ಶಿವಮೊಗ್ಗ: 700 ವರ್ಷದ ಪುರಾತನ ದೇವಸ್ಥಾನದ ಗ್ರಿಲ್ ಕಟ್ ಮಾಡಿ ಕಾಣಿಕೆ ಹುಂಡಿಯನ್ನು ಕದ್ದಿರುವ ಘಟನೆ ಜಿಲ್ಲೆಯ ಭದ್ರಾವತಿ ಪಟ್ಟಣದ ಭೂತನಗುಡಿ ಬಡಾವಣೆಯಲ್ಲಿ ನಡೆದಿದೆ.
ಭೂತಪ್ಪನ ದೇವಾಲಯದಲ್ಲಿ ಶನಿವಾರ ರಾತ್ರಿ ಕಳ್ಳರು ದೇವಾಲಯದ ಗ್ರಿಲ್ ಕಟ್ ಮಾಡಿ ಒಳಗೆ ನುಗ್ಗಿದ್ದಾರೆ. ಬಳಿಕ ಸುಮಾರು ಮೂರು ವರ್ಷದಿಂದ ಕಾಣಿಕೆ ಹಣ ಎಣಿಕೆ ಮಾಡದ ಹುಂಡಿಯನ್ನೇ ಕದ್ದೊಯ್ದಿದ್ದಾರೆ. ಹುಂಡಿಯಲ್ಲಿ ಲಕ್ಷಾಂತರ ರೂ. ಹಣ ಇತ್ತು ಎನ್ನಲಾಗಿದೆ.
ಇಂದು ಬೆಳಗ್ಗೆ ದೇವಾಲಯಕ್ಕೆ ಅರ್ಚಕರು ಬಂದಾಗ ದೇವಾಲಯದ ಒಳಗಿನ ಹುಂಡಿಯ ಬೀಗ ಒಡೆದಿರುವುದು ಕಂಡು ಬಂದಿದೆ. ನಂತರ ಗೋಡೆಯ ಗ್ರಿಲ್ ಕಟ್ ಮಾಡಿದ್ದು ಗಮನಕ್ಕೆ ಬಂದಿದೆ. ತಕ್ಷಣ ದೇವಾಲಯದ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು, ಆಡಳಿಯ ಮಂಡಳಿಯವರು ಭದ್ರಾವತಿಯ ಹಳೇನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ದೇವಾಲಯವನ್ನು ಪರಿಶೀಲಿಸಿದ್ದು, ಫಿಂಗರ್ ಪ್ರಿಂಟ್ ಹಾಗೂ ಶ್ವಾನದಳವನ್ನು ಕರೆಸಿ ಶೋಧ ಕಾರ್ಯ ನಡೆಸಿದ್ದಾರೆ. ಇದು ಜನನಿಬಿಡ ರಸ್ತೆಯಾಗಿದ್ದು ಇಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವುದು ಅಚ್ಚರಿ ತಂದಿದೆ. ಈ ದೇವಾಲಯದಲ್ಲಿ ಭೂತಪ್ಪ, ಗಣಪತಿ ಹಾಗೂ ಶನಿ ದೇವರ ಮೂರ್ತಿಗಳಿವೆ. ಇದೇ ಮೊದಲ ಬಾರಿಗೆ ದೇವಾಲಯದಲ್ಲಿ ಕಳ್ಳತನ ನಡೆದಿದೆ.
ಇದನ್ನೂ ಓದಿ: ಕಂತೆ ಕಂತೆ ಹುಂಡಿ ಹಣ ಎಗರಿಸಿದ ಶಿರಡಿ ಸಾಯಿಬಾಬಾ ದೇವಸ್ಥಾನದ ಉದ್ಯೋಗಿ: ಸಿಸಿಟಿವಿಯಿಂದ ಪ್ರಕರಣ ಬೆಳಕಿಗೆ