ಬೆಂಗಳೂರು: ಡೀಸೆಲ್ ಬೆಲೆ ಏರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಲಾರಿ ಮಾಲೀಕರ ಸಂಘವು ಏ.15ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಈ ಮೂಲಕ ಅಗತ್ಯವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
ಬಸ್, ಮೆಟ್ರೋ ಟಿಕೆಟ್, ಹಾಲು ಹಾಗೂ ವಿದ್ಯುತ್ ದರಗಳ ಏರಿಕೆ ಬೆನ್ನಲೇ ಪ್ರತಿ ಲೀಟರ್ ಡೀಸೆಲ್ಗೆ 2 ರೂ. ರಾಜ್ಯ ಸರ್ಕಾರ ಹೆಚ್ಚಿಸಿದೆ. ಇದರಿಂದ ಲಾರಿ ಚಾಲಕರು/ಮಾಲೀಕರಿಗೆ ನಷ್ಟಕ್ಕೆ ಸಿಲುಕಲಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಲಾರಿ ಮಾಲೀಕರ ಸಂಘವು ನಿನ್ನೆವರೆಗೂ ಗಡುವು ನೀಡಿತ್ತು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಏ.15ರ ಬೆಳಗ್ಗೆ 6ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಸಂಘವು ಕರೆ ನೀಡಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಿ ಆರ್ ಷಣ್ಮುಗಪ್ಪ, ಕಳೆದ ಏಳು ತಿಂಗಳಲ್ಲಿ ಡೀಸೆಲ್ ಬೆಲೆ 5 ರೂಪಾಯಿಗ ಏರಿಸಿದೆ. ಇದರಿಂದ ಲಾರಿ ಮಾಲೀಕರಿಗೆ ತೀರ ನಷ್ಟವಾಗಿದೆ. ಮಾಲೀಕರ ಮಾತ್ರವಲ್ಲದೆ ಜನಸಾಮಾನ್ಯರಿಗೂ ಇದರಿಂದ ಹೊರೆಯಾಗಲಿದೆ. ಹೀಗಾಗಿ ಡಿಸೇಲ್ ದರವನ್ನ ಇಳಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರವು ಸಾಮಾನ್ಯ ಜನರಿಗೆ ಉಚಿತ ಯೋಜನೆಗಳು ನೀಡುವ ನೆಪದಲ್ಲಿ ಲಾರಿ ಮಾಲೀಕರ ಹೊಟ್ಟೆ ಮೇಲೆ ಹೊಡೆಯಬಾರದು. ಕೇಂದ್ರ ಸರ್ಕಾರವು ಬಾರ್ಡರ್ ಪೋಸ್ಟ್ ತೆಗೆದ ಬಳಿಕ ಆರ್ಟಿಓ ಚೆಕ್ ಪೋಸ್ಟ್ ಯಾಕೆ ಎಂದು ಅವರು ಪ್ರಶ್ನಿಸಿದರು.
ರಸ್ತೆ ತೆರಿಗೆ, ಟೋಲ್ಸ್ ಸುಂಕವನ್ನ ಇಳಿಸಬೇಕು. ಈಗಾಗಲೇ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನ ಸಲ್ಲಿಸಿದ್ದೇವೆ. ಸ್ಪಂದಿಸದಿದ್ದರೆ ಏ.15ರ ಬೆಳಗ್ಗೆ 6ರಿಂದ ಮುಷ್ಕರವನ್ನ ಮಾಡಲಿದ್ದೇವೆ. ರಾಜ್ಯದೊಳಗೆ ಯಾವ ಸರಕು-ಸಾಗಾಟ ವಾಹನ ಬರಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಷ್ಕರಕ್ಕೆ ಕೈಜೋಡಿಸಲಿರುವ ಸಂಘಗಳು: ಮುಷ್ಕರಕ್ಕೆ ಏರ್ಪೋರ್ಟ್ ಟ್ಯಾಕ್ಸಿ ಸಂಘ, ಪೆಟ್ರೋಲ್ ಬಂಕ್ ಸಂಘಟನೆಗಳು ಬೆಂಬಲ ಸೂಚಿಸಿವೆ. ಏ.15ರಂದು ಏರ್ಪೋರ್ಟ್ ಟ್ಯಾಕ್ಸಿ, ಜಲ್ಲಿಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ 6 ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ . ಅಲ್ಲದೇ, ಅಕ್ಕಿ ಲೋಡ್, ಗೂಡ್ಸ್, ಪೆಟ್ರೋಲ್, ಡಿಸೇಲ್ ಸಾಗಾಟ ಲಾರಿಗಳ ಚಾಲಕರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಎಲ್ಲಾ ಬಗ್ಗೆಯ ವಾಣಿಜ್ಯ ವಾಹನಗಳು ಸೇರಿ ಸುಮಾರು 9 ಲಕ್ಷ ವಾಹನಗಳ ಸಂಚಾರ ಸ್ತಬ್ಧಗೊಳ್ಳಲಿವೆ.