ಬೆಂಗಳೂರು: "ರಾಜ್ಯದ ಕಂದಾಯ ಇಲಾಖೆಯು, ಆಸ್ತಿ ಮತ್ತು ಭೂ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕ ಸೇವೆಗಳನ್ನು ದಕ್ಷ ಮತ್ತು ಪಾರದರ್ಶಕವಾಗಿ ಒದಗಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ ನಾಲ್ಕು ಸಾವಿರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣಾ ಹಾಗೂ ಕಂದಾಯ ಇಲಾಖೆಯ ಎರಡು ವರ್ಷದ ಸಾಧನೆಯ ಹಾದಿಯ 'ಭೂ ಗ್ಯಾರಂಟಿ' ಪುಸ್ತಕವನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಸಚಿವರು "ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಿಸುವ ನಿಟ್ಟಿನಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಲಾಗಿದೆ" ಎಂದರು.
ಕಂದಾಯ ಸೇವೆಗಳಲ್ಲಿ ಸುಧಾರಣೆ: "ರಾಜ್ಯದ ಕಂದಾಯ ಇಲಾಖೆಯು ಹೆಚ್ಚಿನ ಸಿಬ್ಬಂದಿ ನಿಯೋಜನೆ, ಸ್ಮಾರ್ಟ್ ಪ್ರಿಕ್ರಿಯೆಗಳು ಮತ್ತು ಸುಧಾರಿತ ವ್ಯವಸ್ಥೆಯೊಂದಿಗೆ ಕಾಂತ್ರಿಕಾರಿ ಬದಲಾವಣೆಗಳನ್ನು ತರುತ್ತಿದೆ. ಭೂ ಸುರಕ್ಷಾ, ಹಕ್ಕು ಪತ್ರಗಳಂತಹ ಯೋಜನೆಗಳ ಮೂಲಕ ನಾಗರಿಕರಿಗೆ ಕಾನೂನುಬದ್ಧ ಮಾಲೀಕತ್ವವನ್ನು ಖಚಿತಪಡಿಸಲಾಗುತ್ತಿದೆ" ಎಂದು ತಿಳಿಸಿದರು.
" 'ಲ್ಯಾಂಡ್ ಬೀಟ್', 'ನನ್ನ ಆಸ್ತಿ ನನ್ನ ಭೂಮಿ' ಮತ್ತಿತರ ಕಾರ್ಯಕ್ರಮಗಳಿಂದ ಜನರ ದಶಕಗಳ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರೆ, ಕಂದಾಯ ಗ್ರಾಮ ರಚನೆ ಬದುಕಿಗೆ ಸಹಕಾರಿಯಾಗುತ್ತಿದೆ. 'ಭೂ ದಾಖಲೆ, ಮಾಲೀಕತ್ವಕ್ಕೊಂದು ಗ್ಯಾರಂಟಿ, ಬದುಕಿನ ಗ್ಯಾರಂಟಿ, ಇದರ ಸಾಧನೆಗಾಗಿ ಕಳೆದ ಎರಡು ವರ್ಷಗಳಲ್ಲಿ ಬಹಳಷ್ಟು, ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇವೆ" ಎಂದರು.
"19 ಕೋಟಿಗೂ ಹೆಚ್ಚು ಪುಟಗಳ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಅದೇ ರೀತಿ ಭೂ ಆಸ್ತಿಗೆ ಆಧಾರ್ ಜೋಡಣೆ, ಸ್ವಯಂ ಚಾಲಿತ ಮ್ಯುಟೇಷನ್, ಕಾಗದ ರಹಿತ ಇ-ಆಫೀಸ್ ಆಪ್ ಆಧಾರಿತ ದರಖಾಸ್ತು ಪೋಡಿ, ಬಗೈರ್ ಹುಕುಂ ಮತ್ತು ಸರ್ಕಾರಿ ಭೂಮಿಗಳ ಸಂರಕ್ಷಣೆ ಇತ್ಯಾದಿ ನಿರ್ದಿಷ್ಟ ಕ್ರಮಗಳ ಮುಖಾಂತರ ಒಂದು ಕಾಲದಲ್ಲಿ ಕಷ್ಟಕರ ಮತ್ತು ಅಪಾರದರ್ಶಕವಾಗಿದ್ದ ವ್ಯವಸ್ಥೆಗೆ ಸಿಂಧುತ್ವ, ಉತ್ತರದಾಯಿತ್ವ ಮತ್ತು ಕಾಲಮಿತಿ ತರಲು ದಿಟ್ಟ ಹೆಜ್ಜೆ ಇಟ್ಟಿದ್ದೇವೆ" ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಕಂದಾಯ ಸೇವೆಗಳಲ್ಲಿ ಯಾವೆಲ್ಲಾ ಸುಧಾರಣೆಗಳನ್ನು ಸರ್ಕಾರ ತಂದಿದೆ ಎಂಬ ವಿವರ ಇಲ್ಲಿದೆ:
ಏನಿದು ಭೂ ಸುರಕ್ಷಾ:
19 ಕೋಟಿ+ಪುಟಗಳ ದಾಖಲೆ ಡಿಜಿಟಲೀಕರಣ:
- ಸಂಪೂರ್ಣ ದಾಖಲೆ ಕೊಠಡಿಗಳ ಡಿಜಿಟಲೀಕರಣ ಗುರಿ.
