ಮೈಸೂರು: "ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮುಡಾ 50:50 ಹಗರಣದಲ್ಲಿ ಲೋಕಾಯುಕ್ತ ವರದಿಯ ಗೊಂದಲದ ಬಗ್ಗೆ ನಾನೇ ವಾದ ಮಾಡಿದೆ. ಕೋರ್ಟ್ ಲೋಕಾಯುಕ್ತ ಪೋಲೀಸರಿಗೆ ವರದಿಯ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ತಿಳಿಸಿದೆ. ಮುಂದಿನ ವಿಚಾರಣೆ ಮಾರ್ಚ್ 24ಕ್ಕೆ ನಡೆಯಲಿದ್ದು, ಈ ಪ್ರಕರಣದಲ್ಲಿ ಸಿಎಂ ಹಾಗೂ ಕುಟುಂಬ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬದವರು ರಾಜ್ಯದ ಜನತೆಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಪ್ರಭಾವಕ್ಕೆ ಒಳಾಗಿರುವ ಲೋಕಾಯುಕ್ತ ಅಧಿಕಾರಿಗಳು ಸುಳ್ಳು ವರದಿ ಸಲ್ಲಿಸಿದ್ದಾರೆ. ಕಲಂ 14 ಮತ್ತು ಕಲಂ 17ರ ಬಗ್ಗೆ ಗೊಂದಲದ ವರದಿ ನೀಡಿದ್ದು, ಈ ಅಂಶವನ್ನು ನ್ಯಾಯಾಲಯದ ಮುಂದೆ ಇಟ್ಟಾಗ, ಇದಕ್ಕೆ ಸ್ಪಷ್ಟೀಕರಣ ನೀಡಲು ಕೋರ್ಟ್ ಆದೇಶ ಮಾಡಿದೆ. ಮಾರ್ಚ್ 24ರಂದು ವಿಚಾರಣೆಗೆ ಬಂದು ಸ್ಪಷ್ಟೀಕರಣ ನೀಡಲು ಕೋರ್ಟ್ ಸೂಚನೆ ನೀಡಿದೆ.. ಕಾನೂನು ಅರಿವಿಲ್ಲದ ತನಿಖಾಧಿಕಾರಿಗಳು ಈ ರೀತಿ ವರದಿ ಸಲ್ಲಿಸುತ್ತಾರೆ" ಎಂದು ಹೇಳಿದರು.
ಮೂರು ರೀತಿ ವರದಿ ಸಲ್ಲಿಸಬಹುದು: "ನ್ಯಾಯಾಲಯಕ್ಕೆ ಮೂರು ರೀತಿಯ ವರದಿ ಸಲ್ಲಿಸಬಹುದಾಗಿದೆ. ದೋಷಾರೋಪಣಾ ಪತ್ರ, ಬಿ ಅಂತಿಮ ವರದಿ ಹಾಗೂ ಸಿ ಅಂತಿಮ ವರದಿ ಸಲ್ಲಿಸಬಹುದಾಗಿದೆ. ತನಿಖಾಧಿಕಾರಿ ಅಂತಿಮ ವರದಿ ಸಲ್ಲಿಸಿದ್ದಾರೆ. ಯಾವ ಅಂತಿಮ ವರದಿಯೆಂದು ಸ್ಪಷ್ಟೀಕರಣ ಕೇಳಿದ್ದೇನೆ. ಒಂದರಿಂದ ನಾಲ್ಕನೇ ಆರೋಪಿಗಳ ಯಾವುದೇ ತಪ್ಪಿಲ್ಲ ಎಂದು ಹೇಳುತ್ತಾರೆ. ಎರಡನೇ ಆರೋಪಿ ಸಿಎಂ ಪತ್ನಿ ಪಾರ್ವತಮ್ಮ ಹಾಗೂ ಇತರರಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಪ್ರಾಧಿಕಾರಕ್ಕೆ ನಷ್ಟ ಎಂದು ಹೇಳಿ ಗೊಂದಲ ಮೂಡಿಸಿದೆ" ಎಂದು ವಿವರಿಸಿದರು.
ಪ್ರತಿಷ್ಠಿತ ಪ್ರಕರಣದ ವಾದ ಮಂಡನೆ: "ನಾನು ಸಾಕಷ್ಟು ಪ್ರಕರಣಗಳಲ್ಲಿ ವಾದ ಮಂಡನೆ ಮಾಡಿದ್ದೇನೆ. ಇದೊಂದು ಪ್ರತಿಷ್ಠಿತ ವಾದ ಮಂಡನೆಯಾದ್ದರಿಂದ ಕುತೂಹಲ ಹಾಗೂ ಭಯವೂ ಉಂಟಾಗಿತ್ತು. ಆದರೆ ನಾನು ನಿರ್ಭೀತಿಯಿಂದ ತನಿಖಾಧಿಕಾರಿಯ ತಪ್ಪುಗಳನ್ನು ಕೋರ್ಟ್ ಗಮನಕ್ಕೆ ತಂದಿದ್ದೇನೆ" ಎಂದರು.
ಇದು ಅಂತಿಮ ವರದಿಯಲ್ಲ: "ಕ್ಲೀನ್ಚಿಟ್ ಇನ್ನೂ ಕೊಟ್ಟಿಲ್ಲ. ಎರಡನೇ ಆರೋಪಿಗೆ ನಿವೇಶನ ನೀಡಿರುವುದು ಪ್ರಾಧಿಕಾರಕ್ಕೆ ನಷ್ಟ ತಂದಿದೆ ಎಂದು ಹೇಳಲಾಗಿದೆ. ಕಾನೂನು ಅರಿವು ಇಲ್ಲದ ಅಧಿಕಾರಿಗಳು ಸ್ಪಷ್ಟತೆ ಇಲ್ಲದ ವರದಿ ಸಲ್ಲಿಸಿದ್ದಾರೆ. ಇದು ಅಂತಿಮ ವರದಿಯಲ್ಲ, ಈ ವರದಿ ನ್ಯಾಯಾಲಯ ಇನ್ನೂ ಒಪ್ಪಿಕೊಂಡಿಲ್ಲ. ಸಿಎಂ ಪ್ರಭಾವಕ್ಕೆ ಒಳಾಗಾಗಿ ಲೋಕಾಯುಕ್ತ ತನಿಖಾಧಿಕಾರಿಗಳು ಸುಳ್ಳು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನನ್ನ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಮುಡಾ ಹಗರಣ: ಮಾ. 18ಕ್ಕೆ ಕೋರ್ಟ್ನಲ್ಲಿ ನಾನೇ ವಾದ ಮಾಡಿ ಸತ್ಯವನ್ನು ಜನರ ಮುಂದಿಡುವೆ: ಸ್ನೇಹಮಯಿ ಕೃಷ್ಣ