ರಾಯಚೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಕುರಿತು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ತೀವ್ರವಾಗಿ ಖಂಡಿಸಿದ್ದಾರೆ.
ಜಿಲ್ಲೆಯ ಗಡಿ ಭಾಗ ಮಂತ್ರಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಒಂದು ಧರ್ಮ ಮತ್ತು ಸಂಪ್ರದಾಯದ ಸಂಕೇತವಾಗಿರುವ ಜನಿವಾರ ತೆಗೆಸೋ ಕಾರ್ಯ ಮಾಡಿದ್ದು ಖಂಡನೀಯವಾಗಿದೆ. ಭಾರತದ ಪವಿತ್ರ ಸಂವಿಧಾನದಲ್ಲಿ ಅವರವರ ಸಂಪ್ರದಾಯ ಅನುಸರಿಸುವ ಅವಕಾಶ, ಅಧಿಕಾರ ಇದೆ. ಸಂವಿಧಾನದ ಬಗ್ಗೆ ಮಾತನಾಡುವುದು ಒಂದು ಕಡೆಯಾದರೆ ಅದನ್ನ ಹರಣ ಮಾಡುವುದು ಮತ್ತೊಂದು ಕಡೆ ಇದೆ. ಈ ದ್ವಂದ್ವ ನಿಲುವು ಅತ್ಯಂತ ಖಂಡನೀಯ. ಕೇವಲ ಬ್ರಾಹ್ಮಣ ಸಮುದಾಯ ಅಲ್ಲ, ಬೇರೆ ಯಾವುದೇ ಸಮುದಾಯ, ಧರ್ಮದ ಬಗ್ಗೆ ಧರ್ಮ ವಿರೋಧಿ ಚಟುವಟಿಕೆ ಮಾಡುವುದು ಹೇಯ. ನಾವೆಲ್ಲಾ ಇದನ್ನ ಒಕ್ಕೋರಲಿನಿಂದ ಖಂಡಿಸುತ್ತೇವೆ, ಪ್ರತಿಭಟಿಸುತ್ತೇವೆ ಎಂದರು.
ಇದು ಪುನರಾವರ್ತನೆಯಾಗದಂತೆ ಸರ್ಕಾರ ಎಚ್ಚರಿಕೆ ವಸಹಿಬೇಕು. ವಿದ್ಯಾರ್ಥಿ ಭವಿಷ್ಯ ಹಾಳಾಗಿದೆ, ಧರ್ಮಕ್ಕೆ ಚ್ಯುತಿ ಬಂದಿದೆ. ಸಚಿವರು, ಶಾಸಕರು ಇದನ್ನ ಸರಿಪಡಿಸ್ತೀವಿ ಅನ್ನೋದು ಕಣ್ಣೋರೆಸುವ ಮಾತು. ಧರ್ಮ ವಿರೋಧಿ ಕೆಲಸವನ್ನ ಖಂಡಿಸುತ್ತೇವೆ. ಇದು ಹೀಗೆ ಮುಂದುವರೆದರೆ ಸಮಸ್ತ ಹಿಂದೂ ಸಮಾಜ ಎಚ್ಚೆತ್ತು ಪ್ರತಿಭಟಿಸುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ಜನಪ್ರತಿನಿಧಿ, ಸಚಿವರು, ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಇದಕ್ಕೆ ಸ್ಪಂದಿಸಿ, ಇನ್ಮುಂದೆ ರಾಜ್ಯದಲ್ಲಿ ಧರ್ಮ ವಿರೋಧಿ ಚಟುವಟಿಕೆ ಆಗದಂತೆ ಮಾಡಬೇಕು. ಯಾಕಂದ್ರೆ ಕರ್ನಾಟಕ ಸರ್ವಧರ್ಮದ ಶಾಂತಿಯ ತೋಟ. ಇಂದು ರಾಜ್ಯದಲ್ಲೇ ಈ ಧರ್ಮ ವಿರೋಧಿ ಚಟುವಟಿಕೆ ನಡೆದಾಗ ಸಂಪ್ರದಾಯ, ಧರ್ಮ, ಆಚಾರ-ವಿಚಾರಗಳ ಬಗ್ಗೆ ಎಲ್ಲಿ ಮೊರೆ ಹೋಗಬೇಕು ಅನ್ನೋ ಆಕ್ರೋಶ ಸಮಸ್ತ ಹಿಂದೂ ಸಮಾಜಕ್ಕೆ ಆಗಿದೆ. ಸರ್ಕಾರ ಇದನ್ನ ತೀವ್ರವಾಗಿ ಪರಿಶೀಲಿಸಿ, ವಿದ್ಯಾರ್ಥಿಗೆ ಸೂಕ್ತ ಪರಿಹಾರ ಮಾಡಿಕೊಡಬೇಕು. ರಾಜ್ಯಾದ್ಯಂತ ಬೇರೆ ಬೇರೆ ರೀತಿ ಅವರವರ ಚಿಹ್ನೆ, ಧರ್ಮ ಪಾಲಿಸಿದಾಗ ಆಗದಿರುವ ಸಮಸ್ಯೆ ಬ್ರಾಹ್ಮಣ ಸಮಾಜಕ್ಕೆ ಮಾತ್ರ ಈ ರೀತಿ ಮಾಡಿರೋದು ಅನ್ಯಾಯ ಎಂದು ಸುಬುಧೇಂದ್ರ ತೀರ್ಥರು ಖಂಡಿಸಿದ್ದಾರೆ.
ಸಿಇಟಿ ಪರೀಕ್ಷೆ ವೇಳೆ ಬೀದರ್ ಮತ್ತು ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ್ದಲ್ಲದೇ ಪರೀಕ್ಷೆಗೆ ನಿರಾಕರಿಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ಆದಿಚುಂಚನಗಿರಿ ಶಾಲೆಯಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ತೆಗೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯಲೋಪ ಎಸಗಿದ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಅಮಾನತು ಮಾಡಿ ಶಿವಮೊಗ್ಗ ಡಿಸಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.
ಹಾಗೆಯೇ ಜನಿವಾರ ತೆಗೆಯದ ಕಾರಣಕ್ಕೆ ಕೆಸಿಇಟಿ ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ಬೀದರ್ ವಿದ್ಯಾರ್ಥಿಗೆ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯದಲ್ಲಿ ಉಚಿತ ಪ್ರವೇಶ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬೀದರ್ ಜನಿವಾರ ಪ್ರಕರಣ: ವಿದ್ಯಾರ್ಥಿಗೆ ಬಿಕೆಐಟಿಯಲ್ಲಿ ಉಚಿತ ಸೀಟ್ ಭರವಸೆ ನೀಡಿದ್ರು ಸಚಿವ ಖಂಡ್ರೆ
ಇದನ್ನೂ ಓದಿ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪದಡಿ ಇಬ್ಬರು ಅಮಾನತು : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