- ಒಂದು ವರ್ಷದಲ್ಲಿ ಶೇಕದ 100 ಎ ಮತ್ತು ಬಿ ಕಡತ ಮತ್ತು ರಿಜಿಸ್ಟರ್ಗಳ ಡಿಜಿಟಲ್ ಸಂಗ್ರಹಣೆ ಮತ್ತು ಮ್ಯಾಪಿಂಗ್.
ಪ್ರತಿ ತಾಲೂಕಿಗೆ ಮೂಲಸೌಕರ್ಯ:
- 10 ಡೆಸ್ಕ್ಟಾಪ್, 5 ಸ್ಕ್ಯಾನರ್, 6 ಡಿಇಒ ನಿಯೋಜನೆ.
- ನಾಗರೀಕರಿಗೆ ಡಿಜಿಟಲ್ ದಾಖಲೆ ವಿತರಣೆ ಮತ್ತು ಆನ್ಲೈನ್ ಅರ್ಜಿ ಸೌಲಭ್ಯಕ್ಕೆ ಅಡಿಪಾಯ.
- ಎಸಿ, ಡಿಸಿ ಮತ್ತು ಭೂ ಸ್ವಾಧೀನ ಅಧಿಕಾರಿಗಳ ಕಚೇರಿಗಳನ್ನೂ ಒಳಗೊಳ್ಳಲಿರುವ ಯೋಜನೆ.
- ಮುಂದಿನ ಹಂತದಲ್ಲಿ ಎಸ್ಆರ್ಒ ಮತ್ತು ಎಡಿಎಲ್ಆರ್ ಕಚೇರಿಗಳೂ ಭೂ-ಸುರಕ್ಷಾ ವ್ಯಾಪ್ತಿಗೆ.
'ನನ್ನ ಆಸ್ತಿ- ಆರ್ ಟಿಸಿ-ಆಧಾರ್ ಜೋಡಣೆ':
- 73.5 ಲಕ್ಷ ವಿಶಿಷ್ಟ ಭೂ ಮಾಲೀಕರನ್ನು (Unique) ಇ-ಕೆವೈಸಿ ಮೂಲಕ ಆರ್ಟಿಸಿಯೊಂದಿಗೆ ಜೋಡಿಸಲಾಗಿದೆ.
- ಪರಿಹಾರ 2.0, ಬಗೈರ್ ಹುಕುಂ ಮತ್ತು ಕಂದಾಯ ಗ್ರಾಮ ಹಕ್ಕು ಪತ್ರದಂತಹ ಯೋಜನೆಗಳ ಪ್ರಯೋಜನಗಳ ಸುಗಮ ವಿತರಣೆ.
- ಆಟೋ ಮ್ಯುಟೇಶನ್, ನೋಂದಣಿಗೆ ಆಧಾರ್ ಆಧಾರಿತ ದೃಢೀಕರಣ ಮತ್ತು ಡಿಜಿಟಲ್ ಆಸ್ತಿ ಪ್ರಮಾಣೀಕರಣದಂತಹ ಭವಿಷ್ಯದ ಸುಧಾರಣೆಗಳಿಗೆ ಭದ್ರ ಬುನಾದಿ.
