ಬೆಳಗಾವಿ: ಸ್ಮೃತಿ ಭವನಕ್ಕೆ ಬೆಳಗಾವಿ ಜಿಲ್ಲಾಡಳಿತ ಕಡಿವಾಣ ಹಾಕುತ್ತಿದ್ದಂತೆ ಮಹಾರಾಷ್ಟ್ರ ಮತ್ತೊಂದು ಕ್ಯಾತೆ ಶುರು ಮಾಡಿದೆ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ರಾಜ್ಯದಲ್ಲಿರುವ ಸುಮಾರು 865ಕ್ಕೂ ಹೆಚ್ಚು ಗ್ರಾಮಗಳ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಶುಲ್ಕ ವಿನಾಯಿತಿ, ಉಚಿತ ಹಾಸ್ಟೆಲ್ ಸೌಲಭ್ಯದ ಆಫರ್ ನೀಡಿದೆ. ಈ ವಿಚಾರವಾಗಿ ಕನ್ನಡ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1986ರಲ್ಲಿ ಭಾಷಾ ಸಂಘರ್ಷದ ಹಿನ್ನೆಲೆಯಲ್ಲಿ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟ ಮರಾಠಿ ಭಾಷಿಕರ ಸ್ಮರಣೆಗಾಗಿ ಎಂಇಎಸ್ ಮುಖಂಡರು ಮಹಾರಾಷ್ಟ್ರ ಸರ್ಕಾರದ ನೆರವಿನಿಂದ ಬೆಳಗಾವಿಯ ಹಿಂಡಲಗಾದಲ್ಲಿ ಸ್ಮೃತಿ ಭವನ ನಿರ್ಮಾಣಕ್ಕೆ ಮುಂದಾಗಿದ್ದರು. ಅಲ್ಲದೇ, ಭೂಮಿಪೂಜೆಯನ್ನೂ ನೆರವೇರಿಸಿದ್ದರು.
ಈ ಸಂಗತಿ ತಿಳಿಯುತ್ತಿದ್ದಂತೆಯೇ ಕನ್ನಡಪರ ಹೋರಾಟಗಾರರು, ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಸ್ಮೃತಿ ಭವನಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡದಂತೆ ಒತ್ತಾಯಿಸಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಬೆಳಗಾವಿ ಜಿಲ್ಲಾಡಳಿತ ಸ್ಮೃತಿ ಭವನ ನಿರ್ಮಾಣಕ್ಕೆ ಕಡಿವಾಣ ಹಾಕಿದೆ.
ಆದರೆ, ಈ ವಿಚಾರ ತಣ್ಣಗಾಯಿತು ಎನ್ನುವಷ್ಟರಲ್ಲಿ ಮಹಾರಾಷ್ಟ್ರ ಸರ್ಕಾರ ಕೊಲ್ಹಾಪುರದಲ್ಲಿರುವ ಶಿವಾಜಿ ವಿಶ್ವವಿದ್ಯಾಲಯದ ಮೂಲಕ ಗಡಿ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳನ್ನು ಸೆಳೆಯಲು ತಂತ್ರ ರೂಪಿಸಿದೆ. ಜೊತೆಗೆ, ಈ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗಾಗಿಯೇ ಬೆಳಗಾವಿಯ ಮೂರು ಕಡೆಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಲಾಗಿದೆ. ಏ.22ರಂದು ಏಕಕಾಲದಲ್ಲಿ ಈ ಕಾರ್ಯಾಗಾರಗಳು ನಡೆಯಲಿವೆ. ಈ ಬಗ್ಗೆ ಕೆಲ ಮರಾಠಿ ಪತ್ರಿಕೆಗಳಲ್ಲಿ ಜಾಹೀರಾತನ್ನು ಪ್ರಕಟಿಸಲಾಗಿದೆ. ಶಿವಾಜಿ ವಿಶ್ವವಿದ್ಯಾಲಯದ ಈ ನಡೆಯಿಂದಾಗಿ ಕನ್ನಡ ಪರ ಸಂಘಟನೆಗಳು ಅಸಮಾಧಾನಗೊಂಡಿದ್ದಾರೆ.
