ಬೆಂಗಳೂರು : ಸಹನಟಿ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು, ಈ ಸಂಬಂಧ ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಖ್ಯಾತಿಯ ಮಡೆನೂರು ಮನು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
33 ವರ್ಷದ ಸಹ ನಟಿ ನೀಡಿದ ದೂರಿನ ಮೇರೆಗೆ ಹಾಸನದ ಶಾಂತಿಗ್ರಾಮದಲ್ಲಿ ಆರೋಪಿ ಮನು ಅವರನ್ನು ವಶಕ್ಕೆ ಪಡೆದು ಕರೆತರಲಾಗುತ್ತಿದೆ. ವಿಚಾರಣೆ ಮುಕ್ತಾಯದ ಬಳಿಕ ಕಾನೂನು ಪ್ರಕ್ರಿಯೆಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸ್ಯ ನಟನಾಗಿ ಖ್ಯಾತಿ ಪಡೆದಿದ್ದ ಮನು ಕುಲದಲ್ಲಿ ಕೀಳ್ಯಾವುದೋ ಎಂಬ ಚಿತ್ರದಲ್ಲಿ ನಾಯಕನಾಗಿ ಬಡ್ತಿ ಪಡೆದಿದ್ದು, ಈ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ದಾಖಲಾಗಿರುವುದು ಚಿತ್ರತಂಡಕ್ಕೆ ಆಘಾತವಾಗಿದೆ.
ದೂರಿನಲ್ಲಿ ಏನಿದೆ ? 2018ರಲ್ಲಿ ಪರಿಚಯವಾಗಿದ್ದ ಮನು ನಾಗರಬಾವಿಯಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಕಾರ್ಯಕ್ರಮದ ಸಲುವಾಗಿ 2022ರಲ್ಲಿ ಕಾಮಿಡಿ ಕಿಲಾಡಿ ಶೋ ಕಲಾವಿದರೊಂದಿಗೆ ನನ್ನನ್ನ ಶಿವಮೊಗ್ಗದ ಶಿಕಾರಿಪುರಕ್ಕೆ ಕರೆದೊಯ್ದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ರೂಮ್ನಲ್ಲಿ ಉಳಿದುಕೊಂಡಿದ್ದೆ. ಸಂಭಾವನೆ ನೀಡುವ ನೆಪದಲ್ಲಿ ನನ್ನ ರೂಮಿಗೆ ಬಂದ ಮನು ತನ್ನ ಮೇಲೆ ಆತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
ಇದಾದ ಕೆಲ ದಿನಗಳ ಬಳಿಕ ನನ್ನ ಮನೆಗೆ ಬಂದು ವಿರೋಧದ ನಡುವೆಯೂ ತಾಳಿ ಕಟ್ಟಿದ್ದು, ನಂತರ ಇದೇ ಮನೆಯಲ್ಲಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಗರ್ಭಿಣಿಯಾಗಿರುವುದನ್ನು ಅರಿತು ಗರ್ಭ ನಿರೋಧಕ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಅಲ್ಲದೆ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದು, ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಚಿತ್ರವೊಂದರ ನಾಯಕ ನಟನಾಗಿ ಅವಕಾಶ ಬಂದಿದ್ದರಿಂದ ಲಕ್ಷಾಂತರ ರೂಪಾಯಿ ಹಣ ನೀಡಿದ್ದೆ. ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ್ದಲ್ಲದೇ, ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ಧಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ಧಾರೆ.
ವಿಡಿಯೋ ವೈರಲ್ : ಪ್ರಕರಣ ಸಂಬಂಧ ಸಹ ಕಲಾವಿದೆಯೊಂದಿಗಿನ ಸಂಬಂಧ ಕುರಿತಂತೆ ಆರೋಪಿ ಮಡೆನೂರು ಮನು ಮಾತನಾಡಿರುವ ಹಾಗೂ ವಾಟ್ಸಾಪ್ ಸಂದೇಶ ವೈರಲ್ ಆಗಿದೆ. ನಾನೇನು ಮೋಸ ಮಾಡೋದಿಲ್ಲ, ಜೀವನ ಪೂರ್ತಿ ಜೊತೆಯಲ್ಲಿ ಚೆನ್ನಾಗಿ ಇರ್ತೇನೆ ಎಂದು ದೂರುದಾರ ಮಹಿಳೆಗೆ ಹೇಳಿದೆ ಎನ್ನಲಾದ ವಿಡಿಯೋ ಬಹಿರಂಗವಾಗಿದೆ.
ನನ್ನ ಜೀವ ಇರುವತನಕ ನಿನ್ನ ಕೈಬಿಡಲ್ಲ. ಪರಿಸ್ಥಿತಿ ಸ್ವಲ್ಪ ಕೆಟ್ಟಿದೆ. ಹಂಗಾಗಿ ಸ್ವಲ್ಪ ಟೈಮ್ ಕೋಡೋಕೆ ಆಗಿಲ್ಲ. ಎಲ್ಲ ಸರಿ ಹೋಗಲಿದೆ. ಐ ಲವ್ ಯು, ಐ ಮಿಸ್ ಯು ಎಂದು ವಾಟ್ಸಾಪ್ ಚಾಟ್ ಮಾಡಿರುವುದು ವೈರಲ್ ಆಗಿದೆ.
ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ ಮಡೆನೂರು : ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮನು ಪೋಸ್ಟ್ ಹಾಕಿ ಸ್ಪಷ್ಟನೆ ನೀಡಿದ್ದಾರೆ. ನಾಳೆ ನನ್ನ ಸಿನಿಮಾ ಬಿಡುಗಡೆಯಾಗುತ್ತಿದೆ, ಸಿನಿಮಾ ಪ್ರಮೋಷನ್ಗೆ ಕೆಲವರು ಹೆದರಿ ಸಿನಿಮಾ ನಿಲ್ಲಿಸಲು ಯತ್ನಿಸಿದ್ದಾರೆ. ತನ್ನ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ಬಳಿಯೂ ಸಾಕ್ಷ್ಯಧಾರಗಳಿವೆ. ಸದ್ಯ ಸಿನಿಮಾ ಹಾಗೂ ವೈಯಕ್ತಿಕ ವಿಚಾರಕ್ಕೂ ಥಳಕು ಹಾಕುವುದು ಬೇಡ. ಇಷ್ಟು ದಿನ ನನ್ನನ್ನ ಹರಸಿದ್ದೀರಿ, ಮುಂದೆಯೂ ಹರಸುವಂತೆ ವಿಡಿಯೋದಲ್ಲಿ ಮನು ಕೇಳಿಕೊಂಡಿದ್ಧಾರೆ.
ಇದನ್ನೂ ಓದಿ : ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲು - RAPE CASE AGAINST MADENURU MANU