ಹಾಸನ: ಮಾನವ ಕುಲದ ಲೋಕ ಕಲ್ಯಾಣಕ್ಕಾಗಿ ಮಹಾಪುರುಷರಾದ ಭಗವಾನ್ ಮಹಾವೀರರು ಇಡೀ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಕರುಣೆಯನ್ನು ಸಾರಿದ್ದಾರೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಶ್ರವಣಬೆಳಗೊಳ ಕ್ಷೇತ್ರದ ಚಾವುಂಡರಾಯ ಸಭಾಮಂಟಪದಲ್ಲಿ ಗುರುವಾರ ಶ್ರೀ ಜೈನ ಮಠದ ಆಡಳಿತ ಮಂಡಳಿ ಆಯೋಜಿಸಿದ್ದ ಭಗವಾನ್ ಮಹಾವೀರಸ್ವಾಮಿಯ 2624ನೇ ಜನ್ಮ ಕಲ್ಯಾಣ ಮಹೋತ್ಸವವನ್ನು ತೀರ್ಥಂಕರರಿಗೆ ಅರ್ಘ್ಯ, ಪುಷ್ಪಾರ್ಚನೆ ಸಮರ್ಪಣೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಭಗವಾನ್ ಮಹಾವೀರರು, ಭಗವಾನ್ ಬಾಹುಬಲಿ ರಾಜಕುಮಾರರಾಗಿ ರಾಜಮನೆತನಗಳಲ್ಲಿ ಜನಿಸಿದರೂ ಸಹ ಎಲ್ಲವನ್ನೂ ತ್ಯಾಗ ಮಾಡಿ ಪರರ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದ ಹೃದಯ ಶ್ರೀಮಂತಿಕೆಯ ಮೇರು ವ್ಯಕ್ತಿಗಳು ಎಂದು ಹೇಳಿದರು.
ಜಗತ್ತಿನಲ್ಲೆಡೆ ಇಂದು ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಕ್ರೋಧಾದಿ ಹಿಂಸೆಗಳು ಸಮಾಜಗಳಲ್ಲಿ ಭುಗಿಲೆದ್ದಿರುವುದರಿಂದ ಶಾಂತಿಯ ಸಂದೇಶದ ಅಗತ್ಯತೆಯನ್ನು ರಾಜ್ಯಪಾಲರು ಒತ್ತಿ ಹೇಳಿದರು. ಜೈನ ಧರ್ಮ ಪ್ರಾಚೀನ ಕಾಲದಿಂದಲೂ ಕ್ಷಮಾ ಧರ್ಮ ಮಾರ್ಗದಲ್ಲಿ ಸಾಗುತ್ತಿದೆ. ಸಹಬಾಳ್ವೆಯೊದಿಗೆ ಎಲ್ಲರೊಂದಿಗೂ ಬದುಕು ಬದುಕಲು ಬಿಡು ಎಂಬ ಮಹಾವೀರರ ವಾಣಿ ಪ್ರಸ್ತುತ ಅಗತ್ಯ ಎಂದರು.

ಕ್ಷೇತ್ರದ ಸುತ್ತಮುತ್ತ ಮಾಂಸದ ಅಂಗಡಿಗಳು, ತ್ಯಾಗಿಗಳಿಗೆ ನೋವು: ಇದೇ ಸಂದರ್ಭದಲ್ಲಿ ಕ್ಷೇತ್ರದ ಮನವಿಗೆ ಸ್ಪಂದಿಸಿದ ರಾಜ್ಯಪಾಲರು ಶ್ರವಣಬೆಳಗೊಳದ ಸುತ್ತಮುತ್ತ ಅನೇಕ ಮಾಂಸದ ಅಂಗಡಿಗಳು ಎಗ್ಗಿಲ್ಲದೇ ತೆರೆದಿದ್ದು, ಸಸ್ಯಾಹಾರಿ ತ್ಯಾಗಿಗಳ ಮನಸ್ಸಿಗೆ ತುಂಬಾ ನೋವಾಗಿರುವುದರ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ನಾನು ಸನಾತನ ಧರ್ಮದವನಾಗಿದ್ದು, ಕರ್ಮದಲ್ಲಿ ಜೈನ ಧರ್ಮವನ್ನು ಆಚರಿಸುತ್ತಿದ್ದೇನೆ. ನಾನು ಶುದ್ಧ ಶಾಕಾಹಾರಿ. ರಾಜ್ಯದ ರಾಜ ಭವನದಲ್ಲಿಯೂ ಸಹ ಆಗಮಿಸುವ ಅತಿಥಿ ಸತ್ಕಾರಗಳಿಗೆ ಶುದ್ಧ ಶಾಕಾಹಾರವನ್ನೇ ಒದಗಿಸುತ್ತಿರುವುದಾಗಿ ಹೇಳಿದರು.