- ಕೇಂದ್ರದ ಅಗ್ರಿಸ್ಟ್ಯಾಕ್ ಯೋಜನೆಯಡಿ ರಾಷ್ಟ್ರೀಯ ರೈತ ಐಡಿ ರಚಿಸಲು ಆಧಾರ್ ಸೀಡಿಂಗ್ ದತ್ತಾಂಶ ಬಳಕೆ.
ಲ್ಯಾಂಡ್ ಬೀಟ್ :
- 96.91% ಸರ್ಕಾರಿ ಭೂಮಿಗಳ ಕ್ಷೇತ್ರ ಪರಿಶೀಲನೆ ಮತ್ತು ಡಿಜಿಟಲ್ ದಾಖಲೀಕರಣ.
- ಗ್ರಾಮ ಆಡಳಿತಾಧಿಕಾರಿಗಳಿಂದ ಲ್ಯಾಂಡ್ ಬೀಟ್ ಆ್ಯಪ್ನ 100% ಬಳಕೆ.
- ಒತ್ತುವರಿ ತಡೆಗೆ ಮತ್ತು ತೆರವಿಗೆ ಪುರಾವೆ ಆಧಾರಿತ ಕಾನೂನು ಕ್ರಮ.
- ನಿರಂತರ ನಿಗಾವಣಿಯಿಂದ ಭವಿಷ್ಯದ ಒತ್ತುವರಿಗಳಿಗೆ ತಡೆ.
- ಏನ್.ಡಬ್ಲ್ಯೂ.ಕೆ.ಆರ್.ಟಿ ಮುಜರಾಯಿ ಸೇರಿದಂತೆ ಇತರೆ ಇಲಾಖೆಗಳಿಂದಲೂ ಆಸ್ತಿ ರಕ್ಷಣೆಗೆ ಆ್ಯಪ್ ಬಳಕೆ.
ನನ್ನ ಭೂಮಿ : ಸಾವಿರಾರು ಹಿಂದಿನ ಹಂಚಿಕೆ ಮತ್ತು ವಿಭಜನೆಯ ಪ್ರಕರಣಗಳನ್ನು ಡಿಜಿಟೈಸ್ ಮಾಡಲಾಗಿದೆ ಮತ್ತು ಟ್ರ್ಯಾಕ್ ಮಾಡಲಾಗಿದೆ.
ಕಾಗದ ರಹಿತ ಪ್ರಕ್ರಿಯೆ:
- ಎಲ್ಲಾ ಮನವಿಗಳನ್ನು ಡಿಜಿಟಲ್ ವರ್ಕ್ಫ್ಲೋ ಮೂಲಕ ನಿರ್ವಹಿಸಲಾಗುತ್ತದೆ.
- ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿಗಳಿಲ್ಲದೆಯೇ ಕ್ಷೇತ್ರ ಪರಿಶೀಲನೆ ಮತ್ತು ಶೀರ್ಷಿಕೆ ವರ್ಗಾವಣೆಗಳನ್ನು ಆರಂಭಿಸಲಾಗಿದೆ.
- ದರಖಾಸ್ತು ಭೂಮಿ ಸ್ವೀಕರಿಸಿದವರು ಮತ್ತು ಅವರ ಕುಟುಂಬಗಳಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸುವಲ್ಲಿ ಮಹತ್ವದ ಪ್ರಯತ್ನ.
- ಕಳೆದ 3 ತಿಂಗಳಲ್ಲಿ 88 ಸಾವಿರಕ್ಕೂ ಹೆಚ್ಚು ಅನುಮೋದನೆ. 30 ಸಾವಿರ ಭೂಮಿಗಳ ಸರ್ವೆ ಫೋಡಿ ಪೂರ್ಣ.
ಕಂದಾಯ ಗ್ರಾಮ:
- 3500ಕ್ಕೂ ಅಧಿಕ ಗ್ರಾಮಗಳನ್ನು 3 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಗುರುತಿಸಲಾಗಿದೆ.
- ಸುಮಾರು 1000 ಗ್ರಾಮಗಳನ್ನು ಕಳೆದ 2 ವರ್ಷದಲ್ಲಿ ಹೊಸದಾಗಿ ಗುರುತಿಸಲಾಗಿದೆ.
- 2025 ಮೇ ತಿಂಗಳಲ್ಲಿ ರಾಜ್ಯದಾದ್ಯಂತ 1 ಲಕ್ಷ ಹಕ್ಕುಪತ್ರ ವಿತರಿಸಲಾಗುವುದು.
