸುವ ಡ್ಯಾಂನಲ್ಲಿ 4 ಮೀಟರ್ ನೀರು, ಜಕ್ರಿಬೆಟ್ಟು ಡ್ಯಾಂ 5.5 ಮೀಟರ್ ನೀರು ಶೇಖರಿಸುವ ಡ್ಯಾಂನಲ್ಲಿ 1.50 ಮೀಟರ್ ನೀರು, ಮಳವೂರು ಡ್ಯಾಮ್ 3.5 ಮೀಟರ್ ನೀರು ಶೇಖರಿಸುವ ಡ್ಯಾಂನಲ್ಲಿ 1.5 ಮೀಟರ್ ನೀರು, ಇರುವೈಲು ಡ್ಯಾಮ್ 4.5 ಮೀಟರ್ ನೀರು ಶೇಖರಿಸುವ ಡ್ಯಾಂನಲ್ಲಿ 1.75 ಮೀಟರ್ ನೀರು ಲಭ್ಯ ಇದೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಹೇಳಿದ್ದೇನು? ''ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆ ಕಾಲದ ಮಧ್ಯದಲ್ಲಿ ಮಳೆ ಬಂದಿದ್ದರಿಂದ ನೀರಿನ ಮಟ್ಟ ಕಡಿಮೆಯಾಗಿಲ್ಲ. ತುಂಬೆ, ಬಿಳಿಯೂರು ಮತ್ತು ಎಎಂಆರ್ನಲ್ಲಿ ಡ್ಯಾಮ್ ಪೂರ್ತಿ ನೀರು ಇದೆ. ಎಎಂಆರ್ ಡ್ಯಾಂನಲ್ಲಿ 17 ಮೀಟರ್ ಕೆಳಗೆ ನೀರು ಬಂದರೆ ಕೈಗಾರಿಕೆಗಳಿಗೆ ನೀರು ಪೂರೈಕೆ ಕಡಿಮೆ ಮಾಡುವ ಪರಿಸ್ಥಿತಿ ಬರುತ್ತಿತ್ತು. ಆದರೆ, ಈ ಬಾರಿ ಆ ಪರಿಸ್ಥಿತಿ ಬರುವುದಿಲ್ಲ. ನಗರದಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆ ಆಗುವುದಿಲ್ಲ. ಸದ್ಯ ಉಳ್ಳಾಲ ತಾಲೂಕಿನ 2 ಗ್ರಾಮ, ಉಳ್ಳಾಲ ನಗರ, ಸೋಮೇಶ್ವರ, ಕೋಟೆಕಾರ್ ವಿಟ್ಲದಲ್ಲಿ ಪ್ರತಿ ವರ್ಷ ಇರುವಂತೆ ಉಪ್ಪು ನೀರಿನ ಸಮಸ್ಯೆ ಆದಲ್ಲಿ ಟ್ಯಾಂಕರ್ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ ಬಾರಿ ಮಳೆ ಕಡಿಮೆ ಇತ್ತು. ಆದರೆ ನೀರು ಶೇಖರಣೆ ಮಾಡಿದ್ದರಿಂದ ಕಳೆದ ಬಾರಿಯೂ ನಗರದಲ್ಲಿ ರೇಶನಿಂಗ್ ಮಾಡುವ ಪರಿಸ್ಥಿತಿ ಬಂದಿಲ್ಲ. ಈ ಬಾರಿ ಜಕ್ರಿಬೆಟ್ಟು, ಬಿಳಿಯೂರು ಡ್ಯಾಮ್ ಕಾಮಗಾರಿ ಪೂರ್ಣಗೊಂಡಿದ್ದರಿಂದ ಹಾಗೂ ಮಳೆ ಬಂದ ಕಾರಣ ರೇಶನಿಂಗ್ ಪರಿಸ್ಥಿತಿ ಬರುವುದಿಲ್ಲ'' ಎಂದು ತಿಳಿಸಿದರು.
ಇದನ್ನೂ ಓದಿ : ಕೊಪ್ಪಳದಲ್ಲಿವೆ ಬೇಸಿಗೆಯಲ್ಲಿಯೂ ಬತ್ತದ ಬಾವಿಗಳು ; ಪುನಶ್ಚೇತನಕ್ಕೆ ಕಾಯುತ್ತಿವೆ ಜಲಮೂಲಗಳು - WELLS RECLAMATION