ಮೈಸೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಲೋಕಾಯುಕ್ತ ವರದಿಯ ತಕರಾರು ಅರ್ಜಿಯ ವಾದ-ಪ್ರತಿವಾದ ನಾಳೆ ಮುಕ್ತಾಯವಾಗಲಿದೆ. ಈ ಕುರಿತ ಆದೇಶ ನಮ್ಮ ಪರವಾಗಿ ಬರಬಹುದು ಎಂದು ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ವರದಿಗೆ ತಕರಾರು ಅರ್ಜಿ ಸಲ್ಲಿಸಿದ್ದೇನೆ. ನಾಳೆ ಆದೇಶ ಹೊರಬರಲಿದೆ. ಲೋಕಾಯುಕ್ತ ವರದಿ ತಿರಸ್ಕರಿಸಿ, ಆರೋಪಿಗಳ ಆರೋಪ ಸಾಬೀತುಪಡಿಸಿ ಶಿಕ್ಷೆ ವಿಧಿಸುವ ಕಾನೂನು ಪ್ರಕ್ರಿಯೆಗೆ ಅನುಮತಿ ನೀಡುವ ವಿಶ್ವಾಸವಿದೆ ಎಂದರು.
ಇ.ಡಿ.ಯವರು ಲೋಕಾಯುಕ್ತ ವರದಿ ತಿರಸ್ಕರಿಸುವಂತೆ ಮನವಿ ಮಾಡಿದ್ದಾರೆ. ಇಲ್ಲಿ ಮೂರು ಅಂಶಗಳು ಕಂಡುಬರುತ್ತವೆ. ಆರೋಪಿಗಳ ಆರೋಪ ಸಾಬೀತುಪಡಿಸಲು ನನಗೆ ಅವಕಾಶ ನೀಡಬಹುದು, ಅಂತಿಮ ವರದಿಯನ್ನು ಅಂಗೀಕರಿಸಿ ಈ ಪ್ರಕರಣವನ್ನು ಅಂತ್ಯ ಮಾಡಬಹುದು, ಇಲ್ಲವೇ ಮತ್ತಷ್ಟು ತನಿಖೆ ಅವಶ್ಯಕತೆಯಿದ್ದರೆ ತನಿಖೆಗೆ ಆದೇಶ ನೀಡಬಹುದು. ನನ್ನ ಮನವಿಯನ್ನು ಪುರಸ್ಕರಿಸಿ ಲೋಕಾಯುಕ್ತ ವರದಿ ತಿರಸ್ಕರಿಸಿದರೆ ಯಾವುದೇ ಸಮಸ್ಯೆಯಾಗದು. ನ್ಯಾಯಾಲಯ ಲೋಕಾಯುಕ್ತ ವರದಿ ಅಂಗೀಕರಿಸಿದರೆ ನಾನು ಮತ್ತೆ ಇ.ಡಿ.ಗೆ ಮೇಲ್ಮನವಿ ಸಲ್ಲಿಸುವೆ. 2ನೇ ಆರೋಪಿ ಹೊರತುಪಡಿಸಿ ಉಳಿದ ಆರೋಪಿಗಳಿಗೆ 50:50ರ ಅನುಪಾತದಲ್ಲಿ ಮುಡಾಗೆ ಅಪಾರ ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಆಧಾರದ ಮೇಲೆ ಕೋರ್ಟ್ ತನಿಖೆಗೆ ಆದೇಶ ನೀಡಬಹುದು ಎಂದು ತಿಳಿಸಿದರು.
ನನ್ನ ವಿರುದ್ಧ ವಾಮಚಾರಕ್ಕೆ ಪ್ರಯತ್ನ: ವಾಮಾಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಕೋರಿ ಹೈಕೋರ್ಟ್ನಲಿ ಅರ್ಜಿ ಸಲ್ಲಿಸುತ್ತೇನೆ. ತನಿಖಾಧಿಕಾರಿಗಳು ಸರಿಯಾಗಿ ತನಿಖೆ ಮಾಡಿಲ್ಲ. ಏಕೆಂದರೆ ವಾಮಾಚಾರದ ಮೂಲಕ ನನಗೆ ಆಮಿಷ ಹೂಡಿ ಈ ಪ್ರಕರಣದಿಂದ ಹಿಂದೆ ಸರಿಯುವಂತೆ ಮಾಡಲು ಪ್ರಯತ್ನಿಸಲಾಗುತ್ತದೆ. ಆದ್ದರಿಂದ ಸಮಗ್ರ ತನಿಖೆ ಮಾಡಸಬೇಕೆಂದು ಕೋರಿ ಹೈಕೋರ್ಟ್ನಲಿ ಅರ್ಜಿ ಸಲ್ಲಿಸುವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದರು.
ಏ.16ಕ್ಕೆ ಸಿಬಿಐ ಪ್ರಕರಣದ ಅರ್ಜಿ ವಿಚಾರಣೆ: ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವ ಅರ್ಜಿ ಏಪ್ರಿಲ್ 16ಕ್ಕೆ ನ್ಯಾಯಾಲಯದ ಮುಂದೆ ಬರುತ್ತದೆ. ವಾದ-ಪ್ರತಿವಾದ ಮಂಡನೆಯಾಗಿ ಸೂಕ್ತ ಆದೇಶ ಹೊರಬರುವ ನಿರೀಕ್ಷೆಯಿದೆ. ಮುಡಾಗೆ ಅದರ ಆಸ್ತಿ ವಾಪಸ್ ಬರುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ. 50:50ರ ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆಯಾಗಿರುವ ನಿವೇಶನಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆಯಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಮುಡಾ ಪ್ರಕರಣ: ನ್ಯಾಯಾಲಯದಲ್ಲಿ ವಾದ ಮಾಡಿದ ಸ್ನೇಹಮಯಿ ಕೃಷ್ಣ ಹೇಳಿದ್ದೇನು..? - MUDA CASE