- ಬಹುತೇಕ ಫಲಾನುಭವಿಗಳು ತಾಂಡ, ಹಟ್ಟಿ, ಹಾಡಿ, ದೊಡ್ಡಿ, ಪಾಳ್ಯ, ಮಜರೆ, ಕ್ಯಾಂಪ್, ಕಾಲೋನಿಗಳಲ್ಲಿ ವಾಸಿಸುವ ಹಿಂದುಳಿದ, ದಲಿತ, ಬುಡಕಟ್ಟು ಹಾಗೂ ಅವಕಾಶವಂಚಿತ ಪ್ರಜೆಗಳು.
- ನ್ಯಾಯಯುತ, ಭ್ರಷ್ಟಾಚಾರ ಮುಕ್ತ ಹಂಚಿಕೆಗಾಗಿ ಡಿಜಿಟಲ್ ಹಕ್ಕುಪತ್ರ ಪರಿಚಯಿಸಲಾಗುತ್ತಿದೆ.
ಬಗೈರ್ ಹುಕುಂ:
- ಜಿಯೋ-ಟ್ಯಾಗ್ ಮಾಡಿದ ಡಿಜಿಟಲ್ ಪುರಾವೆಗಳಿಂದಾಗಿ ವಿವಾದಗಳಿಲ್ಲದ ಪರಿಹಾರ.
- ಪಾರದರ್ಶಕ, ತಂತ್ರಜ್ಞಾನ ಆಧಾರಿತ ಮಾದರಿ ಇತರ ರಾಜ್ಯಗಳಿಗೂ ಮಾದರಿ.
- ಸಂಪೂರ್ಣ ಡಿಜಿಟಲ್ ವೇದಿಕೆಯಲ್ಲಿ ಸಾಗುವಳಿ ಚೀಟಿ ಡಿಜಿಟಲೀಕರಣ ಮತ್ತು ನೋಂದಣಿ: ರೈತರಿಗೆ ಹೊಸ ಆರ್ಟಿಸಿ ವಿತರಣೆ.
- ಕುಟುಂಬದ ಆದಾಯ, ಜಾತಿ, ವಯಸ್ಸಿನ ವಿವರಗಳಿಗಾಗಿ ಕುಟುಂಬ ಪೋರ್ಟಲ್ ಮತ್ತು ಎಜೆಎಸ್ಕೆ ಪೋರ್ಟಲ್ನೊಂದಿಗೆ ಸಂಯೋಜನೆ.
- ರೈತರ ಇ-ಕೆವೈಸಿ ಆಧಾರಿತ ದೃಢೀಕರಣ. ಪ್ರಗತಿ ಮೇಲ್ವಿಚಾರಣೆಗಾಗಿ ರಾಜ್ಯ ಡ್ಯಾಶ್ಬೋರ್ಡ್
ಇ-ಪೌತಿ ಆಂದೋಲನ:
- ದಾಖಲೆಗಳ ಪ್ರಕಾರ 52 ಲಕ್ಷ ಲ್ಯಾಂಡ್ ಪಾರ್ಸೆಲ್ ಮಾಲೀಕರು ಮೃತಪಟ್ಟಿರುವ ಮಾಹಿತಿ ಇದೆ, ಆದರೆ ಕೆಲವರು ಹೆಚ್ಚು ಲ್ಯಾಂಡ್ ಪಾರ್ಸೆಲ್ ಹೊಂದಿರುವ ಸಾಧ್ಯತೆಯಿಂದ ಈ ಸಂಖ್ಯೆ ಕಡಿಮೆಯಾಗಿರಬಹುದು.
- ಪರಿಶೀಲನೆಗಾಗಿ ವಿಎಓಗಳಿಗೆ ಸ್ವಯಂಚಾಲಿತ ಕಾರ್ಯ ನಿಯೋಜನೆ.
- ರಾಜ್ಯಾದ್ಯಂತ ಜಾರಿಗೆ ತರಲಾಗುತ್ತಿದ್ದು, 5 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.
- ಉತ್ತರಾಧಿಕಾರಿ ಕುಟುಂಬಗಳಿಗೆ ವಿವಾದಗಳು ಮತ್ತು ವ್ಯಾಜ್ಯಗಳಿಂದ ಮುಕ್ತಿ.
ಇದನ್ನೂ ಓದಿ: ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ: ಹೆಚ್.ಡಿ.ದೇವೇಗೌಡ