ಬೆಂಗಳೂರು: "ಇ.ಡಿ ದಾಳಿಯ ಹಿಂದೆ ಕಾಣದ ಕೈಗಳಿದ್ದು, ನನ್ನ ಮೇಲೆ ಯಾವ್ಯಾವ ಪ್ರಕರಣ ದಾಖಲಿಸಬಹುದೋ, ಎಲ್ಲವನ್ನೂ ದಾಖಲಿಸಿ ಮುಗಿಸಿದ್ದಾರೆ. ಇದೂ ಸಹ ಒಂದು ರಾಜಕೀಯ ಷಡ್ಯಂತ್ರ" ಎಂದು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಕಿಡಿಕಾರಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ನಿವಾಸದಲ್ಲಿ ಇ.ಡಿ ಅಧಿಕಾರಿಗಳ ಪರಿಶೀಲನೆ ಅಂತ್ಯವಾದ ಬಳಿಕ ಮಾತನಾಡಿದ ವಿನಯ್ ಕುಲಕರ್ಣಿ, "ಸತ್ಯ ಎಂದಿಗೂ ಸತ್ಯವೇ, ನಾನು ಓರ್ವ ಕೃಷಿಕ. ನನ್ನದು ದಾಖಲೆಗಳನ್ನು ಇಟ್ಟುಕೊಳ್ಳುವಂಥಹ ಯಾವುದೇ ದೊಡ್ಡ ವ್ಯವಹಾರಗಳೂ ಇಲ್ಲ" ಎಂದರು.
ಕಿರುಕುಳ ಕೊಡುವುದಕ್ಕೂ ಒಂದು ಮಿತಿಯಿರಬೇಕು: ಸತತ 20 ಗಂಟೆಗಳಿಗೂ ಅಧಿಕ ಕಾಲ ನಡೆದ ಪರಿಶೀಲನೆಯ ಕುರಿತು ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ ಅವರು, "ಇ.ಡಿಯವರು ಬರೋದು ಒಂದಕ್ಕೆ, ಪರಿಶೀಲನೆ ಮಾಡುವುದು ಇನ್ನೊಂದು. ನನ್ನ ವಿರುದ್ಧದ ಷಡ್ಯಂತ್ರ ಇಂದು, ನಿನ್ನೆಯದ್ದಲ್ಲ. ನಾನೋರ್ವ ಶಾಸಕನಾಗಿ ನನ್ನ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಜನರನ್ನು ಭೇಟಿಯಾಗಲು ಆಗುತ್ತಿಲ್ಲ. ನನಗೆ ಕಿರುಕುಳ ನೀಡುವುದು ಮಾತ್ರ ನಿಂತಿಲ್ಲ. ಪಕ್ಷ ಯಾವುದೇ ಇರಲಿ ಓರ್ವ ಮನುಷ್ಯನಿಗೆ ಕಿರುಕುಳ ಕೊಡುವುದಕ್ಕೂ ಒಂದು ಮಿತಿಯಿರಬೇಕು. ಅಧಿಕಾರವಿದೆ ಎಂದು ಈ ರೀತಿ ಬಳಸಿಕೊಳ್ಳುತ್ತಿರುವುದು ನಿಜವಾಗಿಯೂ ನೋವಿನ ಸಂಗತಿ" ಎಂದು ಬೇಸರ ವ್ಯಕ್ತಪಡಿಸಿದರು.
"ಐಶ್ವರ್ಯಾ ಗೌಡ ಜೊತೆ ನನ್ನ ಯಾವ ವ್ಯವಹಾರವೂ ಇಲ್ಲ, ಹಣದ ವರ್ಗಾವಣೆಯೂ ಆಗಿಲ್ಲ. ಮಂಜುಳಾ ಪಾಟೀಲ್ ಮತ್ತು ಐಶ್ವರ್ಯಾ ಗೌಡ ನಡುವೆ ನಾನು ರಾಜಿ ಸಂಧಾನ ಮಾಡಿಸಿಲ್ಲ. ಈಗ ಕೆಲ ತಿಂಗಳ ಹಿಂದೆ ಪ್ರಕರಣ ದಾಖಲಾದ ನಂತರ ಪರಿಚಯವಷ್ಟೆ. ಪ್ರಕರಣ ಮುಂದುವರೆಸುವುದು ಬೇಡ, ನನ್ನ ಹಣ ಕೊಡಿಸಿ ಎಂದು ಬಂದಾಗ ಕರೆದು ವಿಚಾರಿಸಿದ್ದೆ. ಅವರವರ ನಡುವೆ ಮಾತುಕತೆ ಸರಿ ಹೋಗಲಿಲ್ಲವಂತೆ. ಜನರಿಗೆ ಯಾರೇ ಮೋಸ ಮಾಡಿದರೂ ತಪ್ಪೇ" ಎಂದು ಹೇಳಿದರು.
ಇದನ್ನೂ ಓದಿ: ಚಿನ್ನಾಭರಣ ವಂಚನೆ ಆರೋಪ: ಐಶ್ವರ್ಯ ಗೌಡ ವಶಕ್ಕೆ ಪಡೆದ ಇ.ಡಿ ಅಧಿಕಾರಿಗಳು