ಶಿವಾಜಿ ವಿಶ್ವವಿದ್ಯಾಲಯದಲ್ಲಿ ಮುಂದಿನ ತಿಂಗಳು ವಿವಿಧ ಕೋರ್ಸ್ಗಳ ಪ್ರವೇಶಾತಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ನಿಪ್ಪಾಣಿ, ಬೆಳಗಾವಿ ನಗರ ಹಾಗೂ ಖಾನಾಪುರದಲ್ಲಿ ಕಾರ್ಯಾಗಾರ ಆಯೋಜನೆ ಮಾಡುವ ಮೂಲಕ ಕೋರ್ಸ್, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಎಲ್ಲಕ್ಕೂ ಹೆಚ್ಚಾಗಿ, ಮರಾಠಿ ಭಾಷಿಕ ಎಂದು ಪ್ರಮಾಣ ಪತ್ರ ಕೊಡುವ ಅಭ್ಯರ್ಥಿಗಳಿಗೆ ಈ ರಿಯಾಯಿತಿ ಘೋಷಣೆ ಮಾಡಿರುವುದರಿಂದ ಕನ್ನಡಿಗರು ಆಕ್ರೋಶಗೊಂಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಸೇರಿದಂತೆ ಐದಕ್ಕೂ ಅಧಿಕ ವಿಶ್ವವಿದ್ಯಾಲಯಗಳಿವೆ. ಹೀಗಿದ್ದರೂ, ಬೆಳಗಾವಿ ಗಡಿ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಈ ರೀತಿ ಆಫರ್ ನೀಡುವ ಮೂಲಕ ಮಹಾರಾಷ್ಟ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದರೂ ಕೂಡ ರಾಜ್ಯದ ಕಾಂಗ್ರೆಸ್ ಸರ್ಕಾರ ಮೌನ ವಹಿಸಿರುವುದು ಗಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಹೇಳಿದ್ದೇನು?: "ಮಹಾರಾಷ್ಟ್ರದ ಸರ್ಕಾರ ಪ್ರತಿ ಬಾರಿ ಬೆಳಗಾವಿ ವಿಚಾರ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಈಗ ರಾಜ್ಯದಲ್ಲಿರುವ ಮರಾಠಿ ಭಾಷಿಕ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ಶಿವಾಜಿ ವಿ.ವಿಯಲ್ಲಿ ನಾನೊಬ್ಬ ಮರಾಠಿ ಭಾಷಿಕ ಎಂಬ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುವ ಮೂಲಕ ಅಲ್ಲಿನ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಶುಲ್ಕ ರಿಯಾಯಿತಿ, ಉಚಿತ ಹಾಸ್ಟೆಲ್ ವ್ಯವಸ್ಥೆ ನೀಡುತ್ತಿದೆ. ಇದರಿಂದ ಸುಪ್ರೀಂ ಕೋರ್ಟ್ನಲ್ಲಿರುವ ಗಡಿ ವಿವಾದ ಕಾನೂನು ಹೋರಾಟದಲ್ಲಿ ನಮಗೆ ಹಿನ್ನಡೆಯಾಗುವ ಸಾಧ್ಯತೆ ಇದೆ" ಎಂದು ಆರೋಪಿಸಿದರು.
"ಇದನ್ನು ಮುಂದೆ ಮಹಾರಾಷ್ಟ್ರದವರು ಗಡಿ ವಿಚಾರದಲ್ಲಿ ಸಾಕ್ಷಿಯಾಗಿ ಪರಿಗಣಿಸುವ ಹುನ್ನಾರ ನಡೆಸುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ಮಾಡಿಕೊಟ್ಟರೆ, ಕರವೇ ಕಾರ್ಯಕರ್ತರು ಕಾರ್ಯಾಗಾರವನ್ನ ತಡೆಹಿಡಿಯುತ್ತಾರೆ. ಅಲ್ಲಿನ ಕಾನೂನು ಸುವ್ಯವಸ್ಥೆಗೆ ದಕ್ಕೆಯಾದ್ರೆ ನೇರವಾಗಿ ಜಿಲ್ಲಾಡಳಿತ ಹೊಣೆಯಾಗುತ್ತೆ" ಎಂದು ಎಚ್ಚರಿಸಿದರು.
ಮಹಾರಾಷ್ಟ್ರ ಸರ್ಕಾರ ಕರ್ನಾಟಕದಲ್ಲಿನ ಮರಾಠಿಗರ ಬೆನ್ನಿಗೆ ನಿಂತಿದೆ. ಆದರೆ, ಕರ್ನಾಟಕ ಸರ್ಕಾರ ಮಹಾರಾಷ್ಟ್ರದಲ್ಲಿನ ಕನ್ನಡಿಗರ ಪರ ನಿಲ್ಲದಿರುವುದು ದುರಂತ. ಇನ್ನು ಕರ್ನಾಟಕದಲ್ಲಿ ಪದೇ ಪದೇ ಮೂಗು ತೂರಿಸುವ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿರುವುದು ಸರಿಯಲ್ಲ. ಇದಕ್ಕೆಲ್ಲಾ ಸಿದ್ದರಾಮಯ್ಯ ಸರ್ಕಾರ ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಬೇಕು - ಅಶೋಕ ಚಂದರಗಿ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ
ಇದನ್ನೂ ಓದಿ: ಎಂಇಎಸ್ ನಿಷೇಧಿಸಿ, ಮರಾಠಿಗರನ್ನು ಗಡಿಪಾರು ಮಾಡಿ; ಬೆಳಗಾವಿಯಲ್ಲಿ ವಾಟಾಳ್ ನಾಗರಾಜ್ ಆಗ್ರಹ - VATAL NAGARAJ PROTEST