ಭಗವಾನ್ ಮಹಾವೀರ ಜಯಂತಿಯ ಪ್ರಯುಕ್ತ ಬುಧವಾರ ವಿಶ್ವ ನಮೋಕಾರ ಮಹಾಮಂತ್ರ ದಿನವನ್ನು ಆಚರಿಸಿದ್ದು, ಆ ಮಹಾಮಂತ್ರದಲ್ಲಿ ಯಾವುದೇ ವ್ಯಕ್ತಿಯ ಪ್ರಶಂಸೆ ಮಾಡದೇ ಗುಣದ ಪ್ರಶಂಸೆ ಮಾಡಿದ್ದು, ನಾನು ಪ್ರತಿನಿತ್ಯ ಜಪಿಸುತ್ತಿದ್ದೇನೆ. ಪ್ರತಿಯೊಬ್ಬರೂ ವ್ಯಸನಮುಕ್ತ ಮತ್ತು ಶಾಖಾಹಾರಿಗಳಾಗಬೇಕು ಎಂದು ರಾಜ್ಯಪಾಲರು ಇದೇ ವೇಳೆ ಹೇಳಿದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಕ್ಷೇತ್ರದ ಶ್ರೀಗಳು ಮಾತನಾಡಿ, ಜೈನ ಧರ್ಮದ ಸ್ಥಾಪಕ 24ನೇ ತೀರ್ಥಂಕರ ಮಹಾವೀರನೆಂದು ಉಲ್ಲೇಖಿಸುತ್ತಿರುವುದು ತಪ್ಪು ಎಂದು ಸ್ಪಷ್ಟನೆ ನೀಡುತ್ತಾ, ಅವರು ಜೈನ ಧರ್ಮದ ರಥವನ್ನು ಎಳೆಯುತ್ತಾ ದೇಶವ್ಯಾಪಿ ಹೆಚ್ಚಾಗಿ ಪ್ರಚಾರ ಮಾಡಿದರು ಎಂದರು. ಮುಂದುವರೆದು ಮಾತನಾಡುತ್ತಾ, ಪ್ರತಿಯೊಂದು ಧರ್ಮದ ಮೂಲ ಉದ್ದೇಶ ಮೋಕ್ಷ ಪಡೆಯುವುದು. ಮನ- ವಚನ- ಕಾಯಕಗಳಿಂದ ಯಾರಿಗೂ ಹಿಂಸೆ ಮಾಡದೇ ಇರುವುದು ಅಹಿಂಸೆ. ಇಂದು ಎಲ್ಲಾ ದೇಶಗಳು ಅಣ್ವಸ್ತ್ರಗಳನ್ನು ಬಳಸಲು ಇಟ್ಟುಕೊಂಡಿದ್ದರೆ ಭಾರತ ವಿಶ್ವಕ್ಕೆ ಶಾಂತಿಯನ್ನು ಸ್ಥಾಪಿಸುವ ಅಹಿಂಸೆ, ಅನೇಕಾಂತವಾದ ಎಂಬ ಅಸ್ತ್ರವನ್ನು ಹೊಂದಿದೆ. ವಿಶ್ವದಲ್ಲಿ ಶಾಂತಿ ಸ್ಥಾಪನೆಯಾಗಲು ಜೈನ ಧರ್ಮದ ಅಹಿಂಸೆ ಮತ್ತು ಅನೇಕಾಂತವಾದ ಪಾಲನೆಯಿಂದ ಸಾಧ್ಯವಿದೆ ಎಂದರು.
ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಶಾಸಕ ಸಿ.ಎನ್.ಬಾಲಕೃಷ್ಣ ಅವರು ಕ್ಷೇತ್ರದ ಪ್ರಸಾದ ಭವನಕ್ಕೆ ಕೇಂದ್ರದ ಸಹಕಾರಕ್ಕೆ ಸಚಿವರಲ್ಲಿ ಪ್ರಸ್ತಾಪಿಸಲಾಗಿದೆ ಎಂದರು. ಎಚ್.ಡಿ.ದೇವೇಗೌಡರೂ ಸಹ ಕೇಂದ್ರ ಸಚಿವರಲ್ಲಿ ಕ್ಷೇತ್ರದ ಅಭಿವೃದ್ಧಿಯ ಕುರಿತು ಒತ್ತಾಯಿಸಿದ್ದಾರೆ ಎಂದು ಶಾಸಕರು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಜೈನ ಕವಿಗಳಾದ ಪಂಪ, ರನ್ನ, ಪೊನ್ನ, ಜನ್ನ, ಶ್ರೀವಿಜಯ, ನಾಗಚಂದ್ರ, ನಯಸೇನ, ರತ್ನಾಕರವರ್ಣಿ ಮೊದಲಾದ ಕವಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅದ್ವಿತೀಯ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯಪಾಲರಿಗೆ ಕ್ಷೇತ್ರದ ವತಿಯಿಂದ ಶ್ರೀಗಳು ರಜತದ ಮಂಗಲ ಕಲಶ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮಕ್ಕೂ ಮೊದಲು ಭಗವಾನ್ ಮಹಾವೀರರ ಜನ್ಮ ಕಲ್ಯಾಣದ ಪ್ರಯುಕ್ತ ಪುಷ್ಪಾಲಂಕಾರ ಮಾಡಿದ ರಜತದ ಪಲ್ಲಕ್ಕಿಯಲ್ಲಿ ಜಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಅದ್ದೂರಿ ಶೋಭಾಯಾತ್ರೆಯಲ್ಲಿ ಮೈಸೂರು ಬ್ಯಾಂಡ್ ವಾದನ, ವಿವಿಧ ಮಂಗಲ ವಾದ್ಯಗಳು, ಜುಂಜುಂ ಪಥಕ, ಚಂಡೆ ವಾದ್ಯಗಳು, ಧರ್ಮಧ್ವಜ ಹಿಡಿದ ಬಾಲಕ- ಬಾಲಕಿಯರು, ಶ್ರಾವಕ- ಶ್ರಾವಕಿಯರು ಇದ್ದರು. ನಂತರ ವೇದಿಕೆಯಲ್ಲಿ ಭಗವಾನ್ ಮಹಾವೀರ ಸ್ವಾಮಿಗೆ ಜಲ, ಗಂಧಾಭಿಷೇಕ ನೆರವೇರಿಸಿ ಪುಷ್ಪವೃಷ್ಠಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಸಚಿವ ಡಿ.ಸುಧಾಕರ್, ಮಾಜಿ ಶಾಸಕ ಎಂ.ಎ.ಗೋಪಾಲಸ್ವಾಮಿ ಮಾತನಾಡಿದರು.
ಜಿಲ್ಲಾಧಿಕಾರಿ ಸತ್ಯಭಾಮಾ, ಸಿಇಒ ಪೂರ್ಣಿಮಾ, ಎಸ್.ಪಿ. ಮಹಮದ್ ಸುಜಿತ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಫ್ತಾಬ್ ಪಾಷಾ ಇದ್ದರು.
ಇದನ್ನೂ ಓದಿ: ಕೊಪ್ಪಳ: 772 ಜೈನ ಬಸದಿಗಳಲ್ಲಿ ಈಗ ಉಳಿದಿರುವುದು ಒಂದೇ ಒಂದು; ಕುರುಹುಗಳ ರಕ್ಷಣೆಗೆ ಒತ್ತಾಯ - JAIN BASADI PROTECTION