ಬೆಂಗಳೂರು: ಇಂಧನ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ಲಾರಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸಂಜೆ ನಡೆಸಿದ ಸಂಧಾನ ಸಭೆ ವಿಫಲವಾದ ಬಳಿಕ, ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಸುವುದಾಗಿ ಹಾಗೂ ಉಗ್ರ ಹೋರಾಟ ಮಾಡುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರೆದಿದ್ದು, ರೈತರು, ವರ್ತಕರು ಹಾಗೂ ವಿವಿಧ ಉದ್ಯಮಗಳು ಸಂಕಷ್ಟಕ್ಕೀಡಾಗುವಂತಾಗಿದೆ. ತರಕಾರಿ, ಎಲ್ಪಿಜಿ ಗ್ಯಾಸ್, ಡೊಮೆಸ್ಟಿಕ್ ಗ್ಯಾಸ್, ದಿನಸಿ, ಜಲ್ಲಿ, ಮರಳು, ಕಬ್ಬಿಣ ಸೇರಿದಂತೆ ಅನೇಕ ಬಗೆಯ ಸರಕು - ಸಾಗಣೆಯಲ್ಲಿ ಈಗಾಗಲೇ ವ್ಯತ್ಯಯ ಆರಂಭವಾಗಿದೆ. ಮುಷ್ಕರ ಮತ್ತಷ್ಟು ತೀವ್ರಗೊಂಡರೆ ಹಣ್ಣು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಲಭ್ಯತೆ, ಇಂಧನ ಪೂರೈಕೆ ಕೊರತೆ ಉಂಟಾಗುವ ಆತಂಕ ಎದುರಾಗಿದೆ.
ಇತ್ತ ಮುಷ್ಕರ ತೀವ್ರಗೊಳಿಸಲು ಯೋಜಿಸಿರುವ ಲಾರಿ ಮಾಲೀಕರ ಸಂಘ, ಇಂದು ಲಾರಿ ಹಾಗೂ ಗೂಡ್ಸ್ ವಾಹನಗಳ ಚಾಲಕರ ಜೊತೆ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ತೀರ್ಮಾನಿಸಲು ಸಿದ್ಧತೆ ನಡೆಸುತ್ತಿದೆ.

ಲಾರಿ ಮಾಲೀಕರು ಕರೆ ನೀಡಿರುವ ಮುಷ್ಕರ ನಿಲ್ಲಿಸುವಂತೆ ಮಂಗಳವಾರ ಸಂಜೆ ಮಾಲೀಕರ ಸಂಘದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಧಾನ ಸಭೆ ನಡೆಸಿದ್ದರು. ಆದರೆ ಮುಖ್ಯಮಂತ್ರಿಗಳ ನೇತೃತ್ವದ ಸಭೆ ವಿಫಲವಾಗಿತ್ತು.
ಲಾರಿ ಮಾಲೀಕರ ಸಂಘದ ಬೇಡಿಕೆ ಏನು?: ಸಭೆಯಲ್ಲಿ ಲಾರಿ ಮಾಲೀಕರ ಸಂಘ, ಆರ್ಟಿಒ ಗಡಿ ಚೆಕ್ ಪೋಸ್ಟ್ ರದ್ದು ಮಾಡಲು ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಕಾಯ್ದೆಯಂತೆ ಎಫ್ಸಿ ಶುಲ್ಕ ಹೆಚ್ಚಳವನ್ನು ರಾಜ್ಯದಲ್ಲಿ ಜಾರಿ ಮಾಡದಂತೆ ಮನವಿ ಮಾಡಲಾಗಿದೆ. ಪ್ರಮುಖವಾಗಿ ಡೀಸೆಲ್ ದರ ಇಳಿಸುವಂತೆ ಹಾಗೂ ರಾಜ್ಯ ಟೋಲ್ ಸಂಗ್ರಹ ರದ್ದು ಪಡಿಸುವಂತೆ ಮನವಿ ಮಾಡಿದ್ದರು.
ಮುಷ್ಕರ ವಾಪಸ್ ತೆಗೆದುಕೊಳ್ಳಲ್ಲ: ಸಂಧಾನ ಸಭೆ ಬಳಿಕ ಮಾತನಾಡಿದ್ದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ''ಆರ್ಟಿಒ ಗಡಿ ಚೆಕ್ ಪೋಸ್ಟ್ ಬಗ್ಗೆ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಗೆ ಕಳಿಸಿ ಅಧ್ಯಯನ ಮಾಡ್ತೇವೆ ಅಂದಿದ್ದಾರೆ. ಸಿಎಂ ಜೊತೆ ಡಿಸೇಲ್ ದರ ಇಳಿಕೆ ಹಾಗೂ ಟೋಲ್ ಬಗ್ಗೆ ಬೇಡಿಕೆ ಈಡೇರಿಸುವ ಮಾತಾಡಿಲ್ಲ. ಹೀಗಾಗಿ, ಅನಿರ್ದಿಷ್ಟಾವಧಿ ಉಗ್ರ ಹೋರಾಟ ಮಾಡುತ್ತೇವೆ. ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಆಟೋ ರಿಕ್ಷಾದಂತೆ, ಕ್ಯಾಬ್ನಂತೆ ಲಾರಿ ಮಾಲೀಕರಿಗೆ ಬಾಡಿಗೆ ದರ ಫಿಕ್ಸ್ ಮಾಡಬೇಕು. ಡಿಸೇಲ್ ದರ ಎಷ್ಟಾದರೂ ಏರಿಸಿ ನಮಗೆ ಬಾಡಿಗೆ ದರ ನಿಗದಿ ಮಾಡಿ ಎಂದು ಮನವಿ ಮಾಡಿದ್ದೇವೆ. ಅದಕ್ಕೆ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಮುಷ್ಕರ ವಾಪಸ್ ತೆಗೆದುಕೊಳ್ಳಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ನೇರವಾಗಿ ಹೇಳಿದ್ದೇವೆ'' ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ಜೊತೆಗಿನ ಲಾರಿ ಮಾಲೀಕರ ಸಂಘದ ಸಂಧಾನ ಸಭೆ ವಿಫಲ: ಮುಷ್ಕರ ಮುಂದುವರಿಸಲು ನಿರ್ಧಾರ